Advertisement

ಕಾಶೀರಾಯನ ತ್ಯಾಗ ಯುವಕರಿಗೆ ಆದರ್ಶ

08:23 PM Jul 07, 2021 | Nagendra Trasi |

ಬಸವನಬಾಗೇವಾಡಿ: ಕಾಶ್ಮೀರದಲ್ಲಿ ಉಗ್ರ ರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ದೇಶಕ್ಕಾಗಿ ಹುತಾತ್ಮರಾದ ಅಮರ ವೀರ ಯೋಧ ಕಾಶೀರಾಯ ಬೊಮ್ಮನಹಳ್ಳಿ ಅವರ ತ್ಯಾಗ-ಬಲಿದಾನ ಇಂದಿನ ಯುವಕರಿಗೆ ಮಾದರಿಯಾಗಿದೆ. ಅಮರವೀರನ ಈ ತ್ಯಾಗ, ಆದರ್ಶ ಅನುಕರಣೀಯ ಎಂದು ಶಾಸಕರಾದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಶಿವಾನಂದ ಪಾಟೀಲ ಬಣ್ಣಿಸಿದರು.

Advertisement

ದೇಶಕ್ಕಾಗಿ ಬಲಿದಾನಗೈದ ಉಕ್ಕಲಿ ಗ್ರಾಮದಲ್ಲಿರುವ ಕಾಶೀರಾಯ ಬೊಮ್ಮನಹಳ್ಳಿ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿಂದ 5 ಲಕ್ಷ ರೂ. ಆರ್ಥಿಕ ನೆರವು ನೀಡಿ ಅವರು ಮಾತನಾಡಿದರು.

ಉಕ್ಕಲಿ ಗ್ರಾಮದ ಹುತಾತ್ಮ ಕಾಶೀರಾಯ ಬೊಮ್ಮನಹಳ್ಳಿ ಅಮರರಾಗಿದ್ದಾರೆ. ಕಾಶೀರಾಯ ಅವರಂಥ ಅಪ್ರತಿಮ ವೀರ ಯೋಧನನ್ನು ಕಳೆದುಕೊಂಡ ಉಕ್ಕಲಿ ಗ್ರಾಮ ಮಾತ್ರವಲ್ಲ, ಇಡೀ ಭಾರತ ಮರುಗುತ್ತಿದೆ. ಅವರ ಬಲಿದಾನಕ್ಕೆ ದೇಶವೇ ಕಣ್ಣೀರು ಹಾಕುತ್ತಿದ್ದು, ಅಂಥ ಮಹಾನ್‌ ತ್ಯಾಗಿಯನ್ನು ಪಡೆದ ನಾವೇ ಧನ್ಯರು ಹಾಗೂ ಪುಣ್ಯವಂತರು ಎಂದು ಗುಣಗಾನ ಮಾಡಿದರು.

ಕುಟುಂಬಕ್ಕೆ ಆಸರೆಯಾಗಿದ್ದ ಕಾಶೀರಾಯ ಅವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಅವರ ಕುಟುಂಬಕ್ಕೆ ದೇವರು ಅಗಲಿಕೆಯ ದುಖ ಭರಿಸುವ ಶಕ್ತಿ ನೀಡಲಿ ಎಂದು ಆಶಿಸಿದ ಶಿವಾನಂದ ಪಾಟೀಲ, ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಅಮರ ಯೋಧರ ಕುಟುಂಬಗಳಿಗೂ ಡಿಸಿಸಿ ಬ್ಯಾಂಕ್‌ ಸಹಾಯ ನೀಡಿತ್ತು. ಈಗಲೂ ಅದನ್ನು ಮುಂದುವರಿಸಿಕೊಂಡು ಬರಲಾಗಿದೆ ಎಂದು ವಿವರಿಸಿದರು.

ಇದಲ್ಲದೇ ಆರ್ಥಿಕವಾಗಿ ದುರ್ಬಲವಾಗಿರುವ ಹುತಾತ್ಮ ವೀರ ಯೋಧ ಕಾಶಿರಾಯ ಕುಟುಂಬಕ್ಕೆ ಸರ್ಕಾರದಿಂದ ಇನ್ನೂ ಹೆಚ್ಚಿನ ನೆರವು ನೀಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಅಗತ್ಯ ಸೌಲಭ್ಯ ಕಲ್ಪಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗ್ರಾಮಸ್ಥರ ಬೇಡಿಕೆಯಂತೆ ಕಾಶೀರಾಯ ಅವರ ಹುತಾತ್ಮ ಸ್ಮಾರಕ ನಿರ್ಮಾಣಕ್ಕಾಗಿ ಶಾಸಕರ ಅನುದಾನದಲ್ಲಿ ಅಗತ್ಯ ಹಣ ಮಂಜೂರು ಮಾಡುವ ಕುರಿತು ಭರವಸೆ ನೀಡಿದರು. ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಗುರುಶಾಂತ ನಿಡೋಣಿ. ಬ್ಯಾಂಕಿನ ಸಿಇಒ ಬಿರಾದಾರ, ಬ್ಯಾಂಕ್‌ ಸಿಬ್ಬಂದಿ, ಊರಿನ ಹಿರಿಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರು, ಗ್ರಾಮದ ಜನತೆ, ಯೋಧರಾದ ಕಿಶನ್‌ ಹಾಗೂ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next