Advertisement

ಸದ್ದಿಲ್ಲದೆ ಶುರುವಾಗಿದೆ ವೃಕ್ಷ ಅಭಿಯಾನ

08:54 PM Jun 26, 2021 | Girisha |

ಮುದ್ದೇಬಿಹಾಳ: ಪ್ರಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ, ಧಾರ್ಮಿಕ ಗ್ರಂಥಗಳಲ್ಲಿ ದೇವತೆಗಳ ಆವಾಸ ಸ್ಥಾನ ಎನಿಸಲ್ಪಟ್ಟಿರುವ, ದಿನದ 24 ಗಂಟೆಯೂ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೊಂದಿರುವ ವೃಕ್ಷರಾಜ ಅರಳಿ ಮರ (ಅಶ್ವತ್ಥ ವೃಕ್ಷ) ಬೆಳೆಸುವ ಅಭಿಯಾನ ಮುದ್ದೇಬಿಹಾಳ ಪಟ್ಟಣದಲ್ಲಿ ಉತ್ಸಾಹಿ ಪರಿಸರ ಪ್ರೇಮಿ ಯುವಕ ಸಿದ್ದನಗೌಡ ಪಾಟೀಲ ನೇತೃತ್ವದಲ್ಲಿ ಸದ್ದಿಲ್ಲದೆ ನಡೆದಿದೆ. ಜನತೆಗೆ ಅರಳಿ ಮರದ ಮಹತ್ವ ತಿಳಿಸಿಕೊಡುವಲ್ಲಿ ಕಾರ್ಯನಿರತರಾಗಿರುವ ಸಿದ್ದನಗೌಡರು ತಮ್ಮ ಸ್ವಂತ ಹಣದಲ್ಲಿ ಅರಳಿ ಮರದ ಸಸಿ, ಗಿಡಗಳನ್ನು ಖರೀದಿಸಿ ಸಾರ್ವಜನಿಕರು, ಸಂಘ ಸಂಸ್ಥೆಯವರು, ಪರಿಸರ ಪ್ರೇಮಿಗಳಿಗೆ ಉಚಿತವಾಗಿ ವಿತರಿಸಿ ಬೆಳೆಸುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎಲ್ಲೆಲ್ಲಿ ಇವುಗಳನ್ನು ನೆಡಲಾಗಿದೆಯೋ ಅಲ್ಲಿಗೆಲ್ಲ ಖುದ್ದು ತಾವೇ ಭೇಟಿ ನೀಡಿ ನೀರು ಹಾಕಿದ್ದಾರೋ, ಇಲ್ವೋ ಅನ್ನೋದನ್ನು ಪರಿಶೀಲಿಸುತ್ತಾರೆ.

Advertisement

ನೀರು ಹಾಕಿರದಿದ್ದರೆ ತಾವೇ ನೀರು ಹಾಕಿ, ನೆಟ್ಟವರಿಗೆ ನಿತ್ಯವೂ ನೀರು ಹಾಕಿ ಬೆಳೆಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಳೆದ 2 ತಿಂಗಳಿನಿಂದ ಅಭಿಯಾನವನ್ನು ಸದ್ದಿಲ್ಲದೆ ನಡೆಸುತ್ತಿರುವ ಸಿದ್ದನಗೌಡರು ಜನ್ಮದಿನ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರನ್ನು ಭೇಟಿಯಾಗಿ ಅರಳಿ ಮರದ ಮಹತ್ವ ಬಣ್ಣಿಸಿ, ಅಂಥವರ ಮನವೊಲಿಸಿ, ಜನ್ಮದಿನ, ವಾಷಿಕೋತ್ಸವ ಸ್ಮರಣಾರ್ಥ ನೆಡುವಂತೆ ಮಾಡುವಲ್ಲಿ ಯಶಸ್ಸು ಪಡೆಯುತ್ತಿದ್ದಾರೆ. ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿಯವರ ಪತ್ನಿ ಮಹಾದೇವಿ ಪಾಟೀಲ, ಮಾಜಿ ಸಚಿವ ಸಿ.ಎಸ್‌. ನಾಡಗೌಡ, ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಶಾರದಳ್ಳಿ, ಹಸಿರು ತೋರಣ ಗೆಳೆಯರ ಬಳಗದವರು, ಬಾಲ್ಯ ಸ್ನೇಹಿತರ ಗೆಳೆಯರ ಬಳಗದವರು ಸೇರಿದಂತೆ ಹಲವರು ಅರಳಿಮರದ ಸಸಿ ನೆಟ್ಟು ಇತರರಿಗೆ ಪ್ರೇರಣೆ ನೀಡಿದ್ದಾರೆ.

ಇದುವರೆಗೂ ವಿವಿಧೆಡೆ 50ಕ್ಕೂ ಹೆಚ್ಚು ಅರಳಿಮರದ ಸಸಿಗಳನ್ನು ನೆಡಲಾಗಿದ್ದು ಮಳೆಗಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಸಸಿ ನೆಡುವ ಸಂಕಲ್ಪ ತೊಟ್ಟಿರುವ ಸಿದ್ದನಗೌಡರು ಯಾರಾದರೂ ತಮ್ಮನ್ನು ಸಂಪರ್ಕಿಸಿದರೆ (ಮೋ. 9620460299) ಉಚಿತವಾಗಿ ಸಸಿ ನೀಡುವುದಾಗಿ ಹೇಳಿದ್ದಾರೆ. ಏನಿದರ ವಿಶೇಷತೆ?: ಬಹುಪಯೋಗಿ ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕ ಉತ್ಪಾದಿಸುವ ಸಾಮರ್ಥಯ ಹೊಂದಿದೆ. ಬೇರೆ ಮರಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಸಿದರೆ, ಅರಳಿ ಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆ ನಡೆಸುವ ಸಾಮರ್ಥಯ ಹೊಂದಿದೆ. ನಗರದ ವಾಯು ಮಾಲಿನ್ಯ ನಿಯಂತ್ರಣದಲ್ಲಿ ಈ ಮರಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಸಸ್ಯ ತಜ್ಞ ವಿಜಯ್‌ ನಿಶಾಂತ್‌ ಹೇಳುತ್ತಾರೆ. ಹಾಗಾಗಿಯೇ ಇದನ್ನು ದಿನದ 24 ಗಂಟೆ ನಿರಂತರ ಆಮ್ಲಜನಕ ಉತ್ಪಾದಿಸುವ ಮರ ಎನ್ನಲಾಗುತ್ತದೆ.

ಬಹುಪಯೋಗಿ ಮರ: ದೇವಸ್ಥಾನವಿರುವಲ್ಲಿ ಈ ಮರ ಇದ್ದೇ ಇರುತ್ತದೆ. ಭಕ್ತರು ಇದಕ್ಕೆ ಪೂಜಿಸುವುದನ್ನೂ ಕಾಣುತ್ತೇವೆ. ಇದರ ಎಲೆಗಳಲ್ಲಿ ಪ್ರೋಟಿನ್‌ ಅಂಶ ಹೆಚ್ಚಾಗಿದ್ದು ದನಕರುಗಳಿಗೆ, ಆನೆಗಳಿಗೆ ಇದು ಉತ್ತಮ ಮೇವು. ತೊಗಟೆಯನ್ನು ರಾಸಾಯನಿಕ ದ್ರವ ಟ್ಯಾನಿನ್‌ ತೆಗೆಯಲು, ಕಷಾಯ ಮಾಡಿ ಕಜ್ಜಿ, ಹುಣ್ಣುಗಳಿಗೆ ಔಷಧವಾಗಿ ಬಳಸಲು ಉಪಯೋಗಿಸುತ್ತಾರೆ. ನಾರನ್ನು ಕಾಗದ, ಜಿಗುಟಾದ ಹಾಲನ್ನು ರಬ್ಬರ್‌, ಲೆಟೆಕ್ಸ್‌ ತಯಾರಿಸಲು ಬಳಸುತ್ತಾರೆ. ಇದರ ಅರಗನ್ನು ಮರದ ರಂಧ್ರ ಮುಚ್ಚಲು, ಚಿನ್ನ, ಬೆಳ್ಳಿ ಆಭರಣ ಮಾಡಲು ಬಳಸುತ್ತಾರೆ. ಇದರ ಹಲಗೆಯನ್ನು ಪೆಟ್ಟಿಗೆ, ಬೆಂಕಿಪೊಟ್ಟಣ ತಯಾರಿಕೆಗೆ ಬಳಸುತ್ತಾರೆ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಇದರ ಕಟ್ಟಿಗೆಯನ್ನು ಹೋಮ ಹವನಾದಿ ಧಾರ್ಮಿಕ ವ್ರತಾಚರಣೆಗಳಲ್ಲಿ, ಒಲೆಗೆ ಸೌದೆಯಾಗಿ ಉಪಯೋಗಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next