Advertisement

ಜಾಲ್ಸೂರು ಮೆಸ್ಕಾಂ ಶಾಖೆ ಶೀಘ್ರ ಕಾರ್ಯಾರಂಭ

12:09 AM Jul 08, 2019 | Team Udayavani |

ಜಾಲ್ಸೂರು: ಸುಳ್ಯ ಮೆಸ್ಕಾಂ ಉಪವಿಭಾಗದ ಕಾರ್ಯ ಮತ್ತು ಪಾಲನ ಶಾಖೆಗಳನ್ನು ವಿಭಜಿಸಿ ಜಾಲ್ಸೂರಲ್ಲಿ ಮೆಸ್ಕಾಂ ಶಾಖೆ ಆರಂಭಿಸುವ ಕುರಿತು ಅಧಿಕಾರಿ ವಲಯದಲ್ಲಿ ಚಿಂತಿಸಲಾಗುತ್ತಿದೆ. ಮೂರು ವರ್ಷಗಳಿಂದ ಇದ್ದ ಜನರ ಬೇಡಿಕೆ ಈಡೇರುವ ಲಕ್ಷಣಗಳು ಕಾಣುತ್ತಿವೆ.

Advertisement

ಸುಳ್ಯ ಮೆಸ್ಕಾಂ ಉಪವಿಭಾಗದ ಕಾರ್ಯ ಮತ್ತು ಪಾಲನ ಶಾಖೆಗಳನ್ನು ವಿಭಜಿಸಿ ಹೆಚ್ಚುವರಿ ಮೂರು ಶಾಖೆಗಳನ್ನು ರಚಿಸಲಾಗಿತ್ತು. ಜಾಲ್ಸೂರು ಗ್ರಾಮದಲ್ಲಿಯೂ ಕಾರ್ಯ ಮತ್ತು ಪಾಲನ ಶಾಖೆಗಳನ್ನು ರಚಿಸಲು ಯೋಜನೆ ಮಂಜೂರು ಮಾಡಲಾಗಿತ್ತು. ಪರ- ವಿರೋಧ ಅಭಿಪ್ರಾಯಗಳಿಂದ ಶಾಖೆ ಜಾಲ್ಸೂರಲ್ಲಿ ಕಾರ್ಯಾರಂಭವಾಗದೆ ಸುಳ್ಯದಲ್ಲಿಯೇ ಆರಂಭಿಸಲಾಗಿತ್ತು.

ಮೂರು ಗ್ರಾಮಗಳು
ಈ ಮೊದಲು ಜಾಲ್ಸೂರು ಕಾರ್ಯ ಮತ್ತು ಪಾಲನ ಶಾಖೆಯಲ್ಲಿ ಆರು ಗ್ರಾಮಗಳು ಒಳಪಡುತ್ತಿದ್ದವು. ಜಾಲ್ಸೂರು, ಕನಕಮಜಲು, ಅಮರಮುಟ್ನೂರು, ಅಜ್ಜಾವರ, ಮಂಡೆಕೋಲು ಹಾಗೂ ಉಬರಡ್ಕ-ಮಿತ್ತೂರು ಗ್ರಾಮಗಳು ಜಾಲ್ಸೂರು ಮೆಸ್ಕಾಂ ಶಾಖೆಯ ಅಧೀನದಲ್ಲಿದ್ದವು. ಇದನ್ನು ಬರಿ ಮೂರು ಗ್ರಾಮಗಳಿಗೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ. ಜಾಲ್ಸೂರು, ಕನಕಮಜಲು ಮತ್ತು ಮಂಡೆಕೋಲು ಗ್ರಾಮಗಳು ಜಾಲ್ಸೂರು ಕಾರ್ಯ ಮತ್ತು ಪಾಲನ ಶಾಖೆಯ ಅಧೀನದಲ್ಲಿ ಬರಲಿವೆ. ಮಂಡೆಕೋಲು ಭಾಗದ ಜನರಲ್ಲಿ ಪರ -ವಿರೋಧ ಅಭಿಪ್ರಾಯಗಳಿವೆ. ಇವುಗಳನ್ನು ಮಾತುಕತೆಯಿಂದ ಬಗೆಹರಿಸಬೇಕಾಗಿದೆ.

ಹಿನ್ನೆಲೆ
ಪುತ್ತೂರು ಕಾರ್ಯ ಮತ್ತು ಪಾಲನ ವಿಭಾಗ ವ್ಯಾಪ್ತಿಯಲ್ಲಿ ಸುಳ್ಯ ಕಾರ್ಯ ಮತ್ತು ಪಾಲನ ಉಪವಿಭಾಗವು ದಟ್ಟವಾದ ಅರಣ್ಯ ಹಾಗೂ ಮಲೆನಾಡು ಪ್ರದೇಶ ಹೊಂದಿದ್ದು, ಸುಮಾರು 827.74 ಹೆಕ್ಟೇರ್‌ ವಿಸ್ತೀರ್ಣದ ಕಾರ್ಯವ್ಯಾಪ್ತಿಯಲ್ಲಿದೆ. ಈ ಉಪವಿಭಾಗದಲ್ಲಿ 4 ಕಾರ್ಯ ಮತ್ತು ಪಾಲನ ಶಾಖೆಗಳಿವೆ, ಸುಮಾರು 47,630 ವಿದ್ಯುತ್‌ ಸ್ಥಾವರಗಳನ್ನು ಹೊಂದಿವೆ.

2015ರ ಜನವರಿಯಲ್ಲಿ ನಡೆದ ಮೆಸ್ಕಾಂ ನಿರ್ದೇಶಕರ ಮಂಡಳಿಯ 54ನೇ ಸಭೆಯಲ್ಲಿ ಹೊಸದಾಗಿ 3 ಕಾರ್ಯ ಮತ್ತು ಪಾಲನ ಉಪ ವಿಭಾಗ ನಿರ್ಮಿಸುವಂತೆ ನಿರ್ಣಯಿಸಲಾಗಿತ್ತು. ಮೂರು ಗ್ರಾಮಗಳಿಗೆ ಕಾರ್ಯ ಮತ್ತು ಪಾಲನ ಶಾಖೆ ತೆರೆಯಲು ಚಿಂತನೆ ಸುಬ್ರಹ್ಮಣ್ಯ, ಪಂಜ, ಜಾಲ್ಸೂರು ಪ್ರದೇಶಗಳಲ್ಲಿ ಮೆಸ್ಕಾಂ ಶಾಖೆಗಳನ್ನು ಆರಂಭಿಸಿ 37 ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು.

Advertisement

ಸುಳ್ಯದಲ್ಲಿ ಕಾರ್ಯಾರಂಭ
ಸುಳ್ಯ ಉಪವಿಭಾಗದ ಹೊಸ ಕಾರ್ಯ ಮತ್ತು ಪಾಲನ ಶಾಖೆಗಳು ಸುಬ್ರಹ್ಮಣ್ಯ ಹಾಗೂ ಪಂಜದಲ್ಲಿ ಅರಂಭಿಸಲಾಗಿದೆ. ಉಪ ಶಾಖೆಗಳನ್ನು ವಿಭಜಿಸಿ ಪುನಾರಚಿಸಲಾಗಿದ್ದು, ಬೆಳ್ಳಾರೆಗೆ ಉಪವಿಭಾಗ ಶಾಖೆಯಾಗಿ ಪಂಜವನ್ನೂ, ಗುತ್ತಿಗಾರು ಶಾಖೆಗೆ ಉಪವಿಭಾಗವಾಗಿ ಸುಬ್ರಹ್ಮಣ್ಯವನ್ನೂ ಹೊಸ ಕಾರ್ಯ ಮತ್ತು ಪಾಲನ ಶಾಖೆಗಳಾಗಿ ಸೇರಿಸಲಾಗಿದೆ. ಜಾಲ್ಸೂರಿನ ಕಾರ್ಯ ಮತ್ತು ಪಾಲನ ಶಾಖೆ ಪ್ರಸ್ತುತ ಸುಳ್ಯದಲ್ಲಿಯೆ ಕಾರ್ಯನಿರ್ವಹಿಸುತ್ತಿದೆ.

ಪರ- ವಿರೋಧ
ಮೆಸ್ಕಾಂ ಅಧೀನದಲ್ಲಿ ಬರುವ ಕೆಲವು ಗ್ರಾಮಗಳು ಜಾಲ್ಸೂರು ಶಾಖೆಗೆ ದೂರವಿರುವುದರಿಂದ ಉಪವಿಭಾಗ ಕಾರ್ಯ ಮತ್ತು ಪಲನ ಶಾಖೆಯನ್ನು ಜಾಲ್ಸೂರಿನಲ್ಲಿ ಅರಂಭಿಸುವುದು ಜನರ ವಿರೋದಕ್ಕೆ ಕಾರಣವಾಗಿತ್ತು. ಅಜ್ಜಾವರ ಉಬರಡ್ಕ – ಮಿತ್ತೂರು ಭಾಗದ ಜನರಿಗೆ ಜಾಲ್ಸೂರು ಬಹಳ ದೂರ. ಇಲ್ಲಿ ಶಾಖೆ ಆರಂಭಿಸಿದರೆ ಎಲ್ಲಾ ಮೆಸ್ಕಾಂ ಕೆಲಸ – ಕಾರ್ಯಗಳಿಗೆ ಜಾಲ್ಸೂರನ್ನು ಅವಲಂಬಿಸುವುದು ಅನಿವಾರ್ಯ. ಸುಮಾರು 15ರಿಂದ 20 ಕಿ.ಮೀ. ಸಂಚರಿಸಬೇಕಾಗುತ್ತದೆ. ಹೀಗಾಗಿ ಜಾಲ್ಸೂರಿನಲ್ಲಿ ಮೆಸ್ಕಾಂ ಕಾರ್ಯ ಮತ್ತು ಪಾಲನ ಶಾಖೆ ಅರಂಭಿಸಲು ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದೀಗ ಮೂರು ಗ್ರಾಮಗಳನ್ನು ಮಾತ್ರ ಸೇರಿಸಲಾಗಿದ್ದು, ಇತರ ಗ್ರಾಮಗಳು ಎಂದಿನಂತೆ ಸುಳ್ಯದಲ್ಲಿಯೇ ವ್ಯವಹರಿಸಲಿವೆ.

ಸುಳ್ಯ ಅವಲಂಬನೆ ತಪ್ಪಿಸಿ
ಜಾಲ್ಸೂರಿನಲ್ಲಿ ಮೆಸ್ಕಾಂ ಕಾರ್ಯ ಮತ್ತು ಪಾಲನ ಶಾಖೆಯನ್ನು ಆರಂಭಿಸಲು ಮೂರು ವರ್ಷಗಳಿಂದ ಬೇಡಿಕೆ ಇಟ್ಟಿದ್ದೇವೆ. ಜನಸಂಪರ್ಕ ಸಭೆಯಲ್ಲಿಯೂ 110 ಕೆ.ವಿ. ಸ್ಟೇಷನ್‌ ಸ್ಥಾಪಿಸುವ ಬಗ್ಗೆ ಪ್ರಸ್ತಾವಿಸಿದ್ದೇನೆ. ಮೂರು ಗ್ರಾಮಗಳಿಗೆ ಒಂದು ಮೆಸ್ಕಾಂ ಶಾಖೆಯನ್ನು ಆರಂಭಿಸಬಹುದು. ಶೀಘ್ರ ಕಾರ್ಯಾರಂಭಿಸಿದರೆ ಜನರಿಗೆ ಬಹಳ ಉಪಯೋಗವಾಗಲಿದೆ. ಎಲ್ಲದಕ್ಕೂ ಸುಳ್ಯವನ್ನು ಅವಲಂಬಿಸುವುದು ತಪ್ಪಲಿದೆ. – ಪದ್ಮನಾಭ ಭಟ್ ಕನಕಮಜಲು ಸ್ಥಳೀಯರು

ಮೆಸ್ಕಾಂ ಮುಖ್ಯಸ್ಥರ ಹಂತದಲ್ಲಿ ಚಿಂತನೆ

ಈಗ ಸುಳ್ಯದಲ್ಲಿ ಜಾಲ್ಸೂರಿನ ಕಾರ್ಯ ಮತ್ತು ಪಾಲನ ಶಾಖೆಯನ್ನು ಆರಂಭಿಸಲಾಗಿದೆ. ಕೆಲವು ಗ್ರಾಮಗಳ ಆಕ್ಷೇಪವಿರುವುದರಿಂದ ಮೂರು ಗ್ರಾಮಗಳನ್ನು ಒಟ್ಟಾಗಿಸಿ ಜಾಲ್ಸೂರಿನಲ್ಲಿ ಶಾಖೆ ತೆರೆಯಲು ಮುಖ್ಯಸ್ಥರ ಹಂತದಲ್ಲಿ ಚಿಂತಿಸಲಾಗುತ್ತಿದೆ. ಉಳಿದ ಗ್ರಾಮಗಳಿಗೆ ಸುಳ್ಯದಲ್ಲಿಯೇ ಶಾಖೆ ಕಾರ್ಯನಿರ್ವಹಿಸಲಿದೆ.
– ರಘು ಪ್ರಕಾಶ್‌, ಡೈರೆಕ್ಟರ್‌ (ಟೆಕ್ನಿಕಲ್), ಮೆಸ್ಕಾಂ, ಮಂಗಳೂರು

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next