Advertisement

ಆ ಭಾಷಣ ಕೇಳಿದ ಜನ ಜಗಳಕ್ಕೇ ಬಂದು ಬಿಟ್ಟರು!

09:53 AM Feb 05, 2020 | mahesh |

ಆ ರಾಜಕೀಯ ವ್ಯಕ್ತಿ ಕ್ಷಣಮಾತ್ರದಲ್ಲಿ ಇನ್ನೂಂದಿಬ್ಬರನ್ನು ಜೊತೆಯಾಗಿಸಿಕೊಂಡು, ಅಕ್ಷರಶಃ ಹಾಸ್ಟೆಲ್‌ಗೆ ದಾಳಿಯಿಟ್ಟರು. ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ಗಲಾಟೆಯೆಬ್ಬಿಸಿದರು. ಅದೇ ನೆಪದಲ್ಲಿ, ತಮಗೆ ಆಹ್ವಾನವಿಲ್ಲದ್ದನ್ನು ಪ್ರಸ್ತಾಪಿಸಿ, ಅದು ಶಿಷ್ಟಾಚಾರದ ಉಲ್ಲಂಘನೆ ಎಂದೂ ವಾರ್ಡನ್‌ರನ್ನು ತರಾಟೆಗೆ ತೆಗೆದು ಕೊಂಡಾಗ ನಾವೆಲ್ಲರೂ ನಿಂತಲ್ಲೇ ಬೆವತುಹೋದೆವು. ಅಲ್ಲಿ ಉಂಟಾದ ಗೊಂದಲದಿಂದಾಗಿ ನಮ್ಮ ಅತ್ಯುತ್ಸಾಹಕ್ಕೆ ತಣ್ಣೀರೆರಚಿದಂತಾಯಿತು.

Advertisement

ಹೈಸ್ಕೂಲ್‌ ಓದುವಾಗಿನ ದಿನಗಳವು. ಯಾವುದೇ ಆಚರಣೆಗಳಿದ್ದರೂ ಮೊದಲು ಕಾರ್ಕಳದ ಹಾಸ್ಟೆಲ್‌ನಲ್ಲಿ ಸರಳವಾಗಿ ಆಚರಿಸುತ್ತಿದ್ದೆವು. ಅದ್ದೂರಿಯಾಗಿ ಆಚರಿಸಲು ಶಾಲೆಗೆ ಹೋಗುತ್ತಿದ್ದೆವು. ಸಭಾ ಕಾರ್ಯಕ್ರಮ, ಮೈಕ್‌ಸೆಟ್‌, ಭಾಷಣ, ಬಹುಮಾನ ವಿತರಣೆ, ಹಾಡು ಇತ್ಯಾದಿಗಳಲ್ಲಿ ಆಸಕ್ತಿಯಿದ್ದ ನನಗೆ, ಶಾಲೆಯಂತೆಯೇ ಹಾಸ್ಟೆಲ್‌ನಲ್ಲೂ ಒಂದು ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಏಕೆ ಮಾಡಬಾರದು? ಎಂಬ ಯೋಚನೆ ಬಂತು. ಅದನ್ನು ಸಮಾನ ಮನಸ್ಕ ಗೆಳೆಯರೊಂದಿಗೆ ಚರ್ಚಿಸಿ, ಆ ವರ್ಷ ಹಾಸ್ಟೆಲ್‌ನಲ್ಲಿ ಒಂದು ಕಾರ್ಯಕ್ರಮ ಮಾಡುವುದೆಂದು ನಿರ್ಧರಿಸಿದೆವು. ಶಾಲೆಯಲ್ಲಿ ಶಿಕ್ಷಕರು ಮಾಡಿದಂತೆ, ಇಲ್ಲಿ ಎಲ್ಲವನ್ನೂ ಮುಂದೆ ನಿಂತು ನಡೆಸಬೇಕೆಂಬ ಹುಕಿ ನಮಗೆ. ಅದಕ್ಕೆಲ್ಲಾ ಹೆಚ್ಚಿನ ಆರ್ಥಿಕ ನೆರವು ಸಿಗುತ್ತಿರಲಿಲ್ಲ. ಹೀಗಾಗಿ, ಒಂದಷ್ಟು ಹಣಕಾಸಿನ ವ್ಯವಸ್ಥೆ ಮಾಡಿಕೊಂಡೇ ಅನುಮತಿಗಾಗಿ ನಿಲಯಪಾಲಕರಿಗೆ ದುಂಬಾಲು ಬಿದ್ದೆವು. ಅವರು ನಮ್ಮ ಉತ್ಸಾಹವನ್ನು ಮೆಚ್ಚಿದರಾದರೂ ಸುಲಭಕ್ಕೆ ಅನುಮತಿಸಲಿಲ್ಲ. ಏನಾದರೂ ಸಮಸ್ಯೆಯಾದರೆ? ಎನ್ನುತ್ತಾ ಹಿಂದೇಟು ಹಾಕುತ್ತಿದ್ದ ಅವರನ್ನು, ಅಕ್ಷರಶಃ ಗೋಗರೆದು ಮನವೊಲಿಸುವಲ್ಲಿ ಯಶಸ್ವಿಯಾದೆವು.

ಸಭಾ ಕಾರ್ಯಕ್ರಮಕ್ಕಾಗಿ ಪುಟ್ಟ ಕೈಬರಹದ ಆಮಂತ್ರಣ ಪತ್ರಿಕೆ, ಹೂಗುಚ್ಛ, ಮೈಕ್‌ಸೆಟ್‌, ದೀಪ, ಸ್ಪರ್ಧೆಯ ರಿಸಲ್ಟ್ ಶೀಟ್, ಸಿಹಿ ತಿಂಡಿ, ಬಹುಮಾನಗಳು… ಹೀಗೆ ಎಲ್ಲವೂ ಹಂತಹಂತವಾಗಿ ಸಿದ್ಧಗೊಂಡವು. ಅತಿಥಿಗಳು ಯಾರೆನ್ನುವುದನ್ನೂ ನಿಶ್ಚಯಿಸಿದೆವು. ನಿರೂಪಣೆ, ವಂದನಾರ್ಪಣೆ, ಪ್ರಾರ್ಥನೆಗೆ ಯಾರ್ಯಾರು ಎಂದೂ ಫೈನಲ್‌ ಮಾಡಿದೆವು.

ಅಂತೂ ಕಾರ್ಯಕ್ರಮದ ದಿನ ಬಂದೇ ಬಿಟ್ಟಿತು. ಎಲ್ಲವೂ ನಮ್ಮದೇ ಉಸ್ತುವಾರಿ ಎಂಬ ಹೆಮ್ಮೆ ನಮಗೆ. ಖುಷಿಯ ಮಟ್ಟ ಹೆಚ್ಚಿರುವಂತೆ, ಮೈಕಿನ ಧ್ವನಿಯನ್ನು ತುಸು ಹೆಚ್ಚೇ ಇರಿಸಿದ್ದೆವು. ಅದು ಸುತ್ತಮುತ್ತಲಿನ ಜನರಿಗೆ ಕೇಳಿಸುವಂತಿತ್ತು. ನಾನು ಕಾರ್ಯಕ್ರಮದ ನಿರೂಪಕನಾಗಿದ್ದೆ, ನನ್ನ ಗೆಳೆಯರಿಗೆ ಮೈಕ್‌ನಲ್ಲಿ ಮಾತನಾಡುವ ಹುಮ್ಮಸ್ಸು ಹೆಚ್ಚಾಗಿ, ಒಬ್ಬೊಬ್ಬರಾಗಿ ಭಾರೀ ಭಾಷಣಗಳನ್ನು ಮಾಡಿ, ಕರತಾಡನವನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ಆಗಲೇ ಆ ಅನಿರೀಕ್ಷಿತ ಘಟನೆ ನಡೆದದ್ದು. ಮಾತನಾಡುವ ಹುಮ್ಮಸ್ಸಿನಲ್ಲಿ ಭಾಷಣಕಾರರೊಬ್ಬರು ವಿವಾದಿತ ಅಂಶವೊಂದನ್ನು ಪ್ರಸ್ತಾಪಿಸಿ ಬಿಟ್ಟರು. ಅದನ್ನು ನಾವ್ಯಾರೂ ಗಮನಿಸಿರಲಿಲ್ಲ. ಆದರೆ, ಮೈಕ್‌ನ ಸೌಂಡ್‌ ಜೋರಿದ್ದರಿಂದ, ಅದೇ ಸಮಯದಲ್ಲಿ, ಅದೇ ಮಾರ್ಗವಾಗಿ ಹೋಗುತ್ತಿದ್ದ, ಯಾವುದೋ ರಾಜಕೀಯ ಪಕ್ಷದ ಮುಖಂಡನಿಗೆ ಅದು ಕೇಳಿಸಿದ್ದೇ ದೊಡ್ಡ ಪ್ರಮಾದಕ್ಕೆ ಕಾರಣವಾಯಿತು.

ಅವರು ಕ್ಷಣಮಾತ್ರದಲ್ಲಿ ಇನ್ನೂಂದಿಬ್ಬರನ್ನು ಜೊತೆಯಾಗಿಸಿಕೊಂಡು, ಅಕ್ಷರಶಃ ಹಾಸ್ಟೆಲ್‌ಗೆ ದಾಳಿಯಿಟ್ಟರು. ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ಗಲಾಟೆಯೆಬ್ಬಿಸಿದರು. ಭಾಷಣದಲ್ಲಿ ಉಲ್ಲೇಖೀಸಿದ ಆ ನಿರ್ದಿಷ್ಟ ಅಂಶ ತಮ್ಮ ಪಕ್ಷದ ನಾಯಕನಿಗೆ ಮಾಡಿದ ಅವಮಾನ ಎಂದು ತೀವ್ರವಾಗಿ ಆಕ್ಷೇಪಿಸಿದರು. ಅದೇ ನೆಪದಲ್ಲಿ, ತಮಗೆ ಆಹ್ವಾನವಿಲ್ಲದ್ದಕ್ಕೆ ಅದು ಶಿಷ್ಟಾಚಾರದ ಉಲ್ಲಂಘನೆ ಎಂದೂ ವಾರ್ಡನ್‌ರನ್ನು ತರಾಟೆಗೆ ತೆಗೆದು ಕೊಂಡಾಗ ನಾವೆಲ್ಲರೂ ನಿಂತಲ್ಲೇ ಬೆವತುಹೋದೆವು. ಹೀಗಾಗಬಹುದೆಂಬ ಸಣ್ಣ ನಿರೀಕ್ಷೆಯೂ ನಮಗಿರಲಿಲ್ಲ. ಅಲ್ಲಿ ಉಂಟಾದ ಗೊಂದಲದಿಂದಾಗಿ ನಮ್ಮ ಅತ್ಯುತ್ಸಾಹಕ್ಕೆ ತಣ್ಣೀರೆರಚಿದಂತಾಯಿತು. ವಾರ್ಡನ್‌ ಅವರನ್ನು ಸಮಾಧಾನಪಡಿಸಿ ಎಲ್ಲವನ್ನೂ ತಿಳಿಗೊಳಿಸಲು ಯತ್ನಿಸುತ್ತಿದ್ದರೆ, “ಛೇ ಇದೆಲ್ಲಾ ನಮ್ಮಿಂದಲೇ ಆಯ್ತ?’ ಎಂಬ ಆತಂಕ ಒಳಗೊಳಗೇ ಕಾಡುತ್ತಿತ್ತು.

Advertisement

ತದನಂತರ ವಾರ್ಡನ್‌ಗೆ ಈ ಸಂಬಂಧ ನೋಟಿಸ್‌ ಜಾರಿಯಾಗಿ ಅದಕ್ಕೆ ವಿವರಣೆ ನೀಡಬೇಕಾಯಿತು. ಹಾಗಂತ, ಅವರೇನು ನಮ್ಮನ್ನು ದೂಷಿಸಲಿಲ್ಲ. “ನೋಡಿದಿರಲ್ಲ, ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವಾಗ ತುಂಬಾ ಎಚ್ಚರಿಕೆ ಅಗತ್ಯ’ ಎಂದು ತಿಳಿ ಹೇಳಿದ್ದು ಇಂದಿಗೂ ನಮ್ಮ ಬದುಕಿನ ದೊಡ್ಡ ಪಾಠವಾಗಿ ಉಳಿದುಕೊಂಡಿದೆ. ಈಗಲೂ ಯಾವುದೇ ಶಾಲಾ ಕಾರ್ಯಕ್ರಮ ಬಂದರೂ ಈ ಘಟನೆ ನೆನಪಾಗುತ್ತದೆ.

– ಸಂದೇಶ್‌ ಎಚ್‌. ನಾಯ್ಕ…, ಹಕ್ಲಾಡಿ. ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next