Advertisement

Kadaba: ಹೊಳೆಗೆ ಸ್ನಾನ ಮಾಡಲು ಹೋದ ವ್ಯಕ್ತಿ ನೀರುಪಾಲು

11:14 PM Nov 15, 2023 | Team Udayavani |

ಕಡಬ/ಉಪ್ಪಿನಂಗಡಿ: ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಗುಂಡ್ಯ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ರೆಂಜಾಳ ನಿವಾಸಿ ಸೋಮಶೇಖರ (34) ಅವರು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ದೀಪಾವಳಿ ಹಿನ್ನೆಲೆಯಲ್ಲಿ ಮಡಿಕೇರಿಯ ಸಂಬಂಧಿಕರು ಸೋಮಶೇಖರನ ಮನೆಗೆ ಬಂದಿದ್ದರು. ಅವರನ್ನೂ ಸೇರಿಸಿಕೊಂಡು ಸೋಮಶೇಖರ, ಪತ್ನಿ, ತಮ್ಮ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಮಂಗಳವಾರ ಹೊಳೆಯಲ್ಲಿ ಸ್ನಾನ ಮಾಡಲೆಂದು ತೆರಳಿದ್ದರು. ಆ ಸಂದರ್ಭ ಸೋಮಶೇಖರ ಕಾಲು ಜಾರಿ ನೀರಿಗೆ ಬಿದ್ದಿದ್ದು, ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಹೋಗಿದ್ದಾರೆ. ಸಹಾಯಕ್ಕೆ ಕೂಗಿಕೊಂಡರೂ ಆತನ ರಕ್ಷಣೆ ಮಾಡಲು ಜತೆಯಲ್ಲಿ ಇದ್ದವರಿಗೆ ಸಾಧ್ಯವಾಗಿಲ್ಲ. ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ಮೃತರ ಪತ್ನಿ ಭವ್ಯಾ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಈ ಹಿಂದೆ ಗುಂಡ್ಯ ಹಾಗೂ ಪೇರಡ್ಕದಲ್ಲಿ ಅಟೋ ಚಾಲಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ತನ್ನ ಸಂಬಂಧಿಕರೋರ್ವರ ಜಾಗದ ಉಸ್ತುವಾರಿ ನೋಡಿಕೊಂಡು ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next