Advertisement

ರಂಗೇರಿಸಿದ ವಿನಯ ಹಾದಿ ಕಠಿಣ

04:18 PM Apr 04, 2019 | pallavi |

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರವೀಗ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಇದೀಗ ಹ್ಯಾಟ್ರಿಕ್‌ ಹಿರೋ ಪ್ರಹ್ಲಾದ ಜೋಶಿ ಅವರಿಗೆ ಠಕ್ಕರ್‌ ಕೊಡಲು ಡೈನಾಮಿಕ್‌ ಹಿರೋ ವಿನಯ್‌ ಕುಲಕರ್ಣಿ ಸಜ್ಜಾಗಿ ಕಣಕ್ಕಿಳಿಯುತ್ತಿದ್ದಾರೆ.

Advertisement

ಹೌದು. ಅಲ್ಪಸಂಖ್ಯಾತರಿಗೆ ಧಾರವಾಡ ಕ್ಷೇತ್ರದ ಟಿಕೇಟ್‌ ನೀಡಬೇಕೆನ್ನುವ ಆಗ್ರಹದ ಮಧ್ಯೆ ಕಳೆದ 15 ದಿನಗಳಿಂದ ಮುಂದುವರಿದಿದ್ದ ಗೊಂದಲಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಂತಿಮವಾಗಿ ತೆರೆ ಬಿದ್ದಿದೆ. ಪರಿಣಾಮ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರಿಗೆ ಟಿಕೇಟ್‌ ಖಚಿತವಾಗಿದ್ದು, ಇದೀಗ ಧಾರವಾಡ ಲೋಕಸಭಾ ಕ್ಷೇತ್ರ ರಂಗೇರಿದಂತಾಗಿದೆ.

ಇಲ್ಲಿ ಅಲ್ಪಸಂಖ್ಯಾತ ಕೋಟಾದಡಿ ಶಾಕೀರ್‌ ಸನದಿ ಅವರಿಗೆ ಟಿಕೇಟ್‌ ನೀಡಿದರೆ, ಬಿಜೆಪಿ ಆಟಕ್ಕೂ ಮುನ್ನವೇ ಜಯಭೇರಿ ಬಾರಿಸಿದಂತೆ ಆಗುತ್ತಿತ್ತು ಎನ್ನುವ ಬಲವಾದ ಅಭಿಪ್ರಾಯ ಕ್ಷೇತ್ರದ ಜನರಲ್ಲಿ ಕೇಳಿ ಬರುತ್ತಿತ್ತು. ಇದೀಗ ಕಣದಲ್ಲಿ ಕೈ-ಕಮಲ ಅಭ್ಯರ್ಥಿಗಳಿಬ್ಬರೂ ಪಕ್ಕಾ ಗಟ್ಟಿಗರೇ ಆಗಿರುವುದರಿಂದ ಚುನಾವಣೆ ತಕ್ಕಮಟ್ಟಿಗೆ ಜೋರಾಗಿ ನಡೆಯುವುದು ಬಹುತೇಕ ಖಚಿತವಾದಂತಾಗಿದೆ.

2014ರಲ್ಲಿ ಸಂಸದ ಪ್ರಹ್ಲಾದ ಜೋಶಿ ಒಟ್ಟು 5,45,395 ಮತಗಳನ್ನು, ಕಾಂಗ್ರೆಸ್‌ ನ ವಿನಯ್‌ ಕುಲಕರ್ಣಿ 4,31,738 ಮತಗಳನ್ನು ಪಡೆದುಕೊಂಡಿದ್ದರು. ಇಲ್ಲಿ ಜೋಶಿ ಅವರು 1,13,657 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕಳೆದ ಚುನಾವಣೆಯಲ್ಲಿ ಮೋದಿ ಅವರ ವರ್ಚಸ್ಸು ಸಾಕಷ್ಟು ಕೆಲಸ ಮಾಡಿತ್ತು. ಆದರೆ ಈ ಬಾರಿ ಕ್ಷೇತ್ರದಲ್ಲಿ ಮೋದಿ ಅವರ ಅಲೆ ಕಳೆದ ಬಾರಿಯಷ್ಟು ರಭಸವಾಗಿಲ್ಲ ಎಂದೇ ಕ್ಷೇತ್ರದಲ್ಲಿನ ಜನ ಮಾತನಾಡುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಅದು ಎಷ್ಟರ ಮಟ್ಟಿಗೆ ವರದಾನವಾಗುತ್ತದೆ ಎಂಬುದನ್ನು ಕಾಯಬೇಕಿದೆ.

Advertisement

1 ಲಕ್ಷ ಮತಗಳು ಯಾರತ್ತ?: ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಹಾಕುವ ವರ್ಗ ಯುವಕರು. ಅದೂ ಅಲ್ಲದೇ ನಗರ ಪ್ರದೇಶದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುತ್ತದೆ. ಈ ಎರಡೂ ಅಂಶಗಳು ಬಿಜೆಪಿಗೆ ಪೂರಕವಾಗುವ ಲಕ್ಷಣಗಳಿದ್ದು, ಕಳೆದ ಬಾರಿ ಮಾಡಿದ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ ಎನ್ನುವ ಕಾಂಗ್ರೆಸ್‌ಗೆ ಕಳೆದ ಚುನಾವಣೆಯಲ್ಲಿ ಸೋಲುಂಟಾಗಲು ಕಾರಣವಾದ ಆ 1.13 ಲಕ್ಷ ಮತಗಳು ಯಾವ ವಲಯ, ವರ್ಗದ್ದು ಎನ್ನುವ ಚಿಂತೆ ಕಾಡುತ್ತಿದ್ದು, ಅವುಗಳ ಬೆನ್ನು ಬಿದ್ದಿದೆ.

ಇನ್ನು ವಿಧಾನಸಭಾ ಕ್ಷೇತ್ರವಾರು ಬಂದರೂ 2019ರಲ್ಲಿ ಬಿಜೆಪಿ ಎಂಟು ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಗೆದ್ದಿದೆ. ಇದು ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಬಹುದು. ಆದರೆ 2014ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಬರೀ 3 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಇತ್ತು. ಆಗ ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಗೆದ್ದಿತ್ತು. ಅದೂ ಅಲ್ಲದೇ ಮೋದಿ ಅವರ ಬಹುದೊಡ್ಡ ಅಲೆಯಲ್ಲಿ ಜೋಶಿ ಅವರು ಸಲೀಸಾಗಿ ಗೆಲುವಿನ ನಗೆ ಬೀರಿದ್ದರು. ಈ ಬಾರಿ ಇದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಸಂಕ್ರಮಣದಲ್ಲಿಯೇ ಮೋದಿ ಅವರನ್ನು ಹುಬ್ಬಳ್ಳಿಗೆ ಕರೆಯಿಸಿ ಬಹು ದೊಡ್ಡ ರ್ಯಾಲಿ ನಡೆಸಲಾಗಿ¨

ಬಿಜೆಪಿ ಆಂತರಿಕ ಭಿನ್ನಮತ ಈ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಟಿಕೇಟ್‌ ಹಂಚಿಕೆ ಸೇರಿದಂತೆ ಅನೇಕ ವಿಚಾರಗಳು ಬಂದಾಗ ಸಂಸದ ಪ್ರಹ್ಲಾದ ಜೋಶಿ ಅವರು ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಬಿಜೆಪಿಯಲ್ಲಿ ತಕ್ಕಮಟ್ಟಿನ ಅಸಮಾಧಾನಗಳು ಇರುವುದು ಈಗಾಗಲೇ ಅನೇಕ ಬಾರಿ ಬಹಿರಂಗಗೊಂಡಿದೆ. ಚುನಾವಣೆ ವೇಳೆ ಎಲ್ಲದಕ್ಕೂ ತೇಪೆ ಹಚ್ಚಿ ಮೋದಿ ಅವರನ್ನು ಪ್ರಧಾನಿ ಮಾಡೋಣ ಎನ್ನುವ ಮಂತ್ರವನ್ನು ಬಿಜೆಪಿ ಜಪಿಸುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಇನ್ನು ಕಾಂಗ್ರೆಸ್‌ನಲ್ಲಿ ಮಹೇಶ ನಾಲ್ವಾಡ ಅವರು ಬಂಡಾಯ ಬೂದಿ ಮುಚ್ಚಿದ ಕೆಂಡದಂತಿದೆ.

ಹುಬ್ಬಳ್ಳಿ: ಧಾರವಾಡ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಜಂಟಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರೊಂದಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು. ಪ್ರಹ್ಲಾದ ಜೋಶಿ ಅವರು ಬರೀ ಗಾಳಿಯಲ್ಲಿಯೇ ಗೆದ್ದು 15 ವರ್ಷ ಕ್ಷೇತ್ರದಲ್ಲಿ ರಾಜಕೀಯ ಮಾಡಿದ್ದಾರೆ. ಅವರಿಗೆ ಕೇವಲ ಒಂದು ಗ್ರಾಮವನ್ನು ಆದರ್ಶ ಗ್ರಾಮ ಮಾಡಲು ಆಗಲಿಲ್ಲ. ಇನ್ನು ಕ್ಷೇತ್ರಕ್ಕೆಲ್ಲ ಅವರೇನು ಮಾಡಿದ್ದಾರೆ? ಇದನ್ನು ಮತದಾರರು ನೆನಪಿಟ್ಟಿದ್ದು ಈ ಸಲ ಪಾಠ ಕಲಿಸುತ್ತಾರೆ.
ವಿನಯ್‌ ಕುಲಕರ್ಣಿ, ಮಾಜಿ ಸಚಿವ, ಕೈ ಅಭ್ಯರ್ಥಿ.

ಜಿಲ್ಲೆಗಾಗಿ ನಾನು ಏನು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದನ್ನು ಈ ದೇಶದ ಪ್ರಧಾನಿಗೆ ಮತ್ತು ಕ್ಷೇತ್ರದ ಜನರಿಗೆ ತಿಳಿಸಿದ್ದೇನೆ. ಹೀಗಾಗಿ ನನ್ನ ಗೆಲುವು ಖಚಿತ. ಆದರೆ ವಿನಯ್‌ ಕುಲಕರ್ಣಿ ಅವರು ಏನು ಮಾಡಿದ್ದಾರೆಂಬುದನ್ನು ಮೊದಲು ಹೇಳಬೇಕು.
ಪ್ರಹ್ಲಾದ ಜೋಶಿ, ಸಂಸದ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next