Advertisement

ಮಂತ್ರಿ ಗಿರಿಗಾಗಿ ಕೈ ಗೆಲ್ಲಿಸುವ ಕಸರತು

10:27 AM Apr 05, 2019 | pallavi |

ಬೆಂಗಳೂರು: ನಗರದ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಈ ಬಾರಿ ಶತಾಯ ಗತಾಯ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಸರತ್ತು ನಡೆಸುತ್ತಿದೆ. ಪ್ರಮುಖವಾಗಿ ಈ ಚುನಾವಣೆಯಲ್ಲಿ ಹಾಲಿ ಸಚಿವ ಕೃಷ್ಣಬೈರೇಗೌಡ ಗೆಲುವು ಸಾಧಿಸಿದರೆ, ಖಾಲಿಯಾಗುವ ಸಚಿವ ಸ್ಥಾನ ತಮಗೇ ದೊರೆಯುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನಗರದ ಹಾಲಿ ಕಾಂಗ್ರೆಸ್‌ ಶಾಸಕರು ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಶಾಸಕರೇ ಹೆಚ್ಚಿದ್ದಾರೆ. ಆದರೆ, 2004 ರಿಂದ ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ಮುಖ ಕಂಡಿಲ್ಲ. ಕ್ಷೇತ್ರ ಪುನರ್‌ ವಿಂಗಡನೆಗೂ ಮುಂಚೆ 2004 ರಲ್ಲಿ ಸಿ.ಕೆ.ಜಾಫ‌ರ್‌ ಷರೀಫ್ ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಕ್ಷೇತ್ರ ವಿಂಗಡನೆಯ ನಂತರ ಮೂರು ಕ್ಷೇತ್ರಗಳಾದ ನಂತರವೂ ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ.

ಈ ಬಾರಿ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಲ್ಲಿ ಸತತ ಆರು ಬಾರಿ ಗೆಲುವು ಸಾಧಿಸಿದ್ದ ಅನಂತಕುಮಾರ್‌ ಅವರ ಅಕಾಲಿಕ ನಿಧನದಿಂದ ಪಕ್ಷ ಯುವ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ಕೊಟ್ಟು ಅದೃಷ್ಟ ಪರೀಕ್ಷೆಗೊಡ್ಡಿದ್ದು, ಕಾಂಗ್ರೆಸ್‌ ಅವರ ವಿರುದ್ಧ ಪ್ರಭಾವಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರನ್ನು ಕಣಕ್ಕಿಳಿಸಿ ಗೆಲುವಿನ ಲೆಕ್ಕಾಚಾರ ಹಾಕುತ್ತಿದೆ. ಈ ಕ್ಷೇತ್ರದಲ್ಲಿ ಹರಿಪ್ರಸಾದ್‌ ಅವರಿಗೆ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಜತೆಯಾಗಿ ನಿಂತಿದ್ದಾರೆ.

ಹಿರಿತನದ ಲೆಕ್ಕಾಚಾರ: ಸಚಿವ ಸ್ಥಾನ ಸಿಗದಿದ್ದರಿಂದ ಮುನಿಸಿಕೊಂಡಿದ್ದ ಇಬ್ಬರೂ ನಾಯಕರನ್ನು ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಹರಿಪ್ರಸಾದ್‌ ಯಶಸ್ವಿಯಾಗಿದ್ದು, ಅವರಿಗೆ ಮಂತ್ರಿ ಸ್ಥಾನದ ಆಸೆ ಹುಟ್ಟಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ, ಒಂದೊಮ್ಮೆ ಕೃಷ್ಣ ಬೈರೇಗೌಡ ಅವರು ಲೋಕಸಭೆಗೆ ಆಯ್ಕೆಯಾಗಿ, ಸಚಿವ ಸ್ಥಾನ ಖಾಲಿಯಾದರೆ, ಆ ಸ್ಥಾನ ಹಿರಿತನದ ಆಧಾರದಲ್ಲಿ ತಮಗೇ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿ ರಾಮಲಿಂಗಾರೆಡ್ಡಿ ಹಾಗೂ ಎಂ.ಕೃಷ್ಣಪ್ಪ ಹರಿಪ್ರಸಾದ್‌ ಗೆಲುವಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೇಂದ್ರದಲ್ಲೂ ರೇಸ್‌: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಐವರು ಶಾಸಕರಿದ್ದು, ಅವರಲ್ಲಿ ಕೆ.ಜೆ.ಜಾರ್ಜ್‌ ಹಾಗೂ ಜಮೀರ್‌ ಅಹಮದ್‌ ಸಚಿವರಾಗಿದ್ದಾರೆ. ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಆದರೆ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವ ಮಾಜಿ ಸಚಿವ ರೋಷನ್‌ ಬೇಗ್‌ ಹಾಗೂ ಎನ್‌.ಎ.ಹ್ಯಾರಿಸ್‌ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

Advertisement

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಕೈ ತಪ್ಪಿದ್ದರಿಂದ ರೋಷನ್‌ ಬೇಗ್‌ ಮುನಿಸಿಕೊಂಡಿದ್ದರು. ಆದರೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ರೋಷನ್‌ ಬೇಗ್‌ ಅವರಿಗೆ ಮಂತ್ರಿ ಸ್ಥಾನದ ಆಮಿಷ ತೋರಿಸಿಯೇ ರಿಜ್ವಾನ್‌ ಅರ್ಷದ್‌ ಪರ ಸಕ್ರೀಯವಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಮುನಿಸು ಬದಿಗಿಟ್ಟು ರೋಷನ್‌ ಬೇಗ್‌ ಈ ಬಾರಿ ರಿಜ್ವಾನ್‌ ಅರ್ಷದ್‌ಗೆ ತಮ್ಮ ಕ್ಷೇತ್ರದಲ್ಲಿ ಎಲ್ಲರಿಗಿಂತಲೂ ಹೆಚ್ಚು ಮತ ಕೊಡಿಸುವ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಐವರು ಶಾಸಕರಿದ್ದು, ಪ್ರಮುಖವಾಗಿ ಎಸ್‌.ಟಿ.ಸೋಮಶೇಖರ್‌ ಹಾಗೂ ಬೈರತಿ ಬಸವರಾಜ್‌ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟಾಗ ಕೃಷ್ಣ ಬೈರೇಗೌಡ ಅವರು ಅಭ್ಯರ್ಥಿಯಾಗಬೇಕೆಂದು ಶಾಸಕರೆಲ್ಲರೂ ಒಗ್ಗಟ್ಟಿನಿಂದ ಅವರ ಬೆಂಬಲಕ್ಕೆ ನಿಂತಿದ್ದರು. ಶಾಸಕರ ಒಗ್ಗಟ್ಟಿನ ಲೆಕ್ಕಾಚಾರದ ಹಿಂದೆ ಮಂತ್ರಿಗಿರಿಯ ಮೇಲಿನ ಆಸೆಯೇ ಕಾರಣ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಕೃಷ್ಣ ಬೈರೇಗೌಡರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮುಂಚೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಶಾಸಕರೊಂದಿಗಿನ ಸಭೆಯಲ್ಲಿ ಅವರನ್ನು ಗೆಲ್ಲಿಸಿಕೊಂಡು ಬಂದರೆ ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಶಾಸಕರು ಮಾತ್ರ ಈ ಬಗ್ಗೆ ಬಹಿರಂಗವಾಗಿ ತಮ್ಮ ಬಯಕೆಯನ್ನು ಹೇಳಿಕೊಳ್ಳದೇ ಇದ್ದರೂ, ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟುಕೊಂಡೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next