Advertisement

ಇನ್ನೂ ಉದ್ಘಾಟನೆ‌ ಭಾಗ್ಯ ಲಭಿಸದ ಆರೋಗ್ಯ ಕೇಂದ್ರದ ಉಪಕೇಂದ್ರ

11:07 PM Jul 18, 2019 | Team Udayavani |

ವಿದ್ಯಾನಗರ:ಕೋಟ್ಯಂತರ ಮೊತ್ತ ವ್ಯಯಿಸಿ ನಿರ್ಮಿಸಿದ ಕಾಮಗಾರಿಗಳ ಪ್ರಯೋಜನವು ಅಧಿಕೃತರ ಹಾಗೂ ಜನಪ್ರತಿನಿಧಿಗಳ ಅನಾಸ್ಥೆಯಿಂದ ಸಾಮಾನ್ಯ ಜನರ ಪಾಲಿಗೆ ಇಲ್ಲದಂತಾಗಿದೆ. ಆರೋಗ್ಯವಂತ, ವಿದ್ಯಾವಂತ ಸಮಾಜಕ್ಕಾಗಿ ಮಾಡಬೇಕಾದ ಕೆಲಸಗಳಲ್ಲೇ ತೋರುವ ಬೇಜವಾಬ್ದಾರಿತನದ ಮೂಲಕ ಜನರ ಹಕ್ಕನ್ನು ಕಿತ್ತುಕೊಳ್ಳುವವರಿಗೆ ಜನರೇ ಉತ್ತರಿಸಲಾರಂಭಿಸಿದ್ದಾರೆ ಎಂಬುವುದಕ್ಕೆ ಕುಂಬ್ಡಾಜೆ ಪಂಚಾಯತ್‌ನಲ್ಲಾದ ಬೆಳವಣಿಗೆಯೇ ಸಾಕ್ಷಿ.

Advertisement

ಕುಂಬ್ಡಾಜೆಯಲ್ಲಿ ಆರೋಗ್ಯ ಸಂರಕ್ಷಣೆಗಾಗಿ ಸುಮಾರು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡಗಳ ಉದ್ಘಾಟನೆ ವಿಳಂಬಗೊಂಡ ಬಗ್ಗೆ ವಿಜಿಲೆನ್ಸ್‌ ತನಿಖೆ ಆರಂಭಗೊಂಡಿದ್ದು ಪಂಚಾಯತ್‌ನ ನಾನಾ ಕಡೆ ಸರಕಾರದ ನಿಧಿ ಬಳಸಿ ನಿರ್ಮಿಸಿದ ಕಟ್ಟಡ ಉದ್ಘಾಟನೆಗೊಳ್ಳದ ಬಗ್ಗೆ ವಿಜಿಲೆನ್ಸ್‌ ತನಿಖೆ ಆರಂಭಿಸಿದೆ. ವಿಜಿಲೆನ್ಸ್‌ ಡಿವೈಎಸ್‌ಪಿ ಕೆ. ದಾಮೋದರನ್‌, ಸಿ.ಐ. ಮಧುಸೂದನನ್‌ ನೇತೃತ್ವದ ತಂಡ ಕುಂಬ್ಡಾಜೆ ಗ್ರಾ.ಪಂ.ಗೆ ಆಗಮಿಸಿ ಕಡತಗಳನ್ನು ಹಾಗೂ ಉದ್ಘಾಟನೆಗೊಳ್ಳದ ಕಟ್ಟಡಗಳನ್ನು ಪರಿಶೀಲಿಸಿದ್ದಾರೆ.

ಕಾಮಗಾರಿ ಪೂರ್ಣಗೊಂಡಿದೆ
ಕುಂಬ್ಡಾಜೆ ಪಂ. ವ್ಯಾಪ್ತಿಯ ಗಾಡಿಗುಡ್ಡೆ, ಬೆಳಿಂಜ, ಅಗಲ್ಪಾಡಿಗಳಲ್ಲಿ ತಲಾ 16 ಲಕ್ಷ ರೂ. ಎಂಡೋಸಲ್ಫಾನ್‌ ನಿಧಿ ಬಳಸಿ ಆರೋಗ್ಯ ಉಪಕೇಂದ್ರ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಕಾಮಗಾರಿ ಪೂರ್ತಿಗೊಂಡು ಮೂರು ವರ್ಷಗಳಾಗಿವೆ. ಮಾರ್ಪನಡ್ಕದಲ್ಲಿ ಒಂದು ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳಿರುವ ಆರೋಗ್ಯ ಕೇಂದ್ರ ಕಟ್ಟಡ, ಕರುವಲ್ತಡ್ಕದಲ್ಲಿ 2.50 ಕೋಟಿ ವೆಚ್ಚದಲ್ಲಿ ಬಡ್ಸ್‌ ಸ್ಕೂಲ್‌ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ.

ಆನ್‌ಲೆ„ನ್‌ ಉದ್ಘಾಟನೆ
ಕೇರಳ ಸರಕಾರ ಸಾವಿರ ದಿನಗಳನ್ನು ಪೂರ್ತಿಗೊಳಿಸಿದ ಸಂದರ್ಭದಲ್ಲಿ ಸಾವಿರ ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಆನ್‌ಲೆ„ನ್‌ ಮೂಲಕ ಪ್ರಾಥಮಿಕ ಕೇಂದ್ರವನ್ನು ಮಾತ್ರ ಉದ್ಘಾಟನೆಮಾಡಲಾಗಿದೆ.ವಿಜಿಲೆನ್ಸ್‌ಗೆ ದೂರು
ಕಟ್ಟಡಗಳನ್ನು ಕಾರ್ಯಾಚರಿಸುವಂತೆ ಮಾಡಿ ಜನರ ಸಮಸ್ಯೆಗೆ ಸ್ಪಂ ದಿಸುವಂತೆ ಕೋರಿ ಬಿಜೆಪಿ ನೇತೃತ್ವದಲ್ಲಿ ಇತ್ತೀಚೆಗೆ ಕುಂಬ್ಡಾಜೆ ಪಂ. ಕಚೇರಿಗೆ ಮಾರ್ಚ್‌ ನಡೆದಿತ್ತು. ಈ ಹಿಂದೆ ಆಂದೋಲನ ಯಾತ್ರೆಯನ್ನೂ ನಡೆಸಲಾಗಿತ್ತು. ಅಲ್ಲದೆ ಪಕ್ಷವು ಜಿಲ್ಲಾಧಿಕಾರಿ, ಸ್ಥಳೀಯಾಡಳಿತ ಸಚಿವ, ವಿಜಿಲೆನ್ಸ್‌ಗೆ ದೂರು ನೀಡಿತ್ತು. ಈ ದೂರನ್ನು ಪರಿಶೀಲಿಸಿದ ವಿಜಿಲೆನ್ಸ್‌ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದೀಗ ಆರೋಗ್ಯ ಉಪಕೇಂದ್ರಗಳ ಬಗ್ಗೆ ತನಿಖೆ ಆರಂಭವಾಗಿದೆ. ಮಾರ್ಪನಡ್ಕದಲ್ಲಿರುವ ಆರೋಗ್ಯ ಕೇಂದ್ರ ಕರುವಲ್ತಡ್ಕದಲ್ಲಿರುವ ಬಡ್ಸ್‌ ಸ್ಕೂಲ್‌ ಕಟ್ಟಡಗಳ ಬಗ್ಗೆಯೂ ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಮುಂದಿನ ದಿನಗಳಲ್ಲಿ ಮತ್ತೆ ಆಗಮಿಸುವುದಾಗಿ ವಿಜಿಲೆನ್ಸ್‌ ಡಿವೈಎಸ್‌ಪಿ ಹೇಳಿದ್ದಾರೆ.
ನಿರ್ಮಾಣಗೊಂಡ ಕಟ್ಟಡ ಪಂ.ಗೆ ಹಸ್ತಾಂತರಿಸದಿರುವುದೇ ಉದ್ಘಾಟನೆ ವಿಳಂಬಕ್ಕೆ ಕಾರಣವೆಂದು ಪಂಚಾಯತ್‌ ಕಾರ್ಯದರ್ಶಿ ಹೇಳುತ್ತಾರೆ. ಆದರೆ ಈ ಕಟ್ಟಡಗಳ ಹಸ್ತಾಂತರ ತಿಂಗಳುಗಳ ಮೊದಲೇ ನಡೆದಿದೆ ಎಂದು ವಿಜಿಲೆನ್ಸ್‌ ಅಧಿಕಾರಿಗಳು ಹೇಳಿದ್ದಾರೆ.

ಅನಾಥವಾದ ಬಡ್ಸ್‌ ಶಾಲೆ
ಎಂಡೋ ಬಾಧಿತ ರೋಗಿಗಳಿರುವ ಪ್ರದೇಶಗಳಲ್ಲಿ ಒಂದಾದ ಕುಂಬ್ಡಾಜೆ ಪಂಚಾಯತ್‌ನ ಕುರುವಲ್ತಡ್ಕದಲ್ಲಿ 2.5ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾದ ಬಡ್ಸ್‌ ಶಾಲೆಯ ಕೆಲಸ ಪೂರ್ತಿಯಾಗಿ ವರುಷ ಮೂರು ಕಳೆದರೂ ಯಾವುದೇ ರೀತಿಯ ಪ್ರಯೋಜನ ಫಲಾನುಭವಿಗಳಿಗೆ ಲಭಿಸಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ. ಆರಂಭದಲ್ಲಿ ಮೂರು ಮಂದಿ ಶಿಕ್ಷಕಿ ಯರನ್ನು ನೇಮಿಸಲಾಗಿದೆ. ಆದರೆ ಪಂಚಾಯತ್‌ ಸರಿಯಾದ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಈ ಕಟ್ಟಡವೂ ಉಪಯೋಗ ಶೂನ್ಯವಾಗಿದ್ದು ಪೊದೆಗಳಿಂದಾವೃತವಾಗಿ ನಾಶದಂಚಿನಲ್ಲಿದೆ.

Advertisement

ಆಗಸ್ಟ್‌ ಕೊನೆಯಲ್ಲಿ ಸಿದ್ಧ
ಎಂಡೋ ಸಂತ್ರಸ್ತ ಮಕ್ಕಳ ಸರ್ವೆ ಆರಂಭಿಸಿದ್ದು ಈಗಾಗಲೇ 30 ಮಕ್ಕಳ ಪಟ್ಟಿ ತಯಾರಿಸಲಾಗಿದೆ. ಆಸನದ ವ್ಯವಸ್ಥೆಯನ್ನು ಸೋಶ್ಯಲ್‌ ಸೆಕ್ಯೂರಿಟಿ ಮಿಶನ್‌ ವಹಿಸಿದ್ದು ಕೆಲವು ಪೀಠೊಪಕರಣಗಳು ತಲುಪಲು ಬಾಕಿ ಇದೆ. ಆದಷ್ಟು ಬೇಗ ಬಡ್ಸ್‌ ಶಾಲೆ ತೆರೆದು ಕಾರ್ಯಾಚರಿಸಲಿದೆ. ಕುಟುಂಬ ಆರೋಗ್ಯ ಕೇಂದ್ರದಲ್ಲಿ ವಯರಿಂಗ್‌ ಕೆಲಸ ನಡೆಯುತ್ತಿದ್ದು ಆಗಸ್ಟ್‌ ಕೊನೆಯಲ್ಲಿ ಜನಸೇವೆಗೆ ಸಿದ್ಧವಾಗಲಿದೆ.
-ಫಾತಿಮತ್‌ಝುಹರಾ, ಅಧ್ಯಕ್ಷೆ, ಕುಂಬ್ಡಾಜೆ ಗ್ರಾಮ ಪಂಚಾಯತ್‌

 ಧರಣಿ ಸತ್ಯಾಗ್ರಹ
ಕೋಟಿಗಳನ್ನು ಖರ್ಚು ಮಾಡಿ ಕಟ್ಟಡಗಳನ್ನು ನಿರ್ಮಿಸಿ ಅವುಗಳ ಪ್ರಯೋಜನವನ್ನು ಜನರಿಗೆ ತಲುಪಿಸುವಲ್ಲಿ ಪಂಚಾಯತು ಹಿಂದೇಟು ಹಾಕುತ್ತಿರುವುದು ವಿಷಾದನೀಯ. ನಬಾರ್ಡ್‌ ಎಂಡೋಸಲ್ಫಾನ್‌ ಬಾಧಿತರಿಗಾಗಿ ನೀಡುವ ಮೊತ್ತವನ್ನುಪಯೋಗಿಸಿ ಕಟ್ಟಡ ನಿರ್ಮಿಸಲು ಪಂಚಾಯತು ತೋರುವ ಆಸಕ್ತಿ ಅದನ್ನು ಸೂಕ್ತ ರೀತಿಯಲ್ಲಿ ಅರ್ಹರಿಗೆ ಒದಗಿಸುವಲ್ಲಿ ತೋರುವುದಿಲ್ಲ. 10ಕೋಟಿ 40ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ಕುಟುಂಬ ಆರೋಗ್ಯ ಕೇಂದ್ರದ ಕೆಲಸ ಪೂರ್ತಿಯಾಗಿದೆ. ಮಾತ್ರವಲ್ಲದೆ ಮಳೆಗಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ಸೌಲಭ್ಯಗಳಿರುವ ಆಸ್ಪತ್ರೆಯ ಅಗತ್ಯವಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಯುವಮೋರ್ಚಾ ನೇತೃತ್ವದಲ್ಲಿ ಅನಿಶ್ಚಿತ ಕಾಲ ಧರಣಿ ಸತ್ಯಾಗ್ರಹ ಕೈಗೊಳ್ಳಲು ತಿರ್ಮಾನಿಸಲಾಗಿದೆ.
– ರಾಜೇಶ್‌ ಶೆಟ್ಟಿ ಕುಂಬಾxಜೆ
ಅಧ್ಯಕ್ಷರು, ಬಿಜೆಪಿ ಸಮಿತಿ ಕುಂಬ್ಡಾಜೆ ಪಂಚಾಯತ್

Advertisement

Udayavani is now on Telegram. Click here to join our channel and stay updated with the latest news.

Next