Advertisement

ರೈತ ಕುಟುಂಬಕ್ಕೆ ನಾಯಕನ ಸಾಂತ್ವನ

05:56 PM Feb 28, 2018 | |

ದಾವಣಗೆರೆ: ನಗರದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನದಾತರ ಬೃಹತ್‌ ಸಮಾವೇಶಕ್ಕೆ ಆಗಮಿಸುವ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ದಾವಣಗೆರೆ ತಾಲ್ಲೂಕಿನ ಕೆರೆಯಾಗಲಹಳ್ಳಿ ಹಾಗೂ ಕಂದನಕೋವಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೆ, ಸಂತ್ರಸ್ತ ಕುಟುಂಬದವರಿಗೆ ತಲಾ 50 ಸಾವಿರ ನೆರವು ನೀಡಿದರು.

Advertisement

ಕೆರೆಯಾಗಲಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರಂಗಸ್ವಾಮಿ (32) ಮನೆಗೆ ಭೇಟಿ ನೀಡಿದ ಯಡಿಯೂರಪ್ಪ, ರೈತನ ಕುಟುಂಬದವರಿಗೆ 50 ಸಾವಿರ ರೂ. ನೀಡಿ, ಸಾಂತ್ವನ ಹೇಳಿದ ನಂತರ ಅವರೇ ಸಿದ್ಧಪಡಿಸಿದ ಸಾಂತ್ವನ ಪತ್ರವನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯ ಜಿ.ಎಂ. ಸಿದ್ದೇಶ್ವರ್‌ ಓದಿದರು. ರಾಜ್ಯದ ರೈತನ ಬದಕು ಸಂಕಷ್ಟದಲ್ಲಿದೆ. ಮುಂದೆ ಅಧಿಕಾರ
ಸಿಕ್ಕಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ನೆರವಿಗೆ ವಿಶೇಷ ಯೋಜನೆ ರೂಪಿಸುವೆ. ಕಳೆದ 40 ವರ್ಷದಿಂದ ನಾನು ವಿಧಾನ ಸೌಧದ ಒಳಗೆ, ಹೊರಗೆ ರೈತರ ಪರ ಹೋರಾಟ ಮಾಡಿದ್ದೇನೆ. ಮುಂದೆ ಸಹ ನನ್ನ ರಾಜಕಾರಣವನ್ನು ರೈತರಿಗಾಗಿ ಮುಡಿಪಾಗಿ ಇಡುತ್ತೇನೆ. ಮುಂದೆ ಅಧಿಕಾರಕ್ಕೆ ಬಂದ ನಂತರ ಕೇವಲ ರೈತರು ಮಾತ್ರವಲ್ಲದೆ ರಾಜ್ಯದ 6.5 ಕೋಟಿ ಜನರೂ ಸಹ ನೆಮ್ಮದಿಯಿಂದ ಬದುಕುವ ಸರ್ಕಾರವನ್ನು ನಾನು ಮುಂದೆಯೂ ಕೊಡುತ್ತೇನೆ. ಎಲ್ಲರ ಒಳಿತಿಗಾಗಿ ಶ್ರಮ ವಹಿಸುತ್ತೇನೆ. ನನ್ನ ಜೀವನದಲ್ಲಿ ಬೇರೆ ಯಾವುದೇ ಆಸೆ ಉಳಿದಿಲ್ಲ. ರಾಜ್ಯದ ರೈತರ ಯೋಗಕ್ಷೇಮವೇ ನನ್ನ ಗುರಿ ಎಂಬುದು ಪತ್ರ ಸಾರಾಂಶ.

ರಂಗಸ್ವಾಮಿ ಪತ್ನಿ ಮಂಗಳ ಕೈಗೆ 50 ಸಾವಿರ ರೂ. ಸಾಂತ್ವನ ಪತ್ರ ನೀಡಿದ ಯಡಿಯೂರಪ್ಪನವರೊಂದಿಗೆ ಸಂಸದೆ ಶೋಭಾ
ಕರಂದ್ಲಾಜೆ, ಶಾಸಕ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಎಚ್‌. ಆನಂದಪ್ಪ, ಜಿಪಂ ಸದಸ್ಯೆ ಉಮಾ ರಮೇಶ್‌, ತಾಪಂ ಸದಸ್ಯೆ ರೇಣುಕಾಬಾಯಿ ಇದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಇಲ್ಲ, ಸಿಕ್ಕ ಬೆಳೆಗೆ ಸರಿಯಾದ ಬೆಲೆ ಇಲ್ಲ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ ಆತ್ಮಹತ್ಯೆಗೆ ಶರಣಾದ 3,750 ಜನ ರೈತರ ಮನೆಗೆ ತೆರಳಿ ಸಾಂತ್ವನ ಹೇಳುತ್ತೇನೆ. ಭಯ ಬೇಡ, ನಿಮ್ಮೊಂದಿಗೆ ನಾನಿದ್ದೇನೆ ಎಂಬ ನೈತಿಕ ಸ್ಥೈರ್ಯ ತುಂಬಲಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಜೆಟ್‌ನಲ್ಲಿ ರೈತರ ಬೆಳೆಗೆ ಒಂದೂವರೆ ಪಟ್ಟು ಬೆಲೆ ಕೊಡಿಸಲು 10 ಸಾವಿರ
ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದೀಗ ರೈತ ಸಮಾವೇಶದ ಮೂಲಕ ಅವರಿಗೆ ನೈತಿಕ ಸ್ಥೈರ್ಯ ತುಂಬಲಿದ್ದಾರೆ. ನಾನೂ
ಸಹ ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದರು. ಇದಾದ ನಂತರ ಕಂದನಕೋವಿಗೆ
ತೆರಳಿದ ಯಡಿಯೂರಪ್ಪ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಶಿವಕುಮಾರ್‌(24) ಮನೆಗೆ ಭೇಟಿ ನೀಡಿ 50 ಸಾವಿರ ರೂ.
ಸಹಾಯ ಧನ ನೀಡಿ, ಸಾಂತ್ವನ ಹೇಳಿದರು.

ಇದುವರೆಗೂ ಸರ್ಕಾರ ಒಂದು ಪೈಸೆ ಕೊಟ್ಟಿಲ್ಲ: ಮಂಗಳಾ
ನನ್ನ ಪತಿ 8 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಕರೂರು ಬ್ಯಾಂಕ್‌ನಲ್ಲಿ 1.5 ಲಕ್ಷ ರೂ. ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 1.5
ಲಕ್ಷ ರೂ. ಸೇರಿ ಒಟ್ಟು 8 ಲಕ್ಷ ರೂ. ಸಾಲ ಮಾಡಿದ್ದರು. ಕೈ ಸಾಲದವರು ಪದೇ ಪದೇ ಕೇಳುತ್ತಿದ್ದರು. ಮಳೆ ಬೇರೆ ಇರಲಿಲ್ಲ.
ಕೊನೆ ಕಾಲದಲ್ಲಿ ಮಳೆ ಬಂದಾಗ ನಮಗಿದ್ದ 7 ಎಕರೆ ಜಮೀನಿಗೆ ಮೆಕ್ಕೆಜೋಳ ಬಿತ್ತಿದ್ದೆವು. ಆದರೆ, ಅದು ಸಹ ಸೈನಿಕ ಹುಳು
ಬಾಧೆಗೆ ತುತ್ತಾಯಿತು. ಇದರಿಂದಲೇ ನಾವು ಸಮಸ್ಯೆಗೆ ಈಡಾಗಬೇಕಾಯಿತು. ಕಂಗಾಲಾದ ನನ್ನ ಪತಿ ಹೊಲದಲ್ಲೇ ವಿಷ
ಸೇವಿಸಿ, ಆತ್ಮಹತ್ಯೆಗೆ ಶರಣಾದರು. ಸರ್ಕಾರ ಇದುವರೆಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಕ್ಷೇತ್ರದ ಶಾಸಕ ಶಿವಮೂರ್ತಿ
ನಾಯ್ಕ ಬಂದು ಹೋದರು. ಸರ್ಕಾರದಿಂದ ಹಣ ಕೊಡಿಸುವ ಭರವಸೆ ನೀಡಿದರಷ್ಟೇ. ನನಗೆ ಇಬ್ಬರು ಮಕ್ಕಳು ಒಂದು
ಗಂಡು, ಒಂದು ಹೆಣ್ಣು. ನನ್ನ ಮಾವ, ಅವರ ಇನ್ನಿಬ್ಬರು ಗಂಡುಮಕ್ಕಳು ಇದ್ದಾರೆ. ಎಲ್ಲರೂ ಒಟ್ಟಿಗೆ ಇದ್ದೇವೆ. ದುಡಿಯುವ
ಕೈ ಹೋದ ನಂತರ ದಿಕ್ಕು ತೋಚದಂತೆ ಆಗಿದೆ ಎಂದು ರಂಗಸ್ವಾಮಿ ಪತ್ನಿ ಮಂಗಳಾ ಮಾಧ್ಯಮದವರ ಮುಂದೆ ತಮ್ಮ
ಅಳಲು ತೋಡಿಕೊಂಡರು.

Advertisement

ರಾಜಕಾರಣಕ್ಕೆ ಬೇಸರ: ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಸಾಂತ್ವನ ಹೇಳಲು ಬಂದಿದ್ದವರ ಮುಂದೆ ಟಿಕೆಟ್‌ ರಾಜಕಾರಣ
ಮಾಡಿದ್ದು ಗ್ರಾಮದ ಮುಖಂಡರಿಗೆ ಬೇಸರ ತರಿಸಿತು. ಮೃತ ರೈತನ ಮನೆಯಿಂದ ಬಿ.ಎಸ್‌. ಯಡಿಯೂರಪ್ಪ ಹೊರಡಲು ಅಣಿಯಾದಾಗ ಯಡಿಯೂರಪ್ಪ, ಸಿದ್ದೇಶ್ವರ್‌ ಪರ ಘೋಷಣೆ ಕೂಗುವ ಜೊತೆಗೆ ಬಸವರಾಜ ನಾಯ್ಕ, ಎಚ್‌. ಆನಂದಪ್ಪರ ಜೈಕಾರ ಕೂಗಿದರು. ನೆರೆದಿದ್ದ ಗ್ರಾಮದ ಮುಖಂಡರು ಇದು ಟಿಕೆಟ್‌ ರಾಜಕಾರಣ. ಇಲ್ಲಿ ಮಾಡಬೇಡಿ. ಹೊರಡಿ ಎಂದು ಗದರಿದರು. ಆದರೆ, ಘೋಷಣೆ ನಿಲ್ಲಲಿಲ್ಲ.

ಮ್ಯಾಂಚೆಸ್ಟರ್‌ ಸಿಟಿ ಸ್ಮರಿಸಿದ ಮೋದಿ
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ 75ನೇ ಜನ್ಮದಿನದ ಅಂಗವಾಗಿ ಮಂಗಳವಾರ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿದ್ದ ಅನ್ನದಾತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಗೆ ಮ್ಯಾಂಚೆಸ್ಟರ್‌ ಸಿಟಿ… ಎಂಬ ಹೆಸರಿತ್ತು ಎಂಬುದನ್ನ ಸ್ಮರಿಸಿದರು. ದಾವಣಗೆರೆಯ ಸುತ್ತಮುತ್ತ ಉತ್ಕೃಷ್ಟ ಗುಣಮಟ್ಟದ ಹತ್ತಿ ಬೆಳೆಯಲಾಗುತ್ತಿತ್ತು. ದಾವಣಗೆರೆಯಲ್ಲಿ ಅನೇಕ ಜವಳಿ ಮಿಲ್‌ಗ‌ಳಿದ್ದವು. ಹಾಗಾಗಿಯೇ ದಾವಣಗೆರೆಗೆ ಮ್ಯಾಂಚೆಸ್ಟರ್‌ ಸಿಟಿ… ಎನ್ನಲಾಗುತ್ತಿತ್ತು.
ಕಾಂಗ್ರೆಸ್‌ನಂತಹ ಜನ ವಿರೋಧಿ ಸರ್ಕಾರದ ಪರಿಣಾಮ ಹತ್ತಿ ಮಿಲ್‌ಗ‌ಳು ಬಂದ್‌ ಆದವು. ಮ್ಯಾಂಚೆಸ್ಟರ್‌ ಸಿಟಿ… ಖ್ಯಾತಿ ಮರೆಯಾಯಿತು ಎಂದರು.

ಸಚಿವರಿಗೆ ಪರೋಕ್ಷ ಟಾಂಗ್‌
ಅನ್ನದಾತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಯುತ್ತಿಲ್ಲ. ಬದಲಿಗೆ ಸಿದ್ದ ರುಪಯ್ಯ.. ಸರ್ಕಾರ ಎಂದು ನೇರ ವಾಗ್ಧಾಳಿ ನಡೆಸಿದರು. ಕರ್ನಾಟಕದ ಮಂತ್ರಿಗಳ ಮನೆಯಲ್ಲಿ ನೋಟಿನ ಬಂಡಲ್‌ ಸಿಗುತ್ತವೆ. ಅಷ್ಟೊಂದು ಹಣ ಎಲ್ಲಿಂದ ಬಂದಿತು ಎಂದು ಯಾರ ಹೆಸರು ಪ್ರಸ್ತಾಪಿಸದೇ ವಾಗ್ಧಾಳಿ ನಡೆಸಿದ ಅವರು, ಇಂತಹ ಸರ್ಕಾರ ಒಂದು ನಿಮಿಷವೂ ಅಧಿಕಾರದಲ್ಲಿ ಇರಬಾರದು ಎಂದರು.

ನೀರು ಸಂರಕ್ಷಣೆ ಇಲ್ಲ
ಗುಜರಾತ್‌ನಲ್ಲಿ ನರ್ಮದಾ, ತಪತಿ ನದಿ ಬಿಟ್ಟರೆ ಬೇರೆ ನದಿಗಳೇ ಇಲ್ಲ. ಮಳೆಯೂ ಕಡಿಮೆ ಹಾಗಾಗಿ ಬರ ಸರ್ವೇ ಸಾಮಾನ್ಯ ಎನ್ನುವ ವಾತಾವರಣ ಇದ್ದಾಗ ನಾವು(ಗುಜರಾತ್‌ ಸಿಎಂ ಆಗಿದ್ದಾಗ) ಕಣ್ಣೀರು ಹಾಕುತ್ತಾ ಕೂರಲಿಲ್ಲ. ಮಳೆ ನೀರು ಸಂರಕ್ಷಣೆಗೆ ಚೆಕ್‌ ಡ್ಯಾಂ, ಕೃಷಿ ಹೊಂಡ, ಕಟ್ಟೆಗಳ ನಿರ್ಮಾಣ ಮತ್ತಿತರ ಕ್ರಮ ತೆಗೆದುಕೊಂಡವು. ಕೃಷಿ ಕ್ಷೇತ್ರದಲ್ಲಿ ಹಿಂದುಳಿದಿದ್ದ ಗುಜರಾತ್‌ ಕೆಲವೇ ವರ್ಷದಲ್ಲಿ ಶೇ.10 ಅಭಿವೃದ್ಧಿಯ ವಿಕ್ರಮ ಸಾಧಿಸಿದೆವು. ಕರ್ನಾಟಕಕ್ಕೆ ನೀರು ಸಂರಕ್ಷಣಾ ಯೋಜನೆಗಳಿಗಾಗಿಯೇ 100 ಕೋಟಿ ಅನುದಾನವನ್ನ
ಕೇಂದ್ರ ಸರ್ಕಾರ ನೀಡಿದ್ದರೂ ಒಂದ ಪೈಸೆ ಖರ್ಚು ಮಾಡಿಲ್ಲ. ಇದರಿಂದ ಸಿದ್ದರಾಮಯ್ಯ ಸರ್ಕಾರ ರೈತರು ಮತ್ತು ನೀರಿನ ಸಂರಕ್ಷಣೆಗೆ ಮಹತ್ವ ನೀಡುತ್ತಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಮೋದಿ ದೂರಿದರು.

ಸುಡು ಬಿಸಿಲಲ್ಲಿ ಬಸವಳಿದ ಜನ!
ನಮೋ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಹೈಸ್ಕೂಲ್‌ ಮೈದಾನಕ್ಕೆ ಲಗ್ಗೆಯಿಟ್ಟಿದ್ದ ಮಂದಿ ಎರಡೂರು ಗಂಟೆಗಳ ಕಾಲ ಸುಡು ಬಿಸಿಲಲ್ಲೇ ಕಾದು.. ಕಾದು.. ಬಸವಳಿದರು. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಆಯೋಜಕರು ಹೇಳಿದ್ದರು. ಆದರೆ ಬಿ.ಎಸ್‌.ಯಡಿಯೂರಪ್ಪ ಮಧ್ಯಾಹ್ನ 3.30ಕ್ಕೆ ವೇದಿಕೆಗೆ ಆಗಮಿಸಿದರು. ನಂತರ ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಮೇಲೆರಿದರು. ಈ ಮಧ್ಯೆ ಹಲವು ಮುಖಂಡರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಅಷ್ಟೋತ್ತಿಗಾಗಲೇ, ನಮೋ ದರ್ಶನಕ್ಕಾಗಿ ವಿವಿಧ ಗ್ರಾಮಗಳಿಂದ ಸೇರಿದ್ದ ಜನರು ಬಿಸಿಲಿನ ತಾಪದಿಂದ ತತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next