Advertisement

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಹಿರಿದು

11:09 AM Jul 02, 2019 | keerthan |

ಮಂಗಳೂರು: ಪ್ರಜಾಪ್ರಭುತ್ವ ಬಲಗೊಳಿಸಲು ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಹಿರಿದು ಎಂದು ನಾಗಾಲ್ಯಾಂಡ್‌ ರಾಜ್ಯಪಾಲ ಪಿ.ಬಿ. ಆಚಾರ್ಯ ಅಭಿಪ್ರಾಯಪಟ್ಟರು.

Advertisement

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಪುರಭವನದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ ನೀಡುವ ಮೂಲಕ ದ.ಕ. ಮತ್ತು ಉಡುಪಿ ಜಿಲ್ಲೆಯ ಪತ್ರಕರ್ತರು ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸುತ್ತಿರುವುದು ಅಭಿನಂದನೀಯ. ಈಶಾನ್ಯ ರಾಜ್ಯಗಳ ಅಭಿವೃದ್ಧಿಯತ್ತ ಮಾಧ್ಯಮ ಗಮನಹರಿಸಬೇಕು. ಈ ರಾಜ್ಯಗಳಲ್ಲಿರುವ ಸಂಪನ್ಮೂಲ ಬಳಸಿಕೊಂಡು ರಾಜ್ಯಗಳ ಆರ್ಥಿಕ ಅಭಿವೃದ್ಧಿ ಮೂಲಕ ದೇಶದ ಅಭ್ಯುದಯದಲ್ಲಿ ಸಹಕರಿಸಬೆಕು ಎಂದರು.

ಸಮ್ಮೇಳನದ ಸ್ಮರಣ ಸಂಚಿಕೆ “ಸಮಾಚಾರ’ ಬಿಡುಗಡೆಗೊಳಿಸಿದ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಕರಾವಳಿಯಲ್ಲಿ ಅಪೂರ್ವವಾದ ನೈಸ
ರ್ಗಿಕ ಸಂಪನ್ಮೂಲಗಳಿವೆ. ಇದನ್ನು ದೇಶಾದ್ಯಂತ ಮುಟ್ಟಿಸುವ ಕೆಲಸ ಬ್ರ್ಯಾಂಡ್‌ ಮಂಗಳೂರು ಆಂದೋಲನದ ಮೂಲಕ ನಡೆಯಲಿ ಎಂದರು.
ಸಸಿ ವಿತರಿಸಿ “ಹಸಿರು ಉಸಿರು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದಶಾಸಕ ಡಾ| ವೈ. ಭರತ್‌ ಶೆಟ್ಟಿ, ಪರಿಸರವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಿ ಹಸುರುಳಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು. ಜಲ ಸಂಪನ್ಮೂಲಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದಾಗಬೇಕು ಎಂದು ಆಶಿಸಿದರು.

ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆ ವಹಿಸಿದ್ದರು. ನಾಗಾಲ್ಯಾಂಡ್‌ ರಾಜ್ಯಪಾಲರ ಪತ್ನಿ ಕವಿತಾ ಆಚಾರ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪೊಲೀಸ್‌ ಅಧೀಕ್ಷಕ ಲಕ್ಷ್ಮೀಪ್ರಸಾದ್‌, ಮಂಗಳೂರು ಪ್ರಸ್‌ ಕ್ಲಬ್‌ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು.

Advertisement

ಕಂಪ್ಯೂಟರ್‌ ಕೊಡುಗೆ
ಪತ್ರಕರ್ತರ ಸಂಘದ ವತಿಯಿಂದ ಡಿಸೆಂಬರ್‌ನಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆಗೆ ಎಂಎಸ್‌ಇಝಡ್‌ ನೀಡಿದ ಕಂಪ್ಯೂಟರ್‌ನ ದಾಖಲೆಗಳನ್ನು ಪಿ.ಬಿ. ಆಚಾರ್ಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಎಂಎಸ್‌ಇಝಡ್‌ನ‌ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ಭಂಡಾರ್ಕರ್‌ ಹಾಜರಿದ್ದರು. ದ.ಕ. ಜಿಲ್ಲಾ ಪತ್ರಕರ್ತರ ಸಂಘದಅಧ್ಯಕ್ಷ ಶ್ರೀನಿವಾಸ ಇಂದಾಜೆ ಪ್ರಸ್ತಾವನೆಗೈದರು. ಸಮ್ಮೇಳನ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿದರು. ಸಂಘದ ಪ್ರ. ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ನಿರೂಪಿಸಿದರು.

ಸಮಾರೋಪ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಈಶ್ವರ ದೈತೋಟ, ಪತ್ರಕರ್ತರಲ್ಲಿ ವೃತ್ತಿಪರತೆ, ಆತ್ಮಾವಲೋಕನ ಮಾಡಿಕೊಳ್ಳುವ ಗುಣ ಅತಿ ಅಗತ್ಯ. ಯಾವುದೇ ಗೊಂದಲವಿಲ್ಲದಂತೆ ಸತ್ಯ ಸಂಗತಿಯನ್ನು ಸಮಾಜದ ಮುಂದಿಡಬೇಕಾದರೆ ಪತ್ರಕರ್ತರು ಸತ್ಯಾನ್ವೇಷಕರಾಗಿರಬೇಕು. ಪಾರದರ್ಶಕ ಮತ್ತು ಸತ್ಯ, ನಿಖರ ಸುದ್ದಿ ನೀಡುವ ಗುಣವನ್ನು ಪ್ರಸ್ತುತ ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಂಪಿ ವಿವಿ ವಿಶ್ರಾಂತ ಕುಲಪತಿ ಪ್ರೊ| ಬಿ. ವಿವೇಕ್‌ ರೈ ಮಾತನಾಡಿ, ಪತ್ರಕರ್ತರು ಘಟನಾವಳಿಯ ಸೂಕ್ಷ್ಮತೆ ಗ್ರಹಿಸುವ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಮಾತನಾಡಿ, ಪೊಲೀಸರ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವನೆಗಳಿದ್ದು, ಪೊಲೀಸರ ಉತ್ತಮ ಕೆಲಸಗಳನ್ನು ಪತ್ರಿಕೆಗಳು ಸಮಾಜದ ಮುಂದೆ ತೆರೆದಿಡುವ ಯತ್ನ ಮಾಡಬೇಕು ಎಂದರು. ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ, ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಷಾ ಮುಖ್ಯ ಅತಿಥಿಗಳಾಗಿದ್ದರು. ಪತ್ರಕರ್ತ ಜಿತೇಂದ್ರ ಕುಂದೇಶ್ವರ ಸ್ವಾಗತಿಸಿದರು. ಭಾಸ್ಕರ್‌ ರೈ ಕಟ್ಟ ಸಮ್ಮಾನಿತರ ಪರಿಚಯ ನೀಡಿದರು. ಅನ್ಸಾರ್‌ ಇನೋಳಿ ಬಹುಮಾನಿತರ ವಿವರ ನೀಡಿದರು. ಲೋಕೇಶ್‌ ಪೆರ್ಲಂಪಾಡಿ ವಂದಿಸಿದರು. ಹರೀಶ್‌ ರೈ ನಿರೂಪಿಸಿದರು.

ಪತ್ರಿಕಾ ರಂಗದ ಹಿರಿಯರಿಗೆ ಸಮ್ಮಾನ
ಪತ್ರಿಕಾ ರಂಗದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಉದಯವಾಣಿಯ ಮನೋಹರ ಪ್ರಸಾದ್‌, ಹಿಲರಿ ಕ್ರಾಸ್ತಾ, ಕೇಶವ ಕುಂದರ್‌, ಧನಂಜಯ ಮೂಡಬಿದಿರೆ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತರನ್ನು ಸಮ್ಮಾನಿಸಲಾಯಿತು.
ಮುಂಬಯಿಯಲ್ಲಿ ಪತ್ರಕರ್ತರಾಗಿರುವ ರೋನ್ಸ್‌ ಬಂಟ್ವಾಳ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಇದೇ ವೇಳೆ ಪತ್ರಕರ್ತರ ಸಂಘದಿಂದ ಚೊಚ್ಚಲ “ಬ್ರಾಂಡ್ ಮಂಗಳೂರು’ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಮುಹಮ್ಮದ್‌ ಆರಿಫ್‌ ಪಡುಬಿದ್ರಿ ಅವರಿಗೆ ಪ್ರದಾನ ಮಾಡಲಾಯಿತು.

ಪತ್ರಕರ್ತರಿಗೆ ನಿವೇಶನ
ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಪತ್ರಕರ್ತರಿಗೆ ನಿವೇಶನ ಒದಗಿಸುವ ವಿಚಾರವಾಗಿ ಸ್ಥಳ ಗುರುತಿಸಲು ದ.ಕ. ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಸೂಚಿಸಲಾಗಿದೆ.
 - ಯು.ಟಿ. ಖಾದರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next