Advertisement

ಹೃದಯಾಘಾತದಿಂದ ಮೃತಪಟ್ಟಿದ್ದ ವ್ಯಕ್ತಿ ಅಂತ್ಯಕ್ರಿಯೆ ವೇಳೆ ಉಸಿರಾಟ!

07:23 PM Mar 30, 2021 | Team Udayavani |

ಕುಣಿಗಲ್‌: ಹೃದಯಾಘಾತದಿಂದ ಮೃತಪಟ್ಟಿದ್ದ ವ್ಯಕ್ತಿ ಶವಸಂಸ್ಕಾರದ ವೇಳೆ ಮತ್ತೇ ಉಸಿರಾಡಿದ ಎಂದು ಗ್ರಾಮಸ್ಥರು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದ ಘಟನೆ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ಶೆಟ್ಟಿಹಳ್ಳಿ ಗ್ರಾಮದ ವಾಸಿ ಹನುಮಂತಯ್ಯ(40) ಸೋಮವಾರ ಸಂಬಂಧಿಕರ ಮನೆಗೆ ಹೋಗಿ ರಾತ್ರಿ 9.30 ರ ಸಮಯದಲ್ಲಿ ಕುಣಿಗಲ್‌ಗೆ ಬಂದಿದ್ದಾರೆ. ಸ್ವಗ್ರಾಮಕ್ಕೆ ತೆರಳಲು ಆಟೋ ಸಿಗದ ಕಾರಣ ನಡೆದುಕೊಂಡು ಹೊರಟಿದ್ದಾರೆ. ಈ ವೇಳೆ ಚಿಕ್ಕಕೆರೆ ಏರಿ ಬಳಿ ಕುಸಿದು ಬಿದ್ದಿದ್ದಾರೆ. ಇಡೀ ರಾತ್ರಿ ರಸ್ತೆ ಬದಿಯಲ್ಲೇ ಹನುಮಂತಯ್ಯ ಬಿದ್ದಿದ್ದಾರೆ. ಬೆಳಗ್ಗಿನ ಜಾವ ಕುಣಿಗಲ್‌ ಪಟ್ಟಣಕ್ಕೆ ಹೂ ವ್ಯಾಪಾರಕ್ಕೆ ಬರುತ್ತಿದ್ದ ಶೆಟ್ಟಿಹಳ್ಳಿ ಗ್ರಾಮಸ್ಥರು ಗಮನಿಸಿ ಕುಣಿಗಲ್‌ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಇದನ್ನೂ ಓದಿ :ಪಶ್ಚಿಮ ಬಂಗಾಳ : ಎರಡನೇ ಹಂತದ ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ಅಂತ್ಯ

ಈ ವೇಳೆ ವೈದ್ಯರು ಹನುಮಂತಯ್ಯ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ನಂತರ ಶವವನ್ನು ಗ್ರಾಮಕ್ಕೆ ತಂದು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿ, ಶವಕ್ಕೆ ಸ್ನಾನ ಮಾಡಿಸುವಾಗ ಉಸಿರು ಬಿಟ್ಟಂತಾಗಿದೆ. ಇದರಿಂದ ಹನುಮಂತಯ್ಯ ಇನ್ನೂ ಬದುಕಿದ್ದಾನೆ ಎಂದು ಗ್ರಾಮಸ್ಥರು, ಸಂಬಂಧಿಕರು ಕುಣಿಗಲ್‌ ಎಂಎಂ ಆಸ್ಪತ್ರೆಗೆ ಕರೆ ತಂದಿದ್ದಾರೆ. ಮತ್ತೆ ಪರೀಕ್ಷಿಸಿದ ವೈದ್ಯರು ಹನುಮಂತಯ್ಯ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಹೃದಯದಲ್ಲಿ ಕಟ್ಟಿಕೊಂಡಿದ್ದ ಉಸಿರು ಸ್ನಾನ ಮಾಡಿಸುವಾಗ ಹೊರ ಬಂದಿದೆ ಅಷ್ಟೆ ಎಂದು ತಿಳಿಸಿದ್ದಾರೆ. ನಂತರ ಗ್ರಾಮಸ್ಥರು ಶವಸಂಸ್ಕಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next