Advertisement

ಹೊಸ ರಾಜಕಾರಣಕ್ಕೆ ಹೊಸ ಮುಖಗಳ ಹುಡುಕಾಟ

09:37 PM Nov 27, 2019 | Team Udayavani |

ಮೈಸೂರು: ಮುಂಬರುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಾಡು ಕಟ್ಟುವ ರಾಜಕಾರಣಕ್ಕೆ ವೇದಿಕೆ ಸಿದ್ಧಪಡಿಸುತ್ತಿದೆ. ಹೊಸ ರಾಜಕಾರಣಕ್ಕೆ ಹೊಸ ಮುಖಗಳು ಎಂಬ ಆಲೋಚನೆಯಲ್ಲಿ ಹುಡುಕಾಟ ಪಕ್ಷ ಹುಡುಕಾಟ ನಡೆಸಲಿದೆ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಹಾಗೂ ಸಾಹಿತಿ ದೇವನೂರು ಮಹದೇವ ತಿಳಿಸಿದರು.

Advertisement

ಯುವಕರು, ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದ್ದು, ನಾಡಿನ ಎಲ್ಲಾ ಸಮಾಜಮುಖೀ ಸಂಘಟನೆಗಳನ್ನು ಒಳಗೊಂಡು ಹಂಚಿಕೊಂಡು ಹೆಜ್ಜೆ ಹಾಕುವ ಪ್ರಯತ್ನವೂ ನಡೆದಿದೆ ಎಂದು ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕರು ಖರೀದಿ ವಸ್ತುಗಳಾ?: ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫ‌ಡ್ನವೀಸ್‌ “ಶಾಸಕರನ್ನು ಖರೀದಿ ಮಾಡದೇ ಇರಲು ಮೊದಲೇ ನಿರ್ಧರಿಸಿದ್ದೆವು’ ಎಂದಿದ್ದಾರೆ. ಹಾಗಾದರೆ ಶಾಸಕರು ಖರೀದಿ ವಸ್ತುಗಳು ಎಂಬರ್ಥದಲ್ಲಿ ಹೇಳಿದ್ದಾರೆ. ಇಂತಹ ಕೃತ್ಯ ಎಸಗುವುದನ್ನು ಅನೈತಿಕ, ದುಷ್ಟ, ಮನೆಹಾಳ ಎನ್ನುತ್ತಾರೆ. ದೇಶವನ್ನು ಆಳುವ ಪಕ್ಷವೇ ಇಂದು ಇಂತಹ ಕೃತ್ಯವನ್ನು ನಡೆಸುತ್ತಿದೆ.

ಇಂತವರ ಕೈಗೆ ದೇಶಕೊಟ್ಟರೆ ಆ ದೇಶವನ್ನು ದೇವರೂ ಕಾಪಾಡಲಾರನೇನೊ. ಅಂತಹ ಪರಿಸ್ಥಿತಿ ಭಾರತಕ್ಕೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವರಾಜ್‌ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್‌ ಮಾತನಾಡಿ, ಇಂದು ಪಕ್ಷದ 6ನೇ ರಾಜ್ಯ ಸಮಿತಿ ಸಭೆ ನಡೆದಿದ್ದು, ಉಪ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಕೆಲವು ನಿಲುವುಗಳನ್ನು ತೆಗೆದುಕೊಂಡಿದೆ.

ಇಂದು ರಾಜ್ಯದಲ್ಲಿ ಅನಾವಶ್ಯಕವಾಗಿ ಚುನಾವಣೆ ನಡೆಯುತ್ತಿದೆ. ಇದೊಂದು ಹುನ್ನಾರ. ಇದರಲ್ಲಿ ಬಿಜೆಪಿಯ ಹುನ್ನಾರ ಅಡಗಿದೆ. ಹಣ, ಅಧಿಕಾರ ಹಾಗೂ ಪದವಿಯ ಆಸೆಗಾಗಿ ತಾವು ಪ್ರತಿನಿಧಿಸುತ್ತಿದ್ದ ಪಕ್ಷ ಬಿಟ್ಟು ಬೇರೊಂದು ಪಕ್ಷ ಸೇರಿದ್ದಾರೆ. ಇದರಿಂದ ಅನಾವಶ್ಯಕ ಚುನಾವಣೆ ನಡೆಯುವಂತಾಗಿದೆ. ಇದು ಅನೀತಿ ರಾಜಕಾರಣವಾಗಿದೆ. ರಾಜ್ಯದ ಈ ಸ್ಥಿತಿಗೆ ಪ್ರಧಾನ ಮೋದಿ ಮತ್ತು ಅಮಿತ್‌ ಶಾ ಕಾರಣರಾಗಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

Advertisement

ತಂಡ ರಚನೆ: ಮತ್ತೆ ಚುನಾವಣೆಗೆ ಸ್ಪರ್ಧಿಸಿರುವ ಅನರ್ಹರನ್ನು ಜನರು ಜೀವನಪೂರ್ತಿ ಅನರ್ಹರನ್ನಾಗಿ ಮಾಡಬೇಕಿದೆ. ಇದಕ್ಕಾಗಿ ನಮ್ಮ ಪಕ್ಷ ಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ತೆರಳಿ ಅನರ್ಹರನ್ನು ಸೋಲಿಸಿ ಎಂದು ಮತದಾರರಿಗೆ ಕರೆ ನೀಡುತ್ತೇವೆ. ಇದಕ್ಕೆ ಎರಡು ತಂಡವನ್ನು ರಚಿಸಲಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಒಂದು ತಂಡ ಕಾರ್ಯನಿರ್ವಹಿಸಿದರೆ, ದಕ್ಷಿಣ ಭಾಗದಲ್ಲಿ ಮತ್ತೂಂದು ತಂಡ ಕಾರ್ಯನಿರ್ವಹಿಸಲಿದೆ ಎಂದರು.

ನಾವು ಯಾವ ಪಕ್ಷಕ್ಕೂ ಬೆಂಬಲ ನಿಡುವುದಿಲ್ಲ. ಬದಲಿಗೆ ಅನರ್ಹರನ್ನು ಸೋಲಿಸುವುದೇ ನಮ್ಮ ನಿಲುವು ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಚ್‌.ಎ. ನಂಜುಂಡಸ್ವಾಮಿ, ಶಬೀರ್‌ ಮುಸ್ತಾಫ‌, ಕಾರ್ಯಕಾರಿಣಿ ಸದಸ್ಯ ಬಡಗಲಪುರ ನಾಗೇಂದ್ರ, ಲತಾ ಶಂಕರ್‌, ರಶ್ಮಿ ಮುನಿ ಕೆಂಪಣ್ಣ, ಪುನಿತ್‌ ಇದ್ದರು.

ಅನರ್ಹ ಶಾಸಕರ ಠೇವಣಿ ಕಳೆಯಿರಿ: ಅನರ್ಹ ಶಾಸಕರು ತಮ್ಮನ್ನು ಮಾರಾಟ ಮಾಡಿಕೊಂಡಿದ್ದು ತಮ್ಮೊಬ್ಬರನ್ನೇ ಅಲ್ಲ. ತಮ್ಮ ಕ್ಷೇತ್ರದ ಮತದಾರರು ಮತ್ತು ಮತಗಳನ್ನು ಮಾರಿಕೊಂಡಿದ್ದಾರೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ. ಜನತಂತ್ರ ವ್ಯವಸ್ಥೆಯನ್ನೇ ಗಲೀಜು ಮಾಡಿದ ಈ ಕುಬ್ಜ ರಾಜಕಾರಣಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಮತದಾರರ ಮುಂದೆ ಮತ ಯಾಚಿಸುತ್ತಿದ್ದಾರೆ.

ಈಗ ಮತದಾರರಲ್ಲಿ ಉಳಿದಿರುವುದು ಒಂದೇ ದಾರಿ. ಅದು ಅನರ್ಹ ಶಾಸಕರಿಗೆ ಠೇವಣಿಯೂ ಸಿಗದಂತೆ ಮಾಡಿ ಮತದಾರರು ತಮ್ಮ ಮಾನ ಮರ್ಯಾದೆ ಕಾಪಾಡಿಕೊಳ್ಳಬೇಕಿದೆ. ಈ ಉಪ ಚುನಾವಣೆಗೆ “ಅನರ್ಹರ ಠೇವಣಿ ಕಳೆಯಲಿ, ಮತದಾರರ ಮಾನ ಉಳಿಯಲಿ’ ಎಂಬ ಘೋಷಣೆ ಸಾಕು. ಅವರು ರಾಜಕೀಯದಿಂದಲೇ ಅನರ್ಹರಾಗಬೇಕು ಎಂದು ದೇವನೂರು ಮಹದೇವ ತಿಳಿಸಿದರು.

ಇಂದು ಪಿರಿಯಾಪಟ್ಟಣದಲ್ಲಿ ಸಮಾವೇಶ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯದ ತಂಬಾಕು ಬೆಳೆಗಾರರು ಗುರುವಾರ ಪಿರಿಯಾಪಟ್ಟಣದಲ್ಲಿ ವಾಹನ ಜಾಥಾ ನಡೆಸಿ, ತಾಲೂಕಿನ ಕಗ್ಗುಂಡಿಯಲ್ಲಿರುವ ತಂಬಾಕು ಮಂಡಳಿಯ ಆವರಣದಲ್ಲಿ ಸಮಾವೇಶ ನಡೆಯಲಿದೆ.

ಸಮವೇಶದಲ್ಲಿ ಸಂಸದರಾದ ವಿ.ಶ್ರೀನಿವಾಸ್‌ ಪ್ರಸಾದ್‌, ಪ್ರತಾಪ್‌ ಸಿಂಹ, ಪ್ರಜ್ವಲ್‌ ರೇವಣ್ಣ, ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌, ಆರ್‌. ಧ್ರುವನಾರಾಯಣ ಮತ್ತು ತಂಬಾಕು ಬೆಳೆಯುವ ಪ್ರದೇಶದ ಶಾಸಕರು ಆಗಮಿಸಲಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next