ಅಮೇಥಿ: ತಮ್ಮ ಲೋಕಸಭಾ ಕ್ಷೇತ್ರ ಅಮೇಥಿ ಭೇಟಿ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಇಲ್ಲಿನ ಗೌರಿಗಂಜ್ನ ರೈತರು ರಾಹುಲ್ ವಿರುದ್ಧ ಭೂ ಕಬಳಿಕೆ ಆರೋಪ ಹೊರಿಸಿದ್ದಾರೆ. ಸಾಮ್ರಾಟ್ ಸೈಕಲ್ ಫ್ಯಾಕ್ಟರಿ ಸಮೀಪ ಪ್ರತಿಭಟನೆ ನಡೆಸಿರುವ ರೈತರು, ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆಂದು ಪಡೆಯಲಾದ ಭೂಮಿಯನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ರಾಹುಲ್ ನಮ್ಮ ಭೂಮಿ ಕಬಳಿಸಿದ್ದಾರೆ. ಅವರು ಇಲ್ಲಿ ಇರಲು ಅರ್ಹರಲ್ಲ. ಅವರು ಇಟೆಲಿಗೆ ವಾಪಸಾಗಲಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ವಿವಾದಿತ ಭೂಮಿಯನ್ನು 2014ರಲ್ಲಿ ಸಾಲ ವಸೂಲಿ ನ್ಯಾಯಾಧಿಕರಣವು ಹರಾಜು ಹಾಕಿತ್ತು. ತದನಂತರ ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಆ ಭೂಮಿಯನ್ನು ಖರೀದಿಸಿತ್ತು. ಅದಕ್ಕೂ ಮೊದಲು ಉತ್ತರಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ಭೂಮಿಯನ್ನು ಭೋಗ್ಯಕ್ಕೆ ನೀಡಿತ್ತು. ಆದರೆ, ಭೋಗ್ಯ ಪ್ರಕ್ರಿಯೆ ಅಮಾನ್ಯ ಎಂದು 2015ರಲ್ಲಿ ಅಮೇಠಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತೀರ್ಪು ನೀಡಿ, ಅದನ್ನು ಮತ್ತೆ ನಿಗಮಕ್ಕೆ ನೀಡುವಂತೆ ಆದೇಶಿಸಿದ್ದರು. ಹೀಗಿದ್ದರೂ, ರಾಜೀವ್ಗಾಂಧಿ ಟ್ರಸ್ಟ್ ಈ ಭೂಮಿಯನ್ನು ವಾಪಸ್ ನೀಡಿರಲಿಲ್ಲ.
ಕಾಂಗ್ರೆಸ್ ಸರಕಾರ ಸ್ಥಾಪನೆ ಗುರಿ: ಅಮೇಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾನು ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಸಿಂದಿಯಾಗೆ ಟಾರ್ಗೆಟ್ ಕೊಟ್ಟಿದ್ದೇನೆ. ಮುಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುವಂತೆ ಮಾಡುವುದೇ ಗುರಿಯಾಗಿದೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ವಾದ್ರಾರನ್ನು ಸಕ್ರಿಯ ರಾಜಕಾರಣಕ್ಕೆ ಇಳಿಸುವ ಮೂಲಕ ರಾಹುಲ್ ಗಾಂಧಿ ಅವರು ತಮಗೆ ಏಕಾಂಗಿಯಾಗಿ ರಾಜಕೀಯ ಮಾಡಲು ಬರುವುದಿಲ್ಲ ಎಂಬುದನ್ನು ಒಪ್ಪಿಕೊಂಡಂತಾ ಯಿತು. ಪ್ರಿಯಾಂಕಾ ಅವರು ಒಬ್ಬ ಉತ್ತಮ ವ್ಯಕ್ತಿ. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ.
ಸುಮಿತ್ರಾ ಮಹಾಜನ್, ಲೋಕಸಭೆ ಸ್ಪೀಕರ್