Advertisement

ದೆಹಲಿಯಲ್ಲಿ ಮಾಂಸದ ದರ ಹೆಚ್ಚಳ?

03:45 AM Mar 29, 2017 | Harsha Rao |

ಲಕ್ನೋ/ನವದೆಹಲಿ: ಉತ್ತರಪ್ರದೇಶ ಸರ್ಕಾರವು ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುತ್ತಿರುವುದರ ಪ್ರಭಾವವು ದೆಹಲಿಯ ಮೇಲೆ ಬೀರಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಾಂಸದ ತೀವ್ರ ಕೊರತೆ ಉಂಟಾಗಿದ್ದು, ನವರಾತ್ರಿಯ ನಂತರ ಮಾಂಸದ ದರವು ಗಗನಮುಖೀಯಾಗುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ.

Advertisement

ದೆಹಲಿಯ ನೆರೆ ರಾಜ್ಯ ಉತ್ತರಪ್ರದೇಶದಲ್ಲಿ ಕಸಾಯಿಖಾನೆಗಳು ಮುಚ್ಚುತ್ತಿರುವುದು ಮತ್ತು ಮಾಂಸ ವ್ಯಾಪಾರಿಗಳ ಮುಷ್ಕರದಿಂದಾಗಿ ಮಾಂಸದ ಪೂರೈಕೆ ಶೇ.50ರಷ್ಟು ಕಡಿಮೆಯಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಹಿಂದೂಗಳು ಮಾಂಸಾಹಾರದಿಂದ ದೂರವುಳಿಯುವ ಕಾರಣ ಸದ್ಯಕ್ಕೆ ಗಂಭೀರ ಸಮಸ್ಯೆಯೇನೂ ತಲೆದೋರಿಲ್ಲ. ಆದರೆ, 9 ದಿನ ಕಳೆದರೆ ಮಾಂಸದ ಕೊರತೆ ತೀವ್ರವಾಗಲಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರಪ್ರದೇಶದಿಂದ ಕುರಿಗಳ ಮಾಂಸ ಪೂರೈಕೆಯೂ ಸಂಪೂರ್ಣ ಸ್ಥಗಿತಗೊಂಡಿದೆ. ಕುರಿ ಮಾಂಸ ವ್ಯಾಪಾರಿಗಳು ಪರವಾನಗಿ ಹೊಂದಿದ್ದರೂ, ದಾಳಿ ಭೀತಿಯಿಂದಾಗಿ ಮಾಂಸ ಪೂರೈಸುತ್ತಿಲ್ಲ, ಇದು ಹೀಗೇ ಮುಂದುವರಿದರೆ, ಮಾಂಸದ ಕೊರತೆ ಮಾತ್ರವಲ್ಲ, ದರವೂ ಹೆಚ್ಚಾಗಲಿದೆ ಎನ್ನುತ್ತಾರೆ ಗಾಜಿಪುರದ ಸಗಟು ಮಾರುಕಟ್ಟೆಯ ಅಧಿಕಾರಿಗಳು.

ಪರವಾನಗಿ ಇದ್ದರೂ ಮುಚ್ಚಿದ ವಧಾಗೃಹಗಳು
ಉತ್ತರಪ್ರದೇಶದಲ್ಲಿ 44 ಕಸಾಯಿಖಾನೆಗಳು ಪರವಾನಗಿ ಹೊಂದಿವೆ. ಆದರೆ, ಈ ಪೈಕಿ 26 ವಧಾಗೃಹಗಳನ್ನು ಮೂಲ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 26 ಕಸಾಯಿಖಾನೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆಯಷ್ಟೆ. ನಿಯಮದಂತೆ ನಡೆದುಕೊಂಡರೆ, ಅವುಗಳ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ರಾಹುಲ್‌ ಭಟ್ನಾಗರ್‌ ಹೇಳಿದ್ದಾರೆ. ಜತೆಗೆ, ಮುಷ್ಕರನಿರತ ಮಾಂಸ ವ್ಯಾಪಾರಿಗಳು ಯಾವುದೇ ದೂರು ಅಥವಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಮ್ಮ ಮುಂದೆ ಬಂದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next