Advertisement

“ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ತಂದವರಿಗೆ ಮುಂದಿನ ಸೀಟು’

03:45 AM Jul 07, 2017 | Team Udayavani |

ಹುಣಸೂರು: “ಜೆಡಿಎಸ್‌ನಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಹಿಂದಿನ ಸೀಟು, ಸೂಟ್‌ಕೇಸ್‌ ತಂದವರಿಗೆ ಮುಂದಿನ ಸಾಲಿನಲಿ ಕೂರಿಸುತ್ತಾರೆ’ ಎಂದು ಹೇಳುವ ಮೂಲಕ ಜೆಡಿಎಸ್‌ ಯುವ ಮುಖಂಡ, ಮಾಜಿ ಸಚಿವ ಎಚ್‌ ಡಿ ರೇವಣ್ಣ ಪುತ್ರ ಪ್ರಜ್ವಲ್‌ ಅವರು ತಮ್ಮ ಪಕ್ಷದ ವರಿಷ್ಠರ ವಿರುದ್ಧವೇ ಗುರುವಾರ ವಾಗ್ಧಾಳಿ ನಡೆಸಿದ್ದಾರೆ.

Advertisement

ನಗರದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಪಕ್ಷದ ರಾಜ್ಯ ವರಿಷ್ಠರ ವಿರುದ್ಧ ಪರೋಕ್ಷವಾಗಿ ಟೀಕೆ ನಡೆಸಿದರು.   “ಹುಣಸೂರು ಕ್ಷೇತ್ರಕ್ಕೆ ನಾನು ಒಬ್ಬ ಆಕಾಂಕ್ಷಿಯಾಗಿ ಆಸೆ ಪಟ್ಟಿದ್ದು ನಿಜ. ಆದರೆ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ, ಯಾವುದೇ ತ್ಯಾಗಕ್ಕೂ ಸಿದ್ದ’ ಎಂದರು. “ಪಕ್ಷದ ಕೆಲ ಮುಖಂಡರು ಎರಡು ದೋಣಿಯಲ್ಲೂ ಕಾಲಿಟ್ಟಿದ್ದಾರೆ’ ಎಂದು ಜರಿದ ಇವರು ಯಾರಿಗೆ ಋಣಿಯಾಗಿರಬೇಕು ಎಂದು ಮೊದಲು ಅರ್ಥೈಸಿಕೊಳ್ಳಬೇಕು ಎಂದು ಛೇಡಿಸಿದರು. 

ತಮ್ಮ ತಾತ ಎಚ್‌ ಡಿ ದೇವೇಗೌಡರು ಹುಟ್ಟುಹಾಕಿದ ಪಕ್ಷವನ್ನು ಶಕ್ತಿಯುತಗೊಳಿಸಬೇಕು, ಚಿಕ್ಕಪ್ಪ ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡಬೇಕೆಂದೇ ನಿಷ್ಠಾವಂತ ಕಾರ್ಯಕರ್ತರನ್ನು ಬೆನ್ನಿಗೆ ಕಟ್ಟಿಕೊಂಡು ಎಲ್ಲೆಡೆ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತಿದ್ದೇನೆ ಎಂದು ಹೇಳಿದರು.

ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆಯೇ, ಸ್ಪಷ್ಟನೆ ನೀಡಿದ ಪ್ರಜ್ವಲ್‌, ನಾನು ಹುಣಸೂರಿನಲ್ಲಿ ಸಭೆ ನಡೆಸಿದ್ದು ನಿಜ. ಆದರೆ,ಪಕ್ಷದ ಬಗ್ಗೆಯಾಗಲಿ ನಾಯಕರ ಬಗ್ಗೆಯಾಗಲಿ ಆಕ್ಷೇಪಣಾರ್ಹ ಮಾತುಗಳು ಆಡಿಲ್ಲ. ದೇವೇಗೌಡರ ತೀರ್ಮಾನ ಎಲ್ಲರೂ ಒಪ್ಪಬೇಕು. ಅವರು ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಪರ ಕೆಲಸ ಮಾಡಬೇಕು ಎಂದಷ್ಟೇ ಹೇಳಿದ್ದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next