Advertisement

ಬರ ನೋಡಲು ಬಂದ ಸಚಿವರು ನೆರೆ ಮರೆತರು!

11:53 AM Aug 19, 2018 | Team Udayavani |

ರಾಯಚೂರು: ಮುಂಗಾರು ಮಳೆ ಇಲ್ಲದೆ ಕಂಗೆಟ್ಟ ರೈತರ ಕಷ್ಟ ಆಲಿಸಲು ಬಂದಿದ್ದ ಕೃಷಿ ಸಚಿವರು, ತರಾತುರಿಯಲ್ಲಿ ಅನಾವೃಷ್ಟಿ ಕಣ್ತುಂಬಿಕೊಂಡರು. ಆದರೆ, ಮಳೆ ಇಲ್ಲದೆಯೂ ಜಿಲ್ಲೆಯನ್ನು ಬಾಧಿಸುತ್ತಿರುವ ನೆರೆಯನ್ನೇ ಮರೆತರು. ಸಚಿವ ಎಚ್‌.ಎನ್‌.ಶಿವಶಂಕರ ರೆಡ್ಡಿ ಶನಿವಾರ ತಾಲೂಕಿನ ವಿಜಯನಗರ ಕ್ಯಾಂಪ್‌ನಲ್ಲಿ ಬರ ಅಧ್ಯಯನ ನಡೆಸಿದರು. ಆದರೆ, ಜಿಲ್ಲೆಯ ಬರದ ಬಗ್ಗೆ ಅವರಿಗೆ ವಿವರಿಸಬೇಕಿದ್ದ ಜಿಲ್ಲಾಧಿಕಾರಿಯಾಗಲಿ, ಸಿಇಒ ಆಗಲಿ ಸ್ಥಳದಲ್ಲಿರಲಿಲ್ಲ. ಇರುವ ಅಧಿಕಾರಿಗಳೇ ವರದಿ ಒಪ್ಪಿಸಿದರು.

Advertisement

ವಿಪರ್ಯಾಸವೆಂದರೆ ಜಿಲ್ಲೆ ಬರದಿಂದ ಹೇಗೆ ತತ್ತರಿಸಿದೆಯೋ ನೆರೆಯಿಂದಲೂ ಕೂಡ ಸಮಸ್ಯೆಗೆ ತುತ್ತಾಗಿದೆ. ಉಭಯ ನದಿಗಳು ತುಂಬಿ ಹರಿಯುತ್ತಿದ್ದು, ತುಂಗಭದ್ರಾ ನದಿಪಾತ್ರಗಳಲ್ಲಿ ರೈತರ ಬದುಕು ಅಕ್ಷರಶಃ ಬೀದಿ ಪಾಲಾಗುತ್ತಿದೆ. ಬಿತ್ತನೆ ಮಾಡಿದ ಬೆಳೆಗಳೆಲ್ಲ ನೀರಿಗೆ ಕೊಚ್ಚಿ ಹೋಗಿವೆ. ಪಂಪ್‌ಸೆಟ್‌ಗಳು ನದಿಯಲ್ಲಿ ಮುಳುಗಿ ಹೋಗಿವೆ. ಆದರೆ, ಆ ಬಗ್ಗೆ ಕಿಂಚಿತ್ತೂ ಸಚಿವರು ವಿಚಾರಿಸಲಿಲ್ಲ. 

ನಂತರ ಸುಲ್ತಾನಪುರ ಗ್ರಾಮಕ್ಕೆ ತೆರಳಿ ಅಲ್ಲೊಂದಿಷ್ಟು ಕಾಲ ಪರಿಶೀಲನೆ ನಡೆಸಿ ಯಾದಗಿರಿಯತ್ತ ಪ್ರಯಾಣ ಬೆಳೆಸಿದರು. ಅವರು ಬರುವುದು ಒಂದೂವರೆ ಗಂಟೆ ತಡವಾದರೂ ರೈತರು ಕಾದು ಕುಳಿತಿದ್ದರು.

ತುಂಗಭದ್ರಾ ನದಿಗೆ 2 ಲಕ್ಷ ಕ್ಯುಸೆಕ್‌ ನೀರು ಹರಿಸಿದ ಪರಿಣಾಮ ನದಿ ಪಾತ್ರದ ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅತ್ತ ರೈತರು ಬಿತ್ತನೆ ಮಾಡಿದ್ದ ಭತ್ತ, ಹತ್ತಿ ಸೇರಿ ಇತರೆ ಬೆಳೆಗಳು ನೀರಲ್ಲಿ ಮುಳುಗಿ ಹಾಳಾಗುತ್ತಿವೆ. ಆ ಭಾಗದ ರೈತರು ಅನುಭವಿಸುತ್ತಿರುವ ಸಂಕಷ್ಟಗಳನ್ನು
ಸಚಿವರು ಸೌಜನ್ಯಕ್ಕೂ ಕೇಳಲಿಲ್ಲ. ಅಲ್ಲದೇ ಅವರು ಭೇಟಿ ನೀಡಿದ್ದು ನೀರಾವರಿ ಆಶ್ರಿತ ಪ್ರದೇಶಗಳಿಗೆ ವಿನಃ ಬಯಲು ಸೀಮೆಗಲ್ಲ. ಅದೊಂದು ಕಾಟಾಚಾರದ ಪ್ರವಾಸದಂತಾಗಿತ್ತು.

ಇನ್ನು ಈಗಾಗಲೇ ಜಿಲ್ಲೆಯ ಬರ ಅಧ್ಯಯನ ನಡೆಸಿರುವ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಸಿಇಒ ನಲಿನ್‌ ಅತುಲ್‌ ಸಚಿವರು ಬಂದಾಗ ಕಾಣಲಿಲ್ಲ. ಇದರಿಂದ ಸಚಿವರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ನೀಡಿದ ಬಿತ್ತನೆ ಪ್ರಮಾಣ, ವಿಮಾ ಸೌಲಭ್ಯದ ವಿನಃ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಸಚಿವರು ಕೂಡ ಕೆದಕಲು ಹೋಗಲಿಲ್ಲ. ಅಲ್ಲಿಗೆ ಬರ ನೋಡಲು ಬಂದ ಸಚಿವರು ನೆರೆ ಮರೆತು ಜಿಲ್ಲೆಯಿಂದ ಕಾಲ್ಕಿತ್ತರು.

Advertisement

13 ಜಿಲ್ಲೆಗಳಲ್ಲಿ ಶೇ.63ರಷ್ಟು ಬೆಳೆ ಹಾನಿ: ಶಿವಶಂಕರ
ರಾಯಚೂರು:
ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿ ಬರ ಆವರಿಸುತ್ತಿದೆ. ಹೀಗಾಗಿ ಪರಿಸ್ಥಿತಿ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲೇ ಬರ ಘೋಷಣೆ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಎಂದು ಕೃಷಿ ಸಚಿವ ಎಚ್‌.ಎನ್‌. ಶಿವಶಂಕರ ರೆಡ್ಡಿ ತಿಳಿಸಿದರು.

ತಾಲೂಕಿನ ವಿಜಯನಗರ ಕ್ಯಾಂಪ್‌ನ ಜಮೀನುಗಳಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾಕಷ್ಟು ಭಾಗ ಬರಕ್ಕೆ ತುತ್ತಾಗಿದ್ದರೂ ಕೇಂದ್ರ ಸರ್ಕಾರದ ಮಾನದಂಡದಿಂದಾಗಿ ಬರಪೀಡಿತ ಎಂದು ಘೋಷಿಸಲಾಗುತ್ತಿಲ್ಲ. ಶೇ.50ರಷ್ಟು ಬೆಳೆ ಹಾನಿಯಾದರೆ ಬರ
ಘೋಷಿಸಬೇಕು ಎಂಬ ನಿಯಮವಿದೆ. ಆದರೆ, ಜಿಲ್ಲೆಯಲ್ಲಿ ಶೇ.63ರಷ್ಟು ಬೆಳೆ ಹಾನಿಯಾಗಿದ್ದು, ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ ಬರ ಘೋಷಿಸಲಾಗುವುದು ಎಂದರು.

ಕೊನೆ ಭಾಗದ ರೈತರಿಗೆ ನೀರು ತಲುಪದಿರುವ ಸಮಸ್ಯೆ ಎಲ್ಲ ಭಾಗದಲ್ಲೂ ಇದೆ. ಹೀಗಾಗಿ ಅಕ್ರಮ ನೀರು ಬಳಕೆಗೆ ಕಡಿವಾಣ ಹಾಕಲು ವಿಶೇಷ ಕಾನೂನು ರೂಪಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಜತೆಗೂ ಚರ್ಚಿಸಿದ್ದು, ಶೀಘ್ರದಲ್ಲೇ ಕಾನೂನು ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಮಳೆ ಕೊರತೆ ಹಿನ್ನೆಲೆಯಲ್ಲಿ ಫಸಲ್‌ ಬಿಮಾ ಯೋಜನೆಯಡಿ ಬೆಳೆಗಳ ವಿಮೆ ಮಾಡಿಸಲು ರೈತರು ಆಸಕ್ತಿ ತೋರುತ್ತಿದ್ದು, ಜಿಲ್ಲೆಯಲ್ಲೂ 73 ಸಾವಿರ ರೈತರು ವಿಮೆ ಮಾಡಿಸಿದ್ದಾರೆ. ಜಿಲ್ಲೆಗೆ ಇನ್ನೂ 23 ಕೋಟಿ ರು. ಬಾಕಿ ಬರಬೇಕಿದ್ದು, ಸಂಬಂಧಿಸಿದ ಸಂಸ್ಥೆ ಜತೆ ಮಾತುಕತೆ ನಡೆಸಲಾಗಿದೆ. 15 ದಿನದೊಳಗೆ ರೈತರ ಖಾತೆಗೆ ಹಣ ಸಂದಾಯ ಮಾಡುವಂತೆ ಸೂಚಿಸಲಾಗಿದೆ. ಅದರ ಜತೆಗೆ ಬೆಳೆ ವಿಮೆ ಮಾಡಿದ ವರ್ಷದಲ್ಲೇ ಪರಿಹಾರ ನೀಡಬೇಕು, ಹೋಬಳಿವಾರು ವಿಮೆ ಅಧಿಕಾರಿಗಳ ನೇಮಕಕ್ಕೆ ಕಂಪನಿಗಳಿಗೆ ಸೂಚನೆ ನೀಡಲಾಗುವುದು. ರಾಯಚೂರು ಕೃಷಿ ವಿವಿಯಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗದ ನೇಮಕದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ದೂರುಗಳಿದ್ದು, ಅದಕ್ಕಾಗಿ ಒಂದು ಸಮಿತಿ ರಚಿಸಲಾಗಿದೆ. ತನಿಖೆ ಕೈಗೊಂಡು ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು. ವಿವಿ ಕುಲಪತಿ ಆಯ್ಕೆಗಾಗಿ ಶೀಲವಂತ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅವರು ನೀಡುವ ವರದಿ ಆಧರಿಸಿ ಕುಲಪತಿ  ಮಿಸಲಾಗುವುದು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ, ಸಹಾಯಕ ನಿರ್ದೇಶಕ ಡಾ| ಸಂದೀಪ ಸೇರಿ ಇತರರಿದ್ದರು. ರೈತ ಮಿತ್ರ ವೆಬ್‌ಸೈಟ್‌ಗೆ ಚಾಲನೆ ಇದೇ ವೇಳೆ ರೈತ ಮಿತ್ರ ವೆಬ್‌ಸೈಟ್‌ ನೋಂದಣಿ ಅಪ್ಲಿಕೇಶನ್‌ಗೆ ಚಾಲನೆ ನೀಡಿದ ಅವರು, ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಒಂದೇ ಬಾರಿ ಏಕ ರೂಪದಲ್ಲಿ ರೈತ ದತ್ತಾಂಶ ಮಾಹಿತಿ ಸಂಗ್ರಹಣೆಗೆ ಇದು ಸಹಕಾರಿಯಾಗಲಿದೆ. ರೈತರ ನೋಂದಣಿ, ಪಹಣಿ, ಬ್ಯಾಂಕ್‌ ವಿವರ ಸಿಗಲಿದೆ. ಒಮ್ಮೆ ನೋಂದಣಿಯಾದರೆ ಅದು ಶಾಶ್ವತವಾಗಿ ಉಳಿಯಲಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next