Advertisement

ಯುವ ರೈತನ ಮಣ್ಣಿನ ಪ್ರೀತಿ

11:05 AM Jan 05, 2020 | Lakshmi GovindaRaj |

“ನಮ್ಮಪ್ಪನ ಸಾವೇ ರೈತನ ಕೊನೇ ಸಾವಾಗಿರಬೇಕು…’ ಆ ಬುದ್ಧಿವಂತ ಯುವ ರೈತ ಈ ಡೈಲಾಗ್‌ ಹೇಳುವ ಹೊತ್ತಿಗೆ, ಆ ಹಳ್ಳಿಯಲ್ಲಿ 25 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬರಗಾಲ, ಬರದ ಬೆಳೆ, ಸಾಲದ ಹೊರೆಯಿಂದಾಗಿ ಕಂಗಾಲಾದ ರೈತರು ,ಹೊಲ, ಮನೆ ಮಾರಿಕೊಂಡರೆ, ಅವರ ಮಕ್ಕಳು ಕೆಲಸ ಅರಸಿ ಸಿಟಿ ಕಡೆ ಮುಖ ಮಾಡುತ್ತಾರೆ. ಆದರೆ, ಆ ಹಳ್ಳಿಯ ಯುವ ರೈತ ಐಎಎಸ್‌ ಓದಿದ್ದರೂ, ತನ್ನೂರಿನ ಜನರ ನೋವಿಗೆ ಸ್ಪಂದಿಸುವ ಸಲುವಾಗಿ ಊರ ಜನರನ್ನು ಒಗ್ಗೂಡಿಸಿ ಕೆರೆ-ಕಟ್ಟೆ ಸರಿಪಡಿಸಿ ನೀರು ತುಂಬುವಂತೆ ಮಾಡಿ ಊರಿಗೆ ಊರೇ ಅವನನ್ನು ಕೊಂಡಾಡುವಷ್ಟರ ಮಟ್ಟಿಗೆ ಬೆಳೆಯುತ್ತಾನೆ.

Advertisement

ಆದರೆ, ಅದೇ ಊರ ಜನ, ಅದೇ ಸಹೋದರರು ಅವನನ್ನು ಕೀಳಾಗಿ ಕಾಣುತ್ತಾರೆ. ಯಾಕೆ ಹಾಗೆ ನೋಡುತ್ತಾರೆ, ಕೊನೆಗೆ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ. ಇದೊಂದು ಪಕ್ಕಾ ಹಳ್ಳಿಯ ಕಥೆ. ಅದರಲ್ಲೂ ರೈತರ ನೋವು-ನಲಿವಿನ ಅಂಶಗಳು ಇಲ್ಲಿವೆ. ಚಿತ್ರದ ಕಥೆಯ ಆಶಯ ಚೆನ್ನಾಗಿದೆ. ಹಾಗಂತ, ಹೊಸ ಕಥೆಯಂತೂ ಅಲ್ಲ. ಆದರೆ, ನಿರೂಪಿಸಿರುವ ರೀತಿ ಹೊಸದು. ಈಗಿನ ವಾಸ್ತವ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಸಾರ್ಥಕ ಎನಿಸಿದೆ. ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ, “ರಾಜೀವ’ ಎಲ್ಲರಿಗೂ ಇಷ್ಟವಾಗುತ್ತಾನೆ. ಇಲ್ಲೊಂದು ಗಂಭೀರ ವಿಷಯವಿದೆ. ಅದನ್ನು ಇನ್ನಷ್ಟು ಬಿಗಿಯಾಗಿ ನಿರೂಪಿಸಬಹುದಿತ್ತು.

ಕೆಲವು ಕಡೆ ಅನಗತ್ಯ ದೃಶ್ಯಗಳು ಕಾಣಿಸಿಕೊಂಡು ಕಥೆಯ ವೇಗಕ್ಕೆ ಅಡ್ಡಿಯಾಗುತ್ತವೆ. ಚಿತ್ರದ ಬಹುಪಾಲು ಭಾಗ ರೈತರ ಸಂಕಷ್ಟಗಳ ಸುತ್ತವೇ ಸುತ್ತಿದರೂ, ಸಂಬಂಧ ಗಳಿಗಿಂತ ಅಧಿಕಾರ ಹಾಗೂ ಹಣದ ವ್ಯಾಮೋಹವೇ ಹೆಚ್ಚು ಎಂಬುದನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಮೊದಲರ್ಧ ಅಲ್ಲಲ್ಲಿ ಗೊಂದಲಪಡಿಸುತ್ತಲೇ ಸಾಗುವ ಚಿತ್ರದ ದ್ವಿತಿಯಾರ್ಧಕ್ಕೆ ನೋಡುಗರನ್ನು ಹಿಡಿದು ಕೂರಿಸುವ ತಾಕತ್ತಿದೆ. ಗಂಭೀರವಾಗಿ ನಡೆಯುವ ಚಿತ್ರದ ಮಧ್ಯೆ ವಿನಾಕಾರಣ ಹಾಸ್ಯ ದೃಶ್ಯಗಳು ಇಣುಕಿ ನೋಡಿ, ನೋಡುಗರ ತಾಳ್ಮೆ ಕೆಡಿಸುತ್ತವೆ. ಇಲ್ಲಿ ಪದೇ ಪದೇ ಹಾಸ್ಯಕ್ಕೆ ಒತ್ತು ಕೊಟ್ಟಿರುವುದನ್ನು ಕೆಲಹೊತ್ತು ಅರಗಿಸಿಕೊಳ್ಳಲಾಗುವುದಿಲ್ಲ.

ಆದರೂ, ಕಾಣಿಸಿಕೊಳ್ಳುವ ಕೆಲ ಹಾಡು, ಫೈಟು ಅದನ್ನು ಮರೆಸುತ್ತವೆ. ಒಂದಷ್ಟು ದೃಶ್ಯಗಳನ್ನು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವುಗಳನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡುವ ಸಾಧ್ಯತೆ ಇತ್ತು. ನಿರ್ದೇಶಕರು ಆ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಡಿಸಿ ಕಚೇರಿ ಯಾವುದೋ ಕಂದಾಯ ಇಲಾಖೆಯ ಕ್ಲರ್ಕ್‌ ಕಚೇರಿ ನೋಡಿದಂತಾಗುತ್ತೆ ಹಾಗೂ ರೈತರು ಪ್ರತಿಭಟಿಸುವ ಸನ್ನಿವೇಶ ಕೂಡ ಪರಿಣಾಮಕಾರಿ ಎನಿಸುವುದಿಲ್ಲ. ಉಳಿದಂತೆ ಒಂದಷ್ಟು ಗಂಭೀರ ದೃಶ್ಯಗಳಲ್ಲೂ ಗಾಂಭೀರ್ಯ ಇಲ್ಲದಂತಾಗಿದೆ. ಇವೆಲ್ಲವನ್ನೂ ಸರಿಪಡಿಸಿ ಕೊಂಡಿದ್ದರೆ, ತೆರೆ ಮೇಲಿನ ನೋಟ ಮಜ ಎನಿಸುತ್ತಿತ್ತು.

ಒಟ್ಟಾರೆ ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳ ನಡುವೆ “ರಾಜೀವ’ ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮತ್ತು ಯಾವುದೇ ಕಮರ್ಷಿಯಲ್‌ ಅಂಶಗಳನ್ನು ಮೆಚ್ಚಿಕೊಳ್ಳದೆ ಇಡೀ ರೈತಾಪಿ ವರ್ಗಕ್ಕೆ ಮೀಸಲು ಎಂಬಂತೆ ರೂಪಗೊಂಡಿದೆ. ಇನ್ನು ಬಿಗಿಯಾದ ಹಿಡಿತ ಇದ್ದಿದ್ದರೆ, “ರಾಜೀವ’ ಇನ್ನಷ್ಟು ಹತ್ತಿರವಾಗುತ್ತಿದ್ದ ಎಂಬುದಂತೂ ನಿಜ. ಸಾಮಾನ್ಯವಾಗಿ ಡಾಕ್ಟರ್‌, ಎಂಜಿನಿಯರ್‌ಗಳು ತಮ್ಮ ಮಕ್ಕಳು ಕೂಡ ತಮ್ಮಂತೆ ಆಗಬೇಕು ಎಂದು ಬಯಸುತ್ತಾರೆ. ಆದರೆ, ರೈತ ಮಾತ್ರ, ತನ್ನ ಮಕ್ಕಳನ್ನು ರೈತನಾಗಿಸಲು ಇಷ್ಟಪಡದೆ ಚೆನ್ನಾಗಿ ಓದಿಸುವ ಕನಸು ಕಾಣತ್ತಾರೆ.

Advertisement

ಅಂತೆಯೇ ಚಿತ್ರದಲ್ಲಿ ಯಶಸ್ವಿ ರೈತನೊಬ್ಬ ತನ್ನ ನಾಲ್ಕು ಜನ ಮಕ್ಕಳನ್ನು ಚೆನ್ನಾಗಿ ಓದಿಸುತ್ತಾನೆ. ಊರಿನ ರೈತರ ಸುಖಕ್ಕಾಗಿ ಅವರ ಕಷ್ಟಗಳಿಗೆ ಸ್ಪಂದಿಸಲು ಹೋಗಿ, ತಾನೇ ಸಂಕಷ್ಟಕ್ಕೆ ಸಿಲುಕುತ್ತಾನೆ. ಕೊನೆಗೆ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನ ಮಕ್ಕಳ ಪೈಕಿ ಹಿರಿಯ ಮಗ ರಾಜೀವ ಐಎಎಸ್‌ ಓದಿದ್ದರೂ, ತನ್ನೂರಿನ ರೈತರ ಸಮಸ್ಯೆಗೆ ಸ್ಪಂದಿಸಲು ಹಳ್ಳಿಗೆ ಹಿಂದಿರುಗುತ್ತಾನೆ. ತನ್ನ ಪರಿಶ್ರಮದ ಮೂಲಕ ಇಡೀ ರೈತರ ಮೊಗದಲ್ಲಿ ಮಂದಹಾಸ ಮೂಡಿಸುತ್ತಾನೆ. ಅವನ ಮೂವರು ಸಹೋದರರ ಪೈಕಿ ಶಾಸಕ ಒಬ್ಬನಾದರೆ, ಇನ್ನೊಬ್ಬ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ.

ಅದೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅವರು, ತನ್ನ ಅಣ್ಣ ರಾಜೀವನ ಮಾತಿಗೆ ಸದಾ ತಲೆಬಾಗುತ್ತಿರುತ್ತಾರೆ. ಒಂದು ಕೆಟ್ಟ ಘಟನೆಯಲ್ಲಿ ಅವರೆಲ್ಲರೂ ರಾಜೀವನ ಮೇಲೆ ತಿರುಗಿ ಬೀಳುತ್ತಾರೆ. ಊರ ಜನರು ಸಹ ರಾಜೀವನನ್ನು ದೂರುತ್ತಾರೆ. ತನ್ನ ಊರಿನ ರೈತರಿಗಾಗಿ ಅಷ್ಟೆಲ್ಲಾ ಕಷ್ಟಪಟ್ಟ ರಾಜೀವ ಕೊನೆಗೆ ಆ ಘಟನೆಯಿಂದ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲವಿದ್ದರೆ, ರಾಜೀವನ ಹೋರಾಟ ನೋಡಿಬರಬಹುದು.

ಮಯೂರ್‌ ಪಟೇಲ್‌, ಈ ಬಾರಿ ಕಮರ್ಷಿಯಲ್‌ಗೆ ಅಂಟಿಕೊಳ್ಳದೆ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರಿಲ್ಲಿ ಮೂರು ಶೇಡ್‌ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಯುವಕನಾಗಿ, ಅಪ್ಪನಾಗಿ ನಟನೆಯಲ್ಲಿ ಇಷ್ಟವಾಗುತ್ತಾರೆ. ಉಳಿ ದಂತೆ ತೆರೆ ಮೇಲೆ ಕಾಣುವ ಪಾತ್ರಗಳಿಗೂ ಆದ್ಯತೆ ಕೊಡಲಾಗಿದೆ. ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರೋಹಿತ್‌ ಸೋವರ್‌ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನಷ್ಟು ಸ್ವಾದ ಇರಬೇಕಿತ್ತು. ಆನಂದ್‌ ಇಳೆಯರಾಜ ಅವರ ಛಾಯಾಗ್ರಹಣದಲ್ಲಿ ಹಳ್ಳಿ ಸೊಗಡು ತುಂಬಿದೆ. ಕಾಕೋಳು ರಾಮಯ್ಯ ಬರೆದ ಮಾತುಗಳಲ್ಲಿ ತೂಕವಿದೆ.

ಚಿತ್ರ: ರಾಜೀವ
ನಿರ್ಮಾಣ: ಬಿ.ಎಂ.ರಮೇಶ್‌, ಕಿರಣ್‌
ನಿರ್ದೇಶನ: ಫ್ಲೈಯಿಂಗ್‌ ಕಿಂಗ್‌ ಮಂಜು
ತಾರಾಗಣ: ಮಯೂರ್‌ ಪಟೇಲ್‌, ಅಕ್ಷತಾ ಶಾಸ್ತ್ರಿ, ಮದನ್‌ ಪಟೇಲ್‌ ಇತರರು.

* ವಿಭ

Advertisement

Udayavani is now on Telegram. Click here to join our channel and stay updated with the latest news.

Next