Advertisement

ಪಾಕಿಸ್ಥಾನದ ನೈಜ ಮುಖ ತೆರೆದಿಟ್ಟಿದೆ: ಗೌತಮ್‌ ಗಂಭೀರ್‌

10:08 AM Dec 28, 2019 | Team Udayavani |

ಹೊಸದಿಲ್ಲಿ: “ಪಾಕಿಸ್ಥಾನ ಕ್ರಿಕೆಟ್‌ ತಂಡದಲ್ಲಿ ಹಿಂದೂ ಧರ್ಮೀಯ ಎನ್ನುವ ಕಾರಣಕ್ಕೆ ಕ್ರಿಕೆಟಿಗ ದಾನಿಶ್‌ ಕನೇರಿಯ ಅನುಭವಿಸಿರುವ ಸಂಕಷ್ಟಗಳು ಪಾಕಿಸ್ಥಾನದ ನಿಜವಾದ ಮುಖವನ್ನು ತೆರೆದಿಟ್ಟಿದೆ’ ಎಂದು ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್‌ ಗಂಭೀರ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

“ನಮ್ಮ ದೇಶದ ಕ್ರಿಕೆಟ್‌ ತಂಡವನ್ನು ಮೊಹಮ್ಮದ್‌ ಅಜರುದ್ದೀನ್‌ ನಾಯಕರಾಗಿ ಹಲವು ವರ್ಷ ಮುನ್ನಡೆಸಿದ್ದಾರೆ. ಮೊಹಮ್ಮದ್‌ ಕೈಫ್, ಇರ್ಫಾನ್‌ ಪಠಾಣ್‌, ಮುನಾಫ್ ಪಟೇಲ್‌ ನನ್ನ ಆತ್ಮೀಯ ಸ್ನೇಹಿತರು. ನಾವೆಲ್ಲ ಒಟ್ಟಾಗಿ ತಂಡದ ಜಯಕ್ಕಾಗಿ, ದೇಶಕ್ಕಾಗಿ ಆಡಿದ್ದೇವೆ. ಯಾವತ್ತೂ ತಾರತಮ್ಯ ಮಾಡಿಲ್ಲ. ಆದರೆ ಇಮ್ರಾನ್‌ ಖಾನ್‌ ರಾಷ್ಟ್ರದಿಂದ ಬಂದಿರುವ ವರದಿ ನಿಜಕ್ಕೂ ದುರದೃಷ್ಟಕರ’ ಎಂದು ಗಂಭೀರ್‌ ಹೇಳಿದ್ದಾರೆ.

ಶೋಯಿಬ್‌ ಅಖ್ತರ್‌ ಹೇಳಿಕೆ
ಇದಕ್ಕೆಲ್ಲ ಮೂಲವಾದದ್ದು ಪಾಕಿಸ್ಥಾನದ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಪಿಟಿವಿ ನ್ಪೋರ್ಟ್ಸ್ಗೆ ನೀಡಿದ ಸಂದರ್ಶನ. “ನನ್ನ ಕ್ರಿಕೆಟ್‌ ಅವಧಿಯಲ್ಲಿ ಪಾಕಿಸ್ಥಾನ ತಂಡದ ಕೆಲವು ಕ್ರಿಕೆಟಿಗರು ಹಿಂದೂ ಎಂಬ ಕಾರಣಕ್ಕೆ ದಾನಿಶ್‌ ಕನೇರಿಯ ಅವರನ್ನು ದ್ವಿತೀಯ ದರ್ಜೆಯ ನಾಗರಿಕನಂತೆ ಕಂಡಿದ್ದರು.

ಕನೇರಿಯ ಜತೆ ಊಟ ಕೂಡ ಮಾಡುತ್ತಿರಲಿಲ್ಲ. ಆದರೆ ಈ ಹಿಂದೂ ಕ್ರಿಕೆಟಿಗನ ನೆರವಿಲ್ಲದೆ ಅಂದು ಪಾಕಿಸ್ಥಾನ ಗೆಲುವು ಸಾಧಿಸಿದ್ದು ಕಡಿಮೆ’ ಎಂದು ಅಖ್ತರ್‌ ಸ್ಫೋಟಕ ಮಾಹಿತಿಯನ್ನು ಹೊರಗೆಡವಿದ್ದರು.

ಪ್ರಧಾನಿಗೆ ಕನೇರಿಯ ಒತ್ತಾಯ
“ಶೋಯಿಬ್‌ ಅಖ್ತರ್‌ ನನಗಾಗಿರುವ ಅನ್ಯಾಯವನ್ನು ಸಂದರ್ಶನದಲ್ಲಿ ಬಯಲು ಮಾಡಿದ್ದಾರೆ. ಅವರ ಮಾತಿನಲ್ಲಿ ಸತ್ಯವಿದೆ. ಹಿಂದೂ ಎನ್ನುವ ಕಾರಣಕ್ಕೆ ಪಾಕ್‌ ತಂಡದಲ್ಲಿದ್ದ ಕೆಲವು ಆಟಗಾರರು ನನ್ನೊಂದಿಗೆ ಊಟ ಮಾಡುತ್ತಿರಲಿಲ್ಲ. ಆದರೆ ಅಖ್ತರ್‌ ನನಗೆ ಯಾವಾಗಲೂ ಬೆಂಬಲ ನೀಡುತ್ತಿದ್ದರು. ನನಗೆ ಸಹಾಯ ಮಾಡಿದ ಎಲ್ಲ ಕ್ರಿಕೆಟಿಗರಿಗೆ ಆಭಾರಿಯಾಗಿದ್ದೇನೆ. ಸದ್ಯ ನನ್ನ ಜೀವನ ಸರಿಯಾದ ದಾರಿಯಲ್ಲಿಲ್ಲ.

Advertisement

ಅವ್ಯವಸ್ಥೆಯಿಂದ ಹೊರಗೆ ಬರುವಂತೆ ಮಾಡಲು ನನಗೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸಹಾಯ ಮಾಡಬೇಕು’ ಎಂದು 39ರ ಹರೆಯದ ದಾನಿಶ್‌ ಕನೇರಿಯ ಒತ್ತಾಯಿಸಿದ್ದಾರೆ.

61 ಟೆಸ್ಟ್‌ಗಳ ಅನುಭವಿ
ಲೆಗ್‌ ಸ್ಪಿನ್ನರ್‌ ಆಗಿದ್ದ ದಾನಿಶ್‌ ಕನೇರಿಯ ಪಾಕಿಸ್ಥಾನ ಪರ 2000-2010ರ ಅವಧಿಯಲ್ಲಿ 61 ಟೆಸ್ಟ್‌, 18 ಏಕದಿನ ಪಂದ್ಯಗಳನ್ನಾಡಿ ಒಟ್ಟು 276 ವಿಕೆಟ್‌ ಉರುಳಿಸಿದ್ದಾರೆ. ಅವರು ಪಾಕಿಸ್ಥಾನ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ ಕೇವಲ ಎರಡನೇ ಹಿಂದೂ ಆಟಗಾರ. ಆದರೆ 2012ರಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿಬಿದ್ದ ದಾನಿಶ್‌ ಕನೇರಿಯ ಅವರು ತಂಡದಿಂದ ಹೊರಬಿದ್ದರು.

ಮಿಯಾಂದಾದ್‌ ಹೇಳಿಕೆಗೆ ಬಿಸಿಸಿಐ ತಿರುಗೇಟು
“ಕ್ರಿಕೆಟಿಗೆ ಭಾರತ ಸುರಕ್ಷಿತವಲ್ಲ. ವಿದೇಶಿ ಕ್ರಿಕೆಟ್‌ ತಂಡಗಳು ಭಾರತಕ್ಕೆ ಪ್ರವಾಸಕ್ಕೆ ಹೋಗುವುದನ್ನು ಐಸಿಸಿ ನಿಷೇಧಿಸಬೇಕು’ ಎಂಬ ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಹೇಳಿಕೆಗೆ ಬಿಸಿಸಿಐ ತಿರುಗೇಟು ನೀಡಿದೆ.

“ಹೆಚ್ಚಿನ ಸಮಯವನ್ನು ಇಂಗ್ಲೆಂಡ್‌ನ‌ಲ್ಲೇ ಕಳೆಯುವವರೊಬ್ಬರಿಗೆ ಭಾರತೀಯ ಭದ್ರತಾ ವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸುವ ಯೋಗ್ಯತೆ ಇಲ್ಲ. ಅಷ್ಟೇ ಅಲ್ಲ, ಮಿಯಾಂದಾದ್‌ ಪಾಕಿಸ್ಥಾನದ ಭದ್ರತೆ ಬಗ್ಗೆ ಮಾತಾಡಲಿಕ್ಕೂ ಯೋಗ್ಯರಲ್ಲ’ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ.

ಪಾಕಿಸ್ಥಾನದ ವೆಬ್‌ಸೈಟ್‌ ಒಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತಾಡಿದ ಮಿಯಾಂದಾದ್‌, “ಪಾಕಿಸ್ಥಾನ ಕ್ರಿಕೆಟಿಗೆ ಹಾಗೂ ಪ್ರವಾಸಕ್ಕೆ ಸುರಕ್ಷಿತ ದೇಶ ಎಂಬುದು ಶ್ರೀಲಂಕಾ ಸರಣಿ ಬಳಿಕ ಸಾಬೀತಾಗಿದೆ. ಆದರೆ ಭಾರತವೇ ಈಗ ಪ್ರವಾಸಕ್ಕೆ ಸುರಕ್ಷಿತವಲ್ಲ. ಅಲ್ಲಿ ಏನಾಗುತ್ತದೆ ಎಂಬುದು ಎಲ್ಲರಿಗೂ ತಿಳಿಯಬೇಕು. ಎಲ್ಲ ದೇಶಗಳು ಭಾರತದೊಂದಿಗೆ ಕ್ರೀಡಾ ಸಂಬಂಧಗಳನ್ನು ಕಡಿದುಕೊಳ್ಳಬೇಕು’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next