Advertisement

ಕದಿರು ಕಟ್ಟುವ ಹಬ್ಬಕ್ಕೆ 70 ತರಹೇವಾರಿ ಕದಿರುಗಳು

09:27 PM Oct 26, 2020 | mahesh |

ಉಡುಪಿ: ಕೆಂಪಕ್ಕಿ, ಸಣ್ಣಕ್ಕಿ, ಬಿಳಿಯಕ್ಕಿ, ಕಪ್ಪಕ್ಕಿ… ಹೀಗೆ ಒಂದೇ ಎರಡೇ… 70ಕ್ಕೂ ಹೆಚ್ಚಿನ ತರಹೇವಾರಿ ಭತ್ತದ ತಳಿಗಳು ಶ್ರೀಕೃಷ್ಣಮಠದಲ್ಲಿ ವಿಜಯದಶಮಿಯಂದು ಕದಿರು ಕಟ್ಟುವ ಹಬ್ಬಕ್ಕೆ ಹೊಸ ಮೆರುಗು ನೀಡಿವೆ. ಇವುಗಳನ್ನು ಭೋಜನಶಾಲೆ ಮಹಡಿಯಲ್ಲಿ ಜೋಡಿಸಿಡಲಾಗಿದೆ. ಇವುಗಳನ್ನು ಆಸಕ್ತರು ರವಿವಾರ, ಸೋಮವಾರ ಕುತೂಹಲದಿಂದ ವೀಕ್ಷಿಸಿದ್ದಾರೆ. ಮಂಗಳವಾರವೂ ಸಾರ್ವಜನಿಕರು ವೀಕ್ಷಿಸಬಹುದು.

Advertisement

ಸಾಮಾನ್ಯವಾಗಿ ಜಯ, ಎಂ4 ಇತ್ಯಾದಿ ಹೆಸರುಗಳನ್ನು ಮಾತ್ರ ಕೇಳಿದ ನಮಗೆ ರಾಜಮುಡಿ ಬಿಳಿ, ರಾಜಮುಡಿ ಕೆಂಪು, ಕಜೆ ಜಯ, ಬಿಳಿಯ ಜಯ, ಡಾಂಬಾರ್‌ಸರೈ (ಕಪ್ಪಕ್ಕಿ), ಮುಕ್ಕಣ್ಣಿ (ಸಣ್ಣಕ್ಕಿ), ಮಂಜುಗುಣಿ (ಸಣ್ಣಕ್ಕಿ), ರಾಜಾಗ್ಯಾಮೆ (ಸಣ್ಣಕ್ಕಿ) ಹೀಗೆ ಹೆಸರುಗಳನ್ನು ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲಿ ಕೆಲವು ಹುಲ್ಲಿನ ಬಣ್ಣವೂ ಭಿನ್ನ. ಕೆಲವು ಹುಲ್ಲು ಕೆಂಪು ಇವೆ. ಈ ಪ್ರತಿಯೊಂದು ಕದಿರಿಗೂ ಫ‌ಲಕ ಹಾಕಿರುವುದರಿಂದ ಓದಲು ಸಾಧ್ಯ.

ಇವುಗಳನ್ನು ಬೆಳೆಸಿ ಪೂರೈಸಿದವರು ಕಾರ್ಕಳ ಮುರತಂಗಡಿಯ ಅಬೂಬಕ್ಕರ್‌ ಅವರು. ಅಬೂಬಕ್ಕರ್‌ ಕಾರ್ಕಳದ ಸಾಗರ್‌ ಹೊಟೇಲ್‌ನಲ್ಲಿ ಮ್ಯಾನೇಜರ್‌. ಇವರಿಗೆ ಭತ್ತದ ವಿವಿಧ ತಳಿಗಳನ್ನು ಸಂರಕ್ಷಿಸಬೇಕೆಂಬ ಮತ್ತು ರಾಸಾಯನಿಕ ಗೊಬ್ಬರವಿಲ್ಲದೆ ಆರೋಗ್ಯಪೂರ್ಣ ಸಾವಯವ ಆಹಾರಧಾನ್ಯಗಳನ್ನು ಬೆಳೆಸಬೇಕೆಂಬ ಇಚ್ಛೆ ಇರುವುದರಿಂದ ಐದು ವರ್ಷಗಳ ಹಿಂದೆ ಹಡಿಲು ಬಿದ್ದ (ಪಡಿಲು) ಗದ್ದೆಗಳಲ್ಲಿ ಕೃಷಿ ಕಾರ್ಯ ಆರಂಭಿಸಿದರು. ಮೊದಲ ವರ್ಷ 1.5 ಎಕರೆ, ಎರಡರಿಂದ ಮೂರು ವರ್ಷ ಮೂರು ಎಕರೆ, ನಾಲ್ಕನೆಯ ವರ್ಷ ಎಂಟು ಎಕರೆ, ಈ ವರ್ಷ 12 ಎಕರೆಯಲ್ಲಿ ತರಹೇವಾರಿ ಭತ್ತದ ತಳಿಗಳನ್ನು ಬೆಳೆಸಿದ್ದಾರೆ. ತಲಾ 1.5 ಎಕರೆಯಲ್ಲಿ ಮೂರು, ಒಂದು, ಎರಡು, 105 ತಳಿ, ಆರು ಎಕರೆಯಲ್ಲಿ ಐದು ತಳಿಗಳನ್ನು ಬೆಳೆಸಲಾಗಿದೆ.

ಅಬೂಬಕ್ಕರ್‌ ಅವರು ಪ್ರವೀಣ್‌ ಕೋಟ್ಯಾನ್‌ ಮತ್ತು ವಿನೀತ್‌ಕುಮಾರ್‌ ಅವರ ಸಹಕಾರದಿಂದ ಭತ್ತದ ಕೃಷಿಯನ್ನು ಬೆಳೆಸಿದ್ದಾರೆ. ಇವರಿಗೆ ಕೃಷ್ಣಮೂರ್ತಿ ಮತ್ತು ನಂದಕಿಶೋರ್‌ ಅವರು ಗದ್ದೆಯನ್ನು ನೀಡಿದ್ದಾರೆ. ಅಬೂಬಕ್ಕರ್‌ ಅವರು ಹಸಿರೆಲೆ ಗೊಬ್ಬರವಾಗಲೀ, ರಾಸಾಯನಿಕ ಗೊಬ್ಬರವಾಗಲೀ ಹಾಕದೆ ಕೃಷಿ ನಡೆಸಿದ್ದಾರೆಂದರೆ ಅಚ್ಚರಿಯಾದೀತು. ಕಟಾವು ಮಾಡುವಾಗ ಉಳಿಯುವ ಹುಲ್ಲಿನ ಬುಡವೇ ಮುಂದಿನ ಬೆಳೆಗೆ ಸಾರವಾಗಿರುತ್ತದೆ. ಹುಲ್ಲನ್ನು ಗದ್ದೆಯವರಿಗೆ ಬಿಟ್ಟು ಬೆಳೆಯನ್ನು ಅಬೂಬಕ್ಕರ್‌ ಕೊಂಡೊಯ್ಯುತ್ತಾರೆ. ಇವರು ಬೆಳೆದ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರೂ ಇದ್ದಾರೆ.

ದೇಸೀ ತಳಿಗಳ ಪರಿಚಯ
ಹಿಂದೆ ಎರಡು ಮೂರು ವರ್ಷಗಳಿಗೊಮ್ಮೆ ಗದ್ದೆಯನ್ನು ಹಾಗೆಯೇ ಪಡಿಲು ಬಿಡುವ ಕ್ರಮವಿತ್ತು. ಬೇರೆ ಗದ್ದೆಗಳಿಗೆ ಹಸಿರೆಲೆ ಗೊಬ್ಬರ ಹಾಕುವಾಗ ಪಡಿಲು ಬಿಟ್ಟ ಗದ್ದೆಗೂ ಹಾಕುತ್ತಿದ್ದರು. ಇದು ಆ ವರ್ಷ ಗದ್ದೆಯ ಸಾರವನ್ನು ಇಮ್ಮಡಿಗೊಳಿಸುತ್ತದೆ. ಇಂತಹ ಕ್ರಮ ಒಂದೊಂದು ಊರಿನಲ್ಲಿ ಒಂದೊಂದು ರೀತಿ ಇರಬಹುದು. ಈ ವರ್ಷ ವಿಜಯದಶಮಿಯಂದು ಕದಿರು ಕಟ್ಟುವ ಹಬ್ಬಕ್ಕೆ ನಮ್ಮ ಪ್ರಾಚೀನ ದೇಸೀ ತಳಿಗಳನ್ನು ಜನರಿಗೆ ಪರಿಚಯಿಸೋಣವೆಂದು ತರಿಸಿದ್ದೇವೆ. – ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ

Advertisement

ಗದ್ದೆಯಾದರೂ ಸಿಕ್ಕೀತು, ತಳಿಗಳೇ ಕಷ್ಟ!
ಮೊದಲ ಎರಡು ಮೂರು ವರ್ಷ ನಷ್ಟವಾಯಿತು. ಏಕೆಂದರೆ ಆಗ ಅನುಭವವಿರಲಿಲ್ಲ. ಅನಂತರ ನಮಗೂ ಗೊತ್ತಾಯಿತು. ಈಗ ನಷ್ಟವಾಗುತ್ತಿಲ್ಲ. ನಮಗೆ ಗದ್ದೆಯಾದರೂ ಸಿಕ್ಕೀತು. ಹಿಂದಿನ ತಳಿಗಳೇ ಸಿಗುವುದು ಕಷ್ಟ. ಜನರಿಗೂ ಒಂದೆರಡು ತಳಿಗಳ ಹೆಸರು ಬಿಟ್ಟರೆ ಬೇರೆ ಹೆಸರೂ ಗೊತ್ತಿಲ್ಲ. ಮುಂದಿನ ವರ್ಷ ಸಾಧ್ಯವಾದರೆ 300-400 ತಳಿಗಳನ್ನು ಬೆಳೆಸಬೇಕೆಂಬ ಆಶಯವಿದೆ. ಒಳ್ಳೆಯ ಗುಣಮಟ್ಟದ ಮತ್ತು ಆರೋಗ್ಯಪೂರ್ಣ ಅಕ್ಕಿಯನ್ನು ಉತ್ಪಾದಿಸುವುದು ನನ್ನ ಮುಖ್ಯ ಗುರಿ. -ಅಬೂಬಕ್ಕರ್‌, ಕಾರ್ಕಳ ಮುರತಂಗಡಿ

ಅಪೂರ್ವ ತಳಿಗಳು
ಅಬೂಬಕ್ಕರ್‌ ಅವರು ಈ ವರ್ಷ ಒಟ್ಟು 155 ತಳಿಗಳನ್ನು ಬೆಳೆಸಿದ್ದಾರೆ. ಇದರಲ್ಲಿ 70 ತಳಿಗಳನ್ನು ತಂದು ಪ್ರದರ್ಶಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಬಂಗಾಡಿ ದೇವರಾಯರು 170 ಅಪೂರ್ವ ತಳಿಗಳನ್ನು ಬೆಳೆಸಿದ್ದಾರೆ. – ಪುರುಷೋತ್ತಮ ಅಡ್ವೆ,
ಕಲಾವಿದರು ಮತ್ತು ಸಂಘಟಕರು

Advertisement

Udayavani is now on Telegram. Click here to join our channel and stay updated with the latest news.

Next