Advertisement

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

12:15 AM Oct 22, 2020 | mahesh |

ಕಲಬುರಗಿ: ಅತಿವೃಷ್ಟಿಯಿಂದ ಕಂಗೆಟ್ಟಿರುವ ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಸಿಎಂ ಯಡಿಯೂರಪ್ಪ ಅವರು ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. “ಸರಕಾರ ನಿಮ್ಮೊಂದಿಗಿದೆ, ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ’ ಎಂದು ನೆರೆ ಸಂತ್ರಸ್ತರಿಗೆ ಅಭಯ ನೀಡಿದ್ದಾರೆ.

Advertisement

ಬೆಳಗ್ಗೆ ವಿಶೇಷ ವಿಮಾನದ ಮೂಲಕ ಬಳ್ಳಾರಿಗೆ ಆಗಮಿಸಿದ ಸಿಎಂ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದರು. ಭೀಮಾ ಮತ್ತು ಕೃಷ್ಣಾ ನದಿ ತೀರ ಪ್ರದೇಶದಲ್ಲಾದ ಹಾನಿ ವೀಕ್ಷಿಸಿದರು. ಅನಂತರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಅತಿವೃಷ್ಟಿ ಮತ್ತು ಪ್ರವಾಹದಿಂದ ಕಲ್ಯಾಣ ಕರ್ನಾಟಕದ 4 ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿದೆ. ಜಂಟಿ ಸಮೀಕ್ಷೆಯ ಅನಂತರ ನಿಖರ ಹಾನಿ ಗೊತ್ತಾಗಲಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ., ಅರ್ಧ ಮನೆ ಹಾನಿಗೀಡಾದವರಿಗೆ 3 ಲಕ್ಷ ರೂ. ಮತ್ತು ಬೆಳೆ ಹಾನಿಗೆ ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಘೋಷಣೆಗಳನ್ನು ಮಾಡುವುದಿಲ್ಲ ಎಂದರು.

ತುರ್ತು ಪರಿಹಾರ
ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲು ಸರಕಾರ ಆದೇಶಿಸಿದೆ. ಸಂಪೂರ್ಣ ಮನೆ ಹಾನಿ ಅಥವಾ ಶೇ.75ರಷ್ಟು ಮನೆ ಹಾನಿಯಾದವರಿಗೆ 5 ಲಕ್ಷ ರೂ. ಪರಿಹಾರ ವಿತರಣೆ ಮುಂದುವರಿಯಲಿದೆ. ಶೇ. 25ರಿಂದ ಶೇ.75ರಷ್ಟು ಹಾನಿಯಾದ ಮನೆ ದುರಸ್ತಿಗೆ 3 ಲಕ್ಷ ರೂ., ಶೇ.15 ರಿಂದ ಶೇ.25ರ ವರೆಗೆ ಅಲ್ಪಸ್ವಲ್ಪ ಮನೆ ಹಾನಿ ದುರಸ್ತಿಗೆ 50 ಸಾವಿರ ರೂ. ವಿತರಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next