Advertisement

ಮುಂದಿನ ಮೇಯರ್‌ ಆಯ್ಕೆ ಇಂದು

09:08 PM Oct 01, 2019 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ಮಂಗಳವಾರ (ಅ.1)ರ ಬೆಳಗ್ಗೆ 11.30ಕ್ಕೆ ನಡೆಯಲಿದೆ.

Advertisement

ಬೆಳಗ್ಗೆ 8ರಿಂದ 9.30ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, 9.30ರಿಂದ 11.30ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಯ ಜತೆಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ, ಮಾರುಕಟ್ಟೆ, ಲೆಕ್ಕಪತ್ರ ಹಾಗೂ ಆರೋಗ್ಯ ಸ್ಥಾಯಿ ಸಮಿತಿಗಳ ಚುನಾವಣೆಯೂ ನಡೆಯಲಿದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತ ಅವರು ತಿಳಿಸಿದ್ದಾರೆ.

ಸ್ಥಾಯಿ ಸಮಿತಿ ಚುನಾವಣೆ ಅನಿರೀಕ್ಷಿತ: ಎಂಡು ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್‌ ತಡೆ ನೀಡಿದಾಗ ಎಲ್ಲ ಸ್ಥಾಯಿ ಸಮಿತಿಗಳ ಚುನಾವಣೆಯನ್ನೂ ಮಂದೂಡಬಹುದು ಎಂದು ನಿರೀಕ್ಷಿದಸಲಾಗಿತ್ತು ಎಂದು ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷ ವೇಲು ನಾಯಕರ್‌ ಹೇಳಿದ್ದಾರೆ.

ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು,”ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹೈಕೋರ್ಟ್‌ ಮೊರೆ ಹೋಗಿ, ತಡೆಯಾಜ್ಞೆ ತಂದ ಸಂದರ್ಭದಲ್ಲಿ ಎಲ್ಲ ಸ್ಥಾಯಿ ಸಮಿತಿಗಳ ಚುನಾವಣೆ ಅವಧಿ ಮುಗಿದ ಮೇಲೆ ನಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಎಂಟು ಸ್ಥಾಯಿ ಸಮಿತಿಗಳಷ್ಟೇ ಅಧಿಕಾರವಧಿ ನಮಗೂ ಇತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಗೊಂದಲ ಮೂಡಿಸಿದ್ದ ಪತ್ರ: ಅ.1ರಂದು ನಿಗದಿ ಪಡಿಸಿರುವ ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಲು ಹಾಗೂ ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ಏಕಕಲಾಕ್ಕೆ ನಡೆಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎ.ವಿಜಯಕುಮಾರ್‌ ಅವರು ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಮಂಗಳವಾರ ಬರೆದಿದ್ದಾರೆ ಎನ್ನಲಾದ ಪತ್ರದಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Advertisement

ವಿಜಯಕುಮಾರ್‌ ಅವರು ಬರೆದ ಪತ್ರದಲ್ಲಿ, “ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್‌ ತಡೆ ನೀಡಿರುವ ಹಿನ್ನಲೆಯಲ್ಲಿ ಹಾಗೂ ಕರ್ನಾಟಕ ಮುನ್ಸಿಪಾಲ್‌ ಕಾರ್ಪೊರೇಷನ್‌ (ಕೆಎಂಸಿ)ಯ ಕಾಯ್ದೆಯ ಸೆಕ್ಷನ್‌ 10(1), ಮತ್ತು ಸೆಕ್ಷನ್‌ 11(2)(ಬಿ)ಹಾಗೂ ಕೆಎಂಸಿ (ಚುನಾವಣಾ) ನಿಯಮಗಳು 1979ರ ನಿಯಮ 74ರಂತೆ ಕ್ರಮ ತೆಗೆದುಕೊಳ್ಳುವಂತೆ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ’ ಎಂದು ಉಲ್ಲೇಖೀಸಿದ್ದರು. ಇದು ಮೇಯರ್‌ ಚುನಾವಣೆ ಮತ್ತೆ ಮುಂದೂಡಿಕೆಯಾಗುವ ಬಗ್ಗೆ ಅನುಮಾನಗಳಿಗೆ ಕಾರಣವಾಗಿತ್ತು.

ಈ ಸಂಬಂಧ ವಿವರಣೆ ನೀಡಿರುವ ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತ ಅವರು,” ನಗರಾಭಿವೃದ್ಧಿ ಇಲಾಖೆ ಬರೆದಿರುವ ಪತ್ರದಂತೆ ಹಾಗೂ ಹೈಕೋರ್ಟ್‌ ಆದೇಶದಂತೆ ಬಿಬಿಎಂಪಿ ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಮೂರರಿಂದ ನಾಲ್ಕು ಮತಗಳು ನಿರ್ಣಾಯಕ: ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆಯಾದರೂ, ಕೊನೆಯ ಸಂದರ್ಭದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆ ಇದೆ. ಮೇಯರ್‌ ಆಯ್ಕೆಗೆ 129 ಮ್ಯಾಜಿಕ್‌ ಸಂಖ್ಯೆಯಾಗಿದೆ. ಬಿಜೆಪಿಗೆ ಪರವಾಗಿ 125 ಮತಗಳು ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ.

ಅದೇ ರೀತಿ ಪಾಲಿಕೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ, 125 ಮತಗಳಾಗಲಿವೆ. ಈ ಹಂತದಲ್ಲಿ ಬಿಬಿಎಂಪಿಯ ಪಕ್ಷೇತರ ಸದಸ್ಯರು ಹಾಗೂ ಅನರ್ಹ ಶಾಸಕರ ಬೆಂಬಲಿಗರ ಮತಗಳು ನಿರ್ಣಾಯಕವಾಗಲಿದೆ. ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌ ಹಾಗೂ ಸದಾನಂದ ಗೌಡ ಅವರು ಮೇಯರ್‌ ಆಯ್ಕೆಗೆ ಮತದಾನಕ್ಕೆ ಗೈರು ಹಾಜರಾದರೆ, ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಅದೇ ರೀತಿ ಅನರ್ಹಗೊಂಡಿರುವ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರು ವಿಪ್‌ ಉಲ್ಲಂಘನೆ ಮಾಡುವ ಸಾಧ್ಯತೆಯೂ ಇದೆ. “ಅನರ್ಹ ಶಾಸಕರ ಬೆಂಬಲಿಗರೊಬ್ಬರು ನಮ್ಮ ನಾಯಕರ ರಾಜಕೀಯ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ’ ನಾಳೆ ಬೆಳೆಗ್ಗೆ ನೋಡಿಕೊಂಡು ನಿರ್ಣಾಯ ತೆಗೆದುಕೊಳ್ಳುತ್ತೇವೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ. ಬಿಎಂಪಿಯಲ್ಲಿ ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಈ ಎಲ್ಲ ಕಾರಣಗಳಿಂದ ಮೇಯರ್‌ ಚುನಾವಣೆ ಕುತೂಹಲ ಮೂಡಿಸಿದೆ.

ಪಕ್ಷಗಳ ಸಂಖ್ಯಾಬಲ
ಮತದಾರರು ಸಂಖ್ಯೆ ಬಿಜೆಪಿ ಕಾಂಗ್ರೆಸ್‌ ಜೆಡಿಎಸ್‌ ಪಕ್ಷೇತರರು
ಪಾಲಿಕೆ ಸದಸ್ಯರು 198 101 76 14 07
ಲೋಕಸಭಾ ಸದಸ್ಯರು 5 4 1 0 –
ರಾಜ್ಯಸಭಾ ಸದಸ್ಯರು 9 02 06 01 –
ವಿಧಾನಸಭಾ ಸದಸ್ಯರು 23 11 11 01 –
ವಿಧಾನಪರಿಷತ್‌ ಸದಸ್ಯರು 22 07 10 05 –
ಒಟ್ಟು 257 125 104 21 07

ಪಾಲಿಕೆ ಕಚೇರಿ ಸುತ್ತ ನಿಷೇಧಾಜ್ಞೆ ಜಾರಿ
ಬೆಂಗಳೂರು: ಬಿಬಿಎಂಪಿ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪಾಲಿಕೆ ಕಚೇರಿ ಸುತ್ತ ಪೊಲೀಸ್‌ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಬಿಬಿಎಂಪಿ ಆವರಣದ 200 ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಸೋಮವಾರ ಆದೇಶ ಹೊರಡಿಸಿದ್ದಾರೆ. ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಅದರಂತೆ, ಐದು ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ, ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದಿಲ್ಲ. ಶಸ್ತ್ರಗಳನ್ನು, ದೊಣ್ಣೆಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಪ್ರದರ್ಶನ, ಒಯ್ಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಒಬ್ಬ ಹೆಚ್ಚುವರಿ ಪೊಲೀಸ್‌ ಆಯುಕ್ತರು, ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎರಡು ಕೆಎಸ್‌ಆರ್‌ಪಿ ತುಕಡಿ ಸೇರಿ ಒಟ್ಟು 650 ಪೊಲೀಸ್‌ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next