Advertisement

ಹಳ್ಳಿಯೊಂದರ ಕರುಣ ಕಥೆ ‘ಕಳ್ಳಿಗಾಡಿನ ಇತಿಹಾಸ’

03:51 PM Nov 02, 2021 | Team Udayavani |

‘ಕಳ್ಳಿಗಾಡಿನ ಇತಿಹಾಸ’ವು ತಮಿಳಿನ ಪ್ರಸಿದ್ಧ ಕಥೆಗಾರ ವೈರಮುತ್ತು ಅವರ ‘ ಕಳ್ಳಿಕ್ಕಾಟ್ಟು ಇದಿಗಾಸಂ’ ಕಾದಂಬರಿಯ ಕನ್ನಡ ಅನುವಾದ. ಇದು ತಮಿಳುನಾಡಿನ ಹಿಂದುಳಿದ ಹಳ್ಳಿಯಾದ ಕಳ್ಳಿಕ್ಕಾಟ್ಟಿನ ಕರುಣ ಕಥೆಯನ್ನು ನಿಟ್ಟುಸಿರಿನೊಂದಿಗೆ ನಿರೂಪಿಸುತ್ತದೆ. ಪೇಯತ್ತೇವರ್ ಎಂಬ ಮಣ್ಣಿನ ಮಗ ಇದರ ನಾಯಕ. ಅವನು ಊರಿನ ಹಿರಿಯನೂ ಹೌದು. ಆ ಇಡೀ ಊರೇ ಕಷ್ಟಪಟ್ಟು ಬೆವರು ಸುರಿಸಿ ದುಡಿಯುವ ಬಡಜನರು ತುಂಬಿರುವ ಊರು. ಒಬ್ಬ ಗಂಡುಮಗ ಮತ್ತು ಇಬ್ಬರು ಹೆಣ್ಣುಮಕ್ಕಳ ಕುಟುಂಬ ಪೇಯತ್ತೇವರನದು. ಮದುವೆ ಮಾಡಿ ಕೊಟ್ಟ ನಂತರವೂ ಒಂದಿಲ್ಲೊಂದು ಕಾರಣಗಳಿಂದ ತಂದೆಯಿಂದ ಹಣ ಕೀಳುತ್ತ ಇರುವ ಹೆಣ್ಣು ಮಕ್ಕಳು. ಕೆಟ್ಟ ಚಾಳಿಗೆ ಬಿದ್ದು ಸಾರಾಯಿ ದಂಧೆಯಲ್ಲಿ ತೊಡಗಿ ಸದಾ ತಂದೆಯನ್ನು ಪೀಡನೆಗೆ ಗುರಿ ಮಾಡಿದ ಗಂಡು ಮಗ.

Advertisement

ಹಿರಿಯ ಮಗಳು ಸೆಲ್ಲತ್ತಾಯಿಗೆ ಅವಳ ಮೊದಲ ಮದುವೆಯಲ್ಲಿ ಹುಟ್ಟಿದ ಮೊಕ್ಕರಾಜು ಒಬ್ಬನೇ ತಾತನಿಗೆ ಬೆಂಗಾವಲಾಗಿದ್ದುಕೊಂಡು ತಂಪೆರೆಯುವ ಜೀವ. ಮಕ್ಕಳಿಗಾಗಿ ಸದಾ ಸಾಲದಲ್ಲಿ ಬೀಳುತ್ತ, ಸಾಲವನ್ನು ತೀರಿಸಲೋಸುಗ ಮತ್ತೆ ಉಸಿರು ಬಿಗಿ ಹಿಡಿದು ದುಡಿಯುತ್ತ ಪೇಯತ್ತೇವರ್ ದಿನ ದೂಡುತ್ತಿರಲು ಕಾದಂಬರಿಯ ಕೊನೆಗೆ ಕಳ್ಳಪ್ಪಟ್ಟಿ ಹಾಗೂ ಸುತ್ತುಮುತ್ತಲ ಊರುಗಳ ಜೀವನಾಧಾರವಾಗಿದ್ದ ವೈಗೈ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಯನ್ನು ಸರಕಾರ ಘೋಷಿಸುತ್ತದೆ .ಇದು ಹಳ್ಳಿಗರಲ್ಲಿ ಹಾಹಾಕಾರವೆಬ್ಬಿಸುತ್ತದೆ. ಆದರೆ ಅಧಿಕಾರದ ಕೈಗಳ ಮುಂದೆ ಅವರು ಅಸಹಾಯಕರಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಸರಕಾರ ಕೊಡುವ ಪುಡಿಗಾಸಿನ ಪರಿಹಾರ ತೆಗೆದುಕೊಂಡು ರೋದಿಸುತ್ತ ಹೋಗಬೇಕಾಗುತ್ತದೆ.

ಕಥಾವಸ್ತು ಎಷ್ಟು ಗಂಭೀರವೋ ವೈರಮುತ್ತು ಅವರು ಅದನ್ನು ನಿರೂಪಿಸಿದ ಬಗೆಯೂ ಅಷ್ಟೇ ಹೃದಯಸ್ಪರ್ಶಿಯಾಗಿದೆ. ಮೊದಲಿಗೆ ಹಳ್ಳಿಯ ಜನರ ಬದುಕನ್ನು ಮತ್ತು ಭೂಮಿ, ಮಣ್ಣು, ಪ್ರಕೃತಿ, ಗಿಡ-ಮರ ಪ್ರಾಣಿ ಪಕ್ಷಿ ಗಳೊಂದಿಗಿನ ಅವರ ಭಾವನಾತ್ಮಕ ನಂಟನ್ನು ಮನಮುಟ್ಟುವಂತೆ ವರ್ಣಿಸಿ ಕೊನೆಗೆ ಸರಕಾರವು ಆ ಕರುಳ ಬಂಧವನ್ನು ನಿರ್ದಯವಾಗಿ ತುಂಡರಿಸುವ ಹೃದಯ ಹಿಂಡುವ ಚಿತ್ರಗಳನ್ನು ಅವರು ನೀಡುತ್ತಾರೆ. ಅಲ್ಲದೆ ಹಳ್ಳಿಯ ಜನರ ಮುಗ್ಧ ಬದುಕು, ಅವರ ಆಚಾರ ವಿಚಾರಗಳು, ಸಂಸ್ಕೃತಿ ಜೀವನಕ್ರಮ, ನಂಬಿಕೆ ಆಚರಣೆಗಳು ಎಲ್ಲವನ್ನೂ ಅವುಗಳ ಸೂಕ್ಷ್ಮತೆಯ ಆಳಕ್ಕಿಳಿದು ಓದುಗರಿಗೆ ನೀಡುತ್ತಾರೆ. ಅದು ಶ್ಮಶಾನ ಕಾಯುವವನ ಶ್ರಮದಾಯಕ ಕೆಲಸ ಇರಬಹುದು, ಕ್ಷೌರಿಕನ ವೃತ್ತಿಯ ವೈಖರಿ ಇರಬಹುದು ಅಥವಾ ಅಗಸರವನು ಊರಿನವರ ಬಟ್ಟೆಗಳನ್ನು ಒಟ್ಟು ಮಾಡಿ ಒಪ್ಪ ಮಾಡ ಕೊಡುವ ವಿಧಾನ ಇರಬಹುದು-ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳುವ ಪರಿಯೇ ಚಂದ. ಅಲ್ಲಿ ನ್ಯಾಯತೀರ್ಪು ಹೇಳುವ ಹಿರಿಯರ ಪಂಚಾಯಿತಿ ಕಟ್ಟೆಯೂ ಇದೆ. ಅಂಥ ಮುಗ್ಧರ ನಡುವೆ ಲೇವಾದೇವಿಗಾರನ ಕ್ರೌರ್ಯವೂ ಸಾರಾಯಿ ದಂಧೆಯವರು ಮಾಡುವ ಮೋಸಗಳೂ ಇವೆ. ಬುಡಕಟ್ಟು ಜನಾಂಗಗಳಲ್ಲಿರುವಂತೆ ಗಂಡುಮಗುವಿನ ಜನನಾಂಗದ ಚರ್ಮವನ್ನು ಕತ್ತರಿಸುವ ‘ಮಾರ್ಗಕಲ್ಯಾಣಂ’ನ ಎಲ್ಲ ನಡಾವಳಿಗಳನ್ನೂ ವೈರಮುತ್ತು ಅದರ ಎಲ್ಲ ವಿವರಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ.

ನೋಬೆಲ್ ಪ್ರಶಸ್ತಿ ವಿಜೇತ ಪರ್ಲ್‌ ಎಸ್ ಬಕ್ ಅವರ ಕಾದಂಬರಿ ‘ಗುಡ್ ಅರ್ತ್’ ನ ನಾಯಕ ವಾಂಗ್ ಲುಂಗ್ ನನ್ನು ಹೋಲುವ ನಾಯಕನಾಗಿದ್ದಾನೆ ‘ಕಳ್ಳಿಗಾಡಿನ ಇತಿಹಾಸ’ದ ಪೇಯತ್ತೇವರ್. ವಾಂಗ್ ಲುಂಗನ ಹೆಂಡತಿ ಓಲನ್ ಳ ಹಾಗೆಯೇ ಇಲ್ಲಿ ಅಳಗಮ್ಮಾಳ್ ತನ್ನ ಗಂಡನ ಯಶಸ್ಸಿಗೆ ಎಲ್ಲ ರೀತಿಯಲ್ಲಿ ಕಾರಣಳಾಗಿದ್ದಾಳೆ. ಮಣ್ಣಿನೊಂದಿಗೆ ವಾಂಗ್ ಲುಂಗನ ಅಗಾಧ ನಂಟೂ ಪೇಯತ್ತೇವರನಲ್ಲಿದೆ. ವಾಂಗ್ ಲುಂಗನು ತನ್ನ ಪ್ರೇಮ-ಕಾಮದ ಕನಸುಗಳನ್ನು ಓರ್ವ ಎರಡನೆಯ ಹೆಣ್ಣಿನಲ್ಲಿ ಸಾಕಾರಗೊಳಿಸುವಂತೆ ಇಲ್ಲಿ ಪೇಯತ್ತೇವರ್ ಮತ್ತು ಮುರುಗಾಯಿಯ ನಡುವಣ ಸಂಬಂಧವಿದೆ. ವಾಂಗ್ ಲುಂಗನಿಗೆ ತನ್ನ ಹೆಂಡತಿಯ ಬಗೆಗೆ ಇರುವ ಕೃತಜ್ಞತೆ ಹಾಗೂ ಕರ್ತವ್ಯಪ್ರಜ್ಞೆಗಳು ಪೇಯತ್ತೇವರನಲ್ಲೂ ಇದೆ. ವಾಂಗ್ ಲುಂಗನ ಮಕ್ಕಳ ತಿಳಿಗೇಡಿತನ ಪೇಯತ್ತೇವರನ ಮಕ್ಕಳಲ್ಲೂ ಇದೆ. ಒಟ್ಟಿನಲ್ಲಿ ಕೆಲವು ಸನ್ನಿವೇಶಗಳ ವ್ಯತ್ಯಾಸಗಳನ್ನು ಬಿಟ್ಟರೆ ಎರಡೂ ಕಾದಂಬರಿಗಳಲ್ಲಿ ಬಹಳಷ್ಟು ಸಾಮ್ಯವಿದೆಯೆಂದು ಹೇಳಬಹುದು.

ಮಲರ್ ವಿಳಿಯವರ ಅನುವಾದ ತುಂಬಾ ಹೃದ್ಯವಾಗಿದೆ. ಸಾಮಾನ್ಯವಾಗಿ ಅನುವಾದ ಎಂಬ ಪರಿಕಲ್ಪನೆಯ ಬಗ್ಗೆ ಎರಡು ಅಭಿಪ್ರಾಯಗಳಿವೆ. ಒಂದು ಮೂಲ ಕೃತಿಯ ಸತ್ವವನ್ನು ಪೂರ್ತಿಯಾಗಿ ಹೀರಿಕೊಂಡು ಲಕ್ಷ್ಯ ಭಾಷೆಯ ಶೈಲಿಗೆ ಸಹಜವಾಗಿ ಹೊಂದುವ ರೀತಿಯಲ್ಲಿ ಪಾರಿಭಾಷಿಕ ಪದಗಳಿಗೂ ಪರ್ಯಾಯ ಪದಗಳನ್ನು ಹುಡುಕಿ ಅದು ಲಕ್ಷ್ಯ ಭಾಷೆಯದ್ದೇ ಕೃತಿ ಅನ್ನಿಸುವಂತೆ ಮಾಡುವುದು ಮತ್ತು ಓದುಗರಿಗೆ ಓದಿನ ಸುಖ ನೀಡುವುದು. ಇನ್ನೊಂದು ಲಕ್ಷ್ಯ ಭಾಷೆಯ ಓದುಗರಿಗೆ ಅಧ್ಯಯನದ ದೃಷ್ಟಿಯಿಂದ ಮೂಲ ಭಾಷೆಯ ಸಂಸ್ಕೃತಿ ಹಾಗೂ ಅವರು ಬಳಸುವ ಪಾರಿಭಾಷಿಕ ಪದಗಳ ಪರಿಚಯ ಮಾಡಿಸಬೇಕೆಂದು ಅಂಥ ಪದಗಳನ್ನು ಅನುವಾದದಲ್ಲಿ ಹಾಗೆಯೇ ಉಳಿಸಿಕೊಳ್ಳುವುದು. ಇಲ್ಲಿ ಮಲರ್ ವಿಳಿಯವರು ಎರಡನೆಯ ದಾರಿಯನ್ನು ಆಯ್ದುಕೊಂಡಿದ್ದಾರೆ. ಅದರೆ ಎಷ್ಟೋ ಮಂದಿ ಅನುವಾದಕರು ಸಾಂಸ್ಕೃತಿಕ ವಿಶಿಷ್ಟ ಪದಗಳನ್ನು ಉಳಿಸಿಕೊಳ್ಳುತ್ತೇವೆಂದು ಹೇಳಿದರೂ, ಮೂಲಭಾಷೆ ಮತ್ತು ಲಕ್ಷ್ಯ ಭಾಷೆಗಳಲ್ಲಿ ಬಳಸಿದಾಗ ಭಾರತೀಯ ಭಾಷೆಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾದಂಥ, ಅರ್ಥ ವ್ಯತ್ಯಾಸ ಬರುವಂಥ ಸಮಾನರೂಪದ ಪದಗಳಿಗೆ ಪರ್ಯಾಯ ಪದಗಳನ್ನು ಹುಡುಕುವ ಶ್ರಮಕ್ಕೆ ಹೋಗದೆ, ಮೂಲದ ವಾಕ್ಯಶೈಲಿಯನ್ನೂ ಹಾಗೆಯೇ ಉಳಿಸಿಕೊಂಡು ಓದುಗರನ್ನು ಗೊಂದಲಕ್ಕೀಡು ಮಾಡುತ್ತಾರೆ.

Advertisement

ಮಲರ್ ವಿಳಿಯವರು ಹಾಗೆ ಮಾಡುವುದಿಲ್ಲ. ಅವರ ನಿರೂಪಣೆಯಲ್ಲಿ ಪೂರ್ತಿಯಾಗಿ ಕನ್ನಡದ ಶೈಲಿಯೇ ಇದೆ. ಪಾರಿಭಾಷಿಕ ಪದಗಳನ್ನಷ್ಟೇ ಅವರು ಬದಲಾಯಿಸದೆ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಮತ್ತು ಬಹಳಷ್ಟು ಓದುಗ ಕಾಳಜಿಯಿಂದ ಆ ಪದಗಳ ಅರ್ಥವನ್ನು ಅಡಿಟಿಪ್ಪಣಿಯಲ್ಲಿ ಕೊಡುತ್ತಾರೆ. ಎಷ್ಟೊಂದು ಮರ ಗಿಡ ಪ್ರಾಣಿ ಪಕ್ಷಿಗಳು, ಸಲಕರಣೆಗಳು ಆಚರಣೆಗಳು ಕೃತಿಯ ಅಡಿಟಿಪ್ಪಣಿಯಲ್ಲಿ ಜಾಗ ಪಡೆದುಕೊಂಡಿವೆ! ಅಲ್ಲದೆ ಬೇರೊಂದು ಸಂಸ್ಕೃತಿಯಲ್ಲಿರುವ ಭಿನ್ನ ಶೈಲಿಯ ಹೆಸರುಗಳು ಓದುಗರಿಗೆ ತೊಂದರೆಯುಂಟು ಮಾಡಬಾರದೆಂದು ಅವರು ಕೃತಿಯ ಕೊನೆಗೆ ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ. ಹೀಗೆ ಮಲರ್ ವಿಳಿಯವರ ಅನುವಾದವು ಅಧ್ಯಯನದ ದೃಷ್ಟಿಯಿಂದಲೂ ಸಮರ್ಪಕವಾಗಿದೆ ಮತ್ತು ಓದಿನ ಸುಖವನ್ನೂ ನೀಡುತ್ತದೆ. ಹೀಗೆ ಅವರ ಅನುವಾದದಲ್ಲಿ ಧನಾತ್ಮಕ ಅಂಶಗಳನ್ನು ಪಟ್ಟಿ ಮಾಡುತ್ತಲೇ ಹೋಗಬಹುದು. ಒಟ್ಟಿನಲ್ಲಿ ಒಂದು ತಮಿಳು ಗ್ರಾಮೀಣ ಜಗತ್ತನ್ನು ಓರ್ವ ಒಳ್ಳೆಯ ಅಧ್ಯಾಪಕಿಯಂತೆ ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ ಮಲರ್ ವಿಳಿಯವರಿಗೆ ಸಲ್ಲಬೇಕು.

ಮಲರ್ ವಿಳಿ

ಕೃತಿಯ ಹೆಸರು : ಕಳ್ಳಿಗಾಡಿನ ಇತಿಹಾಸ(ಅನುವಾದಿತ ಕಾದಂಬರಿ)
ಅನುವಾದ : ಡಾ.ಮಲರ್ ವಿಳಿ . ಕೆ
(ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ)

ಪ್ರ: ಸಾಹಿತ್ಯ ಅಕಾಡೆಮಿ, ನ್ಯೂ ಡೆಲ್ಲಿ
ಪ್ರ.ವರ್ಷ : ೨೦೨೧2021.ಪು : 259

-ಪಾರ್ವತಿ ಜಿ.ಐತಾಳ್

Advertisement

Udayavani is now on Telegram. Click here to join our channel and stay updated with the latest news.

Next