Advertisement

ಶಾಸಕರ ಕಚೇರಿ ತೆರವಿಗೆ ಒತ್ತಾಯ

11:26 AM Jan 21, 2019 | |

ಸಾಗರ: ಶಾಸಕರ ಹಿಂಬಾಲಕರಿಂದ ಪದೇ ಪದೆ ನಗರಸಭೆಯ ಆಡಳಿತಕ್ಕೆ ಸಮಸ್ಯೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರಸಭೆ ಆವರಣದಲ್ಲಿ ಅವಕಾಶ ಮಾಡಿಕೊಟ್ಟಿರುವ ಶಾಸಕರ ಕಚೇರಿಯನ್ನು ತುರ್ತಾಗಿ ತೆರವುಗೊಳಿಸಬೇಕು ಎಂದು ನಗರಸಭಾಧ್ಯಕ್ಷೆ ವೀಣಾ ಪರಮೇಶ್ವರ್‌ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಶಾಸಕ ಹಾಲಪ್ಪ ಅವರು ಮಂಗನ ಕಾಯಿಲೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿ ಐಶಾರಾಮಿ ರೆಸಾರ್ಟ್‌ನಲ್ಲಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆಯ ವಿಷಯದ ಹಿನ್ನೆಲೆಯಲ್ಲಿ ಆರಂಭವಾದ ಮಾತಿನ ಚಕಮಕಿ ನಗರಸಭೆ ಆವರಣದ ಶಾಸಕರ ಕಚೇರಿ ಎದುರಿನಲ್ಲಿ ಕೈ ಕೈ ಮಿಲಾಯಿಸಿ ಹೊಡೆದಾಟದಲ್ಲಿ ಪರ್ಯಾವಸಾನಗೊಂಡ ಘಟನೆ ಶನಿವಾರ ನಗರದಲ್ಲಿ ನಡೆದಿತ್ತು. ಈ ಸಂಬಂಧ ಪರಸ್ಪರರು ನಗರ ಠಾಣೆಯಲ್ಲಿ ದೂರು ಕೂಡ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ.

ತಾಪಂ ಕಟ್ಟಡದಲ್ಲಿ ಶಾಸಕರ ಕಚೇರಿ ಈಗಾಗಲೇ ಇದ್ದರೂ ಆರು ತಿಂಗಳ ಹಿಂದೆ ದುರುದ್ದೇಶಪೂರ್ವಕವಾಗಿಯೇ ನಗರಸಭೆಯಲ್ಲಿ ಮತ್ತೂಂದು ಶಾಸಕರ ಕಚೇರಿ ತೆರೆಯಲಾಗಿದೆ. ವಿವಿಧ ಸಂದರ್ಭಗಳಲ್ಲಿ ಶಾಸಕರ ಹಿಂಬಾಲಕರು ಗೂಂಡಾಗಿರಿ ಪ್ರದರ್ಶಿಸಿ ಇಲ್ಲಿನ ವಾತಾವರಣವನ್ನು ಹಾಳುಗೆಡವುತ್ತಿದ್ದಾರೆ ಎಂದು ದೂರಲಾಗಿದೆ.

ಈ ಹಿಂದೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಾರ್ವಜನಿಕರ ಕುಂದುಕೊರತೆ ವಿಚಾರಿಸಲು ನಗರಸಭೆಗೆ ಆಗಮಿಸಿದ್ದ ಸಂದರ್ಭದಲ್ಲೂ ಅವರ ಮೇಲೆ ಗೂಂಡಾಗಿರಿ ನಡೆದಿತ್ತು. ಉಪ್ಪಾರಕೇರಿ ಬೋರ್ಡ್‌ ವಿಚಾರದಲ್ಲಿ ನಿಯಮಾನುಸಾರ ಬೋರ್ಡ್‌ ಹಾಕುವಲ್ಲಿ ನಡೆದ ವಿವಾದದಲ್ಲಿ ತಮ್ಮನ್ನು ಹಾಗೂ ಇತರ ಮಹಿಳಾ ಸದಸ್ಯೆಯರನ್ನು ಕಾರಿನಿಂದ ಎಳೆಯುವ ಅವಮಾನಕರ ಘಟನೆ ನಡೆದಿತ್ತು. ಪುರಪಿತೃಗಳಿಗೆ ಅವಮಾನವಾಗುವ ಘಟನೆ ಪದೇ ಪದೆ ನಡೆಯುತ್ತಿದೆ ಎಂದು ದೂಷಿಸಲಾಗಿದೆ.

ಈ ರೀತಿಯ ಘಟನೆಗಳಿಂದ ನಗರಸಭೆಯ ಆಡಳಿತ ಚಟುವಟಿಕೆಗಳಿಗೆ ತೀವ್ರವಾದ ತೊಂದರೆಯಾಗುತ್ತಿದ್ದು, ಆಡಳಿತ ಸುವ್ಯವಸ್ಥೆ ದೃಷ್ಟಿಯಿಂದ ತುರ್ತಾಗಿ ಶಾಸಕರ ಕಚೇರಿಯನ್ನು ತೆರವುಗೊಳಿಸಬೇಕು ಎಂದು ವೀಣಾ ಪರಮೇಶ್ವರ್‌ ಆಗ್ರಹಿಸಿದರು.

Advertisement

ಉಪಾಧ್ಯಕ್ಷೆ ಗ್ರೇಸಿ ಡಯಾಸ್‌, ನಗರಸಭೆಯ ಸದಸ್ಯರಾದ ಉಷಾ, ಎನ್‌.ಲಲಿತಮ್ಮ, ಪರಿಮಳ, ಮರಿಯಾ ಲೀಮಾ, ಸರಸ್ವತಿ, ಸಬಿರಾ, ಎನ್‌. ಶ್ರೀನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next