Advertisement

ನೃತ್ಯ ನಿಕೇತನದ ರಜತ ಪಥ ಸಂಭ್ರಮ 

03:35 PM Jan 26, 2018 | |

ಇಪ್ಪತ್ತೈದು ವರ್ಷಗಳಿಂದ ಕಲಾ ರಸಿಕರ ದಾಹ ನೀಗಿಸುತ್ತಿರುವ ಸಂಸ್ಥೆ “ನೃತ್ಯ ನಿಕೇತನ ಕೊಡವೂರು’.ಸಂಸ್ಥೆಯ ಮೈಲುಗಲ್ಲಾದ ಕಾರ್ಯಕ್ರಮ “ರಜತ ಪಥ’. ವಿಶೇಷವೆಂದರೆ ನೃತ್ಯ ನಿಕೇತನ ತನ್ನ ರಜತ ಸಂಭ್ರಮವನ್ನು ಬರೋಬ್ಬರಿ ಎರಡು ವರ್ಷ ಆಚರಿಸಿಕೊಂಡು ದಾಖಲೆ ಬರೆದಿದೆ. ಗುರುಗಳಾದ ಕೊಡವೂರು ಸುಧೀರ್‌ ರಾವ್‌ ಅವರ ಪ್ರೀತಿಯ ಕೂಸು “ನೃತ್ಯ ನಿಕೇತನ’. ಗುರುಗಳ ಪ್ರತಿ ಹೆಜ್ಜೆಗೆ ಗೆಜ್ಜೆಯ ದನಿಯೋಪಾದಿಯಲ್ಲಿ ಜೊತೆಯಾದವರು ಮಾನಸಿ ಸುಧೀರ್‌.

Advertisement

ವಿಶಿಷ್ಟ ಕಾರ್ಯಕ್ರಮ
ನೃತ್ಯ ನಿಕೇತನಕ್ಕೆ 25 ವರ್ಷ ತುಂಬಿದ್ದು 2015ರಲ್ಲಿ. 2016ರ ಎಪ್ರಿಲ್‌ನ‌ಲ್ಲಿ ಆರಂಭವಾದ ರಜತ ಪಥ ರಾಷ್ಟ್ರೀಯ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ 38 ಪ್ರದರ್ಶನಗಳು, ಶತಾವಧಾನಿ ರಾ.ಗಣೇಶ್‌ , ಶತಾವಧಾನಿ ರಾಮನಾಥ ಆಚಾರ್ಯ ಮತ್ತು ವಿದ್ವಾನ್‌ ಅಮೃತೇಶ ಆಚಾರ್ಯರಿಂದ ನಾಟ್ಯಶಾಸ್ತ್ರ ಕುರಿತಾದ ಪ್ರವಚನ,ವೃದ್ಧಾಶ್ರಮವೇ ಮೊದಲಾದ ಕಡೆಗಳಲ್ಲೂ ಕಾರ್ಯಕ್ರಮ ನೋಡುವಂತೆ ಮಾಡಲು 12 ಪ್ರದರ್ಶನ , ಕರಣ ಕಾರ್ಯಾಗಾರ ,ಪ್ರಸಾಧನ ಕಾರ್ಯಾಗಾರ, ನೃತ್ಯ ದರ್ಪಣ ನೃತ್ಯೋತ್ಸವ, ಹಿಂದೂಸ್ಥಾನಿ ಗಾಯನ ಹೀಗೆ ವಿಭಿನ್ನ ಕಾರ್ಯಕ್ರಮಗಳಿಂದ ರಜತ ಪಥದ ಎರಡು ವರ್ಷ ಕಲಾಮಯವಾಗಿತ್ತು.

 ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ, ಶ್ರೀ ಕೃಷ್ಣ ಮಠ ಉಡುಪಿಯ ಆಶ್ರಯದಲ್ಲಿ ಎರಡು ವರ್ಷದ ರಜತಪಥದ ಸಮಾರೋಪ ಸಮಾರಂಭ, ಪುರಭವನದಲ್ಲಿ ಡಿ.18ರಿಂದ 22ರ ತನಕ ನಡೆಯಿತು. ಡಿ.18ರಂದು ಪೇಜಾವರ ಕಿರಿಯ ಶ್ರೀಗಳು ಅನುಗ್ರಹದ ಬಳಿಕ ನೃತ್ಯಾರ್ಪಣಂ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮೊದಲ್ಗೊಂಡಿತು. ತುಳಸಿ ದಾಸರ ಟುಮಕ್‌ ಚಲತ್‌ ಎಂಬ ರಚನೆಯಲ್ಲಿ ರಾಮನ ಬಾಲ ಲೀಲೆ,ಮೊದಲ ಮಾತು,ಚಂದ್ರನಿಗಾಗಿ ಹಟ ಮಾಡುವ ಪರಿ ಮನ ಸೆಳೆಯಿತು. ವಾರಣ ಸ್ತುತಿ,ದೇವಿ ಸ್ತುತಿಯಲ್ಲಿ ಮೊದಲು ಅವ್ಯಕ್ತವಾಗಿ ದೇವಿಯನ್ನು ಸಿಂಗರಿಸಿ ಆಭರಣದಿಂದ ಅಲಂಕರಿಸಿ ನಂತರ ತಾನೇ ದೇವಿಯಾಗಿ ಲೀಲೆ ತೋರಿದ ರೀತಿ, ರುಸಲೀ ರಾಧಾ ಎಂಬ ಭಾಗದಲ್ಲಿ ರಾಧಾ-ಕೃಷ್ಣರ ವಿರಸವನ್ನು ಸರಸ ಮಾಡಲು ತಪಿಸುವ ಗೋಕುಲ, ಪ್ರಿಯತಮೆ ರಾಧೆಯ ಮನವನ್ನು ತಾನೇ ಚಿವುಟಿ ತಾನೇ ಮನವೊಲಿಸುವ ಸೊಬಗು. ತಪ್ಪುಗಳನ್ನೂ ನೆನಪಿಟ್ಟು ಮಾಡಬೇಕಿದ್ದ ಯಡವಟ್ಟು ನೃತ್ಯ , ಡಿವಿಜಿಯವರ ಅಂತಃಪುರಗೀತೆಯಾದ ಏನೇ ಶುಕಭಾಷಿಣಿ.ಉತ್ತುಕ್ಕಾಡು ವೆಂಕಟ ಸುಬ್ಬಯ್ಯನವರ ಕಾಳಿಂಗ ನರ್ತನದ ಕುರಿತಾದ ತಿಲ್ಲಾನ ಕೊನೆಗೆ ಭಾವಗೀತೆಯಲ್ಲಿ ಕೃಷ್ಣನಿಲ್ಲದ ಗೋಕುಲದಿ ಗೋಪಿಯರ ವಿರಹದ ಪರಿತಾಪ , ಕೃಷ್ಣ ಬಂದಾಗ ಆಗುವ ಸಂತಸದ ಅಭಿವ್ಯಕ್ತಿಯೊಂದಿಗೆ ನೃತ್ಯಾರ್ಪಣಂ ಮೊದಲ ದಿನ ಅಂತ್ಯಗೊಂಡಿತು.

ಎರಡನೇ ದಿನ ಪೇಜಾವರ ಶ್ರೀಗಳು ಅನುಗ್ರಹಿಸಿದರು. ನಾಟ್ಯತಾರೆಗಳಾದ ಪಾರ್ಶ್ವನಾಥ ಉಪಾಧ್ಯೆ ಮತ್ತು ಅಪೂರ್ವ ಜಯರಾಂ ಅವರ ನೃತ್ಯ ಸುಧಾ ರಸ ನೃತ್ಯೋಲ್ಲಾಸಕ್ಕೆ ಆಮಂತ್ರಿಸಿತು. ಮೂರನೇ ದಿನ ನೃತ್ಯನಿಕೇತನದ ಹದಿನಾಲ್ಕು ಶಾಖೆಗಳ 190 ವಿದ್ಯಾರ್ಥಿಗಳಿಂದ ನಡೆದ ನೃತ್ಯಪರ್ವವಾಗಿತ್ತು . ಪುಷ್ಪಾಂಜಲಿಯಿಂದ ನೃತ್ಯ ಪರ್ವ ಆರಂಭವಾಯ್ತು.ಮುಂದೆ ಸ್ವರಾಂಜಲಿ , ದ್ವಾದಶ ನಾಮ ಸ್ತುತಿಯಲ್ಲಿ ಒಂದಾದ ಪ್ರೀಣಯಾಮೋ ವಾಸುದೇವಮ್‌ ನೃತ್ಯ, ಬನ್ನಂಜೆ ಗೋವಿಂದಾಚಾರ್ಯರ ಒಂದು ಎಂದರೆ ಒಂದು ಎಂಬ ಮಕ್ಕಳ ಸಾಹಿತ್ಯ,ಹನುಮ, ಭೀಮ, ಮಧ್ವರ ಕಥೆಯೊಳಗೊಂಡ ವೀರ ಹನುಮ , ಓಂ ನಮಃ ಶಿವಾಯ ಎಂಬ ಶಿವ ಷಡಕ್ಷರಿ. ನವರಸ ಭೀಮ ಇದರಲ್ಲಿ ಸೌಗಂಧಿಕಾ ಪುಷ್ಪ ತರುವ ಶೃಂಗಾರ, ಉರಿವ ಮನೆ ಎತ್ತಿ ಹಿಡಿವ ಅದ್ಭುತ, ಬಕಾಸುರನಿಗೆ ಆಹಾರವಾಗಬೇಕಾದ ಕುಟುಂಬದ ಮೇಲಿನ ಕರುಣೆ, ಬಕಾಸುರನ ಕೊಲ್ಲುವಾಗಿನ ಹಾಸ್ಯ, ಜರಾಸಂಧನ ಕೊಲ್ಲುವಾಗಿನ ವೀರ, ಕೀಚಕನ ಕೊಲ್ಲುವಾಗಿನ ರೌದ್ರ , ದುರ್ಯೋಧನನ ಕುಟಿಲಕ್ಕೆ ಬಲಿಯಾಗಿ ಸಾವಿರ ಸರ್ಪದ ಮಡುವಿನ ಕೆಲಕಾಲದ ಭಯ, ದ್ರೌಪದಿ ವಸ್ತ್ರಾಪಹರಣ ಮತ್ತು ದುಃಶಾÏಸನನ ಸಂಹಾರದ ಭೀಭತ್ಸ, ಕೃಷ್ಣ ಪ್ರಜ್ಞೆ ಜಾಗೃತಗೊಳಿಸಲು ಉತ್ತರದೆಡೆಗೆ ನಡೆವ ಶಾಂತ ರಸದ ಭೀಮ ಹೀಗೆ ರಸಗಳ ರಸದೂಟ. ಕೃಷ್ಣ ಲೀಲಾ ನರ್ತನ ನೀರದ ಸಮ ನೀಲ ಕೃಷ್ಣ, ಶಿಶುನಾಳ ಶರೀಫ‌ ಮತ್ತು ಪುರಂದರ ದಾಸರ ತತ್ವ ಪದಗಳು,ಉತ್ತುಕ್ಕಾಡು ವೆಂಕಟ ಸುಬ್ಬಯ್ಯನವರು ರಚಿಸಿದ ತಿಲ್ಲಾನದಿಂದ ಕಾರ್ಯಕ್ರಮ ಮುಕ್ತಾಯವಾಯಿತು.

ನಾಲ್ಕನೇ ದಿನ ನೃತ್ಯ ಪ್ರವಚನ ಗೋಪಾಲಾಚಾರ್ಯರ ನಿರ್ದೇಶನ ಸಹಿತ ಪ್ರವಚನ…ಹೀಗೆ ಪ್ರವಚನ-ಹಿಮ್ಮೇಳದ ಮೇಳೈಸುವಿಕೆಯಿಂದ ನೃತ್ಯ ಪ್ರವಚನ ಪ್ರಾರಂಭಗೊಂಡು , ಪ್ರವಚನ ರೂಪದ ಕಥೆಯಲ್ಲಿ ಭುವಿಗೆ ಬರುವ ಶ್ರೀನಿವಾಸ, ವಲ್ಮೀಕ ವಾಸ , ಬಕುಳಾದೇವಿಯ ಪ್ರೀತಿ ವಾತ್ಸಲ್ಯ. ಪದ್ಮಾವತಿಯ ಜೊತೆಗಿನ ಪ್ರೇಮ , ಮದುವೆಗೆ ಲಕ್ಷ್ಮೀ ದೇವಿಯೇ ಬರುವ ಸೊಬಗು, ಶ್ರೀನಿವಾಸ ಪದ್ಮಾವತಿಯರ ಪಲ್ಲಕ್ಕಿ ಪ್ರವೇಶ ಕಣ್ಮನ ಸೆಳೆಯಿತು. 

Advertisement

 ಸಮಾರೋಪ ಸಮಾರಂಭದಲ್ಲಿ ನೃತ್ಯ ನಾಟಕದ ಆರಂಭಕ್ಕೂ ನಡುವೆ ಕಂಡ ಗುರುಶಿಷ್ಯರ ಬಾಂಧವ್ಯ ಹೃದಯ ತುಂಬಿತು. ಅನಂತರ ಬಹು ನಿರೀಕ್ಷಿತವಾದ “ಚಿತ್ರಾ’ ಪ್ರದರ್ಶನವಾಯಿತು.

“ಚಿತ್ರಾ’ ಇಪ್ಪತ್ತೈದರ ಸಂಭ್ರಮಕ್ಕೆ 25 ನೇ ಪ್ರದರ್ಶನವಾದದ್ದು ವಿಶೇಷವಾಗಿತ್ತು. ಭಾವನೆಗಳ ಮುತ್ತನ್ನು ಪೋಣಿಸಿದ ಸುಂದರ ಹಾರವಾಗಿತ್ತು ‘ಚಿತ್ರಾ’. ಕಥಾ ಹಂದರದಲ್ಲಿ ಚಿತ್ರಾಳ ವೀರತ್ವ , ಪಾರ್ಥನ ಹೊಂದುವ ಬಯಕೆ , ಬಯಕೆಗಾಗಿ ತನ್ನನ್ನು ಬದಲಾಯಿಸುವ ರೀತಿ, ಪಾರ್ಥನ ಹೊಂದಿದ ಬಳಿಕ ನಿಜವಾದ ಪ್ರೀತಿ ಗೆದ್ದೀತೇ ಎನ್ನುವ ಭಾವ. ಹೀಗ ಆಂತರಿಕ ಪ್ರೀತಿ , ಬಾಹ್ಯ ಪ್ರೀತಿ, ಮನವರಿವ ಪ್ರೀತಿ, ಮನ ಸೆಳೆವ ಪ್ರೀತಿ ಇವುಗಳಲ್ಲಿ ಗೊಂದಲಗೊಂಡ ರೂಪವತಿಯಾದ ಚಿತ್ರಾ ಮನಸಿನ ಪ್ರತಿರೂಪವಾಗಿ ಕಂಡಳು. 

ವೀರಳಾದ ಚಿತ್ರಾ ತನ್ನ ಮಾತಿನಿಂದ ಮನದ ಮಂಕುತನವನ್ನು ಅಳಿಸಿ, ನಿಜವಾದ ಪ್ರೀತಿ ಸತ್ಯದ ಅಡಿಪಾಯದ ಮೇಲಿರಬೇಕೆಂಬ ಸಂದೇಶ ನೀಡಿ, ನಿಜದ ದಾರಿ ಹಿಡಿದ ಪ್ರೀತಿಯೇ… ಕಥಾಹಂದರ.ಐದು ದಿನಗಳ ಕಾರ್ಯಕ್ರಮದ ಹಿಮ್ಮೇಳದಲ್ಲಿ ಸುಧೀರ್‌ ರಾವ್‌ , ಸ್ವರಾಗ್‌ ಮಾಹೆ ,ಸುರೇಶ್‌ ಬಾಬು ,ಬಾಲಚಂದ್ರ ಭಾಗವತ್‌ , ದೀಪಕ್‌ ಹೆಬ್ಟಾರ್‌ , ಶ್ರೀಧರ್‌ ಆಚಾರ್ಯ ,ಚಂದ್ರಶೇಖರ್‌ ರಾವ್‌ ಸಹಕರಿಸಿದರು.ರಜತ ಪಥದ ಹೆಜ್ಜೆ ಇಟ್ಟಿರುವ ನೃತ್ಯ ನಿಕೇತನ ತನ್ನ ಹೆಜ್ಜೆಯನ್ನು ‘ಸ್ವರ್ಣ ಪಥ’ದೆಡೆಗೆ ಹೀಗೆ ಯಶಸ್ವಿಯಾಗಿ ಮುಟ್ಟಲೆಂಬ ಹಾರೈಕೆ.

ಆದರ್ಶ ಆಚಾರ್ಯ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next