Advertisement

ಇಂದು ನವೀಕರಿಸಿದ ಆರ್ಟ್‌ ಗ್ಯಾಲರಿ ಉದ್ಘಾಟನೆ: ಕನ್ನಡದ ಅವಗಣನೆ

01:39 AM Feb 15, 2020 | Team Udayavani |

ಕಾಸರಗೋಡು: ನವೀಕರಿಸಿದ ಕಾಂಞಂಗಾಡ್‌ನ‌ ಆರ್ಟ್‌ ಗ್ಯಾಲರಿ ಮತ್ತು ಗೋಡೆ ಚಿತ್ರಗಳು ಫೆ. 15ರಂದು ಸಂಜೆ 4.30ಕ್ಕೆ ಉದ್ಘಾಟನೆಗೊಳ್ಳಲಿವೆ.
ನವೀಕರಿಸಿದ ಆರ್ಟ್‌ ಗ್ಯಾಲರಿಯಲ್ಲಿ ಎಲ್ಲೂ ಕನ್ನಡದ ನಾಮಫಲಕವಿಲ್ಲ. ಈ ಮೂಲಕ ಕಾಸರಗೋಡಿನ ಭಾಷಾ ಅಲ್ಪ ಸಂಖ್ಯಾತರನ್ನು ಮತ್ತೆ ಅವಗಣಿಸಿದೆ. ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ, ಅರೆ ಸರಕಾರಿ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಸಂಬಂಧ ಕಚೇರಿಗಳಲ್ಲಿ ರಾಜ್ಯ ಭಾಷೆ ಮಲಯಾಳದ ಜತೆಯಲ್ಲಿ ಕನ್ನಡದಲ್ಲೂ ನಾಮಫಲಕವನ್ನು ಅಳವಡಿಸಬೇಕೆಂದು ಜಿಲ್ಲಾ ಆಡಳಿತದ ನಿರ್ದೇಶವಿದ್ದರೂ ಎಂದಿನಂತೆ ಇಲ್ಲೂ ಕನ್ನಡವನ್ನು ಅವಗಣಿ ಸಲಾಗಿದೆ.

Advertisement

ಶನಿವಾರ ಉದ್ಘಾಟನೆಗೊಳ್ಳಲಿರುವ ನವೀಕೃತ ಆರ್ಟ್‌ ಗ್ಯಾಲರಿಯಲ್ಲಿ ಮಲಯಾಳ ದಲ್ಲಿ ಮಾತ್ರವೇ ನಾಮಫಲಕವನ್ನು ಅಳವಡಿಸಲಾಗಿದೆ. ಗ್ಯಾಲರಿಯಲ್ಲಿ ಕನ್ನಡದ ನಾಮ ಫಲಕವನ್ನು ಹಾಕದಿರುವ ಮೂಲಕ ಕನ್ನಡವನ್ನು ಅವಗಣಿಸಿದೆ. ಕನ್ನಡದಲ್ಲಿ ನಾಮಫಲಕ ಹಾಕದಿರುವ ಬಗ್ಗೆ ಕಾಂಞಂಗಾಡ್‌ನ‌ ವಿವಿಧ ಕನ್ನಡ ಪರ ಸಂಘಟನೆಗಳು ಖಂಡಿಸಿವೆ.
ನವೀಕರಿಸಿದ ಕಾಂಞಂಗಾಡ್‌ನ‌ ಆರ್ಟ್‌ ಗ್ಯಾಲರಿ ಮತ್ತು ಗೋಡೆ ಚಿತ್ರ ಗಳನ್ನು ಕಾಂಞಂಗಾಡ್‌ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್‌ ಉದ್ಘಾಟಿಸುವರು. ಲಲಿತಕಲಾ ಅಕಾಡೆಮಿ ಚೆಯರ್‌ಮನ್‌ ನೇಮಂ ಪುಷ್ಪರಾಜ್‌ ಅಧ್ಯಕ್ಷತೆ ವಹಿಸುವರು. ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಎಂ.ಗೌರಿ, ಕಾಂಞಂಗಾಡ್‌ ನಗರಸಭಾ ಸದಸ್ಯರಾದ ರಂಶೀದ್‌ ಹೊಸದುರ್ಗ ಶುಭಹಾರೈಸುವರು.

ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳಾದ ಕೆ. ರಾಜ್‌ಮೋಹನ್‌, ಡಿ.ವಿ. ಬಾಲಕೃಷ್ಣನ್‌, ಸಿ.ಕೆ. ಬಾಬುರಾಜ್‌, ನ್ಯಾಯ ವಾದಿ ಎನ್‌.ಎ. ಖಾಲೀದ್‌, ಎನ್‌. ಮಧು, ಎನ್‌. ಕುಂಞಿರಾಮನ್‌, ಕೈಪತ್ತ್ ಕೃಷ್ಣನ್‌ ನಂಬ್ಯಾರ್‌, ಪಿ.ವಿ.ರಾಜು, ವಿ.ಕೆ. ರಮೇಶನ್‌. ಸಿ.ವಿ. ದಾಮೋದರನ್‌, ಪಿ.ವಿ. ಬಾಲನ್‌, ಎಬಿ ಎನ್‌. ಜೋಸೆಫ್‌ ಮೊದಲಾದವರು ಉಪಸ್ಥಿತರಿರುವರು.

ಕಾಂಞಂಗಾಡ್‌ ಆರ್ಟ್‌ ಗ್ಯಾಲರಿಯಲ್ಲಿ ಎ.ಸಿ. ಸೌಕರ್ಯವೂ, ಅಂತಾರಾಷ್ಟ್ರೀಯ ಗುಣಮಟ್ಟದ ಲೈಟಿಂಗ್‌ ಸೌಕರ್ಯವೂ, 500 ರಷ್ಟು ಚಿತ್ರಗಳನ್ನು ಸಂಗ್ರಹಿಸುವಷ್ಟು ಸೌಕರ್ಯವನ್ನು ಕಲ್ಪಿಸಲಾಗಿದೆ. ದೊಡ್ಡ ಗಾತ್ರದ 30 ಚಿತ್ರಗಳನ್ನು ಸಜ್ಜುಗೊಳಿಸುವ ಸೌಕರ್ಯವನ್ನು ಆರ್ಟ್‌ ಗ್ಯಾಲರಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಚಿತ್ರಗಳು ಸಣ್ಣ ಗಾತ್ರದಲ್ಲಿದ್ದರೆ ಕನಿಷ್ಠ 45 ರಷ್ಟು ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲು ಸ್ಥಳಾವಕಾಶವಿದೆ.

Advertisement

ಗೋಡೆ ಚಿತ್ರಗಳು
ಗ್ಯಾಲರಿಗೆ ಸೇರಿದ ನಗರಸಭಾ ವ್ಯಾಪ್ತಿಯಲ್ಲಿ ಬರುವ ಕಟ್ಟಡದ ಗೋಡೆಯಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿ ಏಳು ಮಂದಿ ಚಿತ್ರ ಕಲಾವಿದರು ಕೇರಳೀಯ ಶೈಲಿಯಲ್ಲಿ ಗೋಡೆ ಚಿತ್ರಗಳನ್ನು ರಚಿಸಿದ್ದು, ಅವುಗಳ ಉದ್ಘಾಟನೆಯೂ ನಡೆಯಲಿದೆ. ಕಾಂಞಂಗಾಡ್‌ನ‌ ಇತಿಹಾಸವನ್ನು ತಿಳಿಸುವ ಚಿತ್ರಗಳು ಹೊಸ ತಲೆಮಾರಿಗೆ ಕುತೂಹಲಕಾರಿಯಾಗಲಿದೆ.

6 ಲಕ್ಷ ರೂ. ವೆಚ್ಚ
ಕಾಂಞಂಗಾಡ್‌ನ‌ ಆರ್ಟ್‌ ಗ್ಯಾಲರಿಯನ್ನು ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದ್ದು, ಆರ್ಟ್‌ ಗ್ಯಾಲರಿಗೆ ಸಂದರ್ಶಿಸಿ ಇತಿಹಾಸ ಪುಟಗಳನ್ನು ತಿಳಿದುಕೊಳ್ಳಲು ಸಾರ್ವಜನಿಕರಿಗೂ, ವಿದ್ಯಾರ್ಥಿಗಳಿಗೂ ಅವಕಾಶ ನೀಡಲು ಲಲಿತ ಕಲಾ ಅಕಾಡೆಮಿ ವ್ಯವಸ್ಥೆಗೊಳಿಸಿದೆ. ಈ ಆರ್ಟ್‌ ಗ್ಯಾಲರಿಯನ್ನು ಇನ್ನೂ ಅಭಿವೃದ್ಧಿ ಪಡಿಸಲಾಗುವುದೆಂದು ಲಲಿತ ಕಲಾ ಅಕಾಡೆಮಿ ವೈಸ್‌ ಚೆಯರ್‌ವೆುàನ್‌ ಎ.ಬಿ.ಎನ್‌.ಜೋಸೆಫ್‌ ತಿಳಿಸಿದ್ದಾರೆ.

ಕಲಾವಿದರು ಉಳಿಸಿಕೊಂಡ ಗ್ಯಾಲರಿ
ರಸ್ತೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ಹಳೆಯ ಕಟ್ಟಡವನ್ನು ಮುರಿದು ತೆಗೆಯಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ವಿರುದ್ಧ ಕಲಾವಿದರು ಮತ್ತು ಸ್ಥಳೀಯರು ಹೋರಾಟ ನಡೆಸಿದ ಪರಿಣಾಮವಾಗಿ ಹಳೆಯ ಆರ್ಟ್‌ ಗ್ಯಾಲರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಅತ್ಯಂತ ಶೋಚನೀಯಾವಸ್ಥೆಯಲ್ಲಿದ್ದ ಆರ್ಟ್‌ ಗ್ಯಾಲರಿಯ ಹಳೆಯ ಕಟ್ಟಡ ಇದೀಗ ನವೀಕರಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next