Advertisement

ಕ‌ಲಬುರಗಿಯಲ್ಲಿ ಹಾರಿತು ಲೋಹದ ಹಕ್ಕಿ

12:08 PM Aug 27, 2018 | |

ಕಲಬುರಗಿ: ವಿಭಾಗೀಯ ಕೇಂದ್ರ ಹೊಂದಿರುವ ಇಲ್ಲಿನ ವಿಮಾನ ನಿಲ್ದಾಣದಿಂದ ಪರೀಕ್ಷಾರ್ಥವಾಗಿಯಾದರೂ ವಿಮಾನ ಹಾರಾಡಲಿ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛೆಯಂತೆ ಲಘು ವಿಮಾನ ರವಿವಾರ ಯಶಸ್ವಿಯಾಗಿ ಹಾರಾಡಿದೆ. ಆದರೆ ಸಾರ್ವಜನಿಕರ ವಿಮಾನ ಹಾರಾಟ ಯಾವಾಗ ಶುರು ಎನ್ನುವುದು ಕುತೂಹಲ ಮೂಡಿಸಿದೆ.

Advertisement

ಕಲಬುರಗಿ-ಸೇಡಂ ರಸ್ತೆಯಲ್ಲಿರುವ 740 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ರವಿವಾರ ನಡೆಸಲಾದ ಹೈದ್ರಾಬಾದ್‌ನ ಏಶಿಯನ್‌ ಪೆಸಿಫಿಕ್‌ ಫ್ಲೈಟ್‌ ಟ್ರೇನಿಂಗ್‌ ಅಕಾಡೆಮಿಯ ಡೈಮಂಡ್‌-40 ಮತ್ತು ಡೈಮಂಡ್‌-42 ಎನ್ನುವ ನಾಲ್ಕು ಆಸನವುಳ್ಳ ಎರಡು ಲಘು ವಿಮಾನಗಳು ಬಂದಿಳಿಯುವ ಮೂಲಕ ಕಲಬುರಗಿ ಜಿಲ್ಲೆಯ ಜನರ ಗಗನ ಹಾರಾಟದ ಆಸೆಗೆ ಹಸಿರು ನಿಶಾನೆ ತೋರಿಸಿದಂತಾಗಿದೆ. ಅಲ್ಲದೇ ನಾಗರಿಕ ವಿಮಾನಯಾನ ಸೇವೆಗೆ ಮುನ್ನುಡಿ ಹಾಕಿದಂತಾಗಿದೆ. 

ಭರ್ಜರಿ ಸ್ವಾಗತ: ಜನಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಸಾರ್ವಜನಿಕರ ಉತ್ಸಾಹದ ನಡುವೆ ರವಿವಾರ ಹೈದ್ರಾಬಾದ್‌ನಿಂದ ಬಂದಿಳಿದ ಎರಡು ಲಘು ವಿಮಾನಗಳ ಪೈಕಿ ಮಹಿಳಾ ಪೈಲಟ್‌ ಆಗಿರುವ ಕ್ಯಾಪ್ಟನ್‌ ಜಾನವಿ ಅವರ ಮೊದಲ ವಿಮಾನ ಕಲಬುರಗಿ ನೆಲದಲ್ಲಿ ಮೊದಲ ಬಾರಿಗೆ ಭೂಸ್ಪರ್ಶ ಮಾಡುತ್ತಿದ್ದಂತೆ ಚಪ್ಪಾಳೆ ತಟ್ಟಿ ಸ್ವಾಗತಿಸಿಕೊಳ್ಳಲಾಯಿತು. 

ಇವರೊಂದಿಗೆ ಕ್ಯಾಪ್ಟನ್‌ ಶಹೀನ ಶಹಾ, ಚೀಫ್‌ ಆಪರೇಟಿವ್‌ ಆಫಿಸರ್‌ ಹೇಮಂತ ಡಿ.ಪಿ. ಜೊತೆಗಿದ್ದರು. ನಂತರ ಕ್ಯಾಪ್ಟನ್‌ ಅರುಣ, ಕ್ಯಾಪ್ಟನ್‌ ಅಭಿಜಿತ್‌ ಅವರಿದ್ದ ಎರಡನೇ ಲಘು ವಿಮಾನ ಬಂದಿಳಿಯಿತು. ಪೈಲಟ್‌ ಅವರನ್ನು ಹಸ್ತಲಾಘವ ಮಾಡಿ ಸ್ವಾಗತಿಸಲಾಯಿತು. 

ಹಾದಿ ಇನ್ನೂ ದೂರ: ಮೂರ್‍ನಾಲ್ಕು ಸಲವೇ ಪ್ರಾಯೋಗಿಕ ವಿಮಾನ ಹಾರಾಟವೇ ಮುಂದೂಡಿಕೆ ಆಗಿದ್ದರಿಂದ ನಾಗರಿಕ ವಿಮಾನಸೇವೆ ಕನಸಿನ ಮಾತು ಎಂದು ಸಾರ್ವಜನಿಕರ ಮನಸ್ಸಲ್ಲಿ ಬೇರೂರಿತ್ತು. ಈಗ ಈ ಕನಸು ಚಿಗುರೊಡೆಯತೊಡಗಿದೆ. ಮ ನಸ್ಸಿನ ವಿಮಾನಕ್ಕಿಂತ ಕನಸಿನ ವಿಮಾನ ಹಾರಲಿ ಎಂಬುದು ಬಿಸಿಲೂರಿನ ಜನರ ಆಸೆಯಾಗಿದೆ. ರಾಜ್ಯ ಸರ್ಕಾರ ಅದರಲ್ಲೂ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯ ಹೈಕ ಭಾಗದ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದಾಗ ಮಾತ್ರ ಉಡಾನ್‌ ಯೋಜನೆ ಸೇರಿ ವಿಮಾನ ಹಾರಾಟ ಶುರುವಾಗಬಹುದಾಗಿದೆ. ಇದು ಸರಳವಾದುದ್ದಲ್ಲ. ಇದಕ್ಕೆಲ್ಲ ಒತ್ತಡ ಹಾಗೂ ಪ್ರಯತ್ನ ಬೇಕಾಗುತ್ತದೆ.

Advertisement

ಉಡಾನ್‌ ಯೋಜನೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಸೇರ್ಪಡೆ ಜತೆಗೆ ಖಾಸಗಿ ವಿಮಾನ ಹಾರಾಟ ಶುರುವಾಗುವ ನಿಟ್ಟಿನಲ್ಲಾದರೂ ಶ್ರಮ ವಹಿಸುವುದು ಮುಖ್ಯವಾಗಿದೆ. ಸಾರ್ವಜನಿಕ ಸಹಭಾಗಿತ್ವ ಆಧಾರದ ಮೇಲೆ ಖಾಸಗಿ ವಿಮಾನ ಶುರುವಾದರೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ವಿಮಾನಯಾನ ಸೇವೆಗೆ ಬಲ ಬರುತ್ತದೆ. ಒಟ್ಟಾರೆ ಕನಸಿನ ವಿಮಾನ ಹಾರಾಟ ಆಗಬೇಕೆಂಬುದೇ ಸಾರ್ವಜನಿಕರ ಒಕ್ಕೊರಲಿನ ಅಭಿಪ್ರಾಯವಾಗಿದೆ. ನಿರೀಕ್ಷೆಯಂತೆ ಎಲ್ಲ ಕೆಲಸ ನಡೆದರೆ ಕನಿಷ್ಠ ವರ್ಷದೊಳಗೆ ಸಾರ್ವಜನಿಕ ವಿಮಾನ ಹಾರಾಟ ಶುರುವಾಗಬಹುದಾಗಿದೆ. ಇಲ್ಲದಿದ್ದರೆ ಇದಕ್ಕೆ ಇನ್ನೆಷ್ಟು ವರ್ಷ ಕಾಯಬೇಕೆಂಬುದನ್ನು ಕಾಲವೇ ಹೇಳಬೇಕು.  

ಕೇಂದ್ರಕ್ಕೆ ಪತ್ರ: ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನದನ್ವಯ ರನ್‌ ವೇ ಸಿದ್ಧಪಡಿಸಲಾಗಿದೆ. ಜೆಟ್‌ ಸೇರಿದಂತೆ ದೊಡ್ಡ ಪ್ರಮಾಣದ ವಿಮಾನಗಳು ಸಹ ಇಲ್ಲಿ ಲ್ಯಾಂಡ್‌ ಮಾಡಬಹುದಾಗಿದೆ. ರಾಜ್ಯದ ಇತರೆ ವಿಮಾನ ನಿಲ್ದಾಣಗಳು ಕ್ರಮೇಣವಾಗಿ ಅಭಿವೃದ್ಧಿಗೊಂಡಿದ್ದರೆ ಕಲಬುರಗಿ ವಿಮಾನ ನಿಲ್ದಾಣ ಆರಂಭದಲ್ಲಿಯೇ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ವಿಶೇಷ. ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ (ಸಾರ್ವಜನಿಕರು ಪ್ರಯಾಣ) ಮಾಡಲು ಈಗಾಗಲೆ ರಾಜ್ಯ ಸರ್ಕಾರದಿಂದ
ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆಯಲಾಗಿದ್ದು, ತಾವು ಸಹ ಸಚಿವಾಲಯದ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಉಡಾನ್‌ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ತೆಗೆದುಕೊಂಡು ಇಲ್ಲಿನ ಜನರ ಗಗನ ಹಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಗುವುದು ಎಂದು ಪುನರುಚ್ಚರಿಸಿದರು. ಅಲ್ಲದೇ ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ತರಬೇತಿ ಶಾಲೆ ಆರಂಭಿಸುವ ಚಿಂತನೆ ಸಹ ಇದ್ದು, ಇದರಿಂದ ವಿಮಾನ ನಿಲ್ದಾಣ ನಿರ್ವಣೆಗೆ
ಸಹಕಾರಿಯಾಗಲಿದೆ ಎಂದು ಸಂಸದ ಖರ್ಗೆ ಹೇಳಿದರು.

ಐತಿಹಾಸಿಕವಾದ ಈ ಕ್ಷಣದಲ್ಲಿ ಸಮಾಜ ಕಲ್ಯಾಣ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಡಾ| ಅಜಯ ಸಿಂಗ್‌, ಬಸವರಾಜ ಮತ್ತಿಮೂಡ, ಖನೀಜ್‌ ಫಾತಿಮಾ, ಎಂ.ವೈ. ಪಾಟೀಲ, ಡಾ| ಉಮೇಶ ಜಾಧವ, ವಿಧಾನ ಪರಿಷತ್‌ ಸದಸ್ಯ ಇಕ್ಬಾಲ ಅಹ್ಮದ ಸರಡಗಿ, ಮೇಯರ್‌ ಶರಣಕುಮಾರ ಮೋದಿ, ಮಾಜಿ ಶಾಸಕರಾದ ಕೆ.ಬಿ. ಶಾಣಪ್ಪ, ಅಲ್ಲಮಪ್ರಭು ಪಾಟೀಲ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾ ಧಿಕಾರಿ ಆರ್‌. ವೆಂಕಟೇಶಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌. ಶಶಿಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಏಸಿಯಾ ಪೆಸಿಫಿಕ್‌ ಫ್ಲೆ„ಟ್‌ ಟ್ರೇನಿಂಗ್‌ ಅಕಾಡೆಮಿಯ ಕ್ಯಾಪ್ಟನ್‌ ಆರ್‌.ವಿ. ಕುಮಾರ, ಮಹಮ್ಮದ್‌ ಫೈಸಲ್‌, ಅಮಿತ್‌ ಸಿಂಗ್‌, ಕ್ಯಾಪ್ಟನ್‌ ಶಾಮ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್‌ ಪ್ರಕಾಶ ಶ್ರೀಹರಿ, ಕಾರ್ಯನಿರ್ವಾಹಕ ಇಂಜಿನಿಯರ್‌ ಅಮೀನ ಮುಕ್ತಾರ ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲಘು ತರಬೇತಿ ವಿಮಾನ ಬಂದಿಳಿಯುವುದನ್ನು ನೋಡಲು ಮಹಾನಗರ, ಶ್ರೀನಿವಾಸ ಸರಡಗಿ ಹಾಗೂ ಅಕ್ಕ ಪಕ್ಕದ ಗ್ರಾಮಗಳಿಂದ ಸಾವಿರಾರು ಜಕರು ಆಗಮಿಸಿದ್ದರು. ವಿಮಾನಗಳನ್ನು ಪ್ರಥಮಬಾರಿಗೆ ಹತ್ತಿರದಿಂದ ಕಂಡು ಹರ್ಷಗೊಂಡರು. ಕೇಕೇ ಹಾಕಿ ಸಂಭ್ರಮಿಸಿದರು. ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ಶ್ರೀನಿವಾಸ ಸರಡಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಭದ್ರತಾ ಸಿಬ್ಬಂದಿ ಶ್ರೀನಿವಾಸ ಸರಡಗಿ ಗ್ರಾಪಂ ಅಧ್ಯಕ್ಷ ಬಾಬುರಾವ ರಾಠೊಡ ಅವರನ್ನು ವೇದಿಕೆಯತ್ತ ಬಿಡಲಿಲ್ಲ. ಹೀಗಾಗಿ ಹಲವು ಹೊತ್ತು ಸಾರ್ವಜನಿಕರ ನಡುವೆ ಕುಳಿತಿದ್ದರು. ಕೊನೆಗೆ ಮುಖಂಡರು ತಿಳಿಸಿದ್ದರಿಂದ ಒಳಗಡೆ ಬಿಡಲಾಯಿತು

ಕಲಬುರಗಿ ವಿಮಾನದಲ್ಲಿ ನಿಲ್ದಾಣದಲ್ಲಿ ಬಹುತೇಕ ಕಾಮಗಾರಿಗಳು ಸಂಪೂರ್ಣ ಮುಗಿದಿಲ್ಲ. ಪ್ಯಾಸೆಂಜರ್‌ ಟರ್ಮಿನಲ್‌ ಬಿಲ್ಡಿಂಗ್‌, ಏರ್‌ ಟ್ರಾಫಿಕ್‌ ಕಂಟ್ರೋಲ್‌ ಬಿಲ್ಡಿಂಗ್‌, ಕ್ರ್ಯಾಶ್‌ ಫೈರ್‌ ಆ್ಯಂಡ್‌ ರೆಸ್ಕ್ಯೂ ಬಿಲ್ಡಿಂಗ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಎಕ್ಸಟರ್ನಲ್‌ ಲೈಟಿಂಗ್‌, ಹೆಚ್‌.ಟಿ, ಎಲ್‌.ಟಿ ಇನ್ಡೋರ್‌ ಸಬ್‌ಸ್ಟೇಷನ್‌, ಏರ್‌ಫಿಲ್ಡ್‌ ಲೈಟಿಂಗ್‌ ಸಿಸ್ಟಮ್‌, ಬ್ಯಾಗೇಜ್‌ ಹ್ಯಾಂಡ್ಲಿಂಗ್‌ ಸಿಸ್ಟಮ್‌, ವೈಫೈ ನೆಟ್‌ವರ್ಕಿಂಗ್‌ ಕಾಮಗಾರಿ ಪ್ರಗತಿಯಲ್ಲಿವೆ. ಇವೆಲ್ಲ ಕಾಮಗಾರಿಗಳು ನವ್ಹೆಂಬರ್‌ವರೆಗೂ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ.

ಹತ್ತಾರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಪೂರ್ಣಗೊಳಿಸಿ ಒಪ್ಪಿಸಲಾಗಿದೆ. ಕೇಂದ್ರದ ಸಚಿವರು ವಿಮಾನಗಳಲ್ಲಿ ನೇರವಾಗಿ ಇಲ್ಲಿ ಬರಲಿಕ್ಕೆ ಅನುಕೂಲವಿದೆ. ಇಲ್ಲಿಯವರೆಗೆ ನಮ್ಮ ಕೈಯಲ್ಲೇನಿತ್ತೋ ಅದನ್ನು ಮಾಡಿದ್ದೇವೆ. ಇನ್ನು ಮುಂದೆ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಬೇಕು. ಉಡಾನ್‌ ಯೋಜನೆಗೆ ಒಳಪಪಡಿಸುವಂತೆ ಪತ್ರ ಬರೆದಿರುವ ಜತೆಗೆ ಖುದ್ದಾಗಿ ಸಿವಿಲ್‌ ಏವಿಯೇಷನ್‌ ವ್ಯವಸ್ಥಾಪಕ ನಿರ್ದೇಶಕ ಖರೋಲಾ ಜತೆಗೂ ಮಾತನಾಡಿದ್ದೇನೆ.
ಮಲ್ಲಿಕಾರ್ಜುನ ಖರ್ಗೆ, ಸಂಸದ 

ಕಲಬುರಗಿ ಜಿಲ್ಲೆಯ ಜನರು ನಿರೀಕ್ಷೆಯಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದರು. ಮಾಜಿ ಮು ಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನವದೆಹಲಿಗೆ ಕರೆದುಕೊಂಡು ಹೋಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಲಾಗುವುದು. 2008ರಲ್ಲಿಯೇ ಯಡಿಯೂರಪ್ಪ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ವಿಮಾನ ನಿಲ್ದಾಣ ಪೂರ್ಣ ಹಾಗೂ ವಿಮಾನಯಾನ ಶುರುವಾಗಬೇಕೆಂಬುದರ ಬಗ್ಗೆ ಅವರು ಹೆಚ್ಚಿನ ಉತ್ಸುಕತೆ ಹೊಂದಿದ್ದಾರೆ. 
ದತ್ತಾತ್ರೇಯ ಪಾಟೀಲ ರೇವೂರ,  ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ

ಟೇಕ್‌ಆಪ್‌ ವೇಳೆ ಅಡ್ಡ ಬಂದ ನಾಯಿ ಪ್ರಾಯೋಗಿಕ ಹಾರಾಟ ನಡೆಸಿದ ಬಳಿಕ ಡೈಮಂಡ್‌ ಡಿಎ 40 ತರಬೇತಿ ವಿಮಾನ
ಟೇಕಾಫ್‌ ಆಗುವ ವೇಳೆ ರನ್‌ ವೇದಲ್ಲಿ ನಾಯಿಯೊಂದು ಬಂದು ಕೆಲ ಕಾಲ ಆತಂಕ ಸೃಷ್ಟಿಸಿತು. ತಕ್ಷಣವೇ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿ ವಿಮಾನ ಟೇಕ್‌ ಆಪ್‌ಗೆ ಅನುವು ಮಾಡಿಕೊಟ್ಟರು.

ಫೋಟೋ ಕ್ಲಿಕ್ಕಿಸಲು ಜನರ ಪೈಪೋಟಿ ಪರೀಕ್ಷಾರ್ಥ ಹಾರಾಟದ ವಿಮಾನಗಳು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಶಾಸಕರು, ಅಧಿಕಾರಿಗಳು, ಪೊಲೀಸರು ಹಾಗೂ ಇತರರು ವಿಮಾನಗಳ ಮುಂದೆ ಪೈಪೋಟಿ ಎನ್ನುವಂತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಸೆಲ್ಫಿಗಂತೂ ಲೆಕ್ಕವೇ ಇರಲಿಲ್ಲ. ತದನಂತರ ಪೊಲೀಸರು ಎಲ್ಲರನ್ನು ಹೊರಗೆ ಕಳುಹಿಸಿದರು.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next