Advertisement

ಆರ್ಥಿಕಾಭಿವೃದ್ಧಿಯ ಪಥದಲ್ಲಿ ಅಮಾನ್ಯತೆಯ ಗುರುತು

11:07 PM Nov 02, 2019 | Sriram |

ಜನಸಾಮಾನ್ಯರು ಅದರಲ್ಲೂ ಹೆಚ್ಚಾಗಿ ಯುವ ವರ್ಗದವರು ಸ್ಮಾರ್ಟ್‌ ಫೋನನ್ನೇ ಬ್ಯಾಂಕಿಂಗ್‌ ವ್ಯವಹಾರಕ್ಕಾಗಿ ನೆಚ್ಚಿಕೊಂಡಿದ್ದಾರೆ. ಅಂತೂ ಇಂತೂ ಡಿಜಿಟಲ್‌ ವ್ಯವಹಾರದತ್ತ ಜನ ಮುಖ ಮಾಡಿದಂತಿದೆ. ಹಾಗಂತ ಕ್ಯಾಶ್‌ನ ಬಳಕೆ ಕಡಿಮೆಯಾಗಿದೆ ಎಂದು ಹೇಳಲಸಾಧ್ಯ.

Advertisement

ಅಕ್ಟೋಬರ್‌-ನವೆಂಬರ್‌ ತಿಂಗಳು ಹಬ್ಬದ ತಿಂಗಳು. ಹಬ್ಬದ ಸಡಗರವನ್ನು ಎಲ್ಲೆಲ್ಲೂ ಕಾಣಬಹುದಾಗಿದೆ. ದೀಪಾವಳಿ ತಿಂಗಳಲ್ಲಿ ನಾವು ದಿವಾಳಿಯಾಗುವುದು ಸಾಮಾನ್ಯ ವಿಷಯ. ನಾವೆಲ್ಲಾ ಹಣವಿದ್ದೂ ದಿವಾಳಿಯಾದ ಘಟನೆಯನ್ನು ಯಾವತ್ತೂ ಮರೆಯುವಂತಿಲ್ಲ. ಆ ಘಟನೆ ಮತ್ತಾವುದೂ ಅಲ್ಲ: ನೋಟು ಅಮಾನ್ಯತೆ. ನವೆಂಬರ್‌ 8, 2016ರ ರಾತ್ರಿ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟು ಅಮಾನ್ಯತೆ ನಮ್ಮ ದೇಶವು ಇತ್ತೀಚಿನ ದಿನಗಳಲ್ಲಿ ಕಂಡ ಅತಿ ದೊಡ್ಡ ಆರ್ಥಿಕ ಸುಧಾರಣಾ ನೀತಿ. ಅಮಾನ್ಯತೆಯನ್ನು ವಿವರಿಸುವುದು ಬಲು ಸುಲಭ. ಹಳೆಯ ನೋಟುಗಳನ್ನು ಹಿಂಪಡೆದು ಅದರ ಬದಲಿಗೆ ಹೊಸ ನೋಟುಗಳನ್ನು ಚಲಾವಣೆಗೆ ಬಿಡುವುದು.

ಇಂತಹದೇ ಸಂದರ್ಭ ನಮ್ಮ ದೇಶವು 1946 ಮತ್ತು 1978ರಲ್ಲೂ ಕಂಡಿತ್ತು. 2016ರ ಅಮಾನ್ಯತೆಯ ಸಿಹಿ -ಕಹಿಗಳನ್ನು ನಾವೆಲ್ಲಾ ಅನುಭವಿಸಿದವರು. ಈ ಘಟನೆಯ ಬಗೆಗಿನ ಪರಿಣಾಮವನ್ನು ನಾವೆಲ್ಲಾ ಆಗಾಗ ಮೆಲುಕು ಹಾಕುವುದುಂಟು. ಇದೊಂದು ಅಪರೂಪದ ಅನುಭವ. ಈ ಘಟನೆಯ ವಿಶಿಷ್ಟತೆಯೇ ಬೇರೆ. ಯಾಕೆಂದರೆ ಇವತ್ತು ಹಣವೇ ಎಲ್ಲ. ಹಣವಿಲ್ಲದಿದ್ದರೆ ಏನೂ ಇಲ್ಲ. ಹಣವಿಲ್ಲದಿದ್ದರೆ ಬದುಕು ಅಸಾಧ್ಯ. ಇನ್ನೇನು ದೇಶವು ನೋಟು ಅಮಾನ್ಯತೆಯ ತೃತೀಯ ವರ್ಷವನ್ನು ಸಮೀಪಿಸುತ್ತಿದೆ. ಒಂದೆಡೆ ಸಂಭ್ರಮಾಚರಣೆ, ಮತೊಂದೆಡೆ ಕರಾಳ ದಿನಾಚರಣೆ. ಇವತ್ತು ನಮ್ಮ ದೇಶದ ಆರ್ಥಿಕಾಭಿವೃದ್ಧಿಯ ಬಗೆಗೆ ವಿಶ್ಲೇಷಣೆ ಮಾಡುವಾಗ ಎಲ್ಲಾ ಆರ್ಥಿಕ ಏರುಪೇರುಗಳಿಗೆ ನೋಟು ಅಮಾನ್ಯತೆಯನ್ನು ಬೊಟ್ಟು ಮಾಡುವುದು ಸಾಮಾನ್ಯವಾಗಿದೆ.

ಮಹತ್ವದ ಹೆಜ್ಜೆ: ಹಣಕ್ಕೆ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಯಾವುದೇ ಮಧ್ಯವರ್ತಿಗಳಿಲ್ಲದೆ ವ್ಯವಹರಿಸಬಹುದು. ಹಣಕ್ಕೆ ಬಣ್ಣ ಇಲ್ಲ. ಬಣ್ಣ ಕೊಟ್ಟವರು ನಾವೇ. ಹಣದ ಬಳಕೆಯಲ್ಲಿ ತೆರಿಗೆ ವಂಚಿಸಿದರೆ ಹಣ ಕಪ್ಪು ಆಗುತ್ತದೆ. ಕಪ್ಪು ಹಣ ದೇಶಕ್ಕೆ ಮಾರಕ.

ಈ ಕಪ್ಪು ಹಣದ ನಿರ್ಮೂಲನೆಗೆ ಹೊಸ ಹೊಸ ವಿಧಾನಗಳನ್ನು ಬಳಸದೆ ವಿಧಿಯಿಲ್ಲ. ನೋಟು ಅಮಾನ್ಯತೆಯೂ ಅಂಥದೊಂದು ವಿಧಾನ ದಾರಿಯಾಗಬಹುದು. ಈ ನೀತಿಯ ಉದ್ದೇಶ ಕಪ್ಪು ಹಣವನ್ನು ಚಿವುಟಿ ಹಾಕುವುದು. ಆದರೆ ಅಮಾನ್ಯತೆಯ ನಂತರದಲ್ಲಿ ದೇಶವನ್ನು ಕ್ಯಾಶ್‌ಲೆಸ್‌ ಅಥವಾ ಡಿಜಿಟಲ್‌ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಉದ್ದೇಶವೇ ಹೆಚ್ಚಿನ ಪ್ರಾಮುಖ್ಯತೆ ಪಡೆಯಿತು. ಜನಸಾಮಾನ್ಯರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಎಟಿಎಂನಿಂದ ಹಣ ಪಡೆಯುವ ಬವಣೆ ಒಂದು ಕಡೆ, ವಾಮಮಾರ್ಗಗಳನ್ನು ಹುಡುಕಿಕೊಂಡು ಹೊಸ ಗುಲಾಬಿ ಹಣವನ್ನು ಬಾಚಿಕೊಳ್ಳುವ ವರ್ಗ ಮಗದೊಂದು ಕಡೆ. ಶ್ರೀಮಂತ ಕುಳಗಳು ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಮಾಧ್ಯಮವನ್ನಾಗಿಸಿಕೊಂಡು ಕಪ್ಪು ಹಣವನ್ನು ಬಿಳಿಯನ್ನಾಗಿಸಿದ್ದು ನಿಜಕ್ಕೂ ಬೇಸರದ ಸಂಗತಿ. ಇಂದೂ ಕೂಡ ಅಕ್ರಮ ಸಂಪತ್ತಿನ ಮುಟ್ಟುಗೋಲಾದ ಹಣ ಸಕ್ರಮವಾಯಿತೇ? ಅದು ಅಕ್ರಮ ಹಣವೇ? ಎಂಬೆಲ್ಲಾ ಅಂಶಗಳು ವ್ಯಾಪಕ ಚರ್ಚೆಯ ವಿಷಯವಾಗಿದೆ. ದೇಶದ ಆಂತರಿಕ ಉತ್ಪನ್ನದ ಗಾತ್ರವೂ ಇಳಿದಿದೆ. ಈ ಬಗ್ಗೆ ಜನಸಾಮಾನ್ಯರು ತಲೆ ಕೆಡಿಸಿಕೊಳ್ಳುವವರಂತೂ ಅಲ್ಲವೇ ಅಲ್ಲ.

Advertisement

ಈ ಸಮಸ್ಯೆಯ ಮಧ್ಯೆ ಜನಸಾಮಾನ್ಯರ ಸಂಪೂರ್ಣ ಸಹಕಾರ ಪ್ರಶಂಸನೀಯ. ಈ ಸುಧಾರಣೆಯಿಂದ ದೇಶಕ್ಕೆ ಉಜ್ವಲ ಭವಿಷ್ಯವಿದೆಯೆಂದರೆ ನಾವಂತೂ ನೋವನ್ನು ಅನುಭವಿಸಲು ತಯಾರಿದ್ದೇವೆ ಎಂಬ ಮನಸ್ಥಿತಿ ನಮ್ಮದಾಗಿತ್ತು. ಈ ಘಟನೆಯ ತರುವಾಯ ಜನಸಾಮಾನ್ಯರುಇ ಅದರಲ್ಲೂ ಹೆಚ್ಚಾಗಿ ಯುವ ವರ್ಗದವರು ಸ್ಮಾರ್ಟ್‌ಫೋನನ್ನೇ ಬ್ಯಾಂಕಿಂಗ್‌ ವ್ಯವಹಾರಕ್ಕಾಗಿ ನೆಚ್ಚಿಕೊಂಡಿದ್ದಾರೆ. ಅಂತೂ ಇಂತೂ ಡಿಜಿಟಲ್‌ ವ್ಯವಹಾರದತ್ತ ಜನ ಮುಖ ಮಾಡಿದಂತಿದೆ. ಹಾಗಂತ ಕ್ಯಾಶ್‌ನ ಬಳಕೆ ಕಡಿಮೆಯಾಗಿದೆ ಎಂದು ಹೇಳಲಸಾಧ್ಯ. ಜೊತೆಗೆ ರಿಯಲ್‌ ಎಸ್ಟೇಟ್‌ ಉದ್ಯಮ ತನ್ನ ನೈಜ ಬೆಳವಣಿಗೆ ಕಾಣತೊಡಗಿದೆ. 2013-14ರ ಸಾಲಿಗೆ ದೇಶದಲ್ಲಿ 308 ಕೋಟಿ ಜನರು ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಿದ್ದರು. ಈ ಸಂಖ್ಯೆ 2017-18ರ ಸಾಲಿನಲ್ಲಿ 6.38 ಲಕ್ಷ ಕೋಟಿ (13-14) ಯಿಂದ 10.02 ಲಕ್ಷ ಕೋಟಿಗೆ (2017-18) ಏರಿದೆ. ತೆರಿಗೆ ತಪ್ಪಿಸುವುದಕ್ಕಾಗಿ ಸೃಷ್ಟಿಸಲಾದ ನಕಲಿ ಕಂಪೆನಿಗಳ ವ್ಯವಹಾರಕ್ಕೆ ಬ್ರೇಕ್‌ ಬಿದ್ದಿದೆ. ಆದಾಯ ತೆರಿಗೆಯ ವ್ಯಾಪ್ತಿ ಹಿಗ್ಗಿದೆ. ಮುಂದೊಂದು ದಿನ ಕ್ಯಾಶ್‌ಲೆಸ್‌, ಕಾರ್ಡ್‌ಲೆಸ್‌ ವ್ಯವಹಾರ ಬೆಳೆಯುವುದರಲ್ಲಿ ಸಂಶಯವೇ ಇಲ್ಲ.

ಕುತೂಹಲ ಕಡಿಮೆಯಾಗಿಲ್ಲ: ಏನೇ ಸುಧಾರಣಾ ನೀತಿ ಬರಲಿ, ಕಪ್ಪು ಕುಳಗಳು ಗಳಿಸಿದ ಹಣವನ್ನು ಸಂರಕ್ಷಿಸಿಕೊಳ್ಳದೆ ಬಿಟ್ಟಾರೆಯೇ? ಅವರಂತೂ ಅವ್ಯವಹಾರವನ್ನು ಮುಚ್ಚಿಡಲು ಹಲವಾರು ಮಾರ್ಗೋಪಾಯಗಳನ್ನು ಹುಡುಕದೆ ಇರಲಾರರು.

ಈ ಸುಧಾರಣೆಯನ್ನು ಕೈಗೊಂಡು ಮೂರು ವರುಷಗಳೇ ಸಂದವು. ಆದರೂ ನಮ್ಮಲ್ಲಿ ಈ ಸುಧಾರಣೆಯಿಂದ ಎಷ್ಟು ಕಪ್ಪು ಹಣ ಹೊರಬಂತು? ಯಾರು ಕಪ್ಪು ಕುಳಗಳು? ಎಷ್ಟು ಕಪ್ಪು ಹಣ ಅಳಿದು ಹೋಯಿತು? ಸರಕಾರದ ಬೊಕ್ಕಸಕ್ಕೆ ಏನು ಲಾಭವಾಯಿತು? ನಮ್ಮ ಆರ್ಥಿಕತೆ ಎಷ್ಟು ಪಾರದರ್ಶಕವಾಯಿತು? ಅಮಾನ್ಯತೆಯ ಪರಿಣಾಮ ಅನುಭವಿಸಿದ ನರಕಯಾತನೆಗೆ ತಮ್ಮ ದೇಶಕ್ಕೆ ಆದ ಲಾಭ ಏನು ಎಂಬೆಲ್ಲಾ ಸಂದೇಹಗಳು ನಮ್ಮ ಮನಸ್ಸಿನಲ್ಲಿ ಆಗಾಗ ಮೂಡುತ್ತಲೇ ಇವೆ.

ಪ್ರತಿಯೊಂದೂ ಸುಧಾರಣೆಯಲ್ಲೂ ಲಾಭ ನಷ್ಟದ ಲೆಕ್ಕಾಚಾರ ಮಾಡುವುದರಲ್ಲಿ ತಪ್ಪಿಲ್ಲ. ಇದು ನಾಣ್ಯದ ಎರಡು ಮುಖಗಳಿದ್ದಂತೆ. ಚಲಾವಣೆಯಲ್ಲಿದ್ದ ಹೆಚ್ಚಿನ ಹಣ ಬ್ಯಾಂಕಿನ ತಿಜೋರಿಯಲ್ಲಿ ಸೇರಿಕೊಂಡಿದೆ. ಮತ್ತೆ ಆ ಹಣವನ್ನು ಬಳಸುವಾಗ ತೆರಿಗೆ ನೀಡಬೇಕಾದ ಅನಿವಾರ್ಯತೆ ಇದೆ. ಎಲ್ಲಾ ವ್ಯವಹಾರವೂ ಡಿಜಿಟಲ್‌ ಆದರೆ ಕಪ್ಪು ಹಣಕ್ಕೆ ಮುಕ್ತಿ ಕಾಣಿಸಬಹುದು. ಇದಕ್ಕೆ ಉಳಿದಿರುವ ದಾರಿ, ಡಿಜಿಟಲ್‌ ವ್ಯವಹಾರಕ್ಕೆ ಒಗ್ಗಿಕೊಳ್ಳುವುದೇ ಆಗಿದೆ. ಹಾಗೆ ಮಾಡದೆ ಬೇರೆ ದಾರಿಯೇ ಇಲ್ಲ.

-ಡಾ| ರಾಘವೇಂದ್ರ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next