Advertisement

ಮನೆತಳದಲ್ಲಿ ಮರದ ಬೇರುಗಳು

04:00 PM Feb 05, 2018 | Harsha Rao |

ಬೇರುಗಳು ಒಳನುಸುಳಲು ಪಾಯದ ನಡುವೆ ಸಣ್ಣ ಸಣ್ಣ ಬಿರುಕುಗಳು ಇದ್ದರೂ ತೊಂದರೆ ತಪ್ಪಿದ್ದಲ್ಲ.  ಮೆಲ್ಲಗೆ, ಸಣ್ಣ ನೂಲುದಾರದಂತೆ ತೂರುವ ಈ ಬೇರುಗಳು, ಕ್ರಮೇಣ ದಪ್ಪಗಾಗುತ್ತ ಹೋಗಿ, ಕ್ರಮೇಣ ಪಾಯದಲ್ಲೇ ಬಿರುಕು ಮೂಡುವಂತೆ ಮಾಡಬಲ್ಲವು. 

Advertisement

ಮನೆಯ ಸುತ್ತಲೂ ಹಸಿರಿರಲಿ ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವೊಮ್ಮೆ ಸಣ್ಣ ಪುಟ್ಟ ತೆರೆದ ಸ್ಥಳದಲ್ಲೂ ದೊಡ್ಡದಾಗಿ ಬೆಳೆವ ಮರಗಳನ್ನು ನೆಟ್ಟು ನಂತರ ಅದು ಎರಡು, ಮೂರು ಮಹಡಿ ಎತ್ತರ ಬೆಳೆದಮೇಲೆ, ಆತಂಕಕ್ಕೆ ಒಳಗಾಗುವುದೂ ಇದ್ದೇ ಇದೆ. ಜೊತೆಗೆ ಮರದ ಬೇರು ಮನೆಯ ಪಾಯಕ್ಕೆ ಹಾನಿ ಮಾಡಿದರೆ? ಎಂಬ ಆಲೋಚನೆ ಬಂದರಂತೂ ಕೆಲವೊಮ್ಮೆ ಮರವನ್ನು ಕಡಿದೇ ಹಾಕಬೇಕು ಎಂದೂ ಯೋಚಿಸಿವುದುಂಟು. ನಗರ ಪ್ರದೇಶಗಳಲ್ಲಿ ಮುಖ್ಯವಾಗಿ ಮರಗಿಡಗಳ ಅಗತ್ಯ ಹೆಚ್ಚಾಗಿದ್ದು, ಇವನ್ನು ಬೆಳೆಸುವುದು ಅನಿವಾರ್ಯ. ಮನೆ ಕಟ್ಟುವಾಗ ಹಾಗೂ ಅನಂತರವೂ ಕೆಲವೊಂದು ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡರೆ ನಾವು ನಮ್ಮ ಮನೆಯ ಪಾಯದ ಬಗ್ಗೆಯಾಗಲೀ ಗೋಡೆಗಳ ಬಗ್ಗೆಯಾಗಲೀ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ.

ಬೇರಿನ ನಿರ್ವಹಣೆ
ಕೆಲವೊಂದು ಮರಗಳ ಬೇರು ಬಲಿಷ್ಟವಾಗಿ ಬೆಳೆದು, ಮನೆಯನ್ನೇ ಎತ್ತುವಷ್ಟು ಶಕ್ತಿಹೊಂದಿದ್ದರೂ ಬಹುತೇಕ ಮರಗಳು ಮನೆಗೆ ತೊಂದರೆಯನ್ನೇನೂ ಮಾಡುವುದಿಲ್ಲ. ತೆಂಗಿನ ಮರದಂತೆ ಸಣ್ಣಸಣ್ಣ ನಾರುದಾರದಂತಿರುವ, ಹೆಚ್ಚು ದಪ್ಪವಿಲ್ಲದ ಬೇರುಗಳು ತಮ್ಮ ಪಾಡಿಗೆ ತಾವು ಎಲ್ಲಿ ಸುಲಭವಾಗಿ ನುಸುಳಲು ಸಾಧ್ಯವೋ ಅಲ್ಲಿ ಮಾತ್ರ ಬೇರುಬಿಡುತ್ತದೆ. ಆದರೆ ಆಲ, ಅತ್ತಿ ಮರದಂಥಹವು, ಸಣ್ಣದೊಂದು ಬಿರುಕು ಸಿಕ್ಕರೂ ಸರಿ, ಅದರಲ್ಲೇ ಬೇರುಬಿಟ್ಟು, ತಮ್ಮ ಛಿದ್ರಕಾರಿ ಕಾರ್ಯವನ್ನು ಶುರುಮಾಡಿಬಿಡುತ್ತವೆ.  ಆದುದರಿಂದ ಯಾವ ರೀತಿಯ ಮರ ನಮ್ಮ ಮನೆಯ ಹತ್ತಿರ ಇರಬೇಕು ಎಂದು ಮೊದಲೇ ನಿರ್ಧರಿಸಿದರೆ ಮುಂದಾಗುವ ತೊಂದರೆಗಳನ್ನು ತಪ್ಪಿಸಬಹುದು. ಕೆಲವೊಮ್ಮೆ, ಈಗಾಗಲೇ ಬೆಳೆದ ಸ್ಥಿತಿಯಲ್ಲಿ ದೊಡ್ಡಮರ ಇದ್ದರೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಮನೆಗೆ ಏನೂ ಆಗದಂತೆ ನೋಡಿಕೊಳ್ಳಬಹುದು.

ಬೇರು ನುಸುಳದಂತೆ ತಡೆಯಿರಿ
ದೊಡ್ಡ ಮರಗಳ ಬೇರುಗಳು ಹತ್ತಾರು ಅಡಿ ದೂರದಿಂದ ಮನೆಯತ್ತ ಬರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಗಟ್ಟಿಪಾಯವನ್ನು ಹಾಕಿದ್ದರೆ, ಕಲ್ಲು ಇಲ್ಲವೇ ಬ್ಲಾಕ್‌ ಗಳ ಮಧ್ಯೆ ಸಂದಿಗಳಿಲ್ಲದಿದ್ದರೆ, ಯಾವುದೇ ಮರದ ಬೇರು ಮನೆಯ ಪಾಯಕ್ಕೆ ಹಾನಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಬೇರುಗಳು ಒಳನುಸುಳಲು ಪಾಯದ ನಡುವೆ ಸಣ್ಣ ಸಣ್ಣ ಬಿರುಕುಗಳು ಇದ್ದರೂ ತೊಂದರೆ ತಪ್ಪಿದ್ದಲ್ಲ.  ಮೆಲ್ಲಗೆ, ಸಣ್ಣ ನೂಲುದಾರದಂತೆ ತೂರುವ ಈ ಬೇರುಗಳು, ಕ್ರಮೇಣ ದಪ್ಪಗಾಗುತ್ತ ಹೋಗಿ, ಕ್ರಮೇಣ ಪಾಯದಲ್ಲೇ ಬಿರುಕು ಮೂಡುವಂತೆ ಮಾಡಬಲ್ಲವು. ಹಾಗಾಗಿ ನಾವು ಮನೆಯ ಪಾಯ ಹಾಕಿದ ಮೇಲೆ, ಪ್ರತಿಹಂತದಲ್ಲೂ, ಮಣ್ಣು ಮುಚ್ಚುವ ಮೊದಲು, ಎಲ್ಲಾದರೂ ಬೇರುಗಳು ನುಸುಳಲು ಸಾಧ್ಯವೇ? ಎಂದು ಪರಿಶೀಲಿಸಿದ ನಂತರವೇ ಮುಂದುವರೆಯುವುದು ಸೂಕ್ತ. 

ಕೆಲವೊಮ್ಮೆ ಮರಳು ತರಿತರಿ ಇದ್ದರೆ, ಇಲ್ಲ, ಕಲ್ಲುಗಳು ತುಂಬಾ ಒರಟೊರಟಾಗಿದ್ದರೆ, ಸಿಮೆಂಟ್‌ ಗಾರೆ ಸರಿಯಾಗಿ ತುಂಬಿಕೊಳ್ಳದೆ, ಸಣ್ಣಸಣ್ಣ ರಂದ್ರಗಳು ಏರ್ಪಪಡಬಹುದು. ಇವುಗಳ ಮೂಲಕವೂ ಬೇರುಗಳು ಒಳನುಸುಳಬಹುದು. ಬ್ಲಾಕ್‌ಗಳಲ್ಲಿ ಸಿಮೆಂಟು ಕಡಿಮೆ ಇದ್ದರೆ, ಒಳ್ಳೆಯ ಗುಣಮಟ್ಟದವು ಆಗಿರದಿದ್ದರೆ, ಬೇರುಗಳು ಕ್ರಮೇಣ ಒತ್ತರಿಸಿಕೊಂಡು ಬರುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಅನಿವಾರ್ಯವಾಗಿ ಸಿಮೆಂಟ್‌ ಗಾರೆಯ ತೆಳುಪದರವನ್ನು  ನೀಡಬೇಕಾಗುವುದು. ಹೀಗೆ ತೆಳುವಾಗಿ ಸಿಮೆಂಟ್‌ ಮರಳು ಮಿಶ್ರಣವನ್ನು ಬಳಿಯುವುದಕ್ಕೆ “ಟಕ್ಕು’ ಹೊಡೆಯುವುದು ಎನ್ನುತ್ತಾರೆ. ಈ ಮಿಶ್ರಣಕ್ಕೆ ನೀರುನಿರೋಧಕ ದ್ರಾವಣಗಳನ್ನು ಬೆರೆಸಿದರೆ ಮತ್ತೂ ಉತ್ತಮ. ಟಕ್ಕು ಹೊಡೆದ ನಂತರ, ಅದನ್ನು ಆದಷ್ಟೂ ನುಣುಪಾಗಿಸಿ, ಬೇರುಗಳಿಗೆ ಒಳನುಸುಳಲು ಅವಕಾಶವಿರದಂತೆ ಮಾಡುವುದು ಒಳ್ಳೆಯದು.

Advertisement

ಕಟ್ಟದ ಮನೆಯ ಪಾಯದ ನಿರ್ವಹಣೆ
ಕೆಲವೊಮ್ಮೆ ಮನೆಕಟ್ಟುವಾಗ ಇಲ್ಲದ ಆತಂಕ,  ಮರ ನೆಡುವಾಗ ಇದ್ದ ಹುಮ್ಮಸ್ಸು ಹಲವಾರು ವರ್ಷಗಳ ನಂತರ ಕಡಿಮೆಯಾಗಿ, ಬೃಹದಾಕಾರವಾಗಿ ಬೆಳೆದ ಮರದ ಬೇರುಗಳ ಬಗ್ಗೆ ಭಯ ಶುರುವಾಗುತ್ತದೆ. ಆಳವಾಗಿ ನೆಲವನ್ನು ಹೊಕ್ಕುವ ಗುಣ ಹೊಂದಿರುವ ಮರಗಳು ಸಾಮಾನ್ಯವಾಗಿ ಮನೆಯ ಪಾಯದ ಗೋಜಿಗೆ ಬರುವುದಿಲ್ಲ. ಹಾಗೇನಾದರೂ ಆತಂಕವಿದ್ದರೆ, ಮನೆಯ ಪಕ್ಕ, ಪಾಯದ ಮಟ್ಟದವರೆಗೂ ಅಂದರೆ, ಸುಮಾರು ಎರಡು ಅಡಿ ಅಗಲ ಹಾಗೂ ಮೂರು ನಾಲ್ಕು ಅಡಿ ಆಳ ತೋಡಿಸಿ,  ಬೇರು ಪಾಯವನ್ನು ಹೊಕ್ಕುತ್ತಿದೆಯೇ? ಎಂದು ಪರೀಕ್ಷಿ$ಸಿಕೊಳ್ಳಬಹುದು. ಹಾಗೇನಾದರೂ ಒಳಪ್ರವೇಶಿಸಿ, ಹಾನಿಯುಂಟುಮಾಡುತ್ತಿದ್ದರೆ, ಅವನ್ನೆಲ್ಲ ಕತ್ತರಿಸಿ, ಒಂದು ಪದರ ಪ್ಲಾಸ್ಟರ್‌ ಮಾದರಿಯಲ್ಲಿ ಟಕ್ಕು ಹೊಡೆಯಬಹುದು. ನಾಲ್ಕಾರು ದಿನ ಕ್ಯೂರಿಂಗ್‌ ಮಾಡಿದ ಬಳಿಕ, ಮತ್ತೆ ಮಣ್ಣು ಮುಚ್ಚಿ, ಅದಕ್ಕೆ ನೀರುಹಾಯಿಸಬೇಕು. ನಂತರ ಮುಚ್ಚಿದ ಮಣ್ಣು ಗಟ್ಟಿಯಾಗಿ ತುಂಬಿಕೊಂಡಿದೆ ಎಂದು ಖಾತರಿ ಆದಮೇಲೆ, ಯಥಾಪ್ರಕಾರ ಮನೆಯ ಪಕ್ಕ ಎರಡು ಅಡಿ ಅಗಲದ, ಫ್ಲಾಗಿಂಗ್‌ ಕಾಂಕ್ರಿಟ್‌ ಹಾಕಬಹುದು. 

ಮರದ ಬೇರುಗಳಿಗೆ ನೀರಿನ ಮೂಲಗಳ ಬಗ್ಗೆ ವಿಶೇಷ ಒಲವು, ಮಾರುದೂರವಿದ್ದರೂ ಹುಡುಕಿಕೊಂಡು ಹೋಗುವುದುಂಟು. ಸದಾ ನೀರು ಹರಿಯುವ, ಇಲ್ಲವೇ ತಂಗುದಾಣವಾಗಿರುವ ನೆಲದಾಳದ ತೊಟ್ಟಿಗಳ ಬಗ್ಗೆ ಮರದ ಬೇರುಗಳಿಗೆ ಆಸಕ್ತಿಹೆಚ್ಚಿದ್ದರೆ ಆಶ್ಚರ್ಯವಿಲ್ಲ. ಹಾಗಾಗಿ, ನಿಮ್ಮ ಮನೆಯ ಹತ್ತಿರ ಮರಗಳಿದ್ದರೆ, ಆಗಾಗ ಸ್ಯಾನಿಟರಿ ವ್ಯವಸ್ಥೆ ಹಾಗೂ ನೀರಿನ ಟ್ಯಾಂಕ್‌ ಅನ್ನು ಪರಿಶೀಲಿಸುವುದು ಉತ್ತಮ. ಒಳಚರಂಡಿಯ ಚೇಂಬರ್‌ಗಳಲ್ಲಿ ಬೇರುಗಳು ಬೀಡುಬಿಟ್ಟಿದ್ದರೆ, ಅದಕ್ಕೆ ಕಾರಣ- ಸಾಮಾನ್ಯವಾಗಿ ಇನ್ಸ್‌ಪೆಕ್ಷನ್‌ ತೊಟ್ಟಿಗಳ ಹೊರಮೈಯನ್ನು ಪ್ಲಾಸ್ಟರ್‌ ಮಾಡಿರುವುದಿಲ್ಲ! ಬೇರುಗಳ ಉಪಟಳ ಹೆಚ್ಚಿದ್ದರೆ, ಅನಿವಾರ್ಯವಾಗಿ ಈ ಇನ್ಸ್‌ಪೆಕ್ಷನ್‌ ಚೇಂಬರ್‌ಗಳ ಸುತ್ತ ಮಣ್ಣನ್ನು ತೆಗೆದು, ಪ್ಲಾಸ್ಟರ್‌ ಮಾಡುವುದು ಒಳಿತು.

ಈ ಹಿಂದೆ ಬಳಸುತ್ತಿದ್ದ ಸುಟ್ಟಮಣ್ಣಿನ ಗಟ್ಟಿಕೊಳವೆಗಳಲ್ಲಿ ಜಾಯಿಂಟುಗಳು ಹೆಚ್ಚಿರುತ್ತವೆ. ಒಂದು ಸಂದಿಯನ್ನು ಸರಿಯಾಗಿ ಮಾಡಿರದಿದ್ದರೂ ಅದರ ಮೂಲಕ ಬೇರುಗಳು ಒಳನುಸುಳುವ ಸಾಧ್ಯತೆ ಹೆಚ್ಚಿತ್ತು. ಆದರೆ ಈಗ ಪ್ಲಾಸ್ಟಿಕ್‌ ಪಿವಿಸಿ ಪೈಪ್‌ಗ್ಳ ಬಳಕೆ ಹೆಚ್ಚಿರುವುದರಿಂದ, ಸಾಮಾನ್ಯವಾಗಿ ಕೊಳವೆಗಳ ಮೂಲಕ ಬೇರುಗಳು ಒಳತೂರುವ ಸಾಧ್ಯತೆ ಕಡಿಮೆ. ನಿಮ್ಮ ಮನೆಯಲ್ಲಿ ಸುಟ್ಟಮಣ್ಣಿನ ಕೊಳವೆಗಳನ್ನು ಅಳವಡಿಸಿದ್ದರೆ, ಅದನ್ನೆಲ್ಲ ತೆಗೆದು ಹೊಸದು ಹಾಕುವುದು ದುಬಾರಿಯಾಗಿದ್ದರೆ, ಈ ಕೊಳವೆಗಳ ಸುತ್ತಲೂ, ಕಡೇಪಕ್ಷ ಎಲ್ಲಿ ಜಾಯಿಂಟ್‌ಗಳು ಇವೆಯೇ ಅಲ್ಲಾದರೂ ಕಾಂಕ್ರಿಟ್‌ ಹಾಕಿ, ಮತ್ತೆ ಬೇರುಗಳು ಬರದಂತೆ ತಡೆಯಬಹುದು. 

ಸಾಮಾನ್ಯವಾಗಿ ಎಲ್ಲರಿಗೂ ಮರದ ಹಸಿರಿನ, ಬಗ್ಗೆ ಮರದಿಂದ ಆಗುವ ಉಪಯೋಗದ ಬಗ್ಗೆ  ಅರಿವಿದ್ದರೂ ಅದು ತಮ್ಮ ಮನೆಯಲ್ಲೇ ಇರದೆ, ಅದರ ಲಾಭ ಮಾತ್ರ ತಮಗೆ ಆಗಬೇಕು ಎಂದು ಬಯಸುತ್ತಾರೆ. ಪಕ್ಕದ ಮನೆಯಲ್ಲೋ ಇಲ್ಲ ರಸ್ತೆಯ ಆಚೆ ಬದಿ ಇದ್ದು, ನಮಗೆ ನೆರಳು ಗಾಳಿ ಮಾತ್ರ ಸಿಗುತ್ತಿದ್ದು, ಎಲೆ ಕಸದ ನಿರ್ವಹಣೆಯ ಗೋಜು ಇರಬಾರದು ಎಂಬ ಇನ್ನೊಂದು ಆಸೆಯೂ ಎಲ್ಲರಿಗೂ ಇರುತ್ತದೆ. ಆದರೆನಮ್ಮ ಪಕ್ಕದ ಮನೆಯವರೂ ಇದೇ ರೀತಿಯಲ್ಲಿ  ಯೋಚಿಸುತ್ತಿರುತ್ತಾರೆ ಎಂಬುದನ್ನು ನಾವು ಮರೆಯಬಾರದು. ಮನೆಯಿಂದ ಸ್ವಲ್ಪ ದೂರದಲ್ಲಿ ಅಥವಾ ರಸ್ತೆ ಬದಿಯಲ್ಲಾದರೂ ಮರ ನೆಟ್ಟು, ಸೂಕ್ತ ಮುಂಜಾಗರೂಕತಾ ಕ್ರಮ ಕೈಗೊಳ್ಳುವುದರ ಮೂಲಕ ನಾವು ಹಸಿರುಹೊಂದಿಯೂ ನಿಶ್ಚಿಂತರಾಗಿರಬಹುದು!

– ಆರ್ಕಿಟೆಕ್ಟ್ ಕೆ ಜಯರಾಮ್

Advertisement

Udayavani is now on Telegram. Click here to join our channel and stay updated with the latest news.

Next