Advertisement

ಪತ್ತೇದಾರಿ ಕತೆ!

02:24 AM Aug 04, 2019 | mahesh |

ನಾವೆಲ್ಲ ಚಿಕ್ಕವರಾಗಿದ್ದಾಗ ನಮಗಿದ್ದ ಮನೋರಂಜನೆ ಅಂದ್ರೆ ರೇಡಿಯೋ ಕೇಳುವುದು, ಪುಸ್ತಕ ಓದುವುದು ಅಂತ ನಮ್ಮ ಕಾಲದ ಪೀಳಿಗೆಗೆ ಗೊತ್ತಿರುವ ವಿಚಾರವೇ ಆಗಿದೆ. ಆಗೆಲ್ಲ ಲೈಬ್ರೆರಿಗಳಲ್ಲಿ ಹೋಗಿ ಓದುವುದು ನಮಗೆಲ್ಲ ಒಂದು ಆಪ್ಯಾಯಮಾನವಾದ ಮತ್ತು ಆನಂದ ಕೊಡುತ್ತಿದ್ದ ಸಂಗತಿಯಾಗಿತ್ತು. ಪ್ರಾರಂಭದಲ್ಲಿ ನಮಗೆ ಬಣ್ಣ ಬಣ್ಣದ ಚಿತ್ರಗಳ ಸಮೇತ ಕಥೆಗಳಿರುತ್ತಿದ್ದ ಕಾಮಿಕ್ಸ್ಗಳು ಬಹಳ ಇಷ್ಟವಾಗುತ್ತಿದ್ದವು. ಸಿಂಡ್ರೆಲಾ ಕಥೆ, ಕುಳ್ಳರು ಮತ್ತು ರಾಜಕುಮಾರಿಯ ಕಥೆ, ನಳ-ದಮಯಂತಿ ಕಥೆ, ಬಾಲ ಹನುಮನ ಕಥೆ, ಹಂದಿ ಮರಿಗಳು ಮನೆ ಕಟ್ಟಿದ ಕಥೆ, ಬಾಲ ಮಹಾಭಾರತ, ರಾಮಾಯಣ- ಹೀಗೆ ನೂರಾರು ಕಥೆಗಳನ್ನು ಚಿತ್ರ ಸಮೇತ ಓದುತ್ತಿದ್ದರೆ ಮೈಮರೆಯತ್ತಿದ್ದೆವು. ನಾವೆಲ್ಲ ಆ ಪಾತ್ರದಲ್ಲಿ ಲೀನರಾಗಿ ನಾವೇ ಸಿಂಡ್ರೆಲಾ, ರಾಜಕುಮಾರಿ ಅಂತ ಅಂದುಕೊಳ್ಳುತ್ತ ನಾವೇ ಆ ಪಾತ್ರಗಳಾಗಿ ಮನೆಗೆ ಹೋದರೂ ಅದೇ ಗುಂಗಿನಲ್ಲಿ ಇರುತ್ತಿದ್ದೆವು. ಏಳು ಗಂಟೆಗೆಲ್ಲ ಲೈಬ್ರೆರಿಯ ಸಮಯ ಮುಗಿದು ಬಾಗಿಲು ಹಾಕುತ್ತಿದ್ದರು. ಲೈಬ್ರೆರಿಯಲ್ಲಿ ಓದುವ ಆಸಕ್ತಿ, ಉತ್ಸಾಹ ಮತ್ತು ಸಂತೋಷದಲ್ಲಿರುತ್ತಿದ್ದ ನಮಗೆ ಸಮಯ ಹೋಗುತ್ತಿದ್ದುದರ ಪರಿವೆಯೂ ಇಲ್ಲದೆ ಇರುತ್ತಿದ್ದ ನಮ್ಮನ್ನು ಸಮಯ ಮೀರಿ ಬಾಗಿಲು ಹಾಕುವ ಸಮಯ ಬಂದಾಗ ಬಲವಂತವಾಗಿ ಕಥಾ ಪ್ರಪಂಚದಲ್ಲಿ ನಾಯಕ ನಾಯಕರಾಗಿ ಮೈ ಮರೆತು ಹೋಗಿರುತ್ತಿದ್ದ ನಮ್ಮನ್ನು ಬಲವಂತವಾಗಿ ಎಬ್ಬಿಸಿ ‘ನಾಳೆ ಬನ್ನಿ’ ಅಂತ ಕಳಿಸಬೇಕಾಗಿತ್ತು.

Advertisement

ಲೈಬ್ರೆರಿಯೇನೂ ದೂರ ಇರಲಿಲ್ಲ. ನಮ್ಮ ಅಪ್ಪ ಕೆಲಸ ಮಾಡುತ್ತಿದ್ದ ಆಫೀಸಿನ ಮಹಡಿಯ ಮೇಲೆ ಇತ್ತು. ಹಾಗಾಗಿ ಕತ್ತಲೆಯಾದರೂ ಭಯವಾಗದೆ ಲೈಬ್ರೆರಿಯಲ್ಲಿ ಬಾಗಿಲು ಹಾಕುವ ತನಕ ಓದುತ್ತಿದ್ದು ಬಲವಂತವಾಗಿ ಎಬ್ಬಿಸಿದ ಮೇಲೆಯೇ ಹೊರಗೆ ಬರುತ್ತಿದ್ದೆವು. ಅಮ್ಮನೂ ನಮ್ಮನ್ನು ಬೈಯುತ್ತಿರಲಿಲ್ಲ. ನಾವು ಅವರಿಗಾಗಿಯೇ ಲೈಬ್ರೆರಿಗೆ ಬರುತ್ತಿದ್ದೆವು. ಅಮ್ಮನಿಗೆ ತುಂಬಾ ಓದುವ ಹುಚ್ಚು ಇತ್ತು. ಆಗೆಲ್ಲ ಮಹಿಳೆಯರು ಅಷ್ಟಾಗಿ ಲೈಬ್ರೆರಿಗಳಿಗೆ ಬರುತ್ತಿರಲಿಲ್ಲ. ಜೊತೆಗೆ ಅಪ್ಪನ ಆಫೀಸ್‌ ಕೂಡ ಅಲ್ಲೇ ಇದ್ದುದರಿಂದ ಅಲ್ಲಿ ಹೋಗಲು ಅಮ್ಮ ಸಂಕೋಚಿಸುತ್ತಿದ್ದರು. ಮೊದಲೆಲ್ಲ ಅಪ್ಪನೇ ಅಮ್ಮನಿಗೆ ಬೇಕಾಗುವ ಪುಸ್ತಕವನ್ನು ತಂದು ಕೊಡುತ್ತಿದ್ದರು. ನಾವು ಸ್ವಲ್ಪ ದೊಡ್ಡವರಾದ ಮೇಲೆ ಆ ಜವಾಬ್ದಾರಿ ನನ್ನ ಮತ್ತು ಅಣ್ಣನ ಹೆಗಲೇರಿತು. ಆ ಜವಾಬ್ದಾರಿಯನ್ನು ನಾವು ಸಂತೋಷದಿಂದ ಸ್ವೀಕರಿಸಿದ್ದೆವು. ಪ್ರತಿದಿನವೂ ಅಮ್ಮನಿಗೆ ಪುಸ್ತಕ ತರಲು ಹೋಗುತ್ತಿದ್ದೆವು. ಅಮ್ಮನಿಗೆ ದಿನಕ್ಕೊಂದು ಪುಸ್ತಕ ಬೇಕಾಗಿತ್ತು. ಇವತ್ತು ನಾವು ತೆಗೆದುಕೊಂಡು ಹೋದ ಪುಸ್ತಕವನ್ನು ನಾವು ಶಾಲೆಯಿಂದ ಬರುವಷ್ಟರಲ್ಲಿ ಓದಿ ಮುಗಿಸಿ ಬಿಟ್ಟಿರುತ್ತಿದ್ದರು. ಮತ್ತೆ ನಾಳೆಗೆ ಅಮ್ಮನಿಗೆ ಹೊಸ ಪುಸ್ತಕ ಬೇಕಾಗಿತ್ತು. ಹಾಗಾಗಿ ಶಾಲೆಯಿಂದ ಬಂದ ಕೂಡಲೇ ತಿಂಡಿ-ಕಾಫಿ ಮುಗಿಸಿ ಒಂದಿಷ್ಟು ಹೊತ್ತು ಆಟವಾಡಿ ಲೈಬ್ರೆರಿಗೆ ಓಡಿ ಬರುತ್ತಿದ್ದೆವು. ಬೇಗ ಅಮ್ಮನಿಗೆ ಬೇಕಾದ ಪುಸ್ತಕ ಹುಡುಕಿ ತೆಗೆದುಕೊಂಡು ನಂತರ ನಮಗೆ ಬೇಕಾದ ಪುಸ್ತಕ ಹಿಡಿದು ಓದಲು ಕುಳಿತುಕೊಂಡು ಬಿಡುತ್ತಿದ್ದೆವು. ಮೊದಮೊದಲೆಲ್ಲ ಕಾಮಿಕ್ಸ್ ಓದುತ್ತಿದ್ದೆವು. ಲೈಬ್ರೆರಿಯಲ್ಲಿದ್ದ ಕಾಮಿಕ್ಸ್ಗಳೆಲ್ಲಾ ಓದಿ ಮುಗಿಸಿ ಬಿಟ್ಟೆವು. ಆ ವೇಳೆಗೆ ನಮಗೂ ಕೂಡಾ ಸ್ವಲ್ಪ ವಯಸ್ಸು ಆಗಿ ಮಿv್ಲ್ ಸ್ಕೂಲ್ಗೆ ಬಂದಿದ್ದೆವು. ಕಾಮಿಕ್ಸ್ಗಳು ಬೋರ್‌ ಹೊಡೆದು ಬೇರೆ ಬೇರೆ ಓದಿನ ದಾಹ ಹೆಚ್ಚಾಗತೊಡಗಿತು.

ಮುಂದೇನು ಅಂತ ತೋರದೆ ಪುಸ್ತಕ ಹುಡುಕಿ ಹುಡುಕಿ ಒಂದು ದಿನ ಎನ್‌. ನರಸಿಂಹಯ್ಯ ಅವರ ಪತ್ತೇದಾರಿ ಪುಸ್ತಕ ಕಣ್ಣಿಗೆ ಬಿತ್ತು. ಸರಿ ಓದೋಣ ಅಂತ ಪುಸ್ತಕವನ್ನು ಕೈಯಲ್ಲಿ ಹಿಡಿದು ಕುಳಿತು ಓದಲು ಶುರು ಮಾಡಿದೆ. ಆ ಪುಸ್ತಕದ ಹೆಸರು ಮರೆತು ಹೋಗಿದೆ. ಆದರೆ, ಅದೊಂದು ದೆವ್ವದ ಕಥೆ ಅಂತ ಮಾತ್ರ ನೆನಪಿದೆ. ಓದ್ತಾ ಓದ್ತಾ ಮೈಮರೆತು ಹೋಗಿದ್ದೆ. ದೆವ್ವ ಅಡುಗೆ ಮಾಡುತ್ತಿತ್ತು. ಅದೂ ತಲೆಕೆದರಿಕೊಂಡು ತನ್ನ ಕಾಲನ್ನೆ ಸೌದೆಯಂತೆ ಒಲೆಯೊಳಗೆ ಇಟ್ಟು ಧಗ ಧಗನೆ ಉರಿಸುತ್ತಿದೆ. ಕಣ್ಮ್ಮುಂದೆ ಕಲ್ಪನೆ ಮಾಡಿಕೊಂಡು ಹೆದರಿಕೆಯಿಂದ ನಡುಗಿ ಹೋದೆ. ಭಯದಿಂದ ಕಂಪಿಸುತ್ತಾ ಇನ್ನೂ ಓದುತ್ತಲೇ ಇದ್ದೆ. ಕತ್ತಲೆ ಆಗಿಯೇ ಬಿಟ್ಟಿತು. ನನ್ನ ಜೊತೆ ಇದ್ದ ಅಣ್ಣ ಅದ್ಯಾವಾಗಲೊ ಹೊರ ಹೋಗಿದ್ದಾನೆ. ಹೊರ ಹೋಗಲು ಹೆದರಿಕೆ. ಹೇಗೊ ಹೊರಗೆ ಬಂದೆ. ಭಯದಿಂದ ಮಾತುಗಳು ಹೊರಗೆ ಬರುತ್ತಿಲ್ಲ. ಲೈಬ್ರೆರಿಗೆ ಬೀಗ ಬೇರೆ ಹಾಕುತ್ತಿದ್ದಾರೆ. ಮುಂದೆ ಮೆಟ್ಟಿಲುಗಳನ್ನು ಇಳಿಯಬೇಕು. ಕತ್ತಲೆ ಬೇರೆ. ತಲೆಕೆದರಿದ ದೆವ್ವ ಮೆಟ್ಟಿಲುಗಳನ್ನು ಹತ್ತಿ ಬಂದುಬಿಟ್ಟರೆ! ಬಾಯೊಳಗಿನ ದ್ರವವೆಲ್ಲ ಆರಿಹೋಗಿ ಬಾಯಿ ಒಣಗಿ ಹೋಗಿತ್ತು. ಅಷ್ಟರಲ್ಲೇ ಅಣ್ಣ ನಾನಿನ್ನೂ ಬಂದಿಲ್ಲ ಅಂತ ಮೇಲಕ್ಕೆ ಹತ್ತಿ ಬಂದಿದ್ದ. ದೇವರೇ ಸಿಕ್ಕಂತಾಗಿ ಅವನ ಹತ್ತಿರ ಓಡಿಹೋಗಿ ಅವನ ಕೈ ಹಿಡಿದೇ ಮನೆ ತಲುಪಿದೆ. ”ಅಣ್ಣ ಯಾಕೆ ನಡುಗುತ್ತಿದ್ದಿಯಾ, ಜ್ವರ ಬಂದಿದೆಯಾ” ಅಂತ ಹಣೆ ಮುಟ್ಟಿ ನೋಡಿ ”ಜ್ವರ ಇಲ್ಲವಲ್ಲ , ಮತಾöಕೆ ನಡುಗುತ್ತಿದ್ದಿಯಾ” ಅಂತ ಕೇಳಿದ. ನಾನು ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೇಗೋ ಅಣ್ಣನ ಜೊತೆ ಅವನ ಕೈ ಹಿಡಿದು ಕಣ್ಣು ಮುಚ್ಚಿಕೊಂಡು ಮನೆಗೆ ಬಂದುಬಿಟ್ಟೆ. ಮನೆಗೇನೊ ಬಂದೆ.

ಆಮೇಲೆ ಒಬ್ಬಳೇ ರೂಮಿಗೆ ಹೋಗಲು, ಅಡುಗೆ ಮನೆಗೆ ಹೋಗಲು, ಬಚ್ಚಲು ಮನೆಗೆ ಹೋಗಲು, ಕತ್ತಲೆಯಲ್ಲಿ ಹೊರ ಹೋಗಲು ಭಯವೋ ಭಯ. ರೂಮಿಗೆ ಹೋದರೆ ಅಲ್ಲಿ ಎಲ್ಲಿ ದೆವ್ವ ತಲೆಕೆದರಿ ಕುಳಿತಿದೆಯೋ ಅಂತ ಹೆದರಿಕೆ ಆಗುತ್ತಿತ್ತು. ತಲೆಕೆದರಿ ವಿಕಾರವಾಗಿ ಕುಳಿತರುವ ದೃಶ್ಯವೇ ಕಂಡುಬಂದು ರೂಮಿಗೆ ಹೋಗುವುದನ್ನೆ ಬಿಟ್ಟುಬಿಟ್ಟೆ. ಬಚ್ಚಲ ಮನೆಯಲ್ಲಿ ಒಲೆಗೆ ಕಾಲನ್ನು ಹಾಕಿ ಸೌದೆಯಂತೆ ಉರಿಸುವುದು ಕಣ್ಮುಂದೆ ಪದೇ ಪದೇ ಬಂದು ಅತ್ತ ತಲೆ ಹಾಕುವುದನ್ನೆ ಬಿಟ್ಟು ಬಿಟ್ಟೆ. ಹೋಗಲೇ ಬೇಕೆಂದಾಗಲೆಲ್ಲ ಚಿಲಾrರಿಗಳಾದ ತಮ್ಮಂದಿರನ್ನು ಕರೆದುಕೊಂಡು ಹೋಗುತ್ತಿದ್ದೆ. ರಾತ್ರಿ ಮಲಗಿದಾಗ ನಿದ್ದೆ ಬಂದ ತಕ್ಷಣ ದೆವ್ವ ನನ್ನ ಮೇಲೆ ಕುಳಿತುಕೊಂಡು ತಲೆಕೆದರಿಕೊಂಡು ನನ್ನ ಕತ್ತು ಹಿಸುಕಿ ಸಾಯಿಸುವಂತೆ ಅನ್ನಿಸಿ ಹೆದರಿ ಜೋರಾಗಿ ಕಿರುಚಿಕೊಂಡಿದ್ದೆ. ಸಹೋದರರು ಬೆಚ್ಚಿ ಬಿದ್ದು ಎದ್ದು ಕುಳಿತುಕೊಂಡು ಭೀತಿಯಿಂದ ನನ್ನ ಕಡೆಯೇ ನೋಡುತ್ತಿದ್ದರು. ಅಪ್ಪ ಅಮ್ಮನೂ ಗಾಬರಿಯಿಂದ ಎದ್ದು ಬಂದಿದ್ದರು. ಹೆದರಿ ನಡುಗುತ್ತಿದ್ದ ನನ್ನನ್ನು ಸಮಾಧಾನಪಡಿಸಿ ಏನಾಯ್ತೋ ತಮ್ಮ ಮುದ್ದಿನ ಏಕೈಕ ಮಗಳಿಗೆ ಅಂತ ಆತಂಕ ಪಟ್ಟಿದ್ದರು. ಸಾಕಷ್ಟು ಹೆದರಿದ್ದ ನನ್ನನ್ನು ತಮ್ಮ ಬಳಿಯೇ ಅಂದು ರಾತ್ರಿ ಮಲಗಿಸಿ ಕೊಂಡ ಮೇಲೇ ನೆಮ್ಮದಿಯಿಂದ ನಿದ್ರೆ ಮಾಡಿದ್ದೆ. ಅಕ್ಕಪಕ್ಕದವರು ತುಂಬಾ ಹೆದರಿದ್ದಾಳೆ ಒಂದು ಯಂತ್ರ ಕಟ್ಟಿಸಿ ಅಂತ ಬಲವಂತ ಮಾಡಿದಾಗ ಬೆಳಿಗ್ಗೆಯೇ ದೇವಾಲಯಕ್ಕೆ ಕರೆದು ಕೊಂಡುಹೋಗಿ ಪೂಜೆ ಮಾಡಿಸಿ ಒಂದು ಯಂತ್ರ ಕಟ್ಟಿಸಿ ಕುತ್ತಿಗೆಗೆ ಹಾಕಿದ್ದರು. ಇದು ಇರುವುದರಿಂದ ನನ್ನ ಹತ್ತಿರ ಯಾವ ದೆವ್ವವೂ ಬರುವುದಿಲ್ಲ ಅನ್ನೋ ಧೈರ್ಯದ ಮೇಲೇ ಆ ದೆವ್ವದ ಭಯ ಕಡಿಮೆಯಾಗಿತ್ತು.

ಎನ್‌. ಶೈಲಜಾ ಹಾಸನ

Advertisement
Advertisement

Udayavani is now on Telegram. Click here to join our channel and stay updated with the latest news.

Next