Advertisement

ಸಮಸ್ಯೆಯ ಮೂಲಕ್ಕೆ ಕೊಡಲಿಯೇಟು ಹಾಕಬೇಕು

12:30 AM Feb 16, 2019 | |

ಕಾಶ್ಮೀರದ ಅವಂತಿಪೋರಾದಲ್ಲಿ ಗುರುವಾರ ಸಿಆರ್‌ಪಿಎಫ್ ಯೋಧರ ಮೇಲೆ ನಡೆದಿರುವ ಉಗ್ರರ ದಾಳಿ ಇತ್ತೀಚೆಗಿನ ವರ್ಷಗಳಲ್ಲೇ ಅತಿ ಭೀಕರವಾದದ್ದು. ಬಸ್ಸಿನಲ್ಲಿದ್ದ ಎಲ್ಲ ಯೋಧರನ್ನು ಬಲಿತೆಗೆದುಕೊಂಡ ಈ ದಾಳಿ ನಡೆಸಿದ್ದು ಯಾರು ಎಂಬ ಅನುಮಾನ ಉಳಿದಿಲ್ಲ. ಏಕೆಂದರೆ ದಾಳಿ ನಡೆದ ಬೆನ್ನಿಗೆ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಸ್ಥಳೀಯ ಯುವಕನನ್ನು ಬಳಸಿ ಫಿದಾಯಿನ್‌ ದಾಳಿ ನಡೆಸಿರುವುದಾಗಿ ಹೇಳಿದೆ. ವಾಹನಗಳಲ್ಲಿ ಸ್ಫೋಟಕ ತುಂಬಿಸಿ ಢಿಕ್ಕಿ ಹೊಡೆದು ಸ್ಫೋಟಿಸುವ ದಾಳಿ ಭಾರತಕ್ಕೆ ಹೊಸದಲ್ಲವಾದರೂ ಬಹಳ ವರ್ಷಗಳ ಬಳಿಕ ಉಗ್ರರು ಮತ್ತೆ ಹಳೇ ತಂತ್ರವನ್ನು ಉಪಯೋಗಿಸಿರುವುದು ಅಚ್ಚರಿಗೆ ಕಾರಣ. ಇದಕ್ಕೆ ಪ್ರತಿಯಾಗಿ ರಣತಂತ್ರ ರೂಪಿಸಿ ಜಾರಿಗೊಳಿಸಬೇಕಾದುದು ಅಗತ್ಯ. ಉಗ್ರ ದಾಳಿಗೆ ಬಲಿಯಾಗಿರುವ ಯೋಧರಿಗಾಗಿ ದೇಶ ಮಮ್ಮಲ ಮರುಗುತ್ತಿದೆ. ಅದೇ ರೀತಿ ಉಗ್ರ ದಾಳಿಯ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ. ಈಗಲೇ ಪಾಕಿಸ್ಥಾನದ ಮೇಲೆ ದಾಳಿ ನಡೆಸಬೇಕೆಂಬುದರಿಂದ ಹಿಡಿದು ಇನ್ನೊಂದು ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಪಾಠ ಕಲಿಸಬೇಕೆಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ಆದರೆ ಉಗ್ರರ ನೆಲೆಗಳಿಗೆ ಅವಕಾಶ ನೀಡಿರುವ ಪಾಕಿಸ್ತಾನವನ್ನು ಇಂಥ ಒಂದೇ ನೆಲೆಯಿಂದ ಉತ್ತರ ಕೊಟ್ಟರೆ ಸಾಲದು. ಈ ಸಮಸ್ಯೆಗೆ ಬಹುಸ್ತರೀಯ ನೆಲೆಗಳಲ್ಲೂ ಉತ್ತರ ಹುಡುಕಬೇಕು. ಅದಕ್ಕೆ ವಿವೇಚನಾಯುಕ್ತ ನಡೆ ಅವಶ್ಯ. 

Advertisement

ಪಾಕಿಸ್ಥಾನದಲ್ಲಿ ಸರಕಾರ ಬದಲಾದ ಬಳಿಕ ಉಗ್ರವಾದದತ್ತ ಇರುವ ಧೋರಣೆಯೂ ಬದಲಾದೀತೆಂಬ ಸಣ್ಣ ನಿರೀಕ್ಷೆ ಇತ್ತು. ನಿನ್ನೆಯ ದಾಳಿಯಿಂದಾಗಿ ಅದು ಹುಸಿಯಾಗಿದೆ. ಯಾವ ಸರಕಾರ ಬಂದರೂ ಪಾಕ್‌ನ ಚಾಳಿ ಬದಲಾಗದು ಎನ್ನುವುದು ಸ್ಪಷ್ಟ. ಅಸಲಿಗೆ ಈಗ ಅಲ್ಲಿ ಸರಕಾರ ಹೆಸರಿಗೆ ಮಾತ್ರ ಇದೆ. ನಿಯಂತ್ರಣವೆಲ್ಲಾ ಸೇನೆಯ ಕೈಯಲ್ಲಿದೆ. ಸೇನೆ ಮತ್ತು ಗೂಢಚಾರಿಕೆ ಸಂಸ್ಥೆ ಐಎಸ್‌ಐ ಸೇರಿಯೇ ಜೈಶ್‌ ಉಗ್ರ ಸಂಘಟನೆಯನ್ನು ಬಳಸಿ ಈ ಕೃತ್ಯ ಎಸಗಿದೆ ಎನ್ನುವ ಅಭಿಪ್ರಾಯ ಮೇಲ್ನೋಟಕ್ಕೆ ಕಾಣುವಂಥದ್ದು.  ಅಮೆರಿಕದ ಬೇಹುಪಡೆಯ ಮಾಜಿ ಮುಖ್ಯಸ್ಥರೂ ಈ ಆಯಾಮದತ್ತ ಗಮನ ಸೆಳೆದಿದ್ದಾರೆ.  ದಾಳಿಯ ಹೊಣೆ ಹೊತ್ತ ಜೈಶ್‌ ಉಗ್ರ ಸಂಘಟನೆಯನ್ನು ಪಾಕಿಸ್ಥಾನ 2002ರಲ್ಲಿಯೇ ನಿಷೇಧಿಸಿದೆ. ಆದರೆ ಈ ನಿಷೇಧ ಕಾಗದದಲ್ಲಿ ಮಾತ್ರ ಇದೆ. ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಂಜಾಬ್‌ ಪ್ರಾಂತ್ಯವನ್ನು ನೆಲೆಯಾಗಿ ಮಾಡಿಕೊಂಡು ಪಾಕಿಸ್ಥಾನದಾದ್ಯಂತ ಮುಕ್ತವಾಗಿ ಓಡಾಡುತ್ತ ಸಭೆಗಳನ್ನು ನಡೆಸಿ ಉಗ್ರಗಾಮಿ ಸಂಘಟನೆಗೆ ಸದಸ್ಯರನ್ನು ಸೇರಿಸುತ್ತಿದ್ದಾನೆ. ಸಂಸತ್ತಿನ ಮೇಲಾದ ದಾಳಿಯೂ ಸೇರಿದಂತೆ ಹಲವು ದಾಳಿಗಳನ್ನು ಮಸೂದ್‌ ಎಸಗಿದ್ದಾನೆ. ಆದರೆ ಪಾಕಿಸ್ಥಾನ ಇನ್ನೂ ಅವನ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದು ಭಯೋತ್ಪಾದನೆಯತ್ತ ಆ ದೇಶ ಹೊಂದಿರುವ ದ್ವಿಮುಖ ನೀತಿಗೆ ಸಾಕ್ಷ್ಯ. ದಾಳಿಯ ದಾಖಲೆಗಳನ್ನು ಸಂಗ್ರಹಿಸಿ ಕೊಟ್ಟು ಉಗ್ರನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗೋಗರೆಯುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದು ಮುಂಬಯಿ ದಾಳಿಯಿಂದ ಅನುಭವಕ್ಕೆ ಬಂದಿದೆ. ಹೀಗಾಗಿ ಸರಕಾರ ಅವಂತಿಪೋರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನ ದಾರಿಯನ್ನು ಆಯ್ದುಕೊಳ್ಳುವುದು ಸೂಕ್ತ. ಇದು ಒಂದು ದಾಳಿಗೆ ಎಸಗಿದ ಪ್ರತೀಕಾರವಾಗದೆ ಸಮಸ್ಯೆಯ ಮೂಲಕ್ಕೆ ಕೊಡುವ ಕೊಡಲಿ ಯೇಟಾಗಬೇಕು.  ಭಯೋತ್ಪಾದನೆಗೆ ಸಂಬಂಧಿಸಿದಂತೆ ಅಮೆರಿಕ ಚೀನ ಕ್ರಮ ಕೈಗೊಂಡೀತು ಎಂದು ಕಾಯುವುದರಲ್ಲಿ ಅರ್ಥವಿಲ್ಲ. ಪಕ್ಕದ್ಲಲೇ ಶತ್ರು ಇರು ವಾಗ ದೂರದಿಂದ ಬರುವ ನೆರವಿನ ನಿರೀಕ್ಷೆಯಲ್ಲಿರುವುದಕ್ಕಿಂತ ಶತ್ರುವನ್ನು ಎದುರಿಸಲು ತಯಾರಿ ಮಾಡಿಟ್ಟುಕೊಳ್ಳುವುದು ಸರಿಯಾದ ಕ್ರಮ. ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆ ನಾವು ಎದುರಿಸುವ ಸಮಸ್ಯೆ, ಇದಕ್ಕೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಅಂತರಾಷ್ಟ್ರೀಯ ವೇದಿಕೆಗಳೂ ಸೇರಿದಂತೆ ಇರುವ ಎಲ್ಲ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. 

ಭದ್ರತಾ ಪಡೆಗಳ ಮೇಲೆ ಪದೇ ಪದೇ ಈ ಮಾದರಿಯ ದಾಳಿಯಾದರೆ ಅದು ಸೇನೆಯ ನೈತಿಕ ಸ್ಥೈರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ ಜನರಲ್ಲೂ ಸೇನೆಗೆ ಸೇರುವುದೇ ಅಸುರಕ್ಷಿತ ಎಂಬ ಭಾವನೆಯನ್ನು ಮೂಡಿಸುವ ಸಾಧ್ಯತೆಯಿದೆ. ತಲೆಮಾರುಗಳಿಗೆ ಈ ಭಾವನೆ ದಾಟುತ್ತಾ ಹೋದರೆ ಪರಿಸ್ಥಿತಿ ಗಂಭೀರವಾಗಬಹುದು. ದೇಶ ವನ್ನು ರಕ್ಷಿಸುವ ಪ್ರತಿಯೊಬ್ಬ ಯೋಧನ ಪ್ರಾಣ ಅತ್ಯಂತ ಅಮೂಲ್ಯವಾದದ್ದು. ಅದೇ ರೀತಿ ದೇಶದ ಹಿತಾಸಕ್ತಿಯೂ ಪರಮೋಚ್ಚವಾದದ್ದು. ಸರಕಾರ ಕೈಗೊಳ್ಳುವ ಯಾವುದೇ ನಿರ್ಧಾರದಲ್ಲಿ ಈ ಎರಡು ಅಂಶಗಳಿಗೂ ಆದ್ಯತೆಯಿರಬೇಕು. ಪಾಕಿಸ್ಥಾನದ ಪರಮಾಪ್ತ ಸ್ಥಾನಮಾನ ರದ್ದುಪಡಿಸಿ ರುವುದು ಈ ನಿಟ್ಟಿನಲ್ಲಿ ಇಟ್ಟಿರುವ ಒಂದು ದೃಢ ನಡೆ. ಮುಂದೆ ಇನ್ನಷ್ಟು ಕಠಿನ ಕ್ರಮಗಳ ಮೂಲಕ ಆ ದೇಶದಿಂದಾಗುತ್ತಿರುವ ಉಪಟಳವನ್ನು ನಿಗ್ರಹಿಸಬೇಕು. ಜತೆಗೆ ನಾಗರಿಕರು, ರಾಜಕೀಯ ಪಕ್ಷಗಳೂ ಒಕ್ಕೊರಲಿನಿಂದ ಯೋಧರನ್ನು ಬೆಂಬಲಿಸಬೇಕು. ಇದು ಈ ಹೊತ್ತಿನ ತುರ್ತು.

Advertisement

Udayavani is now on Telegram. Click here to join our channel and stay updated with the latest news.

Next