Advertisement
ನ. 4ರಂದು ರಾತ್ರಿ ಗದ್ದೆಯ ಸುತ್ತ ಕೋಲುತಿರಿ ಉರಿಸಿ ನಾಗಣಿಸುವುದು, ಅನ್ನಸಂತರ್ಪಣೆ ನಡೆಯಿತು. ನ. 5ರಂದು ಕೊರಗ ಕೋಲ, ಕುದುರೆ ಕೋಲ, ಕಂಡದ ಉರವ, ಎರುಕೋಲ ನಡೆಯಿತು. ಕಂಬಳ ಗದ್ದೆಗೆ ಪೂಕರೆ, ಬಳ್ಳಿ ಗದ್ದೆಗೆ ಬಾಳೆಗಿಡವನ್ನು ಹಾಕಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗ್ರಾಮ ದೈವ ಅಬ್ಬೆಜಲಾಯ ಮತ್ತು ಕಲ್ಲುರ್ಟಿ ದೈವದ ನೇಮ ನಡೆಯಿತು.
ಭೂಮಿಯನ್ನು ಪೂಜಿಸಿ ಆರಾಧಿಸುವಂತಹ ತುಳುವರ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡ ಬಂದಿರುವ ಪದ್ದತಿಯಾಗಿದೆ. ಇದನ್ನು ಆರಾಧಿಸುವಲ್ಲಿ ಪ್ರಾದೇಶಿಕವಾರು ಹಲವು ಕಟ್ಟುಪಾಡುಗಳಿವೆ.
Related Articles
Advertisement
ಕಂಬಳ ಗದ್ದೆಗೆ ಹಾಲು, ತುಪ್ಪವನ್ನು ಹಾಕಿ ಕೋಲುತಿರಿಯನ್ನು ಉರಿಸಿ ಗ್ರಾಮಸ್ಥರು ಗದ್ದೆಯ ಸುತ್ತ ಹಚ್ಚುವ ಕ್ರಮವಿದೆ. ಅನಂತರ ಗದ್ದೆ ಕೋರಿಗೆ ಆರಂಭದ ಕ್ರಮವಿದೆ. ಆ ಕ್ರಮಗಳು ಮುಕ್ತಾಯಗೊಂಡ ಬಳಿಕ ಕಂಬಳ ಗದ್ದೆಗೆ ಇಳಿಯುವ ಕೋಣಗಳು ಮತ್ತು ಎತ್ತುಗಳನ್ನು ವಾದ್ಯಗೋಷ್ಠಿಯೊಂದಿಗೆ ಬಹಳ ಸಂಭ್ರಮದಿಂದ ಇಳಿಸುತ್ತಾರೆ.
ಪೂಕರೆಗದ್ದೆಯನ್ನು ಉತ್ತು ಅನಂತರ ಅಡಿಕೆ ಮರದಿಂದ ತಯಾರಿಸಿದ ಪೂಕರೆಯನ್ನು ಹೂವಿನಿಂದ ಅಲಂಕರಿಸಿ ಗುತ್ತು ಗ್ರಾಮದವರ ಪ್ರಾರ್ಥನೆಯನ್ನು ಮಾಡಿ ಕಂಬಳಗದ್ದೆಗೆ ಪೂಕರೆಯನ್ನೂ ಬಲ್ಲಿ ಗದ್ದೆಗೆ (ಬಾಳೆ ಹಾಕುವ ಗದ್ದೆ) ಒಂದು ಬಾಳೆ ಗಿಡವನ್ನೂ ಹಾಕುತ್ತಾರೆ. ಅದೇ ದಿನ ರಾತ್ರಿ ಗ್ರಾಮದೈವಗಳಿಗೆ ನೇಮ ನಡೆಯುತ್ತದೆ. ಈ ಗದ್ದೆ ಕೋರಿಯನ್ನು ತುಳುವಿನಲ್ಲಿ ಭೂಮಿದ ಮದಿಮೆ, ಕಂಬುಳದ ವಿಳಯ ಚಾವಡಿದ ಮೆಚ್ಚಿಗೆ ಕಂಬಳದ ಗದ್ದೆ ಕೋರಿ ಎಂಬ ಹೆಸರಿನಿಂದ ನಾಡಿನ ಹಬ್ಬದಂತೆ ವಿಜೃಂಭಣೆಯಿಂದ ಆಚರಿಸುವಂತಹ ಪದ್ಧತಿ ತುಳುನಾಡಿನಾದ್ಯಂತ ನಡೆಯುತ್ತದೆ. ಏನಿದು ಗದ್ದೆಕೋರಿ?
ತುಳುನಾಡು ಸಂಸ್ಕೃತಿ, ಸಂಸ್ಕಾರಗಳ ತವರೂರು. ಇಲ್ಲಿ ಅನೇಕ ಆಚರಣೆಗಳು, ಪದ್ಧತಿಗಳು ಚಾಲ್ತಿಯಲ್ಲಿವೆ ಹಾಗೂ ಅವುಗಳಿಗೆ ತಮ್ಮದೇ ಆದ ಮಹತ್ವಗಳಿವೆ. ಇಂತಹ ಆಚರಣೆಗಳಲ್ಲಿ ಗದ್ದೆ ಕೋರಿಯೂ ಒಂದು. ಇದಕ್ಕೆ ತುಳುನಾಡಿನ ಭೂಮಿ ಪೂಜೆ ಎಂದೂ ಕರೆಯುತ್ತಾರೆ. ಪರಶುರಾಮಸೃಷ್ಟಿಯ ತುಳುನಾಡಿನಲ್ಲಿ ಬಳ್ಳಾಕುಲು ಅವರ ಆಡಳಿತಕ್ಕೊಳಪಟ್ಟ ರಾಜಮನೆತನಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಅರಸು ಮನೆತನಗಳಿಗೆ ಸಂಬಂಧಪಟ್ಟಂತಹ ಉಪಮನೆತನಗಳಿವೆ. ಅವುಗಳಲ್ಲಿ ಬೀಡು, ರಾಜ್ಯ ಗುತ್ತು, ಗುತ್ತು, ಬಾರಿಕೆ, ತಲೆ ಮನೆ ಎಂಬ ಮನೆತನಗಳು ಅಂದಿನ ಕಾಲದ ರಾಜಕೀಯ ಪದ್ಧತಿಯ ವ್ಯವಸ್ಥೆಗಳಾಗಿದ್ದು, ಆ ಕಾಲದಲ್ಲಿ ಕಂಬಳ ಗದ್ದೆಗಳಿದ್ದು, ಅಂತಹ ಕಂಬಳ ಗದ್ದೆಗಳು ಆ ಗ್ರಾಮದ ದೈವಗಳ ಆರಾಧನೆಗೂ ನಿಕಟ ಸಂಬಂಧವಿತ್ತು.
ಭೂಮಿಯನ್ನು ಪೂಜಿಸಿ ಆರಾಧಿಸುವಂತಹ ತುಳುವರ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡ ಬಂದ ಪದ್ಧತಿ. ಇದರಲ್ಲಿ ಗದ್ದೆ ಕೋರಿ ಪ್ರಮುಖವಾದದ್ದು. ಇಂದಿನ ಕಾಲದಲ್ಲಿ ಆಡಳಿತ ವ್ಯವಸ್ಥೆಯ ಬದಲಾವಣೆಯ ಜತೆಗೆ ಅಂದಿನ ಪದ್ಧತಿಗಳು ನಶಿಸಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರತಿಯೋರ್ವ ನಾಗರಿಕನ ಜವಾಬ್ದಾರಿಯೂ ಆಗಿದೆ. ಇವುಗಳು ಮುಂದಿನ ತಲೆಮಾರಿಗೂ ಮುಂದುವರಿಯಲು ಸರಕಾರ ಅಥವಾ ಅಕಾಡೆಮಿಗಳ ಪ್ರೋತ್ಸಾಹವೂ ದೊರಕುವಂತಾಗಬೇಕು. – ಪ್ರವೀಣ್ ಚೆನ್ನಾವರ