Advertisement

ಸೌಮ್ಯ ಧ್ವನಿಯ ಗಟ್ಟಿ ನಾಯಕ ಕಾರಜೋಳ

05:48 PM Jan 25, 2021 | Team Udayavani |

ಮುಧೋಳ: ಸರಳ ವ್ಯಕ್ತಿತ್ವ, ಮೃದು ಸ್ವಭಾವ, ಸರ್ವ ಜನಾಂಗದವರನ್ನೂ ಅಪ್ಪಿಕೊಂಡು ಮುನ್ನಡೆಯುವ ಸೌಮ್ಯ ಧ್ವನಿಯ ಗಟ್ಟಿ ನಾಯಕ ಗೋವಿಂದ ಕಾರಜೋಳ..

Advertisement

ಹೌದು, ತಮ್ಮ ಕ್ರಿಯಾಶೀಲತೆ, ಹೋರಾಟದ ಬದುಕು, ಸಾಮಾನ್ಯ ಜನರೊಂದಿಗೆ ಬೆರೆಯುವ ನಾಯಕತ್ವದ ಗುಣಗಳಿಂದಲೇ ಇಂದು ರಾಜ್ಯ ಮಟ್ಟದ ನಾಯಕರಾಗಿ ಬೆಳೆದ ಕಾರಜೋಳರು, ಪ್ರಸ್ತುತಬಿಜೆಪಿ ಸರ್ಕಾರದಲ್ಲಿ ಉಪ  ಮುಖ್ಯಮಂತ್ರಿಯಾಗಿ, ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಅತ್ಯಂತ ಹಿಂದುಳಿದ ಗ್ರಾಮದಲ್ಲಿ ಜನಿಸಿದಗೋವಿಂದ ಕಾರಜೋಳ ಸರಳ ಸಜ್ಜಿನಿಕೆಗೆ ಹೆಸರಾದವರು.

ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣ ಪಡೆದು, 90ರ ದಶಕದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾಗ ಭವಿಷ್ಯದಲ್ಲಿ ಸಕ್ಕರೆ ನಾಡು ಮುಧೋಳದ ಜನನಾಯಕನಾಗಿ ರೂಪುಗೊಳ್ಳುವ ಯಾವ ಮುಂದಾಲೋಚನೆಯೂ ಅವರಲ್ಲಿ ಇರಲಿಲ್ಲ. ಆದರೆ, ಕಾರಜೋಳರು ರಾಮಕೃಷ್ಣ ಹೆಗಡೆಯವರ ಕಣ್ಣಿಗೆ ಬಿದ್ದ ಬಳಿಕ ಅವರ ಬದುಕು ದೊಡ್ಡ ತಿರುವು ಪಡೆದುಕೊಂಡಿತು.

ಅವರ ಮಾರ್ಗದರ್ಶನದಲ್ಲಿ ಸಾಧನೆಯ ಶಿಖರವೇರಿದ ಕಾರಜೋಳರ ಸಾಧನೆ ಅನನ್ಯ. ಯಾವ ಇಲಾಖೆಯಲ್ಲಿ ಗುಮಾಸ್ತನಾಗಿಕೆಲಸಕ್ಕೆ ಸೇರಿದ್ದರೋ ಇಂದು ಅದೇ ಇಲಾಖೆಯ ಸಚಿವರಾಗಿ ಜನಪರ ಕಾರ್ಯಕ್ಕೆ ಹೆಸರಾಗಿದ್ದಾರೆ. ಇದರೊಂದಿಗೆ ಪಕ್ಷ ಸಂಘಟನೆ, ಜನಹಿತ ಕಾಳಜಿ, ಕಾರ್ಯಕ್ಷಮತೆ ಎಲ್ಲರೊಳಗೊಂದಾಗುವ ಗುಣವೇ ಇಂದು ಅವರನ್ನು ನಾಡಿನ ದೊರೆಯ ಸ್ಥಾನದ ಸಮೀಪಕ್ಕೆ ತಂದು ನಿಲ್ಲಿಸಿದೆ.

ಮುಧೋಳಕ್ಕೆ ಎಂಜಿನಿಯರಿಂಗ್‌ ಕಾಲೇಜು:

Advertisement

ಸಮಾಜದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೊಂದೇ ಪರಿಹಾರ ಎಂಬುದನ್ನು ಗಾಢವಾಗಿ ನಂಬಿರುವ ಗೋವಿಂದ ಕಾರಜೋಳರು, ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಶಾಲೆ, ವಸತಿನಿಲಯ, ಪದವಿಪೂರ್ವ ಕಾಲೇಜು, ತೋಟದ ಶಾಲೆಗಳು, ಪ್ರೌಢ ಶಾಲೆಗಳನ್ನು ಆರಂಭಿಸಿ ತಾವೊಬ್ಬ ಅಪ್ಪಟ ಶಿಕ್ಷಣಪ್ರೇಮಿ ಎಂಬುದನ್ನು ನಿರೂಪಿಸಿದ್ದಾರೆ. ಅಷ್ಟೇ ಅಲ್ಲದೆ ಬಾಗಲಕೋಟೆಯ ಬವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರಲ್ಲಿ ಮನವಿ ಮಾಡಿ ಮುಧೋಳ ನಗರದಲ್ಲಿ ಎಂಜಿನಿಯರಿಂಗ್‌ ಕಾಲೇಜು ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ.

ಸಣ್ಣ ನೀರಾವರಿ ಖಾತೆ ಮೂಲಕ ರಾಜ್ಯದ ಕೆರೆ-ಕಟ್ಟೆ, ಬಾಂದಾರಗಳಿಗೆ ನೀರು ಹರಿಸುವುದರ ಮೂಲಕ ಭೂಮಿಗೆ ಜೀವಕಳೆ ತುಂಬಿದವರು. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಮುಧೋಳದಲ್ಲಿ ಸಾವಯವ ಬೆಲ್ಲ ತಯಾರಿಕೆ ಕೇಂದ್ರ ನಿರ್ಮಿಸಿ ಅದಕ್ಕೆ ವಿಶ್ವಮಟ್ಟದಲ್ಲಿ ಮಾರುಕಟ್ಟೆ ಒದಗಿಸುವಲ್ಲಿ ಶ್ರಮಿಸಿದ್ದಾರೆ. ದೇಶದಲ್ಲೇ ಹೆಸರುವಾಸಿಯಾದ ಮುಧೋಳದ ಬೇಟೆ ನಾಯಿ ತಳಿ ಅಭಿವೃದ್ಧಿಪಡಿಸುವುದಕ್ಕಾಗಿ ತಿಮ್ಮಾಪುರ ಬಳಿ ಮುಧೋಳ ಶ್ವಾನ ಸಂಶೋಧನಾ ಕೇಂದ್ರ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅನುಭವಿ ಆಡಳಿತಗಾರ:

ಹಿಂದಿನ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಸಚಿವರಾಗಿದ್ದರು. ಬಳಿಕ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ, ಅಂಕಿ-ಸಂಖ್ಯೆ, ಜವಳಿ ಹಾಗೂ ಸಮಾಜ ಕಲ್ಯಾಣ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದರು.

ಮುಧೋಳದ ಉಸುಕಿನ ಮೈದಾನದ ವ್ಯಾಜ್ಯವನ್ನು ಶಾಂತಯುತವಾಗಿ ಬಗೆಹರಿಸಿದರು. ಪರಿಶಿಷ್ಟ ಜಾತಿ  ಪಂಗಡ ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಮಾಣದಲ್ಲಿ ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನ ನೀಡಿ ಜನಾನುರಾಗಿ ಎನಿಸಿಕೊಂಡರು. ಗ್ರಾಮೀಣ ಮಟ್ಟದಲ್ಲಿ ವಿದ್ಯುತ್‌ ಸಮಸ್ಯೆ ನೀಗಿಸಲು 24 x7 ವಿದ್ಯುತ್‌ ಒದಗಿಸುವ ಕಾರ್ಯಕ್ಕೆ ಮುಂದಾಗಿ ಅದರಲ್ಲಿ ಯಶಸ್ಸನ್ನು ಸಾಧಿಸಿದರು.

ಯಶಸ್ವಿ ಸಂಘಟಕ: ಕನ್ನಡ ನಾಡು-ನುಡಿ ರಕ್ಷಕನಾಗುವುದರೊಂದಿಗೆ ನಗರದಲ್ಲಿ 64ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಂದಿನ ಸಚಿವ ಅಜಯಕುಮಾರ ಸರನಾಯಕ ಅವರ ನೇತೃತ್ವದಲ್ಲಿಯಶಸ್ವಿಯಾಗಿ ಸಂಘಟಿಸುವುದರ  ಮೂಲಕ ನಾಡಿನ ಸಾಹಿತ್ಯ ದಿಗ್ಗಜರಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಾಹಿತ್ ಸಮ್ಮೇಳನಕ್ಕೆ ಸಂಗ್ರಹಿಸಿದ ಉಳಿದ ಹಣ ಹಾಗೂ ಅದಕ್ಕೆ ಮತ್ತಷ್ಟು ಅನುದಾನ ಸೇರಿಸಿ ನಗರದಲ್ಲಿ ರನ್ನಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯವನ್ನು ನಿರ್ಮಿಸಿದರು.

ಇದನ್ನೂ ಓದಿ:ಕಲೆಗಳು ಸತ್ಯ ಸೌಂದರ್ಯದ ಮೀಮಾಂಸೆ

ಇದರೊಂದಿಗೆ ದಸರಾ ವೈಭವದ ಮಾದರಿಯಲ್ಲಿ ಮುಧೋಳದಲ್ಲಿ ರನ್ನ ವೈಭವ ಆರಂಭಿಸಿ ಕವಿ ಚಕ್ರವರ್ತಿ ರನ್ನನ ಹೆಸರನ್ನು ಅಜರಾಮರರಾಗಿಸಿದ್ದಾರೆ. ಊರು ಕೇರಿಗಳಲ್ಲಿ ದೇವಸ್ಥಾನಗಳು, ಸಮುದಾಯ ಭವನ, ಶಾದಿ ಮಹಲ್‌ಗ‌ಳನ್ನು ನಿರ್ಮಿಸುವ ಮೂಲಕ ಸರ್ವಜನ ಸೌಹಾರ್ದತೆ ಮೆರೆದಿದ್ದಾರೆ. ಯಾರೇ ತನಗೆ ಕಷ್ಟ ಎಂದು ಹೇಳಿ ಇವರ ಬಳಿ ಹೋದರೂ ನಗುಮೊಗದಿಂದಲೇ ಅವರ ಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುವ ವ್ಯಕ್ತಿತ್ವ ಹೊಂದಿರುವ ಗೋವಿಂದ ಕಾರಜೋಳರು ಧೀಮಂತ ನಾಯಕ ಎಂದರೂ ಅತಿಶಯೋಕ್ತಿಯಲ್ಲ.

Advertisement

Udayavani is now on Telegram. Click here to join our channel and stay updated with the latest news.

Next