Advertisement

ಕಾಪು ತಾಲೂಕಿನಲ್ಲಿ ಪ್ರಥಮ ಲೋಕಸಭಾ ಚುನಾವಣೆಗೆ ಸಿಬಂದಿ ಸಜ್ಜು

11:41 PM Apr 17, 2019 | sudhir |

ಕಾಪು : ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಕಾಪು ತಾಲೂಕು ಆಗಿ ಪರಿವರ್ತನೆಗೊಂಡ ಬಳಿಕ ಪೂರ್ಣ ಪ್ರಮಾಣದ ಸಿದ್ಧತೆಯೊಂದಿಗೆ ಪ್ರಥಮ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಿಬಂದಿಗಳು ಸಕಲ ಸಿದ್ಧತೆಗಳೊಂದಿಗೆ ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಯ ಮಸ್ಟರಿಂಗ್‌ ಕೇಂದ್ರದಿಂದ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಬುಧವಾರ ತೆರಳಿದರು.

Advertisement

ಕರ್ತವ್ಯಕ್ಕೆ ಬೀಳ್ಕೊಟ್ಟ ಜಿಲ್ಲಾಧಿಕಾರಿ
ಚುನಾವಣಾ ಸಿಬಂದಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಕಾಪು ದಂಡತೀರ್ಥ ಮಸ್ಟರಿಂಗ್‌ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ| ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು, ಚುನಾವಣಾಧಿಕಾರಿಗಳೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಿ ಮತಗಟ್ಟೆ ಕೇಂದ್ರಗಳಿಗೆ ತೆರಳುವ ಸಿಬಂದಿಗಳನ್ನು ವಿವಿ ಪ್ಯಾಟ್‌, ಬ್ಯಾಲೆಟ್‌,ಕಂಟ್ರೋಲ್‌ ಯುನಿಟ್‌ಗಳೊಂದಿಗೆ ಕರ್ತವ್ಯಕ್ಕೆ ತೆರಳಲು ಬೀಳ್ಕೊಟ್ಟರು.

ಕಾಪು ತಾಲೂಕಿನ ಪ್ರಥಮ ಚುನಾವಣೆ
ಕಾಪು ಪ್ರತ್ಯೇಕ ತಾಲೂಕು ಕೇಂದ್ರವಾಗಿ ರೂಪುಗೊಂಡ ಬಳಿಕ ನಡೆಯುತ್ತಿರುವ ಪ್ರಥಮ ಲೋಕಸಭಾ ಚುನಾವಣೆ ಇದಾಗಿದೆ. ತಾಲೂಕಾಗಿ ಪೂರ್ಣ ಪ್ರಮಾಣದಲ್ಲಿ ಕಾಪುವಿನಲ್ಲೇ ಮಸ್ಟರಿಂಗ್‌ ಕೇಂದ್ರವನ್ನು ತೆರೆದು, ಅಧಿಕಾರಿಗಳು ಮತ್ತು ಸಿಬಂದಿಗೆ ತರಬೇತಿ ನೀಡಿ ಕರ್ತವ್ಯಕ್ಕೆ ಕಳುಹಿಸಿಕೊಡುತ್ತಿರುವುದು ಇದೇ ಪ್ರಥಮವಾಗಿದೆ.

ಜಿಲ್ಲೆಯ 4 ಕ್ಷೇತ್ರಗಳಲ್ಲಿ 4,000 ಸಿಬಂದಿ ನಿಯೋಜನೆ
ಕಾಪು ದಂಡತೀರ್ಥ ವಿದ್ಯಾಸಂಸ್ಥೆಯ ಮಸ್ಟರಿಂಗ್‌ ಕೇಂದ್ರಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಡಾ| ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಮಾತನಾಡಿ, ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಕಾಪು, ಕುಂದಾಪುರ, ಉಡುಪಿ ಮತ್ತು ಕಾರ್ಕಳ ಕ್ಷೇತ್ರಗಳಲ್ಲಿ ಗುರುವಾರ ನಡೆಯುವ ಲೋಕಸಭಾ ಚುನಾವಣೆಗಾಗಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 4 ಕ್ಷೇತ್ರಗಲ್ಲಿ ಒಟ್ಟು 4,000 ಸಿಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಮತಗಟ್ಟೆ ಸಿಬಂದಿಗಳು ಬುಧವಾರ ಬೆಳಗ್ಗಿನಿಂದಲೇ ಮಸ್ಟರಿಂಗ್‌ ಕೇಂದ್ರದಲ್ಲಿ ಹಾಜರಿದ್ದು, ಸಂಜೆಯ ವೇಳೆಗೆ ಎಲ್ಲಾ ಮತದಾನ ಕೇಂದ್ರಗಳಿಗೆ ತಲುಪಿ ಮತದಾನ ಪ್ರಕ್ರಿಯೆಯನ್ನು ಸಾಂಗವಾಗಿ ನಡೆಸಲು ಸನ್ನದ್ಧರಾಗಿದ್ದಾರೆ. ಮತದಾನ ಕೇಂದ್ರಗಳಲ್ಲಿ ಚುನಾವಣಾ ಕರ್ತವ್ಯ ನಡೆಸುವ ಅಧಿಕಾರಿಗಳಿಗೆ ಮತ್ತು ಸಿಬಂದಿಗೆ ಚುನಾವಣ ಸಿದ್ಧತೆ ಬಗ್ಗೆ ಚುನಾವಣಾಧಿಕಾರಿಗಳ ಮೂಲಕ ಮಾಹಿತಿ ಕೊಡಲಾಗುತ್ತದೆ. ಈಗಾಗಲೇ ಮೂರು ಹಂತದಲ್ಲಿ ತರಬೇತಿ ನೀಡಲಾಗಿದೆ ಎಂದರು.

Advertisement

ಕಾಪು ಕ್ಷೇತ್ರದ 208 ಮತಗಟ್ಟೆಗಳಿಗೆ 1248 ಸಿಬಂದಿ ನಿಯೋಜನೆ
ಕಾಪು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ| ನಾಗರಾಜ್‌ ಮಾತನಾಡಿ, ಕಾಪು ವಿಧಾನಸಭಾ ಕ್ಷೇತ್ರದ 208 ಮತಗಟ್ಟೆಗಳ ಒಳಗೆ 1248 ಮಂದಿ ಸಿಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಮತಗಟ್ಟೆಗಳಿಗೆ ತೆರಳಿದ್ದಾರೆ. ಎಲ್ಲಾ ಕಡೆ ಪೊಲೀಸ್‌ ಭದ್ರತೆ ನಡೆಸಲಾಗಿದೆ. ಚುನಾವಣ ಕರ್ತವ್ಯ ನಿರ್ವಹಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

325 ಪೊಲೀಸರ ನಿಯೋಜನೆ
ಕಾಪು ವಿಧಾನಸಭಾ ಕ್ಷೇತ್ರದಲ್ಲಿ 32 ಅತೀ ಸೂಕ್ಷ್ಮ, 64 ಸೂಕ್ಷ್ಮ ಮತ್ತು 112 ಸಾಮಾನ್ಯ ಮತಗಟ್ಟೆಗಳಿವೆ. ಒಟ್ಟು 325 ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, 1 ಎಎಸ್‌ಪಿ, 1 ಡಿವೈಎಸ್ಪಿ, 3 ಸಿಪಿಐ, 5 ಪಿಎಸ್‌ಐ, 9 ಎಎಸ್‌ಐಗಳು ಕರ್ತವ್ಯ ನಿರ್ವಹಿಸಲಿದ್ದಾರೆ. 16 ಮಂದಿ ಪ್ಯಾರಾ ಮಿಲಿಟರಿ ಫೋರ್ಸ್‌ ಸಿಬಂದಿ, 1 ಕೆಎಸ್‌ಆರ್‌ಪಿ ತುಕಡಿ, 1 ಡಿಎಆರ್‌ ತುಕಡಿ ಬಂದೋಬಸ್ತ್ಗಾಗಿ ನಿಯೋಜಿತವಾಗಿದೆ. ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ನಾಲ್ಕು ಮತಗಟ್ಟೆಗಳಿದ್ದು, ಇದನ್ನು ಕ್ರಿಟಿಕಲ್‌ ಬೂತ್‌ ಎಂದು ಪರಿಗಣಿಸಿ ವಿಶೇಷ ಬಂದೋಬಸ್ತ್ ಏರ್ಪಡಿಸಲಾಗಿದೆ.

ಶೇ. 80ಕ್ಕೂ ಅಧಿಕ ಮತದಾನದ ನಿರೀಕ್ಷೆ
ಉಡುಪಿ ಜಿಲ್ಲೆಯಲ್ಲಿ ಪ್ರತೀ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಬಾರಿ ಕೂಡಾ ಶೇ. 80ಕ್ಕೂ ಅಧಿಕ ಮತದಾನದ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಸ್ವೀಪ್‌ ಮುಖಾಂತರ ವಿವಿದೆಢೆ ಜಾಗƒತಿ ಮೂಡಿಸಲಾಗಿದೆ. 4 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 20 ಸಖೀ ಮತಗಟ್ಟೆಗಳನ್ನು ರೂಪಿಸಲಾಗಿದೆ. ಎರಡು ಮತಗಟ್ಟೆಗಳನ್ನು ವಿಕಲಚೇತನ ಅಧಿಕಾರಿಗಳ ನೇತƒತ್ವದಲ್ಲಿ ನಿರ್ವಹಿಸಲಿದ್ದಾರೆ. ಒಂದು ಎತ್ನಿಕ್‌ ಮತಗಟ್ಟೆಯನ್ನು ಜಿಲ್ಲೆಯಲ್ಲಿ ರೂಪಿಸಲಾಗಿದೆ.
– ಡಾ| ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

ಸುವ್ಯವಸ್ಥಿತ‌ ಮತದಾನ
39 ಮೈಕ್ರೋ ಅಬ್ಸರ್ವರ್‌, 5 ಸಖೀ ಮತಗಟ್ಟೆಗಳು, 5 ಮತಗಟ್ಟೆಗಳಲ್ಲಿ ಕಡೆ ವೆಬ್‌ ಕಾಸ್ಟಿಂಗ್‌, ಒಂದು ಕಡೆ ವಿಡಿಯೋಗ್ರಾಫರ್‌ ನಿಯೋಜಿಸಲಾಗಿದ್ದು, 8 ಸಿಎಪಿಎಫ್‌ ಪೊಲೀಸರನ್ನು ನಿಯೋಜಿಸಲಾಗಿದೆ. 15 ಮಂದಿ ಸೆಕ್ಟರ್‌ ಮ್ಯಾಜಿಸ್ಟ್ರೇಟ್‌ಗಳು ಕೆಲಸ ಮಾಡಲಿದ್ದಾರೆ. ಅವರೊಂದಿಗೆ ಸುಸಜ್ಜಿತ ಮತದಾನಕ್ಕಾಗಿ ವಿವಿಧ ತಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿವೆ. ಎಲ್ಲಾ ಮತಗಟ್ಟೆಗಳ ಪಕ್ಕದಲ್ಲೇ ಸಿಬಂದಿಗೆ ಊಟೋಪಹಾರದ ವ್ಯವಸ್ಥೆ ಮತ್ತು ಸಮರ್ಪಕ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
-ಡಾ| ನಾಗರಾಜ್‌,ಸಹಾಯಕ ಚುನಾವಣಾಧಿಕಾರಿ, ಕಾಪು ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next