Advertisement

ರಾ.ಹೆದ್ದಾರಿ ಶಾಲಾ ಪರಿಮಿತಿಯಲ್ಲಿ ಎಚ್ಚರಿಕೆಯ ಫಲಕ ಬೇಕು

12:50 AM Jan 22, 2019 | Harsha Rao |

ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ 2018-19ನೇ ಸಾಲಿನ ಮಕ್ಕಳ ಮತ್ತು ಮಹಿಳೆಯರ ವಿಶೇಷ ಗ್ರಾಮ ಸಭೆಯು ಜ.21 ಸೋಮವಾರದಂದು ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ.ಅಧ್ಯಕ್ಷ ಶೇಖರ್‌ ಕಾಂಚನ್‌ ಕೊಮೆ ಅಧ್ಯಕ್ಷತೆಯಲ್ಲಿ ನಡೆಯಿತು. 

Advertisement

ನಿಧಾನವಾಗಿ ಚಲಿಸಿ ಎನ್ನುವ ಸೂಚನಾ ಫಲಕ ಅಳವಡಿಸಿ  
ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಮಾತನಾಡಿ ತೆಕ್ಕಟ್ಟೆ ಹಾಲು ಡೈರಿಯ ಸಮೀಪದ ರಸ್ತೆಗಳಲ್ಲಿ ಗಿಡಗಂಟಿಗಳು ಆವರಿಸಿದ್ದು ನಿತ್ಯ ಶಾಲೆಗೆ ಬರುವಾಗ ಭಯವಾಗುತ್ತಿದೆ.ನಾವು ಶಾಲೆಯಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್‌ ತ್ಯಾಜ್ಯವನ್ನು  ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಮ್ಮ ಶಾಲಾ ಸಮೀಪದಲ್ಲಿಯೇ ರಾ.ಹೆ.66ರ ಹಾದು ಹೋಗುವುದರಿಂದ  ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಕಷ್ಟ ಸಾಧ್ಯವಾಗುತ್ತಿದೆ. ವಾಹನಗಳ ವೇಗ ಮಿತಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಶಾಲಾ ಪರಿಮಿತಿಯಲ್ಲಿ ನಿಧಾನವಾಗಿ ಚಲಿಸಿ ಎನ್ನುವ ಸೂಚನಾ ಫಲಕ ಅಳವಡಿಸಿ ಎಂದು ಆಗ್ರಹಿಸಿದರು. ಶಾಲಾ ಪರಿಸರದ ನೂರು ಮೀಟರ್‌ ಅಂತರದಲ್ಲಿ  ತಂಬಾಕು, ಬೀಡಿ, ಸಿಗರೇಟು ಮಾರಾಟ ನಿಷೇಧ ಎಂದು ಹೇಳುತ್ತಿದ್ದರೂ ಶಾಲಾ ವಠಾರದ ಸಮೀಪ ಕೆಲವು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಇದನ್ನು ತತ್‌ಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದರು. 

ನಿರ್ವಹಣೆಗಳಿಲ್ಲದ ವಿದ್ಯಾರ್ಥಿಗಳ ಶೌಚಾಲಯ  
ಕೊಮೆ ಸರಕಾರಿ ಪ್ರಾಥಮಿಕ ಶಾಲೆಯ ಸುರಕ್ಷಾ ಮಾತನಾಡಿ, ಶಾಲಾ ನೀರಿನ ಟ್ಯಾಂಕ್‌ನಲ್ಲಿ ಮುಚ್ಚಳ ಒಡೆದು ಹೋಗಿರುವುದರಿಂದ  ನೀರು ಕಲುಷಿತಗೊಳ್ಳುತ್ತಿದೆ. ಈ ಕಲುಷಿತ ನೀರನ್ನೇ ನಿತ್ಯ ಬಳಕೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ, ತತ್‌ಕ್ಷಣವೇ ಟ್ಯಾಂಕ್‌ಗೆ ಮುಚ್ಚಳ ಅಳವಡಿಸಿ. ಶಾಲಾ ಆಟದ ಮೈದಾನವು ಕೆಂಪು ಮಣ್ಣಿನಿಂದ ಕೂಡಿದ್ದು ನೆಲ ಗಟ್ಟಿಯಾಗಿರುವ ಪರಿಣಾಮ ಆಟವಾಡಲು ಕಷ್ಟ ಸಾಧ್ಯವಾಗುತ್ತಿದೆ. 
ಆದ್ದರಿಂದ ಹೊಯಿಗೆ ಮಣ್ಣನ್ನು ಹಾಕಿ ಆಟವಾಡಲು ಅನುವು ಮಾಡಿಕೊಡಿ.

ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಶೌಚಾಲಯ ಗಳಿದ್ದು ನಿರ್ವಹಣೆಗಳಿಲ್ಲದೆ ಇರುವುದರಿಂದ ನಿತ್ಯ ಬಳಕೆ ಕಷ್ಟಸಾಧ್ಯವಾಗುತ್ತಿದೆ. ಈ ಬಗ್ಗೆ ಗ್ರಾ.ಪಂ. ಗಮನಹರಿಸಿ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ ಘಟನೆ ಕೂಡಾ ನಡೆಯಿತು.

ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಿ 
 ಮಾಲಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಶಾಸ್ತ ಮಾತನಾಡಿ, ನಮ್ಮ ಶಾಲೆಗೆ ಆವರಣದ ಗೋಡೆಗಳಿಲ್ಲದೆ ಇರುವುದರಿಂದ ಶಾಲಾ ರಜಾ ದಿನಗಳಲ್ಲಿ ಅನ್ಯ ಚಟುವಟಿಕೆಯ ತಾಣವಾಗುತ್ತಿದೆ. ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ರಂಗ ಮಂಟಪದ ಅನಿವಾರ್ಯತೆ ಇದೆ. 

Advertisement

ಶಾಲೆಗೆ ತೆರಳುವ ಮಾರ್ಗದ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್‌, ಕೋಳಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ಪ್ರಸ್ತುತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ ಈ ಬಗ್ಗೆ ಗ್ರಾ.ಪಂ.ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. 

ಸ.ಪ.ಪೂ.ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ
 ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರೀತಾ ಮಾತನಾಡಿ, ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಗಳಿದ್ದು  ನೀರು ಶುದ್ಧೀಕರಣ ಯಂತ್ರವನ್ನು ಅಳವಡಿಸಬೇಕಾಗಿದೆ. ಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಶೌಚಾಲಯದ ಆವಶ್ಯಕತೆಯಿದ್ದು ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ  ಮಾರ್ಗದರ್ಶಿ ಅಧಿಕಾರಿ ಎಚ್‌.ವಿ.ಇಬ್ರಾಹಿಂಪೂರ್‌, ಮಕ್ಕಳ ಸಂಘದ ಪ್ರತಿನಿಧಿಗಳಾದ ಧನ್ಯಾ ಪಟಗಾರ್‌, ಸಮರ್ಥ, ಸುಬ್ರಹ್ಮಣ್ಯ, ಶರ್ಮಿಳಾ, ಪ್ರಶಾಂತ್‌, ನಿಶಾ, ಪ್ರಶಾಂತ್‌, ಗ್ರಾ.ಪಂ.ಸದಸ್ಯರಾದ ಸಂಜೀವ ದೇವಾಡಿಗ, ಆನಂದ ಕಾಂಚನ್‌, ವಿನೋದ್‌ ದೇವಾಡಿಗ, ಆಶಾಲತಾ ಶೆಟ್ಟಿ, ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಶೋಭಾ, ಪೊಲೀಸ್‌ ಸಿಬಂದಿ, ಮಹಿಳಾ ಮಿತ್ರದ ಸುಮಿತ್ರಾ ಎಸ್‌.ಪ್ರಸಾದ್‌, ಮಕ್ಕಳ ಮಿತ್ರದ ಸುಹಾಸಿನಿ ಹಾಗೂ ವಿವಿಧ ಶಾಲಾ ಮುಖ್ಯ ಶಿಕ್ಷಕರು ಮತ್ತಿತರರಿದ್ದರು. 

ಗ್ರಾ.ಪಂ.ಅಧ್ಯಕ್ಷ ಶೇಖರ್‌ ಕಾಂಚನ್‌ ಅವರು ಪ್ರತಿಕ್ರಿಯಿಸಿ, ಮಕ್ಕಳ ಅನಿಸಿಕೆ ಹಾಗೂ ಬೇಡಿಕೆಗಳಿಗೆ ಸಮರ್ಪಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿಗಳು ವಿವಿಧ ಘೋಷಣೆಯ ನಾಮಫಲಕ ಹಿಡಿದು ಜಾಥಾ ನಡೆಸಿದರು ಪಿಡಿಒ ತೇಜಪ್ಪ ಕುಲಾಲ್‌ ಸ್ವಾಗತಿಸಿ, ವಿದ್ಯಾರ್ಥಿನಿ ರಕ್ಷಿತಾ , ಸುರಕ್ಷಾ ನಿರೂಪಿಸಿ, ನಮ್ಮ ಭೂಮಿಯ ಪಂ.ಮಟ್ಟದ ಸಂಯೋಜಕಿ ಉಷಾ ಶೆಟ್ಟಿ  ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾ.ಪಂ.ಸಿಬಂದಿ ಸಂಜೀವ ತೆಕ್ಕಟ್ಟೆ , ಶ್ರೀನಿವಾಸ ಪೂಜಾರಿ ಸಹಕರಿಸಿ, ಕಾರ್ಯದರ್ಶಿ ಚಂದ್ರ ವಂದಿಸಿದರು. 

 ಮದ್ಯದಂಗಡಿಗೆ ಅವಕಾಶ ನೀಡಬೇಡಿ
ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪವನ್‌ ದೇವಾಡಿಗ ಪ್ರತಿಕ್ರಿಯಿಸಿ ರಾ.ಹೆ.66ರಿಂದ ಸ್ಥಳಾಂತರಗೊಂಡ ಮದ್ಯದಂಗಡಿಗಳು ಪುನಃ ತೆಕ್ಕಟ್ಟೆಯ ರಾಮ ಮಂದಿರ ರಸ್ತೆಯ ಸಮೀಪದ ಹಳೆಯ ಕಟ್ಟಡಗಳಿಗೆ ತರುವ ಹುನ್ನಾರುಗಳು ನಡೆಯುತ್ತಿರುವ ಬಗ್ಗೆ  ಸ್ಥಳೀಯರ ಗಮನಕ್ಕೆ ಬಂದಿದೆ. ಈ ಪರಿಸರದಲ್ಲಿ ಶಿಕ್ಷಣ ಸಂಸ್ಥೆ, ಜನ ವಸತಿ ಹಾಗೂ ನೂರಾರು ಗ್ರಾಮಸ್ಥರು ಸಂಚರಿಸುವ ಮಾರ್ಗವಾದ್ದರಿಂದ ಈ ಪ್ರದೇಶದಲ್ಲಿ ಮದ್ಯದಂಗಡಿಗಳಿಗೆ ಮತ್ತೆ ಪರವಾನಿಗೆ ನೀಡಿದಲ್ಲಿ ಉಗ್ರವಾಗಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ ಘಟನೆ ಕೂಡಾ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next