ಬೀದರ: ಜೀವದ ಹಂಗು ತೊರೆದು ಕೋವಿಡ್ ಸೋಂಕು ರೋಗಿಗಳ ಚಿಕಿತ್ಸೆಗಾಗಿ ದುಡಿಯುತ್ತಿರುವ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳಿಗೆ ಅಪಾಯ ಭತ್ಯೆ/ಪ್ರೋತ್ಸಾಹ ಧನ ಮಂಜೂರಾತಿಗೆ ಆಗ್ರಹಿಸಿ ಜ.17ರಿಂದ 23ರವರೆಗೆ ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳ ಸಂಘ ನಿರ್ಧರಿಸಿದೆ.
ಆರೋಗ್ಯ ಇಲಾಖೆ ಶುಶ್ರೂಷಾಧಿಕಾರಿ ಸೇರಿ ವೈದ್ಯರು ಮತ್ತು ಡಿ ಗ್ರೂಪ್ ನೌಕರರಿಗೆ ಸರ್ಕಾರ ಅಪಾಯ ಭತ್ಯೆಯನ್ನು ಘೋಷಿಸಿದೆ. ಆದರೆ, ಕೋವಿಡ್ ಆಸ್ಪತ್ರೆಗಳಲ್ಲಿ ಹಗಲು ರಾತ್ರಿ ಎನ್ನದೇ ರೋಗಿಗಳ ಆರೈಕೆ ಮಾಡುತ್ತಿರುವ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳ ವಿಷಯದಲ್ಲಿ ತಾರತಮ್ಯ ಮಾಡಿದೆ. ಮೊದಲ ಅಲೆ ಹಂತದ ಆರು ತಿಂಗಳು ತಲಾ 5 ಸಾವಿರ ರೂ. ನಂತೆ ಮತ್ತು ಎರಡನೆ ಅಲೆ ಹಂತದ 6 ತಿಂಗಳು ತಲಾ 8 ಸಾವಿರ ರೂ.ಗಳಂತೆ ಪ್ರತಿಯೊಬ್ಬರಿಗೆ 78 ಸಾವಿರ ಪಾವತಿಸಬೇಕು ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಬಿ. ಪ್ರಕಾಶ ಮತ್ತು ಜಿಲ್ಲಾಧ್ಯಕ್ಷ ವೇಣುರಾಜ್ ಜಿ. ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಏಳು ದಿನಗಳ ಕಾಲ ಬೀದರನ ಬ್ರೀಮ್ಸ್ ಸೇರಿ ರಾಜ್ಯ 19 ವೈದ್ಯಕೀಯ ಕಾಲೇಜುಗಳಲ್ಲಿನ ಶುಶ್ರೂಷಾಧಿಕಾರಿಗಳು ಪ್ರತಿಭಟನೆ ನಡೆಸುವರು. ನಮ್ಮ ಹಕ್ಕೋತ್ತಾಯಕ್ಕೆ ಸರ್ಕಾರ ಕೂಡಲೇ ಸ್ಪಂದಿಸದಿದ್ದಲ್ಲಿ ಮುಂದೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಮನ್ಯು, ಉಪಾಧ್ಯಕ್ಷ ಸಂತೋಷಕುಮಾರ ಸಿ., ರಾಜಶೇಖರ, ಸಹ ಕಾರ್ಯದರ್ಶಿ ಶರಣಬಸಪ್ಪ, ಕೋಶಾಧ್ಯಕ್ಷ ನರಸಿಂಗ್ ಕೆ., ಕಾರ್ಯಾಧ್ಯಕ್ಷ ಯಶವಂತ ಗಾದಗಿ, ರಾಘವೇಂದ್ರ, ಆನಂದ, ಸಂತೋಷ, ವಿಷ್ಣು ಬಿರಾದಾರ ಇನ್ನಿತರರಿದ್ದರು.