Advertisement

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

08:41 AM May 21, 2024 | Team Udayavani |

ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಹೋಗುತ್ತಿದ್ದ ಸಹೋದರರ ಪೈಕಿ ಬೈಕ್‌ ಚಾಲಕ ತಮ್ಮ ಮೃತಪಟ್ಟು, ಹಿಂಬದಿ ಸವಾರ ಅಣ್ಣ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೈಸ್‌ ರಸ್ತೆಯ ಮಂಗನಹಳ್ಳಿ ಸೇತುವೆ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ಧಾರವಾಡ ಮೂಲದ ವಿನಾಯಕ (20) ಮೃತ ಸವಾರ. ಈತನ ಅಣ್ಣ ಗಿರೀಶ್‌ (22)ಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೋಮವಾರ ಬೆಳಗ್ಗೆ ಸುಮಾರು 7.50ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಐಟಿಐ ವ್ಯಾಸಂಗ ಮಾಡಿರುವ ಸಹೋದರರು ಜಿಗಣಿಯಲ್ಲಿ ರೂಮ್‌ ಬಾಡಿಗೆ ಪಡೆದು ವಾಸವಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರ ಜತೆಗೆ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು.

ಸೋಮವಾರ ಸುಂಕದಕಟ್ಟೆಯ ಕಾಲೇಜೊಂದರಲ್ಲಿ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಸಹೋದರರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ನೈಸ್‌ ರಸ್ತೆಯ ಮಂಗನಹಳ್ಳಿ ಸೇತುವೆ ಬಳಿ ಹೋಗುವಾಗ ಹಿಂದಿನಿಂದ ಬಂದಿರುವ ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಈ ವೇಳೆ ರಸ್ತೆಗೆ ಬಿದ್ದ ವಿನಾಯಕನ ಮೇಲೆಯೇ ಅಪರಿಚಿತ ವಾಹನದ ಚಕ್ರ ಹರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಗಿರೀಶ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಅಪರಿಚಿತ ವಾಹನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next