Advertisement

PTR ಗೆ ತ.ನಾಡು ವಿತ್ತಸಚಿವ ಸ್ಥಾನ ಖೋತಾ 

10:38 PM May 11, 2023 | Team Udayavani |

ಚೆನ್ನೈ: ತಮಿಳುನಾಡು ಸಚಿವ ಸಂಪುಟ ಗುರುವಾರ ಪುನಾರಚನೆಯಾಗಿದ್ದು, ವಿತ್ತಸಚಿವರಾಗಿದ್ದ ಪಳನಿವೇಲ್‌ ತ್ಯಾಗರಾಜನ್‌ (ಪಿಟಿಆರ್‌) ಅವರನ್ನು ಖಾತೆಯಿಂದ ಕೈಬಿಡಲಾಗಿದೆ. ಅಲ್ಲದೇ, ಪಿಟಿಆರ್‌ಗೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯನ್ನು ವಹಿಸಲಾಗಿದ್ದು, ಪಿಟಿಆರ್‌ ಆಡಿಯೊ ವಿವಾದದ ಹಿನ್ನೆಲೆ ಈ ಬದಲಾವಣೆ ಮಹತ್ವ ಪಡೆದುಕೊಂಡಿದೆ.

Advertisement

ಎಂ.ಕೆ.ಸ್ಟಾಲಿನ್‌ ನೇತೃತ್ವದ ಸರ್ಕಾರವು ಕಳೆದ ಕೆಲದಿನಗಳಿಂದಲೂ ಸಚಿವ ಸಂಪುಟ ಬದಲಾವಣೆಯ ಬಗ್ಗೆ ಚಿಂತನೆ ನಡೆಸುತ್ತಿತ್ತು. ಅದರಂತೆ ಇದೀಗ ವಿತ್ತಸಚಿವರ ಸ್ಥಾನಕ್ಕೆ ತೆಂಗಂ ತೆನ್ನೆರಸು ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಮನ್ನಾರ್‌ಗುಡಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿರುವ ಟಿಆರ್‌ಬಿ ರಾಜಾ ಅವರನ್ನು ಸಂಪುಟಕ್ಕೆ ಹೊಸ ಸೇರ್ಪಡೆಮಾಡಿಕೊಳ್ಳಲಾಗಿದೆ. ಅವರಿಗೆ ಕೈಗಾರಿಕಾ ಖಾತೆಯನ್ನು ನೀಡಲಾಗಿದೆ.

ಇನ್ನು ಹಣಕಾಸು ಹಾಗೂ ಮಾನವಸಂಪನ್ಮೂಲ ಖಾತೆಯಿಂದ ಹೊರಬಂದಿರುವ ಪಿಟಿಆರ್‌ ಇನ್ನುಮುಂದೆ ಐಟಿ ಖಾತೆಯನ್ನು ನಿರ್ವಹಿಸಲಿದ್ದು, ಈ ಹಿಂದೆ ಟಿ.ಮನೋತಂಗರಾಜ್‌ ಈ ಖಾತೆ ನಿರ್ವಹಿಸುತ್ತಿದ್ದರು. ಅವರಿಗೀಗ ಹಾಲು ಮತ್ತು ಡೇರಿ ಅಭಿವೃದ್ಧಿ ಇಲಾಖೆಯನ್ನು ವಹಿಸಲಾಗಿದೆ. 2021ರಿಂದೀಚೆಗೆ ಸ್ಟಾಲಿನ್‌ ನೇತೃತ್ವದ ಸಂಪುಟವನ್ನು ಇದು 2ನೇ ಬಾರಿಗೆ ಪುನಾರಚನೆ ಮಾಡಲಾಗಿದೆ. ಇತ್ತೀಚೆಗಷ್ಟೇ ಡಿಎಂಕೆ ಪಕ್ಷದ ಕಾರ್ಯವೈಖರಿಯನ್ನು ಹಾಗೂ ಸ್ಟಾಲಿನ್‌ ಪುತ್ರರಾದ ಉದಯನಿಧಿ ಸ್ಟಾಲಿನ್‌ ಅವರನ್ನು ಪಿಟಿಆರ್‌ ತೆಗಳಿದ್ದ ಆಡಿಯೊ ವಿವಾದಕ್ಕೀಡಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next