ಎಚ್.ಡಿ.ಕೋಟೆ: ರಾಜ್ಯ ಮತ್ತು ತಾಲೂಕು ಜೀವನಾಡಿಗಳಲ್ಲೊಂದಾದ ಕಬಿನಿ ಜಲಾಶಯ ಮುಂಗಾರು ಕೈಕೊಟ್ಟ ಕಾರಣ ಭರ್ತಿಯಾಗದೆ ತಾಲೂಕಿನ ರೈತಾಪಿ ವರ್ಗದಲ್ಲಿ ಆತಂಕ ಮೂಡಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜುಲೈ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗದೆ ರುವುದು.
ತಾಲೂಕಿನ ಗಡಿಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಕೇರಳದ ವೈನಾಡು ಪ್ರದೇಶದಲ್ಲಿ ಮಳೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದ್ದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕುಂಠಿತಗೊಂಡಿದ್ದರಿಂದ ಜಲಾಶಯ ಇನ್ನೂ ಭರ್ತಿಯಾಗಿಲ್ಲ.
ಇದರಿಂದಾಗಿ ಈ ಜಲಾಶಯದ ನೀರನ್ನೇ ನಂಬಿರುವ ಎಚ್.ಡಿ.ಕೋಟೆ, ನಂಜನಗೂಡು, ಯಳಂದೂರು, ಕೋಳ್ಳೆಗಾಲ, ನರಸೀಪುರ ಇನ್ನಿತರ ಭಾಗದ ಲಕ್ಷಾಂತರ ರೈತರ ಜಮೀನುಗಳಿಗೆ ನೀರು ಪೂರೈಕೆಯಾಗದೆ ಅವರು ಬೆಳೆ ಬೆಳೆಗಳೆಲ್ಲ ಒಣಗುವ ಹಂತಕ್ಕೆ ಬಂದಿವೆ.
ನೀರಿನ ಮಟ್ಟ: ಜಲಾಶಯದ ಗರಿಷ್ಠ ಮಟ್ಟ 84 ಅಡಿಗಳಿಗೆ ಇಲ್ಲಿಯವರೆಗೆ ಕೇವಲ 66 ಅಡಿಗಳಷ್ಟು ನೀರು ಮಾತ್ರ ಶೇಖರಣೆಯಾಗಿದ್ದು, ಜಲಾಶಯದ ಒಳಹರಿವು 5 ಸಾವಿರ ಹಾಗೂ ಹೊರ ಹರಿವು 2 ಸಾವಿರವಿದೆ. ಇನ್ನೂ ಎಡ ಮತ್ತು ಬಲ ದಂಡೆ ನಾಲೆಗಳ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಬೆಳೆ ಬೆಳೆಯಲು ನೀರು ಹರಿಸಬೇಕಾದರೆ ಸುಮಾರು 71 ಅಡಿಗಳಷ್ಟು ನೀರು ಶೇಖರಣೆಯಾಗಿರಬೇಕು.
ರೈತರ ಕನಸು ಮರೀಚಿಕೆ: ಈ ಜಲಾಶಯ ವ್ಯಾಪ್ತಿಯ ರೈತರುಗಳಿಗೆ ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿ ನೀರನ್ನು ಹರಿಸದೆ ಇರುವ ಹಿನ್ನಲೆ ರೈತರು ವರ್ಷದಿಂದ ವರ್ಷಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು, ರೈತರು ಈ ವರ್ಷವಾದರೂ ಜಮೀನುಗಳಲ್ಲಿ ಉತ್ತಮ ಬೆಳೆ ಬೆಳೆದು ಎದುರಾದ ಸಂಕಷ್ಟವನ್ನು ನಿವಾರಿಸಿಕೊಳ್ಳಬಹುದೆಂಬ ಅಶಾಭಾವನೆಯಿಂದಿದ್ದ ರೈತರ ಕನಸು ಮರೀಚಿಕೆಯಾಗಿದೆ.
ಅಧಿಕಾರಿಗಳು ನೀರನ್ನು ತಮಿಳುನಾಡಿಗೆ ಬಿಡದೆ ಶೇಖರಣೆ ಮಾಡಿಟ್ಟು ಕೊಂಡಿದ್ದರೇ 75 ಅಡಿಗಳಿಗೂ ಹೆಚ್ಚಿನ ನೀರು ಶೇಖರಣೆಯಾಗಿರುತ್ತಿತ್ತು. ಈ ಭಾಗದ ಜಮೀನುಗಳಿಗೆ ನೀರನ್ನು ಬಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬಹುದಿತ್ತು. ಆದರೆ ಈಗ ಏನು ಮಾಡದ ಪರಿಸ್ಥಿತಿ ಎದುರಾಗಿ ರೈತರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗದೆ ಇದ್ದರೆ ಜಲಾಶಯ ಭರ್ತಿಯಾಗದೆ ನೀರಿನ ಛಾಯೆ ಎದುರಾಗಿ ರೈತರು ಜಾನುವಾರುಗಳು ಮತ್ತು ಹಿನ್ನೀರಿನ ವ್ಯಾಪ್ತಿಯಲ್ಲಿನ ವನ್ಯಜೀವಿಗಳಿಗೂ ಹಾಗೂ ಬೆಂಗಳೂರು ಮತ್ತು ಮೈಸೂರು ಜನರಿಗೂ ಸೇರಿದಂತೆ ಕುಡಿಯುವ ನೀರಿಗಾಗಿ ಹಾ ಹಾಕಾರವಾಗುವುದು ಖಂಡಿತಾ.
* ಬಿ.ನಿಂಗಣ್ಣಕೋಟೆ