Advertisement

ಕಮಲಳ ಕತೆ

10:02 AM Dec 30, 2019 | mahesh |

ಹೊಸ ಉದ್ಯಮಗಳನ್ನು ಹುಟ್ಟು ಹಾಕಿ ಯಶಸ್ವಿಗಳಾದ ಸಾಹಸಿ ಉದ್ಯಮಿಗಳ ಮಾತು ಬಂದಾಗ ದೊಡ್ಡ ದೊಡ್ಡವರ ಹೆಸರುಗಳು ಮನಸ್ಸಿಗೆ ಬರುವುದು ಸಹಜ. ಈ ಕಮಲಳ ಹೆಸರು ಯಾಕೆ ಯಾರಿಗೂ ನೆನಪಾಗುವುದಿಲ್ಲ !

Advertisement

ಹೊಸ ಉದ್ಯಮಗಳನ್ನು ಹುಟ್ಟು ಹಾಕಿಸಿ ಯಶಸ್ವಿಗೊಳಿಸಿದ ಸಾಹಸಿ ಉದ್ಯಮಿಗಳ ಮಾತು ಬಂದಾಗ ಬಿಲ್‌ಗೇಟ್ಸ್‌ , ಇನ್‌ಫೋಸಿಸ್‌ ನಾರಾಯಣಮೂರ್ತಿಯಂಥವರ ಹೆಸರುಗಳು ಮುಂದಾಗುವುದು ಸಹಜ. ಆದರೆ, ನನಗೆ ನಮ್ಮ ಕಮಲಳ ಹೆಸರೇ ನೆನಪಾಗುತ್ತದೆ. ನೆರಿಗೆ ಅತ್ತಿತ್ತ ಆಗದಂತೆ ಸೀರೆ ಉಟ್ಟು, ಹೆಗಲಿಗೊಂದು ವ್ಯಾನಿಟಿ ಬ್ಯಾಗ್‌ ಸಿಕ್ಕಿಸಿಕೊಂಡು, ಓಡಿಕೊಂಡೇ ಎಂಬಂತೆ ರೈಲು ನಿಲ್ದಾಣಕ್ಕೆ ಧಾವಿಸುವ ಕಮಲಳನ್ನು ಎರಡು ಮೊಮ್ಮಕ್ಕಳ ಅಜ್ಜಿಯೆಂದರೆ ಯಾರೂ ನಂಬಲಿಕ್ಕಿಲ್ಲ. ಹದಿನೈದು ವರ್ಷಕ್ಕೆ ಮದುವೆಯಾಗಿ ಮೂವತ್ತು ವರ್ಷಕ್ಕೆ ಅಜ್ಜಿಯಾದ ಅವಳು ಮಾತಿನಲ್ಲಿ, ಕೆಲಸದಲ್ಲಿ, ನಡಿಗೆಯಲ್ಲಿ ಚುರುಕೇ ಚುರುಕು. ನಸುಕಿನ ನಾಲ್ಕು ಗಂಟೆಗೆ ಮನೆಯಿಂದ ಹೊರಟರೆ ರಾತ್ರಿ ಎಂಟಕ್ಕೆ ವಾಪಸು. ಒಂಬತ್ತು-ಹತ್ತು ಮನೆಗಳಲ್ಲಿ ಅಡುಗೆ, ವಸ್ತ್ರ-ಪಾತ್ರೆ-ನೆಲ ಶುಚಿಗೊಳಿಸು ವುದು ಎಂದು ದಿನವಿಡೀ ದುಡಿದರೂ, ಅವಳ ಮನೆಯ ಖರ್ಚಿಗೆ ಸಾಲದಾಗುತ್ತಿತ್ತು.

ಆದರೆ, ಬರೇ ಮನೆಕೆಲಸ ಮಾಡುವುದಕ್ಕಿಂತ ಹೆಚ್ಚು ಸಾಮರ್ಥ್ಯವಿರುವ ತಾನು ಏನಾದರೊಂದು ವ್ಯಾಪಾರದಲ್ಲಿ ತೊಡಗಬೇಕೆಂಬ ಸ್ವಾಭಾವಿಕವಾದ ಚಡಪಡಿಕೆ ಅವಳನ್ನು ಸದಾ ಕಾಡುತ್ತಿರುವುದನ್ನು ನೋಡಿ¨ªೆ. ಮನೆಯಲ್ಲಿ ಕುಡಿಯುತ್ತ ಕಾಲಹರಣ ಮಾಡುತ್ತಿದ್ದ ಗಂಡ, ಅವನಿಂದ ಸ್ಫೂರ್ತಿ ಪಡೆದು ಸೋಮಾರಿಯಾಗಿ ತಿರುಗುತ್ತಿದ್ದ ಹಿರಿಯಮಗ. ಜಗಳಗಂಟ ಗಂಡನನ್ನು ತೊರೆದುಬಂದ ಹಿರಿಯ ಮಗಳು, ಇಂಥ ಗಂಡಂದಿರನ್ನು ಕಟ್ಟಿಕೊಂಡು ಪ್ರಯೋಜನವಾದರೂ ಏನು ಅಂದುಕೊಂಡು ಮದುವೆಯಾಗದೆ ಉಳಿದ ಕಡೆಯ ಮಗಳು. ಸದಾ ಹೊಸಕೆಲಸ ಹುಡುಕಿಕೊಂಡು ಮನೆಯಿಂದ ಹೊರಡುವ ಕಡೆಯ ಮಗ- ಹೀಗೆ ಕಮಲಳ ಮನೆಯೆಂಬುದು ತಾಪತ್ರಯಗಳ ತವರಾಗಿತ್ತು.

ಈ ಮಧ್ಯೆ ಕೂಡಿಸಿಟ್ಟ ಹಣದಿಂದ ತನ್ನ ಬೆಳೆಯುತ್ತಿರುವ ಸಂಸಾರಕ್ಕಾಗಿ ಒಂದು “ಖೋಲಿ’ ಯನ್ನು ಕ್ರಯಕೊಟ್ಟು ಕೊಂಡಿದ್ದಳು. ಆದರೆ, ಅದು ಸರಕಾರದ ಜಾಗದಲ್ಲಿ ಕೆಲವು ಚಾಲಾಕಿ ಕೇಡಿಗಳು ಕಟ್ಟಿಮಾರಿದ ಮನೆಗಳಲ್ಲಿ ಒಂದಾಗಿದ್ದರಿಂದ, ಒಂದು ಶುಭದಿನ, ಅಧಿಕಾರಿಗಳು ಆಗಾಗ್ಗೆ ಕೈಕೊಳ್ಳುವ “ಸೂಕ್ತ ಕ್ರಮ’ದಲ್ಲಿ ಕೆಡವಲ್ಪಟ್ಟಿತ್ತು. ಯಾವುದಕ್ಕೂ ತಲೆಗೆ ಕೈಕೊಟ್ಟು ಕೊರಗುವ ಸ್ವಭಾವ ಅವಳದಲ್ಲ. ಬಿಡುವಿನ ವೇಳೆಯಲ್ಲಿ- ಅಂದರೆ ದಿವಸದ ಗಂಟೆಗಳನ್ನು ಮಾಯಕದಲ್ಲೆಂಬಂತೆ ಹಿಗ್ಗಿಸಿಕೊಳ್ಳುತ್ತಿದ್ದಳ್ಳೋ ಏನೋ- ಕೈಗಾಡಿಯಲ್ಲಿ ತಿಂಡಿ ಮಾರುವುದನ್ನು ಶುರುಮಾಡಿ, ಕೈಗೆ ಸ್ವಲ್ಪ ಹಣ ಬರುತ್ತದೆ ಎನ್ನುವಾಗ, ಅಧಿಕಾರಿಗಳ ಇನ್ನೊಂದು “ಸೂಕ್ತಕ್ರಮ’ದಲ್ಲಿ ಕೈಗಾಡಿಯು ಸರಕಾರದ ಸ್ವತ್ತಾಯಿತು. ಇಂಥ ಪರಿಸ್ಥಿತಿಯಲ್ಲಿ ಎಷ್ಟೋ ಜನರು, “ಒ¨ªಾಡಿ ಏನು ಪ್ರಯೋಜನ, ನಮ್ಮ ಹಣೆಬರಹ!’ ಎಂದು ಹಣೆಯಲ್ಲಿ ಬರೆದದ್ದನ್ನು ಓದುವುದೆಂದರೆ ಪತ್ರಿಕೆ ಓದುವಷ್ಟು ಸುಲಭವೆನ್ನುವಂತೆ ಸುಮ್ಮನಾದರೆ, ಕಮಲ ಮಾತ್ರ ಸ್ವಲ್ಪವೂ ಧೃತಿಗೆಡದೆ, ರಬ್ಬರ್‌ ಚೆಂಡಿನಂತೆ ಇನ್ನೊಂದು ಜಿಗಿತಕ್ಕೆ ರೆಡಿ! “ಜಾನೆ ದೊ’ ಎಂದು ಆ ಅಧ್ಯಾಯವನ್ನು ಅಲ್ಲೇ ಬಿಟ್ಟು, “ಮೈ ಕ್ಯಾ ಸೋಚಿ  ಹೂಂ…’ ಎಂದು ಹೊಸ ಯೋಜನೆಯ ಹೊಳಹಿನ ಬಗ್ಗೆ ಹೇಳಲು ಹೊರಡುವ ಅವಳ ಉಮೇದನ್ನು ನೋಡಿಯೇ ನಂಬಬೇಕು.

ಬೇರೆ ಬೇರೆ ವ್ಯಾಪಾರಗಳಲ್ಲಿ ಕೈಸುಟ್ಟುಕೊಂಡು ಕೊನೆಗೂ ಮಸಾಲೆಪುಡಿ “ಬಿಸಿನೆಸ್‌’ನಲ್ಲಿ ಕಮಲಳ ಬಹುದಿನಗಳ ಅಪೇಕ್ಷೆ ಈಡೇರತೊಡಗಿತು. ತರಹೆವಾರು ಮಸಾಲೆ ಪುಡಿಗಳನ್ನು ತಯಾರಿಸುವುದ ರಲ್ಲಿ ನಿಸ್ಸೀಮಳಾಗಿದ್ದ ಅವಳು ರೈಲುನಿಲ್ದಾಣಕ್ಕೆ ಹೋಗುವ ದಾರಿಯ ಬದಿಯಲ್ಲಿ ಪ್ಲಾಸ್ಟಿಕ್‌ ಹಾಳೆಯ ಮೇಲೆ ಸಾಂಬಾರಿನ ಪುಡಿಗಳನ್ನು ಹರಡಿಟ್ಟು ಕುಳಿತಳು. ಹಳೆಯ ಪತ್ರಿಕೆಯ ಪೊಟ್ಟಣಗಳಲ್ಲಿ ಮಾರಲ್ಪಡುತ್ತಿದ್ದ ಈ ಸಾಂಬಾರ್‌ ಪುಡಿಗಳಿಗೆ ಜನಮಾನ್ಯತೆ ದೊರೆಯಲು ಸಮಯ ಹಿಡಿಯಲಿಲ್ಲ. ಸಂಜೆಯ ಸ್ಟೇಶನ್ನಿನಿಂದ ಮನೆಗೆ ಹಿಂದಿರುಗುವ ಹಲವು ದುಡಿಯುವ ಮಹಿಳೆಯರಿಗೆ ಅದನ್ನು ದಿನಾ ಕೊಳ್ಳುವುದು ವಾಡಿಕೆಯಾಯಿತು.

Advertisement

ವ್ಯಾಪಾರ ಹೆಚ್ಚಿದಂತೆ ಕಮಲಳ ಆರ್ಥಿಕ ಪರಿಸ್ಥಿತಿ ಸುಧಾರಿಸತೊಡಗಿತು. “ಮನೆಕೆಲಸ’ಗಳನ್ನೆಲ್ಲ ಬಿಟ್ಟು ಪೂರ್ಣಪ್ರಮಾಣದ ವ್ಯಾಪಾರಸ್ಥೆಯಾದಳು. ಹಿಗ್ಗುತ್ತಿರುವ ತನ್ನ ಸಂಸಾರಕ್ಕಾಗಿ, ಒತ್ತೂತ್ತಿನ ಮೂರು ಚಿಕ್ಕ ಮನೆಗಳನ್ನು ಪಡಕೊಂಡು, ಮಕ್ಕಳನ್ನು ಆ ಮನೆಗಳಿಗೆ ಸಾಗಹಾಕಿ, ಮನೆಯಲ್ಲಿ ಸದಾ ನಡೆಯುತ್ತಿದ್ದ ರಾದ್ಧಾಂತಗಳಿಗೆ ಮುಕ್ತಾಯ ಹಾಡಿದಳು. ಮರಾಠವಾಡದ ಹಳ್ಳಿಯಲ್ಲಿದ್ದ ಜಾಗದಲ್ಲಿ ಮನೆಕಟ್ಟಿ ಹಬ್ಬ-ಹುಣ್ಣಿಮೆಗಳಿಗೆ ಸಂಸಾರಸಮೇತ ಹೋಗಿಬರತೊಡಗಿದಳು. ಸಾವಿರ ರೂಪಾಯಿಗಳಿಗೂ ಮಿಕ್ಕಿ ಹಣ ತೆತ್ತು ಕೊಂಡುಕೊಂಡಿದ್ದ ಪೊಮೆರೇನಿಯನ್‌ ನಾಯಿಮರಿಯಂತೂ ಅವಳ ಮನೆಯಲ್ಲಿ ಸಂತಸದ ಕೋಲಾಹಲವನ್ನೇ ಎಬ್ಬಿಸಿತ್ತು. ಇದೇ ಸಮಯದಲ್ಲಿ ಆಧಾರ್‌ ಕಾರ್ಡು ಮಾಡಿಸಲು ಎಲ್ಲರೂ ಓಡಾಡುತ್ತಿರುವಾಗ, “ಆಧಾರ ಕೇಂದ್ರಗಳಿಗೆಲ್ಲ ಹೋಗಲು ಯಾರಿಗೆ ಪುರುಸೊತ್ತು’ ಎಂದು ಕಮಲ ತನ್ನ ಮನೆಯಲ್ಲಿದ್ದ ಹತ್ತು-ಹನ್ನೊಂದು ಜನಗಳಿಗೆ ಪ್ರತಿ ತಲೆಗೆ ಐನೂರು ರೂಪಾಯಿಗಳಂತೆ ಏಜಂಟನೊಬ್ಬನಿಗೆ ಮುಂಚಿತವಾಗಿ ಹಣ ಕೊಟ್ಟದ್ದು ಪರಿಚಿತರೆಲ್ಲರಿಗೆ ಆಶ್ಚರ್ಯದ ಆಘಾತ ತಂದಿತ್ತು.

ಮನೆಯಲ್ಲಿ ಧಾರಾಳವಾಗಿ ಓಡಾಡುತ್ತಿರುವ ಹಣವನ್ನು ಕಂಡ ಕಿರಿಯ ಮಗನಿಗೆ, ತಾನೊಂದು ದೊಡ್ಡ ಕಾರನ್ನು ಕೊಳ್ಳಬೇಕೆಂಬ, ಬಹುದಿನಗಳ ಕನಸನ್ನು ನೆನಸಾಗಿಸುವ ಆಸೆ. ಕಮಲಳಿಗೆ ಕಿರಿಮಗನನ್ನು ನಿರಾಶೆಗೊಳಿಸುವ ಮನಸ್ಸಾಗಲಿಲ್ಲ. ಮುಂಗಡ ಹಣ ತೆತ್ತು, ಉಳಿದದ್ದಕ್ಕೆ ಬ್ಯಾಂಕಿನಿಂದ ಸಾಲ ಎತ್ತಿ ಕಾರು ಮನೆಬಾಗಿಲಿಗೆ ಬಂತೇ ಬಂತು. ಆದರೆ, ಕಾರು ಚಲಾಯಿಸುವುದನ್ನು ಕಲಿತರೂ, ಕಿರಿಯ ಮಗನಿಗೆ ಪೂರ್ಣ ಧೈರ್ಯ ಬರಲಿಲ್ಲ. ಬೇರೊಬ್ಬ ಚಾಲಕನನ್ನು ನೇಮಿಸಿ, ಅದನ್ನು ವಿಮಾನನಿಲ್ದಾಣದ ಬಾಡಿಗೆಗೆ ಉಪಯೋಗಿಸುವ ಏರ್ಪಾಡಾಯಿತು. ಇನ್ನೇನು ಕಾರಿನ ಬಾಡಿಗೆಯ ಹಣ ದೊರೆಯಲು ಶುರುವಾಗಬೇಕೆನ್ನುವಾಗ, ಕಾರಿನ ಅಪಘಾತದಲ್ಲಿ ಚಾಲಕ ಸೆರೆಯಾದ. ಹಣ ವಸೂಲಿಗಾಗಿ ಜೈಲಿಗೆ ತಡಕಾಡುವ ಪರಿಸ್ಥಿತಿ. ಹಾಗೂ ಹೀಗೂ, ಕಾರಿನ ಕತೆ ಅನಿಶ್ಚಿತತೆಯಲ್ಲಿಯೇ ಕೊನೆಗೊಂಡಿತು. ಆದರೆ, ಮಸಾಲೆ ವ್ಯಾಪಾರ ಮುಂದೆ ಸಾಗುತ್ತಲೇ ಇತ್ತಾಗಿ ಕಾರಿನಿಂದಾದ ನಷ್ಟವು ಆರ್ಥಿಕವಾಗಿ ಅವಳನ್ನು ಮುಗಿಸಲಿಲ್ಲ. ಪ್ಲಾಸ್ಟಿಕ್‌ ಹಾಳೆಯಿಂದ ಅವಳ ಅಂಗಡಿಯು ಕೈಗಾಡಿಗೆ, ಕ್ರಮೇಣ ಮರದ ಕಪಾಟಿಗೆ ವರ್ಗಾವಣೆಯಾಗಿ ವಿಕಾಸಹೊಂದಿತ್ತು.

ಹಾಗಂತ ಕಮಲಳ ಮಸಾಲೆಪುಡಿಯ ವ್ಯಾಪಾರ ಸುಗಮವಾಗೇನೂ ಇರಲಿಲ್ಲ. ಮುನ್ಸಿಪಾಲಿಟಿಯ ಕಾಯಿದೆ-ಕಾನೂನಿನ ಹೊಡೆತಗಳು ಬೀಳುತ್ತಲೇ ಇರುತ್ತಿದ್ದುವು. ಜೊತೆಯಲ್ಲಿ, ಅವಳ ಭರದ ವ್ಯಾಪಾರ-ವಹಿವಾಟಿನ ವೈಖರಿಯನ್ನು ಎರಡೂ ಮಗಂದಿರಿಗೆ ತಮ್ಮದಾಗಿಸಲು ಆಗಲಿಲ್ಲ. ಕಮಲಳ ಅತಿ ದೊಡ್ಡ ದುರ್ಬಲತೆಯೆಂದರೆ ಅವಳ ಅಶಿಕ್ಷಿತತೆ. ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಂತ ಉದ್ದಿಮೆಗಾಗಿ ಸರಕಾರವು ಒದಗಿಸುವ ಸಹಾಯ, ರಿಯಾಯಿತಿ, ಬ್ಯಾಂಕಿನ ಸಾಲ, ಅಧಿಕಾರಿಗಳನ್ನು ಸಂಪರ್ಕಿಸುವ ವಿಧಾನ ಇತ್ಯಾದಿಗಳ ತಿಳುವಳಿಕೆಯಾಗಲಿ, ಅರ್ಜಿಹಾಕಲು ಬೇಕಾಗುವ ಅಕ್ಷರಜ್ಞಾನವಾಗಲಿ- ಯಾವುವೂ ಅವಳಲ್ಲಿ ಇರಲಿಲ್ಲ. ಇನ್ನು, ಕಾಯಿದೆ-ಕಾನೂನುಗಳ ಬಗ್ಗೆ ಇರುವ ಅಜ್ಞಾನದ ಸಂಪೂರ್ಣ ದುರುಪಯೋಗವನ್ನು ಪಡೆಯುವ ಪೊಲೀಸರೂ, ಸರಕಾರೀ ಅಧಿಕಾರಿಗಳೂ, ಇತರ ದುರುಳರೂ ಇದ್ದೇ ಇದ್ದರು. ಇಂಥ ದುರ್ಗಮ ದಾರಿಯಲ್ಲೂ ಅವಳು ಯಶಸ್ಸು ಸಾಧಿಸಿ, ತನ್ನ ಮನೆಯ ಪರಿಸ್ಥಿತಿಯಲ್ಲಿ ಗಮನೀಯವಾದ ಸುಧಾರಣೆಯನ್ನು ತಂದುದು ಒಂದು ವಿಸ್ಮಯವೆನ್ನಬೇಕು.

ಕಮಲಳ ಸಾಹಸದ ಕತೆಯ ಪುನರಾವರ್ತನೆ ನಮ್ಮ ದೇಶದ ಎಲ್ಲಾ ಕಡೆಗಳಲ್ಲೂ ಆಗುತ್ತಿರುತ್ತದೆ. ಅದೇ ಅಶಿಕ್ಷಿತತೆ, ಆದರೆ ಅವೇ ಆಶಯ, ಕನಸು, ಹುಮ್ಮಸ್ಸು, ಸಾಹಸ! ಕೆಲ ಹೆಂಗಳೆಯರ ಕತೆಗಳು ಹೆಚ್ಚಿನ ಯಶಸ್ಸು ಗಳಿಸಿದರೆ, ಕೆಲವರದ್ದು ಅಸಫ‌ಲತೆಯಲ್ಲಿ ಮುಕ್ತಾಯವಾಗುತ್ತಿರುತ್ತವೆ. ಇವರಿಗೆಲ್ಲ ಶಿಕ್ಷಣವಿದ್ದಿದ್ದರೆ ಮಾತ್ರ, ಬಹುತೇಕ ಕತೆಗಳು ಸುಖಾಂತವಾಗಿರುತ್ತಿದ್ದವು ಎನ್ನುವುದರಲ್ಲಿ ಸಂಶಯವಿಲ್ಲ.

ಮಿತ್ರಾ ವೆಂಕಟ್ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next