Advertisement

ಕೇರಳ ಜಲ ಪ್ರಳಯ ದೀರ್ಘಾವಧಿ ಯೋಜನೆ ಬೇಕು

11:27 AM Aug 13, 2018 | Harsha Rao |

ದೇವರ ನಾಡಾದ ಕೇರಳಕ್ಕೆ ಈ ಸಲ ವರುಣ ದೇವ ಮುನಿದಿರುವಂತೆ ಕಾಣಿಸುತ್ತಿದೆ. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೇರಳದಲ್ಲಿ ಪ್ರಳಯ ಸದೃಶ ಪರಿಸ್ಥಿತಿ ತಲೆದೋರಿದೆ. ಈಗಾಗಲೇ 35ಕ್ಕೂ ಹೆಚ್ಚು ಮಂದಿ ಮಳೆ ಸಂಬಂಧಿ ದುರ್ಘ‌ಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 60,000 ಮಂದಿಯನ್ನು ಮನೆಯಿಂದ ತೆರವುಗೊಳಿಸಿ ಪರಿಹಾರ ಶಿಬಿರಗಳಿಗೆ ಸಾಗಿಸಲಾಗಿದೆ. ಈ ಮಾದರಿಯ 500ಕ್ಕೂ ಹೆಚ್ಚು ಶಿಬಿರಗಳನ್ನು ಸರಕಾರ ಪ್ರಾರಂಭಿಸಿದೆ. ಮಳೆಯಿಂದಾಗಿ ಆಗಿರುವ ಕೃಷಿ ಮತ್ತು ಸೊತ್ತು ಹಾನಿ ಅಪಾರ. 100ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಕುಸಿದಿದ್ದರೆ 1500ದಷ್ಟು ಮನೆಗಳು ಹಾನಿಗೀಡಾಗಿವೆ.ಕೃಷಿ ಸಂಪೂರ್ಣ ಹಾನಿಗೀಡಾಗಿದ್ದು ಇದರ ಅಂದಾಜು ಇನ್ನೂ ಸಿಕ್ಕಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಈ ಮಳೆಗಾಲದ ಹೊಡೆತದಿಂದ ಚೇತರಿಸಿಕೊಳ್ಳಲು ರಾಜ್ಯಕ್ಕೆ ಬಹುಕಾಲ ಬೇಕಾಗಬಹುದು. 

Advertisement

ರಾಜ್ಯದ ಎಲ್ಲ 24 ಅಣೆಕಟ್ಟೆಗಳು ತುಂಬಿವೆ. ಅದರಲ್ಲೂ ಇಡುಕ್ಕಿ ಅಣೆಕಟ್ಟು ಸ್ಥಿತಿ ಚಿಂತಾಜಕನವಾಗಿದೆ. 26 ವರ್ಷಗಳ ಬಳಿಕ ರಾಜ್ಯದಲ್ಲಿ ಎಲ್ಲ ಅಣೆಕಟ್ಟೆಗಳ ಶಟರ್‌ಗಳನ್ನು ಏಕಕಾಲದಲ್ಲಿ ತೆರೆದು ನೀರು ಹೊರ ಬಿಟ್ಟದ್ದು ಇದೇ ಮೊದಲು. ಈ ಸಲದ ಮಳೆ 1924ರ ಮಹಾ ಪ್ರಳಯವನ್ನು ನೆನಪಿಸುವಂತಿದೆ ಎಂದು ಇಲ್ಲಿನ ಹಳಬರು ನೆನಪಿಸುತ್ತಿರುವುದು ಪರಿಸ್ಥಿತಿ ಎಷ್ಟು ಕಳವಳಕಾರಿಯಾಗಿದೆ ಎನ್ನುವುದನ್ನು ತಿಳಿಸುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ಕೇರಳ ಮಳೆ ಕೊರತೆಯಿಂದ ಚಿಂತೆಗೀಡಾಗಿತ್ತು. ಆಗಸ್ಟ್‌ನಲ್ಲೇ ರಾಜ್ಯ ಸರಕಾರ ಶೇ. 29 ಮಳೆ ಕೊರತೆಯಾಗಿರುವುದರಿಂದ ನೀರು ಮತ್ತು ವಿದ್ಯುತ್‌ನ್ನು ಮಿತವ್ಯಯಕ್ಕೆ ಯೋಜನೆಗಳನ್ನು ರೂಪಿಸಲು ತೊಡಗಿತ್ತು. ಈ ಸಲ ಪರಿಸ್ಥಿತಿ ತದ್ವಿರುದ್ಧವಾಗಿದೆ. 

ಹೀಗೆ ಹವಾಮಾನ ಪ್ರತಿಕೂಲಕರವಾಗಿ ವರ್ತಿಸಲು ಏನು ಕಾರಣ ಎನ್ನುವುದು ಚಿದಂಬರ ರಹಸ್ಯವಾಗಿ ಉಳಿದಿಲ್ಲ. ಹವಾಮಾನ ಬದಲಾವಣೆಯಿಂದ ಪ್ರಕೃತಿ ಮುನಿಯಬಹುದು ಎಂಬ ಎಚ್ಚರಿಕೆ ಮಾತು ಕೇಳಿ ಬಂದು ಬಹಳ ವರ್ಷಗಳಾದರೂ ಇದನ್ನು ನಿರ್ಲಕ್ಷಿಸಿದ್ದೆ ಈ ಮಾದರಿಯ ಸ್ಥಿತಿಯುಂಟಾಗಲು ಕಾರಣ. 

ರಾಜ್ಯ ಸರಕಾರ ಶಕ್ತಿಮೀರಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಕೇಂದ್ರವೂ ಸಾಕಷ್ಟು ನೆರವು ನೀಡುತ್ತಿದೆ. ಗೃಹ ಸಚಿವ ರಾಜನಾಥ ಸಿಂಗ್‌ ರಾಜ್ಯಕ್ಕೆ ಭೇಟಿ ನೀಡಿ ಅವಲೋಕನ ನಡೆಸಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಉದ್ಗರಿಸಿದ್ದಾರೆ. ಒಂದು ವಾರದ ಹಿಂದೆಯಷ್ಟೇ ರಾಜ್ಯ ಇದೇ ಮಾದರಿಯಲ್ಲಿ ಮಳೆಯಿಂದ ನಲುಗಿತ್ತು. ಈ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿರುವವರು ಮನೆಗಳಿಗೆ ವಾಪಸಾಗಿ ಸಾಮಾನು ಸರಂಜಾ ಮುಗಳನ್ನು ಹೊಂದಿಸಿಕೊಳ್ಳುತ್ತಿರುವಾಗಲೇ ಮತ್ತೂಮ್ಮೆ ಅತಿವೃಷ್ಟಿಯಾ ಗಿದ್ದು, ಜನರ ಬದುಕು ಅತಂತ್ರಗೊಂಡಿದೆ.

ಸದ್ಯಕ್ಕೇನೊ ಸರಕಾರ ಪರಿಹಾರ ಕೇಂದ್ರಗಳಲ್ಲಿ ಊಟ, ವಸತಿ ಏರ್ಪಾಡು ಮಾಡಿಕೊಡಬಹುದು. ಆಗಿರುವ ಹಾನಿಗಳಿಗೆ ಒಂದಷ್ಟು ಪರಿಹಾರವನ್ನೂ ನೀಡಬಹುದು. ಇದಿಷ್ಟ ರಿಂದಲೇ ಬದುಕು ಹಸನಾದೀತೆ? ಅನೇಕ ಕುಟುಂಬಗಳು ಜೀವಮಾನದ ಗಳಿಕೆ, ಕಷ್ಟಪಟ್ಟು ಕಟ್ಟಿಸಿದ ಮನೆ ಹೀಗೆ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದೆ. ಇಂಥವರ ಬದುಕು ಮತ್ತೂಮ್ಮೆ ನೇರ್ಪುಗೊಳ್ಳಲು ಎಷ್ಟು ಸಮಯ ಹಿಡಿಯಬಹುದು ಎಂದು ಹೇಳುವುದು ಕಷ್ಟ. 

Advertisement

ಇದು ಕೇರಳದ ದುರಂತ ಮಾತ್ರವಲ್ಲ, ಇಡೀ ದೇಶ ಇಂದು ಈ ಮಾದರಿಯ ಹವಾಮಾನ ವೈಪರೀತ್ಯಕ್ಕೆ ತೆರೆದುಕೊಂಡಿದೆ. ಅಕಾಲಿಕ ಮಳೆ, ಅತಿಯಾದ ಸೆಖೆ ಇವೆಲ್ಲ ನಾವೇ ತಂದುಕೊಂಡಿರುವ ದುರಂತಗಳು.

ಅತಿಕ್ರಮಣ, ಅರಣ್ಯ ನಾಶ ಇವೇ ಮುಂತಾದ ಕೃತ್ಯಗಳಿಂದ ಸತತವಾಗಿ ಪ್ರಕೃತಿಯನ್ನು ಶೋಷಿಸಿದ ಪರಿಣಾಮವಿದು. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದರೂ ಅದನ್ನು ತಡೆಯುವ ನಿಟ್ಟಿನಲ್ಲಿ ನಾವು ನಡೆಸಿದ ಪ್ರಯತ್ನ ಅತ್ಯಲ್ಪ. ಮಳೆಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲೂ ಈ ಸಲ ಕಡಲ್ಕೊರೆತ ವಾಗಿರುವುದನ್ನು ಕಂಡಿದ್ದೇವೆ. ತಾಪಮಾನ ಏರಿಕೆಯಿಂದಾಗಿ ಸಮುದ್ರದಲ್ಲಾಗಿರುವ ವ್ಯತ್ಯಯವೇ ಇದಕ್ಕೆ ಕಾರಣ. ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಶೋಷಣೆ ನಿಂತಿಲ್ಲ. ಉತ್ತರ ಭಾರತದಲ್ಲಿ ಬೀಸಿದ ಧೂಳು ಬಿರುಗಾಳಿ, ಮೇ ತಿಂಗಳಲ್ಲೇ ಆದ ಅತಿವೃಷ್ಟಿ ಇವೆಲ್ಲ ಹವಾಮಾನ ಬದಲಾವಣೆಯಿಂದ ಪ್ರಕೃತಿ ಚಕ್ರ ಬದಲಾಗಿರುವ ಪರಿಣಾಮವೇ. 

ವಿಕೋಪ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸುವುದು, ಕಟ್ಟಡಗಳು, ಅಣೆಕಟ್ಟೆಗಳು, ಸೇತುವೆಗಳು ಮತ್ತಿತರ ನಿರ್ಮಾಣಗಳನ್ನು ಸುಸ್ಥಿಯಲ್ಲಿಡುವುದು ಮಾಡಲೇ ಬೇಕಾದ ಕೆಲಸ. ಇದರ ಜತೆಗೆ ತಾಪಮಾನ ಏರಿಕೆ ಮತ್ತು ಇದರಿಂದಾಗುವ ಹವಾಮಾನ ಬದಲಾವಣೆ ಯನ್ನು ತಡೆಯಲು ದೀರ್ಘಾಕಾಲಿಕ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಿಸುವುದಕ್ಕೆ ಆದ್ಯತೆ ನೀಡಬೇಕು. ಎಲ್ಲ ಸರಕಾರಗಳ ಬಜೆಟ್‌ನಲ್ಲಿ ಇಂಥ ಕಾರ್ಯಕ್ರಮಗಳಿಗೂ ಅನುದಾನ ಮೀಸಲಿಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next