Advertisement

ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!

01:38 PM Jul 01, 2024 | Team Udayavani |

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಲ್ಯಾಮಿನೇಶನ್‌ ಆರಂಭಿಸಿದ ಹೆಗ್ಗಳಿಕೆ ಬೆಂಗಳೂರಿನ ಗೌರಿ ಲ್ಯಾಮಿನೇಟರ್ಸ್‌ನದ್ದು. ಉತ್ಕೃಷ್ಟ ಕಾರ್ಯ, ಸೇವೆಗಳಿಂದ ಹೆಸರು ಮಾಡಿರುವ ಗೌರಿ ಲ್ಯಾಮಿನೇಟರ್ಸ್‌ನ ಮಾಲೀಕರಾದ ಟಿ.ಎಸ್‌. ನಾಗರಾಜ ಅವರಿಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಕೊಡಮಾಡುವ 2024ರ “ಮುದ್ರಣ ರತ್ನ’ ಪ್ರಶಸ್ತಿ ಲಭಿಸಿದೆ. 5 ತಲೆಮಾರುಗಳಿಂದ ನಡೆದುಕೊಂಡು ಬಂದ ಈ ಉದ್ಯಮ ಹಾಗೂ ತಮ್ಮ ಯಶೋ ಪಯಣದ ಬಗ್ಗೆ ಟಿ.ಎಸ್‌. ನಾಗರಾಜ ಅವರು ಮಾತಾಡಿದ್ದಾರೆ.

Advertisement

ನಿಮ್ಮ ಮನೆತನಕ್ಕೂ ಮುದ್ರಣ ಕ್ಷೇತ್ರಕ್ಕೂ ನಂಟು ಹೇಗೆ?

ಮುದ್ರಣದ ನಂಟು ಆರಂಭವಾಗಿದ್ದು ನಮ್ಮ ತಾತ ಟಿ.ಎನ್‌. ಕೃಷ್ಣಯ್ಯ ಶೆಟ್ಟಿ ಅವರ ಮೂಲಕ. 1910ರ ಸುಮಾರಿನಲ್ಲಿ ಅವರು ವೆಂಕಟೇಶ್ವರ ಮುದ್ರಣ ಹಾಗೂ ಪ್ರಕಾಶನ ಸಂಸ್ಥೆ ಆರಂಭಿಸಿದರು. ಆಧ್ಯಾತ್ಮಿಕ, ದೇವರ ಸ್ತೋತ್ರ ಸೇರಿ 100ಕ್ಕೂ ಅಧಿಕ ಪುಸ್ತಕಗಳು ಪ್ರಕಾಶನಗೊಂಡವು. ಜತೆಗೆ ಮುದ್ರಣ ಕಾರ್ಯವೂ ನಡೆಯುತ್ತಿತ್ತು. ಅವರ ನಂತರ, ನಮ್ಮ ತಂದೆ ಸಂಪಂಗಿ ರಾಮಯ್ಯ ಶೆಟ್ಟಿ ಈ ಉದ್ಯಮವನ್ನು ಮುಂದುವರಿಸಿಕೊಂಡು ಹೋದರು. 1942ರ ಹೊತ್ತಿಗೆ ಕಾರಣಾಂತರಗಳಿಂದ ಮುದ್ರಣಾಲಯ ಮುಚ್ಚಲ್ಪಟ್ಟಿತು. ನಂತರ ಟಿ.ಎನ್‌. ಕೃಷ್ಣಯ್ಯ ಶೆಟ್ಟಿ ಆ್ಯಂಡ್‌ ಸನ್ಸ್‌ ಹೆಸರಿನಲ್ಲಿ ನನ್ನ ಅಣ್ಣ ಟಿ.ಎಸ್‌. ಸುರೇಶ್‌ ಹಾಗೂ ಅವರ ಮಗ ದೀಪಕ್‌ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪುಸ್ತಕ ಪ್ರಕಾಶನ ಕೆಲಸವನ್ನು ಮುಂದುವರಿಸಿದ್ದಾರೆ.

ಗೌರಿ ಲ್ಯಾಮಿನೇಟರ್ಸ್‌ ಜನ್ಮತಾಳಿದ್ದು ಹೇಗೆ, ಯಾವಾಗ?

ಉದ್ಯಮ ಆರಂಭಿಸುವಾಗ ಯಾವ ಸವಾಲುಗಳಿದ್ದವು? ನನ್ನ ಪೂರ್ವಜರಂತೆ ಇದೇ ಕ್ಷೇತ್ರದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಹೆಬ್ಬಯಕೆಯಿಂದ 1974ರಲ್ಲಿ ಮುದ್ರಣದಲ್ಲಿ ಡಿಪ್ಲೊಮಾ ಮಾಡಿದೆ. 1 ವರ್ಷ ಸರ್ಕಾರಿ ಮುದ್ರಣಾಲಯದಲ್ಲಿ ತರಬೇತಿಯನ್ನೂ ಪಡೆದೆ. 1980ರಲ್ಲಿ ಭಾರತಕ್ಕೆ ಆಗಷ್ಟೇ ಲ್ಯಾಮಿನೇಶನ್‌ ಯಂತ್ರಗಳು ಬಂದಿದ್ದವು. ಲ್ಯಾಮಿನೇಶನ್‌ ಉದ್ಯಮ ಆರಂಭಿಸುವ ಉದ್ದೇಶದಿಂದ 1982ರಲ್ಲಿ ಗೌರಿ ಲ್ಯಾಮಿನೇಟರ್ಸ್‌ ಹುಟ್ಟು ಹಾಕಿದೆ. ಈ ಉದ್ಯಮ ಸ್ಥಾಪಿಸಲು ಹಣ ಬೇಕಲ್ಲ; ಸಾಲಕ್ಕಾಗಿ ಅನೇಕ ಬ್ಯಾಂಕ್‌ಗಳಿಗೆ ಅಲೆದಾಡಿದೆ. ಈ ಹೊಸ ಉದ್ಯಮದಲ್ಲಿ ನಮಗೆ ವಿಶ್ವಾಸವಿಲ್ಲವೆಂದು ಬಹುತೇಕ ಬಾಂಕ್‌ಗಳು ಸಾಲ ಕೊಡಲು ನಿರಾಕರಿಸಿದವು. ಕೊನೆಗೆ ಸುಬ್ರಹ್ಮಣ್ಯೇಶ್ವರ ಸಹಕಾರಿ ಬ್ಯಾಂಕ್‌ 50 ಸಾವಿರ ರೂ. ಸಾಲ ನೀಡಿತು. ಅದರಿಂದಲೇ ಮುಂಬೈನಿಂದ ಲ್ಯಾಮಿನೇಶನ್‌ ಯಂತ್ರ ತರಿಸಿ ಉದ್ಯಮ ಆರಂಭಿಸಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಲ್ಯಾಮಿನೇಶನ್‌ ಆರಂಭಿಸಿದ ಹೆಗ್ಗಳಿಕೆ ನಮ್ಮದು.

Advertisement

ನಿಮ್ಮ ಲ್ಯಾಮಿನೇಶನ್‌ ಉದ್ಯಮ ವ್ಯಾಪಕವಾಗಿದ್ದು ಹೇಗೆ?

ಸಾಲ ಮಾಡಿ ಲ್ಯಾಮಿನೇಶನ್‌ ಯಂತ್ರವನ್ನೇನೋ ತಂದೆ. ಉದ್ಯಮ ಆರಂಭಿಸಿದೆ. ಆದರೆ, ಗ್ರಾಹಕರು ಬೇಕಲ್ಲ. ಅದಕ್ಕಾಗಿ ಪ್ರತಿದಿನ ಅಗರಬತ್ತಿ ಸೇರಿ ವಿವಿಧ ಪ್ಯಾಕೇಜಿಂಗ್‌ ಇಂಡಸ್ಟ್ರಿ, ಮುದ್ರಣಾಲಯ, ಮುದ್ರಕರು, ಪ್ರಕಾಶಕರ ಬಳಿ ಹೋಗುತ್ತಿದ್ದೆ. ನಮ್ಮ ಬಳಿ ಲ್ಯಾಮಿನೇಶನ್‌ ಯಂತ್ರವಿದೆ. ನಿಮ್ಮ ಪುಸ್ತಕ, ಲೇಬಲ್‌ಗ‌ಳಿಗೆ ಲ್ಯಾಮಿನೇಶನ್‌ ಮಾಡಿ ಕೊಡುತ್ತೇವೆ ಎಂದು ಗ್ರಾಹಕರಿಗೆ ಮನವರಿಕೆ ಮಾಡುತ್ತಿದ್ದೆ. ಪ್ರತಿದಿನ 4 ಗಂಟೆಯಂತೆ ಸುಮಾರು 1 ವರ್ಷ ಗ್ರಾಹಕರಿಗಾಗಿ ಓಡಾಡಿದ್ದೇನೆ.

ಪರ್ಫೆಕ್ಟ್ ಬೈಂಡಿಂಗ್‌ ಅಂದರೆ ಏನು? ಅದರ ವಿಶೇಷತೆ ಏನು?

ಮೊದಲೆಲ್ಲ ಪುಸ್ತಕಗಳನ್ನು ಪಿನ್‌ ಮಾಡಿ ಇಲ್ಲವೇ ಹೊಲೆಯುವ ಮೂಲಕ ಬೈಂಡ್‌ ಮಾಡುತ್ತಿದ್ದರು. ಆದರೆ, ಅದು ಬಾಳಿಕೆ ಕಡಿಮೆ. ಪುಸ್ತಕದ ಹಾಳೆಗಳು ಬಹುಬೇಗ ಕಿತ್ತುಕೊಳ್ಳುತ್ತಿದ್ದವು. ಆಗ ಕರ್ನಾಟಕದಲ್ಲಿ ಕೆಲವು ಕಡೆ ಮಾತ್ರ ಸೂಕ್ತ ಅಂಟು ಬಳಸಿ ದೀರ್ಘ‌ಕಾಲ ಬಾಳಿಕೆ ಬರುವ ಪರ್ಫೆಕ್ಟ್ ಬೈಂಡಿಂಗ್‌ ಮಾಡಲಾಗುತ್ತಿತ್ತು. ನಾವೂ ಅದನ್ನು ಆರಂಭಿಸಿದೆವು. ಮೊದಲೆಲ್ಲ ಗ್ರಾಹಕರಿಗೆ ಅಂಟಿನಿಂದ ಪುಸ್ತಕ ಹಾಳಾಗಿ, ಬೇಗ ಹರಿಯುತ್ತದೆ ಎಂಬ ಅನುಮಾನಗಳಿದ್ದವು. ಆದರೆ, ನಮ್ಮ ಕೆಲಸ ನೋಡಿದ ಮುದ್ರಕರು, ಪುಸ್ತಕಗಳನ್ನು ಪರ್ಫೆಕ್ಟ್ ಬೈಂಡಿಂಗ್‌ ಮಾಡಿಸಲು ಮುಂದಾದರು.

ಲ್ಯಾಮಿನೇಶನ್‌ ಕಾರ್ಯಕ್ಕೆ ಗ್ರಾಹಕರ ಪ್ರತಿಕ್ರಿಯೆ ಹೇಗಿದೆ? ನಿಮ್ಮ ಸಂಸ್ಥೆಯಲ್ಲಿ ಎಷ್ಟು ಜನ ನೌಕರರಿದ್ದಾರೆ?

ಪುಸ್ತಕ ಪ್ರಕಾಶಕರು, ಮುದ್ರಕರೇ ನಮಗೆ ಮುಖ್ಯ ಗ್ರಾಹಕರು. ಮೊದಲೆಲ್ಲ ಹುಬ್ಬಳ್ಳಿ, ಧಾರವಾಡ, ಮಂಗಳೂರು, ದಾವಣಗೆರೆ, ಮೈಸೂರು, ಮಂಗಳೂರು ಹಾಗೂ ತಮಿಳುನಾಡಿನಿಂದಲೂ ಬಂದು ಲ್ಯಾಮಿನೇಶನ್‌ ಮಾಡಿಸಿಕೊಂಡು ಹೋಗುತ್ತಿದ್ದರು. ಈಗ ಲ್ಯಾಮಿನೇಶನ್‌ ಎಲ್ಲ ಕಡೆ ಇರುವುದರಿಂದ ಬಹುತೇಕ ನಮ್ಮ ಗ್ರಾಹಕರು ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಕೇವಲ 3 ಕೆಲಸಗಾರರೊಂದಿಗೆ ಬಾಡಿಗೆ ಕಟ್ಟಡದಲ್ಲಿ ಗೌರಿ ಲ್ಯಾಮಿನೇಟರ್ಸ್‌ ಆರಂಭಿಸಿದೆ. 2007ರಲ್ಲಿ ಚಾಮರಾಜಪೇಟೆಯಲ್ಲಿ ಸ್ವಂತ ಕಟ್ಟಡ ನಿರ್ಮಿಸಿದೆ. ಈಗ 16 ಜನರಿಗೆ ಉದ್ಯೋಗ ನೀಡಿದ್ದೇನೆ. ಮಗಳು ಗೌರಿ ಹಾಗೂ ಮಗ ವಿನಾಯಕ ಕೂಡ ನನ್ನ ಜತೆ ಕೈಜೋಡಿಸಿ ದ್ದಾರೆ. ಇದರಿಂದ ಈ ಉದ್ಯಮ 5ನೇ ತಲೆಮಾರಿಗೆ ಮುಂದುವರೆದಂತಾಗಿದೆ. ಮೈಸೂರು ಮಹಾರಾಜರು ಬಿರುದು ನೀಡಿದರು!

ಅದು 1890ರ ಅವಧಿ, ನಮ್ಮ ಮುತ್ತಾತ ನಾರಾಯಣ ಶೆಟ್ಟಿ ಅವರು ಮೈಸೂರು ಮಹಾರಾಜರ ಖಜಾನೆ, ಟಂಕಸಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಖಜಾನೆಯ ಹಣ ಸಾಗಿಸುವಾಗ, ದರೋಡೆಯಾಯಿತಂತೆ. ಆಗ ತಮ್ಮ ವೈಯಕ್ತಿಕ ಹಣವನ್ನು ಖಜಾನೆಗೆ ಸೇರಿಸಿ ಅದನ್ನು ಮಹಾರಾಜರಿಗೆ ಒಪ್ಪಿಸಿದ ಬಳಿಕ, ಈ ಕೆಲಸಕ್ಕೆ ನಾನು ಸೂಕ್ತನಲ್ಲ ಎಂದು ರಾಜೀನಾಮೆ ನೀಡಿದರಂತೆ. ಅವರ ಪ್ರಾಮಾಣಿಕತೆಗೆ ಮೆಚ್ಚಿದ ಮಹಾರಾಜರು ಅವರಿಗೆ “ಟಂಕಸಾಲ’ ಎಂಬ ಬಿರುದು ನೀಡಿದರು. ಆ ಬಿರುದು ಕ್ರಮೇಣ ನಮ್ಮ ಮನೆತನದ ಹೆಸರಾಯಿತು.

ವಾರದ ಅತಿಥಿ: ಟಿ.ಎಸ್‌. ನಾಗರಾಜ, ಮುದ್ರಕರು

 ಸಂದರ್ಶನ: ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next