Advertisement

ಹಳೇ ಮೈಸೂರು ಭಾಗದಲ್ಲಿ ಮಳೆಯ ಅಬ್ಬರ, ಅಪಾರ ಹಾನಿ​​​​​​​

06:00 AM Sep 25, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಸೇರಿ ಹಳೇ ಮೈಸೂರು ಭಾಗದಲ್ಲಿ ಮಳೆ ಅಬ್ಬರಿಸಿದ್ದು, ಸಾಕಷ್ಟು ಹಾನಿ ಉಂಟು ಮಾಡಿದೆ. ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ರಾಜ್ಯದಲ್ಲೇ ಅಧಿಕ, 7 ಸೆಂ.ಮೀ. ಮಳೆ ಸುರಿಯಿತು.

Advertisement

ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಸುರಿದ ಧಾರಾಕಾರ ಮಳೆಯ ಪರಿಣಾಮ ನಗರದ ಹಲವಾರು ಬಡಾವಣೆಗಳು ಜಲಾವೃತಗೊಂಡವು. ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಅಂಜನಾಪುರ, ಗೊಟ್ಟಿಗೆರೆ, ಜೆ.ಪಿ.ನಗರ, ಎಚ್‌ಎಸ್‌ಆರ್‌ ಬಡಾವಣೆ, ಕೋರಮಂಗಲ ಸೇರಿ ಪ್ರಮುಖ ಬಡಾವಣೆಗಳ ಹಲವು ಭಾಗಗಳು ಬಹುತೇಕ ಜಲಾವೃತಗೊಂಡಿದ್ದವು. ಹಲವಾರು ಬಡಾವಣೆಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಯಿತು.

ಅಗ್ರಹಾರ ದಾಸರಹಳ್ಳಿಯಲ್ಲಿ ಸುಮಾರು 60 ವರ್ಷದ ಹಳೆಯದಾದ ಅರಳಿ ಮರವೊಂದು ಭಾನುವಾರ ರಾತ್ರಿ ಧರೆಗುರುಳಿದೆ. ಜಯನಗರ, ಜ್ಞಾನ ಜ್ಯೋತಿ ನಗರ, ನಾಗರಭಾವಿ, ವಸಂತನಗರ ಸೇರಿದಂತೆ ಇತರೆಡೆಯೂ ಮರಗಳು ಉರುಳಿವೆ. ನಾಗವಾರ ಹೊರವರ್ತುಲ ರಸ್ತೆಯ ವಿದ್ಯಾಗಿರಿ ಬಡಾವಣೆಯಲ್ಲಿ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು, ಕೆಲವು ಕಡೆಗಳಲ್ಲಿ ಗೋಡೆಗಳು ಕುಸಿದಿವೆ. ಅಂಜನಾಪುರ ಕೆರೆ ತುಂಬಿ ಕೋಡಿ ಹರಿದಿದೆ.

ಮೈಸೂರಿನಲ್ಲಿ ಸೋಮವಾರ ಬೆಳಗ್ಗಿನ ಜಾವ 4.30ರ ವೇಳೆಗೆ ಆರಂಭಗೊಂಡ ಮಳೆ ಬೆಳಗ್ಗೆ 7.30ರವರೆಗೂ ಎಡಬಿಡದೆ ಸುರಿಯಿತು. ಹಲವು ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಸಾಕಷ್ಟು ಅವಾಂತರ ಸೃಷ್ಟಿಸಿತು. 

ಮಳೆಯಿಂದಾಗಿ ವಿದ್ಯಾರಣ್ಯಪುರಂನಲ್ಲಿರುವ ಗ್ರಂಥಾಲಯ ಕಟ್ಟಡದ ಗೋಡೆಯ ಒಂದು ಭಾಗ ಸಂಪೂರ್ಣ ಕುಸಿದಿದೆ. ಮಂಡ್ಯ ಜಿಲ್ಲೆಯಲ್ಲೂ ಮಳೆ ಅಬ್ಬರಿಸಿದ್ದು, ಮಂಡ್ಯ ತಾಲೂಕಿನ ಮಂಗಲ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸುತ್ತಲ ನಿವಾಸಿಗರಲ್ಲಿ ಆತಂಕ ಮನೆ ಮಾಡಿದೆ. ಭಾರೀ ಮಳೆಗೆ ಶ್ರೀರಂಗಪಟ್ಟಣದಲ್ಲಿ ವಿರಿಜಾ ನಾಲೆಯ ಏರಿ ಒಡೆದಿದ್ದು, ನಾಟಿ ಮಾಡಿದ ಭತ್ತದ ಬೆಳೆ ಜಲಾವೃತಗೊಂಡಿದೆ.

Advertisement

ತುಂಬಿದ ಚಿತ್ರಾವತಿ:
ಚಿಕ್ಕಬಳ್ಳಾಪುರ ಸುತ್ತಮುತ್ತ ಸುಮಾರು 4 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಸುಮಾರು ವರ್ಷಗಳಿಂದ ಬತ್ತಿಹೋಗಿದ್ದ ಚಿತ್ರಾವತಿ ನದಿ ತುಂಬಿ ಹರಿಯುತ್ತಿದೆ. ನದಿಯ ನೀರು ಉಕ್ಕಿ ಜಮೀನುಗಳಲ್ಲಿ ತುಂಬಿ ಹರಿದಿದೆ. ಕೆಲವು ಚೆಕ್‌ ಡ್ಯಾಂಗಳಲ್ಲಿ ಸಹ ನೀರು ಜೋರಾಗಿ ಹರಿದಿದೆ. ಸಂಪೂರ್ಣವಾಗಿ ಬತ್ತಿಹೋಗಿದ್ದ ನಗರದ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಕೂಡ ನೀರು ತುಂಬಿದೆ. ಕೆಲವೆಡೆ ಮನೆಗಳಿಗೆ ನುಗ್ಗಿದೆ.

ಇದೇ ವೇಳೆ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ ಕೆಲವೆಡೆಯೂ ಮಳೆಯಾಯಿತು. ಈ ಮಧ್ಯೆ, ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಹೆಚ್ಚಿನೆಡೆ ಹಾಗೂ ಕರಾವಳಿಯ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next