Advertisement

ಕುಂಬಳೆ: ಎಂಟು ಮಕ್ಕಳನ್ನು ಹೆತ್ತು ಹೊತ್ತ ತಾಯಿಯ ಕರುಣಾಜನಕ ಕ(ವ್ಯ)ಥೆ !

11:47 PM Jul 27, 2019 | sudhir |

ಕುಂಬಳೆ : ಕುಂಬಳೆ ಗ್ರಾಮ ಪಂಚಾಯತ್‌ನ ಲಕ್ಷಂವೀಡು ಕಾಲನಿಯಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ಸರಕಾರದ ಲಕ್ಷಮನೆ ಯೋಜನೆಯಲ್ಲಿ ಲಭಿಸಿದ ಅದೇ ಮುರುಕು ಮನೆಯಲ್ಲಿ ವಿಧವೆಯಾಗಿರುವ ಎಂಭತ್ತೇಳರ ಹರೆಯದ ಪರಿಶಿಷ್ಟ ವರ್ಗದ ಚಮ್ಮಾರ ಸಮುದಾಯದ ದೇವಕಿ ಅಮ್ಮ ತನ್ನ ಓರ್ವ ಅಶಕ್ತೆ ಪುತ್ರಿಯೊಂದಿಗೆ ವಾಸಿಸುತ್ತಿರುವರು..

Advertisement

ಅತ್ಯಂತ ದುರ್ಬಲವಾಗಿರುವ ಎರಡು ಕೋಣೆಯ ಹಂಚು ಹಾಸಿದ ಕಲ್ಲು ಮಣ್ಣಿನ ಗೋಡೆಯಿಂದ ನಿರ್ಮಿಸಿದ ಹರುಕುಮುರುಕು ಮನೆಯೊಳಗೆ ಗಾಳಿ ಮಳೆಗೆ ಯಾವ ಕ್ಷಣದಲ್ಲೂ ಧರಾಶಾಯಿಯಾಗುವ ಭಯ,ಆತಂಕದಲ್ಲಿ ಇವರಿಬ್ಬರು ದಿನ ಕಳೆಯುತ್ತಿರುವರು. ಶೌಚಾಲಯ, ನೀರು ಮತ್ತು ವಿದ್ಯುತ್ತಿನ ಸಂಪರ್ಕವೂ ಇಲ್ಲದ ಈ ಮನೆಯಲ್ಲಿ ಮಾನಸಿಕ ಅಸ್ವಸ್ಥೆ, ಅರ್ಬುದ ರೋಗ ಪೀಡಿತೆ 45ರ ಹರೆಯದ ಪುತ್ರಿಯೊಂದಿಗೆ ದೇವಕಿ ಜೀವನ ಸಾಗಿಸುತ್ತಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ದೇವಕಿ ಅಮ್ಮ ಮತ್ತು ಪುತ್ರಿಗೆ ಲಭಿಸುವ ಸರಕಾರದ ಕೇವಲ ಪಿಂಚಣಿ ಯೇ ಇವರ ಜೀವನಕ್ಕೆ ಆಧಾರವಾಗಿದೆ. ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಕೈಸೇರುವ ಪಿಂಚಣೆಯಲ್ಲಿ ಔಷಧಿ ಸಹಿತ ತಮ್ಮ ಇತರ ಎಲ್ಲ ಖರ್ಚುವೆಚ್ಚಗಳನ್ನು ಸರಿದೂಗಿಸಬೇಕಾಗಿದೆ.

ನಾಲ್ಕು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳನ್ನು ಹೆತ್ತ ತಾಯಿಯಾಗಿದ್ದರೂ ತನ್ನ ಬುದ್ಧಿಮಾಂದ್ಯ ಮಗಳನ್ನು ಕರೆದುಕೊಂಡು ಮಕ್ಕಳ ಜೊತೆ ವಾಸಿಸಲು ಒಪ್ಪದೆ ಈ ಮನೆಯಲ್ಲಿಯೇ ನೆಲೆಸಿರುವರು.ಇತರ ಮಕ್ಕಳೆಲ್ಲರಿಗೂ ಮದುವೆಯಾಗಿದ್ದು ಕುಟುಂಬ ಸಮೇತ ಪರವೂರಿನಲ್ಲಿ ನೆಲೆಸಿದ್ದಾರೆ. ನಾಲ್ವರು ಗಂಡು ಮಕ್ಕಳಲ್ಲಿ ಓರ್ವ ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟು ಇತರ ಮೂರು ಮಂದಿ ಕೂಲಿ ನಾಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವರು.

ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಮನೆಯಲ್ಲಿ ತಾಯಿಯೊಂದಿಗಿರಲು ಯಾವ ಮಕ್ಕಳೂ ಸಿದ್ಧರಿಲ್ಲ. ನಿತ್ಯವೂ ನೀರಿಗಾಗಿ ಅಕ್ಕ ಪಕ್ಕದ ಮನೆಯವರ ಕೊಳವೆ ಬಾವಿ ಅಥವಾ ದೂರದಲ್ಲಿರುವ ಸಾರ್ವಜನಿಕ ಬಾವಿಯನ್ನು ಆಶ್ರಯಿಸಬೇಕಾಗಿದೆ. ಮೇಲ್ಛಾವಣಿ ಮತ್ತು ಭದ್ರವಾದ ಬಾಗಿಲು ಇಲ್ಲದ ಬಚ್ಚಲು ಮನೆಯನ್ನು ಸ್ಥಾನಕ್ಕೆ ಬಳಸಬೇಕು. ಕತ್ತಲೆಯ ಬದುಕಿನ ಬೆಳಕಿಗೆ ಸೀಮೆ ಎಣ್ಣೆಯ ದೀಪವೇ ಗತಿ.

Advertisement

2016ರಲ್ಲಿ ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಯಲ್ಲಿ ಎಲ್ಲ ಮನೆಗೂ ಶೌಚಾಲಯ ನಿರ್ಮಿಸಲು ಅನುದಾನಕ್ಕೆ ಅರ್ಹರಾದ ಫಲಾನುಭವಿ ಪಟ್ಟಿಯಲ್ಲಿ ದೇವಕಿಯಮ್ಮನ ಹೆಸರು ಸೇರ್ಪಡೆಗೊಂಡಿದ್ದರೂ ಈ ವೇಳೆ ತನ್ನ ಅಸೌಖ್ಯ ಪೀಡಿತ ಮಗಳ ಚಿಕಿತ್ಸೆಗಾಗಿ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣಕ್ಕೆ ಅದರಿಂದ ಅವರು ವಂಚಿತರಾಗಿರುವರು.

ಕಳೆದ ವರ್ಷ ವಾರ್ಡು ಸದಸ್ಯೆ ಪುಷ್ಪಲತಾ ಶಾಂತಿಪಳ್ಳ ಇವರ ಮುತುವರ್ಜಿಯಿಂದ ಕೇಂದ್ರ ಸರಕಾರ ಉಜ್ವಲ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಗ್ರಾಮ ಪಂಚಾಯತ್‌ ವತಿಯಿಂದ ಮಂಚವೂ ಲಭಿಸಿರುವುದಾಗಿ ದೇವಕಿ ಅಮ್ಮ ಕೃತಜ್ಞತೆಯಿಂದ ನೆನೆಯುತ್ತಾರೆ.

ಆದರೆ ಎಲ್ಲಕ್ಕಿಂತ ಮುಖ್ಯವಾಗಿ ವಾಸಯೋಗ್ಯವಾಗಿರುವ ಸುಸಜ್ಜಿತ ಮನೆಯೊಂದು ದೇವಕಿ ಮತ್ತು ಅವರ ಪುತ್ರಿಯ ತುರ್ತು ಆವಶ್ಯಕತೆಯಾಗಿದೆ. ಇದಕ್ಕಾಗಿ ದೇವಕಿ ಅಮ್ಮನ ಕುಟುಂಬದ ಹಿತಚಿಂತಕರಾದ ಕೆಲವುಯುವಕರು ಸೇರಿ ಸ್ಥಳೀಯ ಗ್ರಾಮ ಪಂಚಾಯತ್‌ ಸದಸ್ಯೆಯ ನೇತೃತ್ವದಲ್ಲಿ ಸಾರ್ವಜನಿಕ,ಉದಾರ ದಾನಿಗಳ ಆರ್ಥಿಕ ನೆರವಿನಿಂದ ಮೂಲಭೂತ ಸೌಕರ್ಯಗಳೊಂದಿಗೆ ಚಿಕ್ಕ ಚೊಕ್ಕದಾದ ಮನೆಯೊಂದನ್ನು ನಿರ್ಮಿಸಿಕೊಡಲು ಮತ್ತು ಅವರಿಬ್ಬರ ಕಾಯಿಲೆಗೆ ಔಷಧಿ,ಚಿಕಿತ್ಸೆ ಪಡೆಯಲು ಶಾಶ್ವತ ನಿಧಿ ಸಂಗ್ರಹಿಸಲು ಮುಂದಾಗಿರುವರು.

ಇದಕ್ಕೆ ಊರ ಪರವೂರ ಸಹೃದಯಿ ದಾನಿಗಳ, ಸಂಘ, ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಕಾರ ಆಗತ್ಯವಿದ್ದು ಆರ್ಥಿಕ ಸಹಾಯ ನೀಡಲಿಚ್ಚಿಸುವವರು ದೇವಕಿ ಅವರ ಖಾತೆ ಶ್ರೀಮತಿ ದೇವಕಿ ಡಿ/ಟ ತನಿಯನಾಯ್ಕ ಕೇರಳ ಗ್ರಾಮೀಣ ಬ್ಯಾಂಕ್‌,ಕುಂಬಳೆ ಶಾಖೆ SB A/c No 40517101045019-IFSC KLGB0040517 ಖಾತೆಗೆ ಪಾವತಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next