Advertisement

ಮುದುಕ, ಕುರಿ ಮತ್ತು ಚಾಲಾಕಿ ಕಳ್ಳರು

12:30 AM Jun 04, 2019 | Sriram |

ನಾನೂ ನಿಮ್ಮ ಲೇಖನಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ದುರದೃಷ್ಟವಶಾತ್‌, ನಮ್ಮ ದೇಶದಲ್ಲಿ ನೀತಿ ನಿರೂಪಣೆಯ ಮೇಲಿನ ಕಪಿಮುಷ್ಟಿ ಇರುವುದು ಬೌದ್ಧಿಕ ವಲಯಕ್ಕೇ ಹೊರತು, ನಿಜವಾದ ಭಾರತಕ್ಕಲ್ಲ. ಭಾರತದ ನೀತಿ ನಿರೂಪಣೆಯ ಮೇಲೆ ಬಹಳ ಹಿಡಿತ ಹೊಂದಿರುವ ಈ ಬುದ್ಧಿಜೀವಿ ವಲಯವು, ನೀವು ಪ್ರಕಟಿಸುವ ಲೇಖನಗಳ ಬಗ್ಗೆ ಅನವಶ್ಯಕವಾಗಿ ತಲೆಕೆಡಿಸಿಕೊಳ್ಳುತ್ತವೆ/ ಮಹತ್ವ ನೀಡುತ್ತವೆ. ಹೀಗಾಗಿ, ನಮ್ಮ ದೇಶದ ನೀತಿ ವಿರೂಪಕರಿಗೆ(ಕ್ಷಮಿಸಿ, ನಿರೂಪಕರಿಗೆ) ಅರ್ಥವಾಗಲಿ ಎಂದು ನಾನು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ…

Advertisement

ಪ್ರೀತಿಯ ವಿದೇಶಿ ಮಾಧ್ಯಮಗಳೇ…
ಭಾರತದ ಲೋಕಸಭಾ ಚುನಾವಣೆಯ ಫ‌ಲಿತಾಂಶದ ಬಗ್ಗೆ ನೀವು ಕೊಟ್ಟ ತೀರ್ಪು, ನಮ್ಮ ದೇಶದ ಬುದ್ಧಿಜೀವಿಗಳ ವಲಯದಲ್ಲಂತೂ ಬಹಳ ಚರ್ಚೆಯಾಯಿತು. ಸತ್ಯವೇನೆಂದರೆ, ಈ ವಲಯನ್ನು ಹೊರತುಪಡಿಸಿದರೆ, “ನಿಜವಾದ ಭಾರತದಲ್ಲಿ’ ನೀವೇನು ಪ್ರಕಟಿಸಿದಿರಿ, ಪ್ರಕಟಿಸಿಲ್ಲ ಎನ್ನುವುದನ್ನು ಯಾರೂ ಕೇರ್‌ ಮಾಡುವುದಿಲ್ಲ. ನಾನೂ ಕೂಡ ನಿಮ್ಮ ಲೇಖನಗಳು, ವಿಶ್ಲೇಷಣೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ದುರದೃಷ್ಟವಶಾತ್‌, ನಮ್ಮ ದೇಶದಲ್ಲಿ ನೀತಿ ನಿರೂಪಣೆಯ ಮೇಲಿನ ಕಪಿಮುಷ್ಟಿ ಇರುವುದು ಬೌದ್ಧಿಕ ವಲಯಕ್ಕೇ ಹೊರತು, ನಿಜವಾದ ಭಾರತಕ್ಕಲ್ಲ.


ಭಾರತದ ನೀತಿ ನಿರೂಪಣೆಯ ಮೇಲೆ ಬಹಳ ಹಿಡಿತ ಹೊಂದಿರುವ ದೇಶದ ಈ ಬುದ್ಧಿಜೀವಿ ವಲಯವು, ನೀವು ಪ್ರಕಟಿಸುವ ಲೇಖನಗಳ ಬಗ್ಗೆ ಅನವಶ್ಯಕವಾಗಿ ತಲೆಕೆಡಿಸಿಕೊಳ್ಳುತ್ತವೆ/ ಮಹತ್ವ ನೀಡುತ್ತವೆ. ಹೀಗಾಗಿ, ನಮ್ಮ ದೇಶದ ನೀತಿ ವಿರೂಪಕರಿಗೆ(ಕ್ಷಮಿಸಿ, ನಿರೂಪಕರಿಗೆ) ಅರ್ಥವಾಗಲಿ ಎಂದು ನಾನು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ಒಂದು ಚಿಕ್ಕ ಕಥೆಯ ಮೂಲಕ ನನ್ನ ಮಾತನ್ನು ಕಟ್ಟಿಕೊಡಲು ಪ್ರಯತ್ನಿಸುತ್ತೇನೆ…

ಒಂದೂರಲ್ಲಿ ಮುದುಕನೊಬ್ಬ ಹೆಗಲ ಮೇಲೆ ಕುರಿಯನ್ನು ಹೊತ್ತು ಮನೆಯತ್ತ ಹೊರಟಿದ್ದ. ಮೂವರು ಕಳ್ಳರ ಕಣ್ಣಿಗೆ ಈ ಮುದುಕ ಕಾಣಿಸಿದ. ಹೇಗಾದರೂ ಮಾಡಿ, ಮುದುಕನನ್ನು ಯಾಮಾರಿಸಿ ಆ ಕುರಿಯನ್ನು ಕದಿಯಬೇಕು ಎಂದು ಅವರು ತಂತ್ರ ರಚಿಸಲಾರಂಭಿಸಿದರು.

ಮೊದಲನೇ ಕಳ್ಳ ಮುದುಕನ ಪಕ್ಕ ನಡೆಯುತ್ತಾ ಹೋಗಿ, ಜೋರಾಗಿ ನಗುತ್ತಾ ಅಂದ: “ಅಯ್ಯೋ ಹುಚ್ಚು ಮುದುಕ! ಅದ್ಯಾಕೆ ಹೆಗಲ ಮೇಲೆ ಕತ್ತೆ ಮರಿಯನ್ನು ಹೊತ್ತಿದ್ದೀಯ?’. ಕಳ್ಳನ ಮಾತನ್ನು ಕೇಳಿ ಮುದುಕನಿಗೆ ಅಚ್ಚರಿಯಾಯಿತಾದರೂ, ಅವನನ್ನು ಕಡೆಗಣಿಸಿ ಮುಂದೆ ಸಾಗಿದೆ. ತುಸು ಸಮಯದ ನಂತರ ಮುದುಕನಿಗೆ ಎದುರು ಬಂದ ಎರಡನೇ ಕಳ್ಳನೂ ಜೋರಾಗಿ ನಗುತ್ತಾ- “ಅಯ್ಯೋ ಅಜ್ಜ, ಅದ್ಯಾಕೆ ಹೆಗಲ ಮೇಲೆ ಸತ್ತ ಕರುವನ್ನು ಹೊತ್ತುಕೊಂಡು ಹೋಗ್ತಿದ್ದೀಯ?’ ಅಂದ. ಮುದುಕನಿಗೆ ತುಸು ಕಳವಳವಾಯಿತು. ಹೆಗಲ ಮೇಲಿನ ಪ್ರಾಣಿಯನ್ನು ಕೆಳಕ್ಕಿಳಿಸಿ ನೋಡಿದ. ಅದು ಕುರಿ ಎಂದು ಖಾತ್ರಿ ಪಡೆಸಿಕೊಂಡು ಮುಂದೆ ಸಾಗಿದ. ಆದರೆ ಅವನ ತಲೆಯಲ್ಲಿ ಅನುಮಾನ ಹೊಕ್ಕಾಗಿತ್ತು. ನಿಜಕ್ಕೂ ತನ್ನ ಹೆಗಲ ಮೇಲೆ ಕತ್ತೆ ಮರಿ ಅಥವಾ ಸತ್ತ ಕರು ಇರಬಹುದಾ ಎಂದು ಪದೇ ಪದೆ ನೋಡಲಾರಂಭಿಸಿದ. ಅಷ್ಟರಲ್ಲೇ ಮುದುಕನ ಹತ್ತಿರ ಬಂದ ಮೂರನೆಯ ಕಳ್ಳ ಉರುಳಾಡಿ ನಗಲಾರಂಭಿಸಿದ. “ಲೋ ಮುದುಕ, ಬೀದಿ ನಾಯಿ ಹೊತ್ಕೊಂಡು ಅಡ್ಡಾಡ್ತಿದ್ದೀಯಲ್ಲ?’ ಅಂದ. ಮುದುಕನ ತಲೆ ತಿರುಗಿತು. “ಪ್ರಜ್ಞಾವಂತರಂತೆ ಕಾಣುವ ಈ ಮೂವರೂ ಈ ರೀತಿ ಹೇಳುತ್ತಿದ್ದಾರೆ ಅಂದರೆ, ಎಲ್ಲವೂ ಸರಿಯಿಲ್ಲ ಅನ್ನಿಸುತ್ತೆ’ ಎಂದು ಭಾವಿಸಿದ ಮುದುಕ. ಹೆಗಲಮೇಲೇ ನಾದರೂ ಕ್ಷಣಕ್ಷಣಕ್ಕೆ ರೂಪ ಬದಲಿಸುವ ದೆವ್ವ ಕುಳಿತಿರ ಬಹುದೇ ಎಂದು ಅನ್ನಿಸಿಬಿಟ್ಟಿತು ಅವನಿಗೆ! ಕೊನೆಗೂ ದೆವ್ವದ ಭಯ ಅವನ ಮನಸ್ಸನ್ನು ಸಂಪೂರ್ಣವಾಗಿ ಆವರಿಸಿತು. ತನ್ನ ಬುದ್ಧಿಮತ್ತೆಯ ಮೇಲಿನ ಎಲ್ಲಾ ವಿಶ್ವಾಸವನ್ನೂ ಕಳೆದುಕೊಂಡ ಮುದುಕ, ಕುರಿಯನ್ನು ಅಲ್ಲೇ ಎಸೆದು, ನಡುಗುತ್ತಾ ಮನೆ ಕಡೆಗೆ ಓಡಿದ!
***
ಈ ಕಥೆಯ ಒಟ್ಟಾರೆ ಸಾರಾಂಶ ನಿಮಗೆ, ಅಂದರೆ, ವಿದೇಶಿ ಮಾಧ್ಯಮಗಳಿಗೆ ಅರ್ಥವಾಗಿರಬಹುದು. ಆ ವೃದ್ಧನನ್ನು “ಭಾರತೀಯ ಮತದಾರ’ ಎಂದೂ, ಆ ಕುರಿಯನ್ನು ನೀವು ನಿಮ್ಮ ಲೇಖನಗಳಲ್ಲಿ ತಪ್ಪುತಪ್ಪಾಗಿ ಬಿಂಬಿಸುವ “ರಾಜಕಾರಣಿಯೆಂದೂ (ಮೋದಿ)’ ಮತ್ತು ಆ ಮೂವರು ಚಾಲಾಕಿಗಳನ್ನು, ನಿಮ್ಮ ಪತ್ರಿಕೆಯಲ್ಲಿ ಭಾರತದ ಬಗ್ಗೆ ಇಲ್ಲಸಲ್ಲದ ಕಥೆ ಕಟ್ಟಿ ಕಸಕಡ್ಡಿ ತುಂಬುವ ಭಾರತದ “ಬುದ್ಧಿಜೀವಿ ಪತ್ರಕರ್ತರೆಂದೂ’ ಊಹಿಸಿಕೊಳ್ಳಿ.

Advertisement

ಈ ಬಾರಿಯ ಲೋಕಸಭಾ ಚುನಾವಣೆಯ ಫ‌ಲಿತಾಂಶದಲ್ಲಿ ನಿಮಗೊಂದು ಸಂದೇಶವಿದೆ. ಭಾರತದ ಜನರು ತಮ್ಮ ಹೆಗಲ ಮೇಲೆ ಏನಿದೆ ಎನ್ನುವುದನ್ನು ಈಗ ಚೆನ್ನಾಗಿ ಅರಿತಿದ್ದಾರೆ. ಚಾಲಾಕಿ ಬುದ್ಧಿಜೀವಿಗಳ ಜಾಲದಲ್ಲಿ ಅವರು ಸಿಲುಕುವುದಿಲ್ಲ. ತಮಗೆ ಯಾವುದು ಒಳ್ಳೆಯದು, ಕೆಟ್ಟದ್ದು ಎನ್ನುವುದು ಭಾರತೀಯರಿಗೆ ಈಗ ಗೊತ್ತಿದೆ. ಅದನ್ನು ನೀವೇನೂ ಹೇಳಬೇಕಾಗಿಲ್ಲ.

ಯಾವುದೋ ದೂರದ ದೇಶದಲ್ಲಿ ಇರುವ ನಿಮಗೆ, ಸಾಮಾನ್ಯ ಭಾರತೀಯರಷ್ಟು ಚೆನ್ನಾಗಿ ಭಾರತ ಸರ್ಕಾರವನ್ನು ನೋಡಲು/ಅನುಭವಿಸಲು ಅವಕಾಶವೇ ಇಲ್ಲ. ಯಾರೋ ಮೂರನೆಯವರು ಬರೆದ ಲೇಖನಗಳು, ಹೇಳಿಕೆಗಳ ಮೇಲಷ್ಟೇ ನೀವು ಅವಲಂಬಿತರಾಗಿದ್ದೀರಿ. ಭಾರತದ ನಿಜವಾದ ಸಂವೇದನೆ ಮತ್ತು ಅರ್ಥವನ್ನು ಗ್ರಹಿಸಲು ಯೋಗ್ಯರಲ್ಲದ, ಪದೇ ಪದೆ ಬೆತ್ತಲಾದ ಅಜ್ಞಾನಿ ವಲಯದ ಮಾತನ್ನೇ ಹಿಡಿದುಕೊಂಡು ನೀವು ಭಾರತವೆಂದರೇ ಹೀಗೆಯೇ ಇದೆ ಎಂದು ನಿರ್ಧರಿಸುತ್ತೀರಿ. 90 ಕೋಟಿ ಭಾರತೀಯರ(ಬ್ರಿಟನ್‌ ಜನಸಂಖ್ಯೆಗಿಂತ ಅಜಮಾಸು ನಾಲ್ಕೈದು ಪಟ್ಟು ಹೆಚ್ಚು ಮತದಾರರು) ನಿರ್ಧಾರವನ್ನು ಪ್ರಶ್ನಿಸುವಂಥ ಉದ್ಧಟತನ ತೋರಿಸುತ್ತೀರಿ.

ಇಂದು ಭಾರತವು ಕೋಟ್ಯಂತರ ಜನರಿಗೆ ಮನೆಗಳನ್ನು ಕಟ್ಟಿಕೊಟ್ಟಿದೆ, ಕೋಟ್ಯಂತರ ಜನರಿಗೆ ಬ್ಯಾಂಕ್‌ ಖಾತೆಗಳಿವೆ, 5 ಲಕ್ಷದಷ್ಟು ವೈದ್ಯಕೀಯ ವಿಮೆ ಪಡೆಯುತ್ತಿದ್ದಾರೆ ಭಾರತೀಯರು, ಇಂದು ಅವರ ಬಳಿ ಗ್ಯಾಸ್‌ ಸಿಲಿಂಡರ್‌ಗಳಿವೆ, ಇದೇ ಮದಲ ಬಾರಿ 28 ಕೋಟಿಗೂ ಹೆಚ್ಚು ಜನರಿಗೆ ಶೌಚಾಲಯ ಸಿಕ್ಕಿದೆ; ಯಾರಿಗೂ ಯಾವುದೇ ರೀತಿಯ ತಾರತಮ್ಯವೂ ಆಗಿಲ್ಲ. ಆದರೂ ಇದನ್ನೆಲ್ಲ ಸಾಧ್ಯವಾಗಿಸಿದ ವ್ಯಕ್ತಿಯನ್ನು ನೀವು “ಖಜಛಿ ಈಜಿvಜಿಛಛಿr ಜಿn ಇಜಜಿಛಿf” ಎಂದು ಕರೆಯುತ್ತೀರಿ, ದೇಶವನ್ನು ವಿಭಜಿಸುವ ಮುಖ್ಯಸ್ಥ ಎಂದು ಹಂಗಿಸುತ್ತೀರಿ. ಆತನಿಗೆ ಮತ ನೀಡಿದ ಜನರನ್ನು ದೂಷಿಸುತ್ತೀರಿ.

ನೀವು ಎಷ್ಟೇ ಕಳ್ಳರು, ಚಾಲಾಕಿಗಳನ್ನು ಕರೆದುಕೊಂಡು ಬಂದರೂ ಭಾರತೀಯ ಮತದಾರರು ತಮ್ಮ ಹೆಗಲ ಮೇಲೆ ಹೊತ್ತಿರುವ ವ್ಯಕ್ತಿಯನ್ನು ಕೆಳಕ್ಕೆ ಇಳಿಸುವುದಿಲ್ಲ. ಇದು ನೀವು ನೋಡಿದ ಹಳೆಯ ಭಾರತವಲ್ಲ, ಭಾರತೀಯರಿಗೆ ಒಳಿತು ಮಾಡುತ್ತೇವೆ ಎಂದು ಕಥೆಕಟ್ಟಿ ಸುಮಾರು 45 ಟ್ರಿಲಿಯನ್‌ ಡಾಲರ್‌ಗಳಷ್ಟು ಮೊತ್ತವನ್ನು ಕೊಳ್ಳೆ ಹೊಡೆದ ಹಳೆಯ ಭಾರತವಲ್ಲ ಇದು. ನಿಮಗೆ ಗೊತ್ತಿಲ್ಲವೇನೋ, ಹಿಂದಿನವರು ದೇಶವನ್ನು ಕೊಳ್ಳೆ ಹೊಡೆದದ್ದು “ದೇಶದ ಒಳಿತಿಗಾಗಿ’ ಎಂದು ಹೇಳುತ್ತಾ ಬಂದವರೂ ಇದೇ “ಬುದ್ಧಿಜೀವಿ ವಲಯ’ ಎನ್ನುವುದು ನೆನಪಿರಲಿ.

ಅಂದು ದೇಶವನ್ನು ಕೊಳ್ಳೆ ಹೊಡೆದವರನ್ನು ಸಮರ್ಥಿಸಿದ ಭಾರತದ ಇದೇ ಬುದ್ಧಿಜೀವಿ ವಲಯವೇ, ಕಳೆದ 5 ವರ್ಷಗಳಿಂದ ಭಾರತೀಯ ಮತದಾರರ ಬ್ರೇನ್‌ವಾಶ್‌ ಮಾಡಲು ಪ್ರಯತ್ನಿಸುತ್ತಿದೆ. ಮೋದಿಯನ್ನು ಪ್ರಪಂಚದಲ್ಲೇ ಅತ್ಯಂತ ಕ್ರೂರ ವ್ಯಕ್ತಿಯೆಂದೂ, ರಾಕ್ಷಸನೆಂದೂ ಬಿಂಬಿಸಲು ಪ್ರಯತ್ನಿಸುತ್ತಿದೆ. ಇದರಲ್ಲೂ ಕೆಲವು ಪ್ರಖ್ಯಾತ ಬುದ್ಧಿಜೀವಿಗಳು ಕಳೆದ 17 ವರ್ಷಗಳಿಂದ ಈ ವ್ಯಕ್ತಿಯನ್ನು ಕ್ರೂರಿಯೆಂದು ಬಿಂಬಿಸಲು ನಿತ್ಯ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಕೆಲವರಂತೂ ಈ ದೂಷಣೆಯನ್ನೇ ತಮ್ಮ ವೃತ್ತಿಯಾಗಿಸಿಕೊಂಡಿದ್ದಾರೆ, ಈ ವ್ಯಕ್ತಿಯನ್ನು ಬೈಯ್ಯುತ್ತಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೂ ಭಾರತೀಯ ಮತದಾರರು ಮತ್ತು ಅವರ ಹೆಗಲ ಮೇಲೆ ಇರುವ ಚೇತನದ ನಡುವಿನ ಬಾಂಧವ್ಯ ಮಾಸುತ್ತಿಲ್ಲ, ಅದು ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಾ ಸಾಗುತ್ತಿದೆ.

ನೀವು ಹರಡುವ ಪ್ರತಿಯೊಂದು ಆಧಾರರಹಿತ ಆರೋಪಗಳಿಗೂ ನಾನು ಉತ್ತರಿಸಬಲ್ಲೆ. ಆದರೆ, ಆಗಲೇ ಅವುಗಳ ಸತ್ಯಾಸತ್ಯತೆಯನ್ನು ಅಂಕಿಸಂಖ್ಯೆಗಳು ಮತ್ತು ಸಾಕ್ಷ್ಯ ಸಮೇತ ಬೆತ್ತಲುಗೊಳಿಸಲಾಗಿದೆ. ಹೀಗಾಗಿ, ಆ ಬಗ್ಗೆ ನಾನು ಹೆಚ್ಚೇನೂ ಹೇಳಲು ಹೋಗುವುದಿಲ್ಲ.

ನಿಮಗೆ ಮತ್ತು ನಿಮ್ಮ ಜನರಿಗೆ ನಾನು ಶುಭಹಾರೈಸಬಲ್ಲೆನಷ್ಟೇ, ಈ ಚಾಲಾಕಿ ಕಳ್ಳರನ್ನು ನೀವು ಕಾಪಾಡಿಕೊಳ್ಳುತ್ತೀರಿ ಎಂದು ನನಗೆ ಗೊತ್ತಿದೆ. ಅದರ ಜೊತೆಗೆ ನಿಮ್ಮ ಹೆಗಲ ಮೇಲಿನ ಕುರಿಯನ್ನೂ ಕಾಪಾಡಿಕೊಳ್ಳಿ.
-ಇಂದ, ಸಾಮಾನ್ಯ ಭಾರತೀಯ

(ಲೇಖನ ಕೃಪೆ: ಸ್ವರಾಜ್ಯಮ್ಯಾಗ್‌.ಕಾಂ)

-ಆಶಿಶ್‌ ನರೇಡಿ

Advertisement

Udayavani is now on Telegram. Click here to join our channel and stay updated with the latest news.

Next