Advertisement

ಇಂಜಿನಿಯರ್‌ ವಿದ್ಯಾರ್ಥಿಗಳು ತಯಾರಿಸಿದ ಸೋಲಾರ್‌ ಕಾರು

06:00 AM Dec 28, 2018 | |

ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜಿನ ಇಲೆಕ್ಟ್ರಾನಿಕ್ಸ್‌ ವಿಭಾಗದ ವಿದ್ಯಾರ್ಥಿಗಳ ಮುಸ್ತಾಂಗ್‌ ತಂಡವು ರಾಷ್ಟ್ರಮಟ್ಟದ ಸೋಲಾರ್‌ ಕಾರುಗಳ ವಿನ್ಯಾಸ ಮತ್ತು ನಿರ್ಮಾಣ ಸ್ಪರ್ಧೆಯಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಆಂಧ್ರಪ್ರದೇಶದ ಭೀಮಾವರಂನ ವಿಷ್ಣು ಕಾಲೇಜ್‌ ಆಫ್ ಇಂಜಿನಿಯರಿಂಗ್‌ ಮತ್ತು ಇಂಪೀರಿಯಲ್‌ ಸೊಸೈಟಿ ಆಫ್ ಇನ್ನೋವೇಟಿವ್‌ ಇಂಜಿನಿಯರ್ ಇದರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್‌ 27 ರಿಂದ ಎಪ್ರಿಲ್‌ 2 ರವರೆಗೆ ನಡೆದ ಅಖೀಲ ಭಾರತ ಮಟ್ಟದ ಇಲೆಕ್ಟ್ರಿಕ್‌ ಸೋಲಾರ್‌ ವೆಹಿಕಲ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ವಿವಿಧ ತಾಂತ್ರಿಕ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ವಿವಿಧ ರಾಜ್ಯಗಳ ಒಟ್ಟು 81 ತಂಡಗ‌ಳು ಇದರಲ್ಲಿ ಭಾಗವಹಿಸಿದ್ದವು. 36 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಗೊಂಡಿದ್ದು, ಕರ್ನಾಟಕ ರಾಜ್ಯದಿಂದ ಅಂತಿಮ ಹಂತಕ್ಕೆ ಆಯ್ಕೆಯಾದ ಏಕೈಕ ತಂಡವೆಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು. ಅತ್ಯುತ್ತ‌ಮ ಸಂಶೋಧನಾ ವರದಿಯಲ್ಲಿ ಪ್ರಥಮ, ಜನರ ಆಯ್ಕೆ ವಿಭಾಗದಲ್ಲಿ ಪ್ರಥಮ ಮತ್ತು ಏರುದಾರಿಯಲ್ಲಿ ಸಂಚರಿಸುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿಕೊಳ್ಳುವುದರ ಜೊತೆಯಲ್ಲಿ ಸಮಗ್ರ ಪ್ರಶಸ್ತಿ ವಿಭಾಗದಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದೆ.

Advertisement

ಇಲೆಕ್ಟ್ರಾನಿಕ್‌ ವಿಭಾಗದ 31 ಮತ್ತು ಮೆಕ್ಯಾನಿಕಲ್‌ ವಿಭಾಗದ 4 ವಿದ್ಯಾರ್ಥಿಗಳ ಅವಿರತ ಸಂಶೋಧನೆ ಮತ್ತು ಪರಿಶ್ರಮದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ವಿಭಾಗದ ಮುಖ್ಯಸ್ಥ ಪ್ರೊ. ಸೌಮ್ಯಾಅನಿಲ್‌ ಮತ್ತು ಪ್ರೊ. ಸುಹಾನ್‌ ದಾಸ್‌ ಮಾರ್ಗದರ್ಶನವನ್ನು ನೀಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಪ್ರೋತ್ಸಾಹ ಮತ್ತು ಪ್ರಾಂಶುಪಾಲರ ಸಹಕಾರದೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುವುದು ಸಾಧ್ಯವಾಯಿತು ಎನ್ನುವುದು ವಿದ್ಯಾರ್ಥಿಗಳ ಅಭಿಮತ.

ವಾಹನದ ಬಗ್ಗೆ…
ಇದೊಂದು ಸೋಲಾರ್‌ ವಿದ್ಯುತ್‌ ಬಳಸಿ ಚಲಿಸುವ ವಾಹನವಾಗಿದ್ದು, 48 ವೋಲ್ಟ್/ 1230 ಎ.ಎಚ್‌. ಲೀಥಿಯಂ ಅಯಾನ್‌ ಬ್ಯಾಟರಿಯನ್ನು ಅಳವಡಿಸಲಾಗಿದೆ. ಮೂರು ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಲಾಗಿದ್ದು, 225 ಕಿಲೋವ್ಯಾಟಿನ ಬಿಎಲ್‌ಡಿಸಿ ಮೋಟಾರಿನಿಂದ ಈ ವಾಹನವು ಚಲಿಸುತ್ತದೆ. ಬ್ಯಾಟರಿಯನ್ನು ನೇರವಾಗಿ ಚಾರ್ಜ್‌ ಮಾಡುವ ವ್ಯವಸ್ಥೆಯನ್ನು ಕೂಡ ಇದಕ್ಕೆ ಅಳವಡಿಸಲಾಗಿದೆ. ಇದು ಇಂಧನರಹಿತ ವಾಹನವಾದ್ದರಿಂದ ಯಾವುದೇ ರೀತಿಯ ಮಾಲಿನ್ಯವನ್ನು ಹೊರಸೂಸುವುದಿಲ್ಲ. ಒಮ್ಮೆ ಬ್ಯಾಟರಿ ಸಂಪೂರ್ಣ ಚಾರ್ಜ್‌ ಆದರೆ, ಪ್ರತಿಗಂಟೆಗೆ 50 ಕಿ.ಮೀ. ವೇಗದಲ್ಲಿ ನಿರಂತರ 2.5 ಗಂಟೆ ಚಲಿಸುತ್ತದೆ. ಈ ವಾಹನ ನಿರ್ಮಾಣಕ್ಕೆ ಸುಮಾರು 5 ಲಕ್ಷ ವೆಚ್ಚ ತಗಲಿದ್ದು ಅತ್ಯಾಧುನಿಕ ತಂತ್ರಜ್ಞಾನಗಳಾದ ಟ್ರಾಕ್ಷನ್‌ ಕಂಟ್ರೋಲ್‌, ರೀಜನರೇಟಿವ್‌ ಬ್ರೇಕಿಂಗ್‌, ಟಲ್ಟ್ ಡಿಟೆಕ್ಷನ್‌ ಮತ್ತು ಕೀಲೆಸ್‌ ಸ್ವಾಟ್‌ ಕಂಟ್ರೋಲ್‌ ವಿಧಾನಗಳನ್ನು ಅಳವಡಿಸಲಾಗಿದೆ.

ಸೋಲಾರ್‌ ಕಾರ್‌  ಹೇಗಿದೆ…
ಈ ಕಾರು ಎಲ್ಲಾ ವರ್ಗದವರು ಎಲ್ಲಾ ವಯಸ್ಸಿನವರು ಇಷ್ಟಪಡು ವಂಥ‌ ಒಂದು ನೋಟ ಹೊಂದಿದೆ. ಸದ್ಯಕ್ಕೆ ಒಬ್ಬನೇ ಕುಳಿತು ಚಲಾಯಿಸುವ ಕಾರು ಇದಾಗಿದೆ. ಕಾರಿನ ದೇಹದ ಭಾಗ ರಚನೆಗೆ ಹಲವಾರು ಉಪಯುಕ್ತ ಹಾಗೂ ಬಾಳಿಕೆ ಬರುವ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಇದರಲ್ಲಿ ಅಖಐ 4130 ಎಂಬ ಕಬ್ಬಿಣದ ಕಂಬಿಗಳನ್ನು ಬಳಸಲಾಗಿದೆ. ದೇಹ ರಚನೆಗೆ ಗ್ಲಾಸ್‌ ಫೈಬರನ್ನು ಬಳಸಲಾಗಿದೆ. ಇನ್ನು ಕೆಲವೆಡೆ ಅಲ್ಯೂಮಿನಿಯಂ ಅನ್ನು ಬಳಸಲಾಗಿದೆ. ದೇಹದ ಭಾಗಗಳ ರಚನೆಗೆ ಬೇಕಾದ ವಸ್ತುಗಳು ಪುತ್ತೂರಿನಲ್ಲಿ ಲಭ್ಯವಾದವು. ಇನ್ನುಳಿದ ವಸ್ತುಗಳನ್ನು ಮುಂಬೈಯಿಂದ ತರಿಸಿದರೆ ಸೋಲಾರ್‌ ಮತ್ತು ಇಲೆಕ್ಟ್ರಾನಿಕ್‌ ವಸ್ತುಗಳಲ್ಲಿ ಕೆಲವನ್ನು ದಿಲ್ಲಿಯಿಂದ, ಇನ್ನು ಕೆಲವು ಬೆಂಗಳೂರಿನಿಂದ ತಂದು ಜೋಡಿಸಲಾಯಿತು. ಕೊನೆಗೆ ಉಳಿದ ಎಲ್ಲಾ ವಸ್ತುಗಳನ್ನು ಮಂಗಳೂರಿನಿಂದ ಖರೀದಿಸಲಾಯಿತು. 

ಸೋಲಾರ ಕಾರ್‌ನ ಉದ್ದೇಶ
ಮಾಲಿನ್ಯ ತಡೆಯುವುದೇ ಈ ಕಾರಿನ ಉದ್ದೇಶವಾಗಿದೆ. ಸೂರ್ಯನ ಪ್ರಕಾಶವನ್ನು ಎಷ್ಟು ಬಳಸಲು ಸಾಧ್ಯವೋ ಅಷ್ಟನ್ನು ನಾವು ಇಂದು ಬಳಸುತ್ತಿಲ್ಲ. ಇಂದು ಪೆಟ್ರೋಲಿಯಂ ಇಂಧನಗಳು ನಶಿಸಿ ಹೋಗುತ್ತಿವೆ. ಈ ಮೂಲಕವಾದರೂ ಈ ಶಕ್ತಿ ಬಳಕೆಯಾಗಲಿ. ಬದುಕಿಗೆ ಒಂದು ಉಪಯುಕ್ತ ಹಾನಿಕಾರಕವಲ್ಲದ ಶಕ್ತಿ ಸೌರಶಕ್ತಿ. ಉಪಯುಕ್ತ ಇಂಧನವಾಗಿ ಸೌರಶಕ್ತಿಯು ಬಳಕೆಯಾಗಲಿ ಎಂಬುದೇ ನಮ್ಮ ಉದ್ದೇಶ.ಈ ಸೋಲಾರ್‌ ಕಾರು ಬೇರೆ ಕಾರುಗಳಂತೆ ವೇಗವಾಗಿ ಚಲಿಸಬಲ್ಲದು. ಹಾಗೆಯೇ ಹೆಚ್ಚಿನ ಶಬ್ದ ಕೂಡ ಇರುವುದಿಲ್ಲ. ಇದರ ವೇಗ 50 ಕಿ. ಮೀ. ನಷ್ಟು ಇರುವುದರಿಂದ ಇದು ಒಳ್ಳೆಯ ವೇಗ ಎಂದೆನಿಸುತ್ತದೆ. ಈ ಕಾರು ಒಮ್ಮೆ ಚಾರ್ಜ್‌ ಸಂಪೂರ್ಣವಾಗಿ ಆದರೆ, 4 ರಿಂದ 5 ಗಂಟೆಗಳ ಕಾಲ ಬಳಸಬಹುದು. ಆರಾಮವಾಗಿ ಒಬ್ಬ ವ್ಯಕ್ತಿ ಕುಳಿತುಕೊಳ್ಳಲು ಬಹಳ ಹಿತವಾಗಿದೆ. ಟಯರನ್ನು ಕೂಡ ಆರಾಮವಾಗಿ  (ಇತರ ಕಾರುಗಳಂತೆಯೇ) ಸುಲಭದಲ್ಲಿ ಅಳವಡಿಸಿ ಹಾಗೂ ತೆಗೆಯಲು ಸಾಧ್ಯವಿದೆ. ತಂಡದ ಕುರಿತು ಹೇಳುವುದಾದರೆ35 ಜನರ ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ತಂಡವಿದು. 

Advertisement

– ಕೃಷ್ಣವೇಣಿ ಪ್ರಸಾದ್‌ ಮುಳಿಯ

Advertisement

Udayavani is now on Telegram. Click here to join our channel and stay updated with the latest news.

Next