Advertisement

ಗೆಲ್ಲಲು ಪರದಾಟ! ಕ್ರಿಕೆಟ್ ಸಾಮ್ರಾಜ್ಯದಲ್ಲಿ ಮೆರೆದ ವೆಸ್ಟ್ ಇಂಡೀಸ್ ಹಿಂದಿದೆ ರೋಚಕ ಕಹಾನಿ

11:00 AM Sep 10, 2019 | keerthan |

ಆಜಾನು ಬಾಹು, ನೀಳ ತೋಳುಗಳ ಆಟಗಾರರು, ಮೈದಾನಕ್ಕೆ ಇಳಿದರೆ ಮನರಂಜನೆ ಗ್ಯಾರಂಟಿ, ವಿಭಿನ್ನ ಆಟ- ವಿಭಿನ್ನ ಮನಸ್ಥಿತಿ. ಇದು ವೆಸ್ಟ್ ಇಂಡೀಸ್ ಕ್ರಿಕೆಟ್‌ ನ ವನ್‌ ಲೈನ್‌ ಡೆಫಿನೇಶನ್.‌ ಮನಸ್ಸು ಮಾಡಿದರೆ ಎಂಥಹ ತಂಡಕ್ಕಾದರೂ ನೀರು ಕುಡಿಸಬಲ್ಲ ಇವರಿಗೆ ಮೈಚಳಿ ಹಿಡಿದರೆ ಯಾವ ತಂಡದ ಎದುರಾದರೂ ಸೋಲುತ್ತಾರೆ. ಹೀಗೆ ಇತರ ತಂಡಗಳಿಂದ ವಿಭಿನ್ನವಾಗಿ ನಿಲ್ಲುವ ವೆಸ್ಟ್ ಇಂಡೀಸ್ ನ ಮಹಾ ಅವನತಿಯೂ ಅಷ್ಟೇ ವಿಚಿತ್ರ. ಹೊಡಿಬಡಿ ಆಟಗಾರರು, ಸ್ಥಿರ ಪ್ರದರ್ಶನ ನೀಡದ, ಟಿ ಟ್ವೆಂಟಿಯ ಹೀರೋ , ಆದರೆ ಟೆಸ್ಟ್ ನ ಜೀರೊ ! ವೆಸ್ಟ್ ಇಂಡೀಸ್ ಅಂದರೆ ಇಷ್ಟೇನಾ? ಎರಡೆರಡು ಏಕದಿನ ವಿಶ್ವಕಪ್ ಗೆದ್ದ ತಂಡ ಇದೇನಾ ? 15 ವರ್ಷ ಒಂದೂ ಟೆಸ್ಟ್ ಸರಣಿ ಸೋಲದ ತಂಡ ಇಂದೇಕೆ ಒಂದು ಪಂದ್ಯ ಗೆಲ್ಲಲು ಕಷ್ಟ ಪಡುತ್ತಿದೆ? ಮೊದಲು ಆಂಗ್ಲ ಮೂಲದ ಆಟಗಾರರಿಂದ ಕ್ರಿಕೆಟ್ ತಂಡ ಕಟ್ಟಿ ನಂತರ ತನ್ನ ನೆಲದ ಆಟಗಾರರಿಂದ ವಿಶ್ವ ಕ್ರಿಕೆಟ್ ಪಾರುಪತ್ಯ ಸಾಧಿಸಿ ಈಗ ವಿಶ್ವದ ದುರ್ಬಲ ತಂಡವೆನಿಸಿರುವ ಹಿಂದಿದೆ ಒಂದು ರೋಚಕ ಕಹಾನಿ.!

Advertisement

ಅದು ಬ್ರಿಟಿಷರ ಆಳ್ವಿಕೆಯ ಕಾಲ. ತಾವೇ ಕಂಡು ಹಿಡಿದ ಆಟವನ್ನು ಆಂಗ್ಲರು ತಮ್ಮ ವಸಾಹತುಗಳಲ್ಲಿ ಆಡುತ್ತಿದ್ದರು. ಹೀಗಾಗಿ ಭಾರತದಲ್ಲಿ ಕ್ರಿಕೆಟ್ ಆರಂಭವಾದ ಸಮಯದಲ್ಲೇ ಕೆರೆಬಿಯನ್ ದ್ವೀಪ ರಾಷ್ಟ್ರಗಳಲ್ಲೂ ಕ್ರಿಕೆಟ್ ಕಂಪು ಪಸರಿಸಿತ್ತು. ಕೆಂಪು ತೊಗಲಿನ ಆಂಗ್ಲರ ಆಟವನ್ನು ಬೆರಗು ಕಣ್ಣಿನಿಂದ ನೋಡುತ್ತಿದ್ದ ಕೆರೆಬಿಯನ್ನರು ತಾವು ತಂಡ ಕಟ್ಟಿ ಆಡತೊಡಗಿದರು. ಬಾರ್ಬಡೋಸ್, ಜಮೈಕಾ, ಟ್ರಿನಿಡಾಡ್ ಅಂಡ್ ಟೊಬೆಗೊ, ಸೈಂಟ್ ಲೂಸಿಯ, ಗಯಾನ ಮುಂತಾದ ದ್ವೀಪ ರಾಷ್ಟ್ರಗಳ ಒಕ್ಕೂಟವೇ ವೆಸ್ಟ್ ಇಂಡೀಸ್ .

ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ನಂತರ ನಾಲ್ಕನೇ ದೇಶವಾಗಿ 1928ರಲ್ಲಿ  ಟೆಸ್ಟ್ ಮಾನ್ಯತೆ ಪಡೆಯಿತು. ನಂತರದ ಮೂವತ್ತು ವರ್ಷಗಳಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ನಲ್ಲಿ ಬೆಳವಣಿಗೆ ಗೋಚರಿಸಲಾರಂಭಿಸಿತು. ತಂಡದಲ್ಲಿ ಹೆಚ್ಚಾಗಿ ಯೂರೋಪ್ ಆಟಗಾರರೇ ತುಂಬಿದ್ದರೂ ಪ್ರತಿಭಾನ್ವಿತ ಮೂಲ ಕೆರೆಬಿಯನ್ನರು ತಂಡದಲ್ಲಿ ಕಾಣಿಸಿಲಾರಂಭಿಸಿದರು. ಅವರಲ್ಲಿ ಪ್ರಮುಖವಾದವರು ಜಾರ್ಜ್ ಹ್ಯಾಡ್ಲಿ. ಈತ ಕರಿಯ ಬ್ರಾಡ್ಮನ್ ಎಂದೇ ಪ್ರಸಿದ್ದನಾದವ. ಇವರೊಂದಿಗೆ ಎವರ್ಟನ್ ವೀಕ್ಸ್, ಕ್ಲೈಡ್ ವಾಲ್ಕಟ್, ಫ್ರಾಂಕ್ ವ್ಯಾರೆಲ್ ಕೆರೆಬಿಯನ್ ತಂಡದಲ್ಲಿ ಪ್ರಸಿದ್ದರಾದರು. ಇವರ ನೆರವಿನಿಂದ ಭಾರತ, ನ್ಯೂಜಿಲ್ಯಾಂಡ್ ವಿರುದ್ದ ಸರಣಿ ಗೆಲುವು ಸಾಧಿಸಿತು. ಇದರಿಂದಾಗಿ ವಿಂಡೀಸ್ ತಂಡದಲ್ಲಿ ಬಿಳಿಯ ಆಟಗಾರರ ಪ್ರಭಾವ ತುಸು ಕಡಿಮೆಯಾಗಿತ್ತು. ಆದರೆ ತಂಡದ ನಾಯಕತ್ವ ಮಾತ್ರ ಇನ್ನೂ ಬಿಳಿಯರ ಕೈಯಲ್ಲೇ ಇತ್ತು. ಹೀಗಾಗಿ ಮೊದಲ ಬಿಳಿಯೇತರ ನಾಯಕನ ಆಯ್ಕೆಯಾಗಿದ್ದು 1960ರಲ್ಲಿ. ಅವರೇ ಫ್ರಾಂಕ್ ವ್ಯಾರೆಲ್.

ಮೊದಲ ಕರಿಯ ನಾಯಕ ಫ್ರಾಂಕ್ ವ್ಯಾರೆಲ್ ನಾಯಕತ್ವದಲ್ಲಿ ವಿಂಡೀಸ್ ಬಲಿಷ್ಠ ಆಸೀಸ್ ಪ್ರವಾಸಕ್ಕೆ ತೆರಳಿತು. ಆ ಕಾಲದಲ್ಲೇ ವೆಸ್ಟ್ ಇಂಡೀಸ್ ಎಷ್ಟು ಬಲಿಷ್ಠವಾಗಿತ್ತೆಂದರೆ ಬಲಾಢ್ಯ ಆಸೀಸ್ ತಂಡ ವಿಂಡೀಸ್ ಗೆಲುವಿಗೆ ಹೆಣಗಾಡುವಂತೆ ಮಾಡಿದರು. ಭಾರಿ ಪೈಪೋಟಿಯಿಂದ ಆಡಿದ ಉಭಯ ತಂಡಗಳು ಇತಿಹಾಸದ ಮೊತ್ತಮೊದಲ ಟೆಸ್ಟ್ ʼಟೈʼ ಪಂದ್ಯಕ್ಕೆ ಸಾಕ್ಷಿಯಾದರು.  ಭಾರತ ಮತ್ತು ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆದ್ದು ಬೀಗಿದ ವಿಂಡೀಸ್ ನಿಧಾನವಾಗಿ ವಿಶ್ವ ಕ್ರಿಕೆಟ್ ನ ಚಕ್ರಾಧಿಪತಿಯಾಗಲು ಹೆಜ್ಜೆ ಇಡುತ್ತಿತ್ತು.

ವಿಂಡೀಸ್ ಕ್ರಿಕೆಟ್ ನ ಸುವರ್ಣ ಯುಗ
1960ರ ನಂತರದಲ್ಲಿ ವಿಂಡೀಸ್ ತಂಡಕ್ಕೆ ಆಯ್ಕೆಯಾದವರು ವೆಸ್ ಹಾಲ್ಸ್, ಗ್ರಿಫಿತ್, ಲ್ಯಾನ್ಸ್ ಗಿಬ್ಸ್, ಗ್ಯಾರಿ ಸೋಬರ್ಸ್. ಇವರ ಅದ್ಭುತ ಆಟದಿಂದಾಗಿ ವಿಂಡೀಸ್  ಒಂದೊಂದೇ ಸರಣಿಯನ್ನು ಕೈ ವಶಪಡಿಸಿ ಕೊಳ್ಳತೊಡಗಿತ್ತು. ಆ ಸಮಯದಲ್ಲಿ ತಂಡದ ನಾಯಕತ್ವ ವಹಿಸಿದ ರೋಹನ್ ಕನ್ಹಯ್  ವಿಂಡೀಸ್ ತಂಡವನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ದರು. ಆಗ ಕ್ಲೈವ್  ಲಾಯ್ಡ್, ವಿವಿಯನ್  ರಿಚರ್ಡ್, ಗಾರ್ಡನ್ ಗ್ರೀನಿಡ್ಚ್, ಆಂಡಿ ರೋಬರ್ಟ್ಸ್ ಮುಂತಾದ ಬಲಿಷ್ಠ ಆಟಗಾರರು ತಂಡದಲ್ಲಿ ತಮ್ಮ ಛಾಪೊತ್ತಲು ಆರಂಭಿಸಿದ್ದರು. ಕ್ಲೈವ್ ಲಾಯ್ಡ್ ತಂಡದ ಚುಕ್ಕಾಣಿ ಹಿಡಿದು 1975ರಲ್ಲಿ ನಡೆದ ಮೊತ್ತ ಮೊದಲ ಏಕದಿನ ವಿಶ್ವಕಪ್ ಗೆದ್ದು ಬೀಗಿದರು. ಹೀಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತನ್ನ ಸುವರ್ಣ ಯುಗದಲ್ಲಿ ಮೆರೆದಾಡುತ್ತಿತ್ತು, ದಿಗ್ಗಜರು ಮರೆಯಾಗುವ ತನಕ!.

Advertisement

1976ರಿಂದ 1995ರವರೆಗೆ ವಿಂಡೀಸ್ ಒಟ್ಟು 137 ಟೆಸ್ಟ್ ಆಡಿದ್ದು ಅದರಲ್ಲಿ ಸೋಲನುಭವಿಸಿದ್ದು ಕೇವಲ 18 ಪಂದ್ಯಗಳಲ್ಲಿ ಮಾತ್ರ. ಅದರಲ್ಲೂ ವಿಶೇಷವೆಂದರೆ ಒಂದೂ ಪಂದ್ಯ ಸೋಲದೆ ಸತತ 27 ಪಂದ್ಯಗಳನ್ನು ವಿಂಡೀಸ್ ಗೆದ್ದಿತ್ತು. ಇದು ಇಂದಿಗೂ ಯಾರೂ ಮುರಿಯದ ದಾಖಲೆಯಾಗಿದೆ. 1980ರಿಂದ 1995ರವರೆಗೆ ಕೆರೆಬಿಯನ್ನರು ಒಂದೇ ಒಂದು ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿಲ್ಲ. ಅಷ್ಟರ ಮಟ್ಟಿಗೆ ವಿಶ್ವ ಕ್ರಿಕೆಟ್ ನಲ್ಲಿ ವಿಂಡೀಸ್ ಕ್ರಿಕೆಟ್ ತನ್ನ ಹವಾ ಸೃಷ್ಟಿಸಿತ್ತು.ವಿಶ್ವ ಕ್ರಿಕೆಟ್ ನ ಏಕಚಕ್ರಾಧಿಪತಿಯಾಗಿ ಮೆರೆಯುತ್ತಿದ್ದ ವಿಂಡೀಸ್ ತನ್ನ ಗತವೈಭವವನ್ನು ಕಳೆದುಕೊಂಡು ಈಗ ಸರಣಿ ಬಿಡಿ ಒಂದು ಪಂದ್ಯ ಗೆಲ್ಲಲೂ ಕಷ್ಟ ಪಡುತ್ತಿದೆ.

1983ರ ವಿಶ್ವಕಪ್ ಫೈನಲ್‌ ನಲ್ಲಿ ಭಾರತದೆದುರು ಸೋಲನುಭವಿಸಿದ ವಿಂಡೀಸ್ ಗೆ, ನಂತರದ  ಯಾವ ಏಕದಿನ ವಿಶ್ವಕಪ್ ನಲ್ಲೂ ಫೈನಲ್ ಗೇರಲು ಸಾಧ್ಯವಾಗಲಿಲ್ಲ. ವಿವಿಯನ್ ರಿಚರ್ಡ್, ಗ್ರೀನಿಡ್ಡ್, ಕೊಟ್ನಿ ವಾಲ್ಶ್ ರಂತಹ ಪ್ರಮುಖ ಆಟಗಾರರ  ವಿದಾಯ ತಂಡಕ್ಕೆ ಬಹುವಾಗಿ ಕಾಡಿತು. ಯಾಕೆಂದರೆ ಅವರ ಬದಲಿಗೆ ಮತ್ತೊಬ್ಬ ಅಷ್ಟೇ ಸಮರ್ಥ ಆಟಗಾರರನ್ನು ಸೃಷ್ಟಿಸಲು ವಿಂಡೀಸ್ ಗೆ ಸಾಧ್ಯವಾಗಲಿಲ್ಲ. ಅದರಲ್ಲೂ 2000 ಇಸವಿಯ ನಂತರ ಬ್ರಿಯಾನ್ ಲಾರಾ, ಶಿವನಾರಾಯಣ್ ಚಂದ್ರಪಾಲ್ ಬಿಟ್ಟರೆ ವಿಂಡೀಸ್ ಗೆ ಹಳೆ ಖದರ್ ತಂದುಕೊಡಬಲ್ಲ ಯಾವ ಆಟಗಾರನೂ ಸಿಗಲಿಲ್ಲ. ವಿಶ್ವದ ಎಲ್ಲಾ ತಂಡಗಳನ್ನೂ ಸೋಲಿಸುತ್ತಿದ್ದ ಕೆರೆಬಿಯನ್ನರು ಅದೇ ತಂಡಗಳ ವಿರುದ್ಧ ಹೀನಾಯವಾಗಿ ಸೋಲಲು ಆರಂಭಿಸಿದರು.  ಇದೇ ಕಾಲಕ್ಕೆ ಆರಂಭವಾಗಿದ್ದು ಟಿ ಟ್ವೆಂಟಿ ಕ್ರಿಕೆಟ್ ಮತ್ತು ಫ್ರಾಂಚೈಸಿ ಲೀಗ್ ಎಂಬ ಹಣದ ಹುಚ್ಚು ಹೊಳೆ!

ಹಣ ಮತ್ತು ಫ್ರಾಂಚೈಸಿ ಲೀಗ್
1990ರ ದಶಕದ ನಂತರ ಕ್ರಿಕೆಟ್ ಕೂಡಾ ವಾಣೀಜ್ಯಕರಣದ ಪ್ರಭಾವಕ್ಕೆ ಒಳಗಾಯಿತು. ಪ್ರಾಯೋಜಕರು, ಜಾಹೀರಾತುಗಳು ಕ್ರಿಕೆಟ್ ಗೆ ದಾಪುಗಾಲಿಟ್ಟವು. ಆದರೆ ಹೆಚ್ಚಾಗಿ ಇದರ ಪ್ರಯೋಜನ ಪಡೆದಿದ್ದು ಏಶ್ಯಾದ ತಂಡಗಳು. ಕೆರೆಬಿಯನ್ ನೆಲದಲ್ಲಿ ನಡೆಯುವ ಪಂದ್ಯಗಳಿಗೆ ಸಿಗುವ ಪ್ರಾಯೋಜಕರ ಸಂಖ್ಯೆ ಕಡಿಮೆಯಾಯಿತು. ಇದರಿಂದ ಪಂದ್ಯಗಳೂ ಕಡಿಮೆಯಾದವು. ಇದು ವಿಂಡೀಸ್ ತಂಡದ ಮೇಲೆ ನೇರ ಪರಿಣಾಮ ಬೀರಿತ್ತು. ಉಳಿದ ತಂಡದ ಆಟಗಾರರಿಗೆ ಸಿಗುವಷ್ಟು ಸಂಬಳ ಕೆರೆಬಿಯನ್ ಆಟಗಾರರಿಗೆ ಸಿಗಲಿಲ್ಲ . ಆಡಳಿತ ಮಂಡಳಿ ಮತ್ತು ಆಟಗಾರರ ನಡುವೆ ಸಂಬಂಧ ಹಳಸಲು ಆರಂಭಿಸಿತ್ತು . ಇದರಿಂದ ಬದಲಾದ ಆಟಗಾರರ ಮನಸ್ಥಿತಿ ಮೈದಾನದಲ್ಲೂ ಕಾಣುವಂತಾಯಿತು.

ಇದೇ ಸಮಯದಲ್ಲಿ ಆರಂಭವಾಗಿದ್ದು ಟಿ ಟ್ವೆಂಟಿ ಮಾದರಿ ಮತ್ತು ಐಪಿಎಲ್ ನಂತಹ ಫ್ರಾಂಚೈಸಿ ಲೀಗ್ ಗಳು. ಕೋಟಿ ಕೋಟಿ ಹಣ ಸುರಿಸುವ ಈ ಲೀಗ್ ಕೆರೆಬಿಯನ್ ಆಟಗಾರರಿಗೆ ಪ್ರಮುಖ ವೇದಿಕೆ ಒದಗಿಸಿತು. ರಾಷ್ಟ್ರೀಯ ತಂಡದಲ್ಲಿ ಮಿಂಚಿದ ಆಟಗಾರರನ್ನು ಕೋಟಿ ಕೋಟೆ ಹಣ ನೀಡಿ ಖರೀದಿಸಲು ಫ್ರಾಂಚೈಸಿ ಮಾಲಕರು ಮುಂದಾದರು. ವಿಶ್ವದೆಲ್ಲೆಡೆ ಇಂತಹ ಟೂರ್ನಿಗಳು ಆರಂಭವಾದಾಗ ಈ ಆಟಗಾರರು ರಾಷ್ಟ್ರೀಯ ತಂಡಕ್ಕಿಂತ ಈ ಲೀಗ್ ಗಳಿಗೆ ಹೆಚ್ಚಿನ ಮಹತ್ವ ನೀಡಿದರು. ಅಲ್ಲಿಗೆ ಫ್ರಾಂಚೈಸಿ ತಂಡಕ್ಕೆ ಸೇರಲು ರಾಷ್ಟ್ರೀಯ ತಂಡದಲ್ಲಿ ಆಡುವುದು ಪ್ರವೇಶ ಪರೀಕ್ಷೆ ಎಂಬಂತಾಗಿತ್ತು ಈ ಕೆರೆಬಿಯನ್ ಆಟಗಾರರಿಗೆ..!

ಪ್ರತಿಯೊಂದು ತಂಡಗಳ ಬೆಳವಣಿಗೆಯ ಪಯಣದಲ್ಲಿ ಏರಿಳಿತ ಸಹಜ. ಬಿದ್ದವರು ಮತ್ತೆ ಎದ್ದೇಳಲೇ ಬೇಕೆಂಬ  ತುಡಿತ ಇರಬೇಕು. ವಿಂಡೀಸ್ ಕ್ರಿಕೆಟ್ ಯಶಸ್ವಿಯ ಗ್ರಾಫ್ ಕೆಳಗಿಳಿಯಲು ಆರಂಭಿಸಿ ಹತ್ತಿರತ್ತಿರ ಎರಡು ದಶಕವೇ ಆಗಿದೆ. ವಿಂಡೀಸ್ ಕ್ರಿಕೆಟ್ ಮಂಡಳಿ ಇನ್ನಾದರು ಎಚ್ಚೆತ್ತು ಟೆಸ್ಟ್ ಕ್ರಿಕೆಟ್ ನತ್ತ ಹೆಚ್ಚಿನ ಗಮನ ಹರಿಸಿದರೆ ಕೆರೆಬಿಯನ್ನರ ಗತವೈಭವ ಮರಳಿ ಬರುವುದರಲ್ಲಿ ಸಂಶಯವೇನಿಲ್ಲ.

– ಕೀರ್ತನ್ ಶೆಟ್ಟಿ ಬೋಳ 

Advertisement

Udayavani is now on Telegram. Click here to join our channel and stay updated with the latest news.

Next