Advertisement

ಪ್ರೀತಿಯ ನೆರಳಲ್ಲಿ ಕಾಡಿನ ಕಥೆ

04:05 PM Jan 26, 2018 | |

ಒಂದು ಕಡೆ ಸ್ಥಳೀಯವಾಗಿ ಪ್ರಬಲವಾಗಿರುವವರ ಟಿಂಬರ್‌ ಮಾಫಿಯಾ ಮತ್ತು ಅದಕ್ಕೆ ಸಾಥ್‌ ನೀಡುವ ಅರಣ್ಯಾಧಿಕಾರಿ, ಮತ್ತೂಂದು ಕಡೆ ಮಲೆನಾಡಿಗೆ ವರ್ಗವಾಗಿ ಬರುವ ದಕ್ಷ ಪೊಲೀಸ್‌ ಆಫೀಸರ್‌, ಇವೆರಡರ ಮಧ್ಯೆ ತಾನು ಪೊಲೀಸ್‌ ಆಗಬೇಕೆಂದು ಕನಸು ಕಂಡು ಕೆಲಸಕ್ಕೆ ಸೇರುವ ಮುನ್ನವೇ ಪೊಲೀಸನಂತೆ ವರ್ತಿಸುವ ಯುವಕ ಹಾಗೂ ಆತನ ಪ್ರೇಮಪ್ರಕರಣ. ಈ ಮೂರೂ ಅಂಶಗಳು ಸೇರಿ ಒಂದು “ಚೂರಿಕಟ್ಟೆಯಾಗಿದೆ.

Advertisement

ಚೂರಿಕಟ್ಟೆ ಎಂಬ ಊರಿನಲ್ಲಿ ನಡೆಯುವ ಟಿಂಬರ್‌ ಮಾಫಿಯಾವನ್ನು ಪ್ರಧಾನವಾಗಿಟ್ಟುಕೊಂಡು ನಿರ್ದೇಶಕ ರಾಘು ಶಿವಮೊಗ್ಗ ಇಡೀ ಕಥೆ ಹೆಣೆದಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ತುಂಬಾ ಗಂಭೀರವಾದ ವಿಷಯವನ್ನು ಆಯ್ದುಕೊಂಡಿದ್ದಾರೆ ರಾಘು ಅವರು. ಹಾಗೆ ನೋಡಿದರೆ “ಚೂರಿಕಟ್ಟೆ’ ಹಲವು ಆಯಾಮಗಳೊಂದಿಗೆ ಸಾಗುವ ಸಿನಿಮಾ. ಆದರೆ, ಅಂತಿಮವಾಗಿ ಎಲ್ಲವೂ ಒಂದು ಘಟನೆಗೆ ಸಂಬಂಧಿಸಿದ್ದಾಗಿರುತ್ತದೆ.

ಸ್ಥಳೀಯವಾಗಿ ಪ್ರಬಲವಾಗಿರುವವರು ಹೇಗೆ ಕಾನೂನನ್ನು ಗಾಳಿಗೆ ತೂರಿ, ಅಧಿಕಾರಿಗಳನ್ನು ಲೆಕ್ಕಕ್ಕಿಡದೇ, ತಮಗೆ ಬೇಕಾದಂತೆ ದಂಧೆ ನಡೆಸುತ್ತಾರೆ ಎಂಬ ಅಂಶದೊಂದಿಗೆ ಸಾಗುವ ಈ ಸಿನಿಮಾದಲ್ಲಿ ಭ್ರಷ್ಟ ವರ್ಸಸ್‌ ದಕ್ಷ, ಪ್ರೀತಿ ವರ್ಸಸ್‌ ಕರ್ತವ್ಯ, ನಿಯತ್ತು ವರ್ಸಸ್‌ ದ್ರೋಹ ಪ್ರಮುಖ ಪಾತ್ರ ವಹಿಸುತ್ತವೆ. ಅತ್ತ ಕಡೆ ಸಿನಿಮಾ ಕಮರ್ಷಿಯಲ್‌ ಆಗಿರಬೇಕು, ಇತ್ತ ಕಡೆ ಕಥೆಗೂ ಹೆಚ್ಚು ಗಮನಕೊಡಬೇಕು ಎಂಬ ಮನಸ್ಸಿನೊಂದಿಗೆ ನಿರ್ದೇಶಕರು ಈ ಸಿನಿಮಾ ಮಾಡಿರೋದು ಎದ್ದು ಕಾಣುತ್ತದೆ.

ಅದೇ ಕಾರಣಕ್ಕೆ ಆಗಾಗ ಹೀರೋಯಿಸಂ, ಲವ್‌ಸಾಂಗ್ಸ್‌ ಎಲ್ಲವೂ ಬಂದು ಹೋಗುತ್ತವೆ. ಹಾಗಂತ ಅವರು ಕಥೆ ಬಿಟ್ಟು ಸಾಗಿಲ್ಲ. ಹಲವು ಘಟನೆಗಳ ಮೂಲಕ ಕಥೆಯನ್ನು ಬೆಳೆಸುತ್ತಾ ಹೋಗಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳನ್ನಿಟ್ಟಿದ್ದಾರೆ. ಅದರಲ್ಲಿ ಗನ್‌ ಕೂಡಾ ಒಂದು. ಇಡೀ ಸಿನಿಮಾದಲ್ಲಿ ಗನ್‌ವೊಂದು ಪ್ರಮುಖ ಪಾತ್ರ ವಹಿಸುತ್ತದೆ. ಅದು ಹೇಗೆ ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬಹುದು.

ನಿರ್ದೇಶಕ ರಾಘು ಶಿವಮೊಗ್ಗ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಅದರಲ್ಲೂ ಚಿತ್ರದಲ್ಲಿ ಗನ್‌ ಎಂಟ್ರಿಕೊಟ್ಟ ನಂತರ ಕಥೆ ಸಾಗುವ ರೀತಿ, ಪಡೆದುಕೊಳ್ಳುವ ಟ್ವಿಸ್ಟ್‌ಗಳು ಸಿನಿಮಾದ ವೇಗ ಹೆಚ್ಚಿಸುತ್ತದೆ. ಆ ಮಟ್ಟಿಗೆ ಕಥೆಯಲ್ಲಿ ಹೊಸತನವಿದೆ. ಆದರೆ, ಮರಕಳ್ಳಸಾಗಣಿಕೆ ದಂಧೆಯನ್ನು ಇನ್ನಷ್ಟು ರೋಚಕವಾಗಿ ಹಾಗೂ ಆಳವಾಗಿ ತೋರಿಸುವ ಅವಕಾಶ ನಿರ್ದೇಶಕರಿಗಿತ್ತು.

Advertisement

ಲವ್‌ಸ್ಟೋರಿ, ಹಾಡು, ಫೈಟ್‌ಗಳಿಗೆ ಬ್ರೇಕ್‌ ಹಾಕಿ, ಟಿಂಬರ್‌ ಹಿನ್ನೆಲೆಯಲ್ಲಿ ಕಥೆಯನ್ನು ಬೆಳೆಸಿದ್ದರೆ “ಚೂರಿಕಟ್ಟೆ’ಯ ಖದರ್‌ ಇನ್ನೂ ಹೆಚ್ಚುತ್ತಿತ್ತು. ಮೊದಲೇ ಹೇಳಿದಂತೆ ಮೊದಲರ್ಧ ಮಾಫಿಯಾದ ಛಾಯೆ ಹಾಗೂ ನಾಯಕನ ಎಂಟ್ರಿ ಲವ್‌ಸ್ಟೋರಿ ಹಿನ್ನೆಲೆಯಲ್ಲಿ ಕಳೆದು ಹೋಗುತ್ತದೆ. ಇಲ್ಲಿ ಹೆಚ್ಚಿನದ್ದೇನೂ ನಿರೀಕ್ಷಿಸುವಂತಿಲ್ಲ. ಆದರೆ, ಸಿನಿಮಾದ ನಿಜವಾದ ಮಜಾ ಇರೋದು ದ್ವಿತೀಯಾರ್ಧದಲ್ಲಿ.

ಒಂದು ಕಡೆ ಉತ್ಸಾಹಿ ಯುವಕ ಮತ್ತು ಆತನ ಲವ್‌ಸ್ಟೋರಿಯ ಟ್ವಿಸ್ಟ್‌, ಮತ್ತೂಂದು ಕಡೆ ಭ್ರಷ್ಟ ಹಾಗೂ ದಕ್ಷ ಅಧಿಕಾರಿಯ ಚಡಪಡಿಕೆ … ಹೀಗೆ ಕಥೆ ಹೆಚ್ಚು ಆಸಕ್ತಿಕರವಾಗಿ ಸಾಗುತ್ತದೆ. ಚಿತ್ರದಲ್ಲಿ ಒಂದಷ್ಟು ದೃಶ್ಯಗಳನ್ನು ಟ್ರಿಮ್‌ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರದಲ್ಲಿ ನಾಯಕ ಪ್ರವೀಣ್‌ ತೇಜ್‌ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆ್ಯಕ್ಷನ್‌ ದೃಶ್ಯಗಳಲ್ಲಿ ಅವರು ಹೆಚ್ಚು ಗಮನ ಸೆಳೆಯುತ್ತಾರೆ.

ಹಾಗೆ ನೋಡಿದರೆ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಅಚ್ಯುತ್‌ ಕುಮಾರ್‌, ಬಾಲಾಜಿ ಮನೋಹರ್‌ ಹಾಗೂ ಮಂಜುನಾಥ ಹೆಗಡೆಯವರ ಪಾತ್ರ ಪ್ರಮುಖವಾಗಿದೆ. ಮೂವರು ಕೂಡಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಬಾಲಾಜಿ ಮನೋಹರ್‌ ತಮ್ಮ ಖಡಕ್‌ ಲುಕ್‌ ಹಾಗೂ ನಟನೆಯಿಂದ “ಸೀನ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿ ಪ್ರೇರಣಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಸಿನಿಮಾದ ಫೀಲ್‌ ಹೆಚ್ಚಿಸಿದೆ. 

ಚಿತ್ರ: ಚೂರಿಕಟ್ಟೆ
ನಿರ್ಮಾಣ: ಎಸ್‌.ನಯಾಜುದ್ದೀನ್‌ ಹಾಗೂ ಎಂ.ತುಳಸಿರಾಮುಡು
ನಿರ್ದೇಶನ: ರಾಘು ಶಿವಮೊಗ್ಗ
ತಾರಾಗಣ: ಪ್ರವೀಣ್‌ ತೇಜ್‌, ಪ್ರೇರಣಾ, ಅಚ್ಯುತ್‌ ಕುಮಾರ್‌, ಬಾಲಾಜಿ ಮನೋಹರ್‌, ಮಂಜುನಾಥ ಹೆಗಡೆ, ದತ್ತಣ್ಣ , ಶರತ್‌ ಲೋಹಿತಾಶ್ವ ಮತ್ತಿತರರು

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next