Advertisement

ಗಿರಿನಗರ ಜನರಿಗೆ ಕುಡಿಯಲು ಚರಂಡಿ ನೀರೇ ಗತಿ!

05:52 PM Sep 24, 2022 | Team Udayavani |

ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ವಾಸಿಸುವ ನಿವಾಸಿಗಳಿಗೆ ಮತ್ತು ನಿತ್ಯ ಕೆಲಸಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ಶುದ್ಧ ಕುಡಿವ ನೀರೊದಗಿಸುವ ಸಮಸ್ಯೆಯೇ ದೊಡ್ಡ ಚಿಂತೆಯಾಗಿದೆ.

Advertisement

ಶುದ್ಧ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಚರಂಡಿ ನೀರು ಸೇರಿದ ನದಿಯಿಂದ ಮತ್ತೆ ಲಿಫ್ಟ್‌ ಮಾಡಿದ ನೀರನ್ನೇ ಶುದ್ಧೀಕರಿಸಿ ಬಿಡುತ್ತಿರುವುದರಿಂದ ಅನಿವಾರ್ಯವಾಗಿ ಸಾರ್ವಜನಿಕರು ಅದೇ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಒಳಚರಂಡಿ ನಿರ್ಮಾಣವಾಗಿದ್ದರೂ ಅಲ್ಲಿನ ಕೊಳಚೆ ನೀರಿಗೆ ಸಂಸ್ಕರಣಾ ಘಟಕ ಇಲ್ಲದ್ದರಿಂದ ನಗರದ ಹೃದಯ ಭಾಗದ ಹಳ್ಳದ ಮೂಲಕ ಭೀಮಾ ನದಿ ಸೇರಿ ಅಲ್ಲಿಂದ ಮತ್ತೆ ಹಳ್ಳದ ಕೆಳಹಂತದಲ್ಲಿ ನಿರ್ಮಿಸಿರುವ ಯಾದಗಿರಿ ನಗರ ನೀರು ಶುದ್ಧೀಕರಣ ಘಟಕಕ್ಕೆ ಸೇರಿ ಮಲೀನ ನೀರು ಮತ್ತೆ ಜನರ ಒಡಲು ಸೇರುತ್ತಿದೆ.

ಇತ್ತೀಚೆಗೆ ಸಮಸ್ಯೆ ಗಮನಕ್ಕೆ ಬಂದಿದ್ದರಿಂದ ಸ್ವತಃ ಯಾದಗಿರಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು ಚರಂಡಿ ನೀರು ಹಳ್ಳಕ್ಕೆ ಸೇರುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ನಗರಸಭೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಕ್ರಮಕ್ಕೆ ಸೂಚಿಸಿದ್ದರೂ ಇಲ್ಲಿವರೆಗೆ ಯಾವುದೇ ಕ್ರಮವಾಗಿಲ್ಲದಿರುವುದು ವಿಪರ್ಯಾಸ.

ಸುಪ್ರೀಂ ಆದೇಶಕ್ಕೂ ಡೋಂಟ್‌ ಕೇರ್‌: ಚರಂಡಿ ನೀರು ಸಂಸ್ಕರಿಸದೇ ಯಾವುದೇ ಕಾರಣಕ್ಕೂ ಹಳ್ಳ-ಕೊಳ್ಳ, ನದಿ ಸೇರಿದಂತೆ ಜಲಮೂಲಗಳಿಗೆ ಬಿಡಬಾರದೆಂಬ ಸುಪ್ರೀಂಕೋರ್ಟ್‌ ಆದೇಶ ಇಲ್ಲಿನ ನಗರಸಭೆ ಗಾಳಿಗೆ ತೂರಿದಂತಿದೆ. ಚರಂಡಿ ನೀರು ಜಲಮೂಲ ಸೇರುವುದರಿಂದ ಅಲ್ಲಿನ ಜಲಚರಗಳು ಸಾವನ್ನಪ್ಪುವ ಜೊತೆಗೆ ಜನ-ಜಾನುವಾರುಗಳು ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವವಿದೆ. ಜನರ ಬಗ್ಗೆ ಕಾಳಜಿ ವಹಿಸಬೇಕಾದ ನಗರಾಡಳಿತ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ.

Advertisement

ಚರಂಡಿ ನೀರಿನ ಸಂಸ್ಕರಣಾ ಘಟಕ ಎಲ್ಲಿ?: ಯಾದಗಿರಿ ನಗರಕ್ಕೆ ಶುದ್ಧ ಕುಡಿವ ನೀರಿನ ಘಟಕಗಳಿಲ್ಲ. ಜೊತೆಗೆ ನಗರದಿಂದ ಹೊರಹೋಗುವ ಚರಂಡಿ ನೀರು ಸಂಸ್ಕರಿಸಲು ಯಾವುದೇ ಸಂಸ್ಕರಣಾ ಘಟಕಗಳು ಇಲ್ಲದ್ದರಿಂದ ಮಲೀನ ನೀರು ಜನರ ಒಡಲು ಸೇರಲು ಇಲ್ಲಿನ ನಗರಾಡಳಿತ- ಜಿಲ್ಲಾಡಳಿತಗಳ ನಿರ್ಲಕ್ಷ್ಯವೇ ಕಾರಣವೆಂದು ಸಾರ್ವಜನಿಕರು ದೂರುತ್ತಿದ್ದಾರೆ.

ಜನರಿಗೆ ಕುಡಿಯಲು ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕ ಹಳ್ಳದ ಕೆಳಗಡೆ ಇರುವುದರಿಂದ ನಗರದ ಹೃದಯ ಭಾಗದಲ್ಲಿರುವ ಹಳ್ಳ ಸೇರಿದ ಚರಂಡಿ ಮಲೀನ ನೀರು ತನ್ನಿಂದ ತಾನೇ ನೀರು ಶುದ್ಧೀಕರಣ ಘಟಕ ಸೇರುತ್ತದೆ. ಚರಂಡಿ ನೀರು ನೇರವಾಗಿ ಹಳ್ಳದಿಂದ ಭೀಮಾ ನದಿಗೆ ಹರಿಯುತ್ತಿದ್ದರಿಂದ ಹಳ್ಳಕ್ಕೆ ಸೇರುವ ಮುನ್ನ ಚರಂಡಿ ನೀರು ಸಂಸ್ಕರಿಸುವ ಘಟಕ ಇಲ್ಲದಿರುವುದರಿಂದ ಮಲೀನ ನೀರು ಎಷ್ಟು ಬಾರಿ ಶುದ್ಧೀಕರಿಸಿದರೂ ಅದರಿಂದ ಉತ್ತಮ ನೀರು ಕೊಡಲು ಸಾಧ್ಯವಿಲ್ಲ ಎನ್ನುವುದು ಜನರ ಅಭಿಪ್ರಾಯ.

ನಗರದಲ್ಲಿ ಹರಿಯುವ ಚರಂಡಿ ನೀರು ಒಂದೆಡೆ ಸಂಗ್ರಹಿಸಿ ನೀರು ಪುನರ್‌ ಬಳಕೆಗೆ ಯೋಗ್ಯವನ್ನಾಗಿ ಮಾಡಬೇಕು. ಆಗ ಮಾತ್ರ ಚರಂಡಿ ನೀರು ಭೀಮಾ ನದಿಗೆ ನೇರವಾಗಿ ಸೇರುವುದಿಲ್ಲ. ವಾರಕ್ಕೊಮ್ಮೆ ನಗರಸಭೆ ವತಿಯಿಂದ ಚರಂಡಿ ಸ್ವತ್ಛಗೊಳಿಸಬೇಕು. ಮಳೆ ಬಂದಾಗ ಚರಂಡಿ ನೀರಿನೊಂದಿಗೆ ಘನ ತ್ಯಾಜ್ಯವೂ ಭೀಮಾ ನದಿ ಸೇರುತ್ತದೆ. ಅದೇ ಮಲೀನ ನೀರು ಮತ್ತೆ ನಗರಕ್ಕೆ ಸರಬರಾಜು ಆಗುತ್ತಿರುವುದು ಕಳವಳಕಾರಿ. -ಉಮೇಶ ಮುದ್ನಾಳ, ಜಿಲ್ಲಾಧ್ಯಕ್ಷರು, ಟೋಕರಿ ಕೋಲಿ ಸಮಾಜ, ಯಾದಗಿರಿ

-ಮಹೇಶ ಕಲಾಲ

Advertisement

Udayavani is now on Telegram. Click here to join our channel and stay updated with the latest news.

Next