Advertisement

ಸೂರ್ಯನ ನೆರಳು

09:55 AM Mar 28, 2020 | mahesh |

ಸೂರ್ಯನ ನೆರಳು. ಹೆಸರು ವಿಚಿತ್ರವಾಗಿದೆಯಲ್ಲವೆ? ಸೂರ್ಯನಿಗೆ ನೆರಳಿದೆಯೆ? ತನ್ನೆಲ್ಲ ಕಡೆಗಳಿಂದಲೂ ಬೆಳಕನ್ನು ಹೊಮ್ಮುತ್ತಿರುವ ಸೂರ್ಯ ಯಾವುದೋ ವಸ್ತುವಿನ ಮೇಲೆ ಬಿದ್ದಾಗ ಅದರ ಇನ್ನೊಂದು ಭಾಗದಲ್ಲಿ ನೆರಳು ಬೀಳಬಹುದಲ್ಲದೇ ಅದು ಸೂರ್ಯನ ನೆರಳು ಅನ್ನುವಂತಿಲ್ಲ. ಆ ವಸ್ತುವಿನ ನೆರಳು ಅನ್ನುತ್ತೇವೆ. ಹಾಗಿದ್ದರೆ ಸೂರ್ಯನ ನೆರಳು ಅನ್ನುವುದೇ ಅಸಂಬದ್ಧವಲ್ಲವೇ? ಹೌದು. ಆದರೆ, ಅದನ್ನು ಒಂದು ರೂಪಕವಾಗಿ ಬಳಸಿದರೆ ಹಲವು ಧ್ವನಿಗಳನ್ನು ನೀಡಬಲ್ಲುದು.

Advertisement

ನನಗೆ ಈಗೊಂದು ವರ್ಷದ ಹಿಂದೆ ಒಂದು ಪುಸ್ತಕ ಸಿಕ್ಕಿತ್ತು. ಮೂಲ ಲೇಖಕನ ಹೆಸರು ರೈಷಾರ್ಡ್‌ ಕಪುಶಿನ್‌ಸ್ಕಿ, ಪೋಲಿಶ್‌ ಭಾಷೆಯಲ್ಲಿ ಹೆಬಾನ ಅನ್ನುವ ಹೆಸರಿನಲ್ಲಿ ಅವನು 1998ರಲ್ಲಿ ಒಂದು ಕೃತಿ ಪ್ರಕಟಿಸಿದ್ದ. ದಿ ಶಾಡೋ ಆಫ್ ದ ಸನ್‌ ಎಂಬ ಅದರ ಇಂಗ್ಲಿಷ್‌ ಭಾಷಾಂತರವನ್ನು ಆಧರಿಸಿ ಸಹನಾ ಹೆಗಡೆ ಎನ್ನುವವರು ಸೂರ್ಯನ ನೆರಳು ಎಂದು ಕನ್ನಡಕ್ಕೆ ತಂದಿದ್ದರು. ಎಪ್ಪತ್ತರ ದಶಕದಲ್ಲಿ ಅಡಿಗರ ಸಂಪಾದಕತ್ವದಲ್ಲಿ ಬರುತ್ತಿದ್ದ ಸಾಕ್ಷಿ ನಿಯತಕಾಲಿಕೆಯ ಒಂದು ವಿಶೇಷ ಸಂಚಿಕೆ ಪೋಲಿಶ್‌ ಸಾಹಿತ್ಯದ ಕುರಿತಾಗಿಯೇ ಇತ್ತು. ಅಡಿಗರು ಅದರ ಸಂಪಾದಕತ್ವದ ಹೊಣೆಯನ್ನು ಎಸ್‌. ದಿವಾಕರ್‌ ಅವರಿಗೆ ವಹಿಸಿದ್ದರು. ಅದರಲ್ಲಿ ಪೋಲೆಂಡಿನ ಕತೆಗಳು, ಕವಿತೆಗಳು ಎಲ್ಲ ಇದ್ದುವು. ಅದನ್ನು ಓದಿದ ನನಗೆ ಪೋಲಿಶ್‌ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹುಟ್ಟಿದ್ದರೂ ಹೆಚ್ಚು ಓದುವುದಕ್ಕೆ ನನ್ನಿಂದ ಸಾಧ್ಯವಾಗಿರಲಿಲ್ಲ. ಆದರೂ ಮೇಜಿನ ಮೇಲಿದ್ದ ಈ ಪುಸ್ತಕ ನನ್ನನ್ನು ಓದು ಓದು ಎಂದು ಕುಟುಕುತ್ತಿತ್ತು. ಕಪಾಟುಗಳಲ್ಲಿ ಇರುವ ಪ್ರತಿಯೊಂದು ಪುಸ್ತಕವೂ ನನ್ನನ್ನು ಓದು, ಓದು, ನಿನಗಿಲ್ಲಿ ಏನೋ ಸಿಕ್ಕುವುದಿದೆ ಎಂದು ಮೌನವಾಗಿ ಕೂಗಿ ಹೇಳುತ್ತ ಇರುತ್ತದಂತೆ! ಅಂಥ ಒತ್ತಡದ ಕಾರಣದಿಂದ ನಾನು ಸುಮಾರು ಹದಿನೈದು-ಇಪ್ಪತ್ತು ದಿನಗಳ ಬಳಿಕ ಸೂರ್ಯನ ನೆರಳು ಬಿಡಿಸಿ ಓದತೊಡಗಿದೆ.

ಆ ಪುಸ್ತಕವನ್ನು ಓದಿ ನಾನು ಸ್ತಂಭೀಭೂತನಾಗಿ ಕೂತುಬಿಟ್ಟೆ. ನನ್ನ ಮನಸ್ಸು ದೇಹ ಎಲ್ಲವೂ ಮರಗಟ್ಟಿ ಹೋದಂತೆ ಭಾಸವಾಯಿತು.ರೈಷಾರ್ಡ್‌ ಕಪುಶಿನ್‌ಸ್ಕಿ (1932-2007) ಪೋಲೆಂಡ್‌ ದೇಶದವನು. ಇಂಗ್ಲಿಷ್‌ನಲ್ಲಿ Ryszard Kapuscinski, ಮೂಲತಃ ಪತ್ರಕರ್ತ. ಪೋಲಿಶ್‌ ಪ್ರಸ್‌ ಏಜೆನ್ಸಿಯಲ್ಲಿ ವಿದೇಶೀ ವರದಿಗಾರನಾಗಿ ಮೂವತ್ತು ವರ್ಷ ಕೆಲಸ ಮಾಡಿದ್ದ ಅವನು ಹಲವು ದೇಶಗಳಲ್ಲಿ ಸಂಚರಿಸುತ್ತ ಲೆಕ್ಕವಿಲ್ಲದಷ್ಟು ಕ್ರಾಂತಿಗಳಿಗೆ, ರಾಜಕೀಯ ಸ್ಥಿತ್ಯಂತರಗಳಿಗೆ, ಮಿಲಿಟರಿ ಕಾರ್ಯಾಚರಣೆಗಳಿಗೆ, ನಿಜವಾದ ಅರ್ಥದಲ್ಲಿ ಸಾಕ್ಷಿಯಾಗಿದ್ದ. ಬೇಹುಗಾರನೆಂಬ ಆಪಾದನೆಗೊಳಗಾಗಿ ಸೆರೆಮನೆ ಸೇರಿದ್ದ. ಪತ್ರಕರ್ತನಾಗಿ 1956ರಿಂದ ಅವನ ಮೊದಲ ಕೆಲಸ ಭಾರತದಿಂದ ಆರಂಭವಾಯಿತು.

ಕಣ್ಣಾರೆ ಕಂಡಲ್ಲದೆ ತಾನು ಏನನ್ನೂ ವರದಿ ಮಾಡುವುದಿಲ್ಲವೆಂದು ಹಠ ತೊಟ್ಟವನಂತೆ ಬರೆಯತೊಡಗಿದ ಕಪುಶಿನ್‌ಸ್ಕಿ ರೂಢಿಸಿಕೊಂಡ ಭಾಷೆ ಕಾವ್ಯಮಯವಾದದ್ದು. ಯಾವುದೇ ದೇಶಕ್ಕೆ ಹೋಗುವ ಮೊದಲು ಅಲ್ಲಿಯ ಸಂಸ್ಕೃತಿಯನ್ನು ತಿಂಗಳುಗಟ್ಟಲೆ ಆಳವಾಗಿ ಅಭ್ಯಸಿಸಿ, ಆ ದೇಶಕ್ಕೆ ಭೇಟಿ ಕೊಟ್ಟ ಮೇಲೆ ತಾನು ಕಂಡದ್ದರ ಆಂತರಿಕ ನೋಟವನ್ನು ಕೂಡಾ ಸಮರ್ಥವಾಗಿ ಅಭಿವ್ಯಕ್ತಿಸಿ ತನ್ನ ವರದಿಯಲ್ಲಿ ಬರೆದು ಕಳಿಸುವ ಅವನ ಬರಹದ ಒಂದೊಂದು ವಾಕ್ಯವೂ ಹಲವು ಧ್ವನಿಗಳನ್ನು ಹುಟ್ಟಿಸುವಂಥವು. ಅವನ್ನು ಓದಿದ ಅವನ ಸಹಪತ್ರಕರ್ತರು ಪತ್ರಿಕಾವರದಿಯನ್ನು ಸಾಹಿತ್ಯವನ್ನಾಗಿ ಪರಿವರ್ತನ ಮಾಡುತ್ತಿದ್ದ ಎಂದು ಕಪುಶಿನ್‌ಸ್ಕಿಯನ್ನು ಹೊಗಳುತ್ತಿದ್ದರು. ನಮ್ಮ ಪತ್ರಿಕಾ ವರದಿಗಾರರಿಗೆ ಅವನ ಬರಹಗಳಿಂದ ಬಹಳಷ್ಟು ಕಲಿಯಲಿಕ್ಕಿದೆ. ಅಂಥ ಅಗ್ಗಳಿಕೆಗೆ ಭಾಜನನಾಗಿರುವ ಕಪುಶಿನ್‌ಸ್ಕಿಯ ಹೆಸರನ್ನು ನೊಬೆಲ್‌ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು.

1958ರಲ್ಲಿ ಮೊದಲ ಬಾರಿ ಕಗ್ಗತ್ತಲ ಖಂಡವೆಂದು ಕುಖ್ಯಾತಿ ಪಡೆದ ಆಫ್ರಿಕಾಕ್ಕೆ ಬಂದ ಬಳಿಕ ಸುಮಾರು 23 ವರ್ಷಗಳ ತನಕ ಆಗಾಗ ಬರೆದ ಲೇಖನಗಳನ್ನು ಸಂಕಲಿಸಿ ಈ ಕೃತಿಯನ್ನು ರಚಿಸಲಾಗಿದ್ದರೂ ಸೂರ್ಯನ ನೆರಳು ಒಂದೇ ಕತೆಯನ್ನು ಹೇಳುತ್ತದೆ. ಇದು ಕಾದಂಬರಿಯಲ್ಲ. ಇಪ್ಪತ್ತನೆಯ ಶತಮಾನದಲ್ಲಿಯೂ ಹೀಗೊಂದು ಸಮಾಜವಿತ್ತೇ ಎಂದು ಓದುಗನನ್ನು ಅಚ್ಚರಿಗೊಳಿಸುವ ಈ ಕೃತಿಯಲ್ಲಿ ನಂಬಲಾಗದಂತಹ ಬಡತನ, ಜೀವನಶೈಲಿ, ಕಂಡು ಕೇಳರಿಯದ ಆಕಾರದ ಕಾಡುಪ್ರಾಣಿಗಳ, ಕ್ರಿಮಿಕೀಟಗಳ, ನೊಣ, ಜಿರಲೆ, ತಿಗಣೆ, ಕಣಜ, ಜೇಡ, ಗುಗ್ಗುರು, ಜೀರುಂಡೆಗಳ ವೈವಿಧ್ಯತೆ, ವಿಚಿತ್ರ ನಡವಳಿಕೆಯ ಮಂದಿ, ಇವುಗಳ ನಡುವೆ ಜೀವಿಸುತ್ತ ಬರೆದಿರುವ ಕಪುಶಿನ್‌ಸ್ಕಿ ತನ್ನ ಮಾಂತ್ರಿಕ ಬರವಣಿಗೆಯ ಶೈಲಿಯಿಂದ ನಮ್ಮನ್ನು ಬೆಚ್ಚಿ ಬೀಳಿಸುತ್ತಾನೆ. ಈ ಒಂದು ಭಾಗವನ್ನು ನೋಡಿ-

Advertisement

“ನಮಗೆ ದೂರದಲ್ಲಿ ಕಂಡಿದ್ದು ಎರಡು ಆಫ್ರಿಕನ್‌ ಗುಡಿಸಲುಗಳು. ಆದರೆ, ಒಳಗೆ ಕೆಲವು ಮಂಚಗಳಿದ್ದುವು. ಹೋಗಿ ಅಂತಹ ಒಂದು ಮಂಚದ ಮೇಲೆ ಹೇಗೆ ಬಿದ್ದುಕೊಂಡೆ ಎಂದು ನನಗೇ ತಿಳಿಯಲಿಲ್ಲ. ದಣಿವಿನಿಂದ ಅರ್ಧ ಹೆಣವಾಗಿದ್ದೆ. ಬಿಸಿಲ ಝಳಕ್ಕೆ ತಲೆಸಿಡಿಯುತ್ತಿತ್ತು. ಮಂಪರನ್ನು ದೂರವಿಡಲು ಒಂದು ಸಿಗರೇಟ್‌ ಹೊತ್ತಿಸಿದರೆ ಅದೂ ರುಚಿಸಲಿಲ್ಲ. ಆರಿಸಿಬಿಡೋಣ ಎಂದುಕೊಂಡವನ ದೃಷ್ಟಿ ಸಹಜವಾಗಿ ನೆಲದೆಡೆ ಚಾಚಿದ್ದ ಕೈಯತ್ತ ಹೊರಳಿತು. ಹಾಸಿಗೆಯ ಅಡಿಯೇ ಮಲಗಿದ್ದ ಹಾವೊಂದರ ತಲೆಯ ಮೇಲೆ ಇನ್ನೇನು ಸಿಗರೇಟನ್ನು ಹೊಸಕಿಯೇ ಬಿಡುತ್ತಿದ್ದೆ! ಸ್ತಬ್ಧನಾಗಿಬಿಟ್ಟೆ. ತತ್‌ಕ್ಷಣ ಕೈ ಹಿಂದೆ ಸರಿಯುವ ಬದಲಾಗಿ ಹಾಗೆಯೇ ನೇತಾಡುತ್ತಿತ್ತು-ಉರಗದ ಶಿರದ ಮೇಲೆ ಉರಿಯುವ ಸಿಗರೇಟು. ನಿಧಾನಕ್ಕೆ ವಾಸ್ತವದ ಅರಿವಾಗತೊಡಗಿತು. ನಾನು ಪ್ರಾಣಘಾತುಕ ಸರೀಸೃಪವೊಂದರ ಕೈದಿಯಾಗಿದ್ದೆ. ನನಗೆ ತಿಳಿದಿದ್ದಂತೆ ತುಸುವೇ ಅಲ್ಲಾಡಿದರೂ ಹಾವು ನನ್ನ ಮೇಲೆ ಎರಗುವುದು ನಿಶ್ಚಿತವಾಗಿತ್ತು. ಅದೊಂದು ಹಳದಿ ಛಾಯೆಯುಳ್ಳ ಬೂದುಬಣ್ಣದ ಈಜಿಪ್ಟ್ ಯನ್‌ ಕೋಬ್ರಾ. ಲಿಯೋ ತನ್ನೆಲ್ಲ ಭಾರವನ್ನು ಬಿಟ್ಟು ಡಬ್ಬಿಯನ್ನು ಹಾವಿನ ಮೇಲೆ ಒತ್ತಿ ನಿಂತ. ನಾನೂ ಇಡಿಯಾಗಿ ಅವನ ಮೇಲೆ ಬಿದ್ದೆ. ಬಿದ್ದ ಕ್ಷಣ ಗುಡಿಸಲಿನ ಒಳಗೆ ಮಹಾ ವಿಸ್ಫೋಟ’ (ಅನು: ಸಹನಾ ಹೆಗಡೆ)

ಕಪುಶಿನ್‌ಸ್ಕಿ ದಿ ಶ್ಯಾಡೋ ಆಫ್ ದ ಸನ್‌ ಅಲ್ಲದೆ ಎನದರ್‌ ಡೇ ಆಫ್ ಲೈಫ್, ದ ಸಾಕ್ಸರ್‌ ವಾರ್‌, ದ ಎಂಪರರ್‌, ಶಾಹ್‌ ಆಫ್ ಶಾಸ್‌ ಟ್ರಾವಲ್ಸ್‌ ವಿದ್‌ ಹೆರೊಡೋಟಸ್‌ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾನೆ. ಅವನ ಒಂದು ಐ ರೋಟ್‌ ಸ್ಟೋನ್‌ ಎಂಬ ಕವಿತಾಸಂಕಲನವೂ ಇದೆ. ಅರ್ಥಶಾಸ್ತ್ರ, ಕೌನ್ಸೆಲಿಂಗ್‌ ಮತ್ತು ಸೈಕೊಥೆರಪಿ ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಹನಾ ಹೆಗಡೆಯವರು ಆಫ್ರಿಕಾ ಖಂಡದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಈ ಪುಸ್ತಕದ ಭಾಷಾಂತರ ಮಾಡಿದ್ದಾರೆ. ಅಭಿನವದವರು 2017ರಲ್ಲಿ ಪ್ರಕಟಿಸಿದ ಈ ಕೃತಿಗೆ ಎಸ್‌. ದಿವಾಕರರ ವಿಸ್ತೃತ ಮುನ್ನುಡಿ ಇದೆ.

ಗೋಪಾಲಕೃಷ್ಣ ಪೈ

Advertisement

Udayavani is now on Telegram. Click here to join our channel and stay updated with the latest news.

Next