Advertisement

ಹೂಡಿಕೆಗೆ ತಕ್ಕ ಪ್ರತಿಫ‌ಲ ಸರ್ಕಾರಕ್ಕೆ ಸಿಕ್ಕಿಲ್ಲ

06:00 AM Jul 08, 2018 | Team Udayavani |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ ಮತ್ತು ಸಂಸ್ಥೆಗಳು ಸರ್ಕಾರದ ಪಾಲಿಗೆ ಯಾವತ್ತೂ “ಬಿಳಿ ಆನೆಗಳು’ ಇದ್ದಂತೆ ಎಂದು ಹೇಳಲಾಗುತ್ತದೆ. ಈ ಮಾತು ನಿಜ ಅನ್ನುವುದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯಲ್ಲಿ (ಸಿಎಜಿ ವರದಿ) ಮತ್ತೂಮ್ಮೆ ಸಾಬೀತಾಗಿದೆ.

Advertisement

2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ 2017ರ ಮಾರ್ಚ್‌ 31ಕ್ಕೆ ಕೊನೆಗೊಂಡ ರಾಜ್ಯ ಸರ್ಕಾರದ
ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಸಿಎಜಿ ವರದಿ ಪ್ರಕಾರ ಸರ್ಕಾರಿ ಕಂಪನಿಗಳು, ನಿಗಮ-ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಗ್ರಾಮೀಣ ಬ್ಯಾಂಕುಗಳಲ್ಲಿ ರಾಜ್ಯ ಸರ್ಕಾರ ಬರೋಬ್ಬರಿ 63 ಸಾವಿರ ಕೋಟಿ ರೂ.ಹೂಡಿಕೆ ಮಾಡಿದೆ. ಅಚ್ಚರಿಯ ಸಂಗತಿ ಎಂದರೆ ಈ ಹೂಡಿಕೆಯಿಂದ ಸರ್ಕಾರಕ್ಕೆ ಸಿಕ್ಕ “ಪ್ರತಿಫ‌ಲ’ (ಲಾಭ) ತೀರಾ ನಗಣ್ಯ.

ನಿಷ್ಕ್ರಿàಯಗೊಂಡಿರುವ 16 ಸರ್ಕಾರಿ ಕಂಪನಿಗಳು ಸೇರಿ 84 ಸರ್ಕಾರಿ ಕಂಪನಿಗಳು, 9 ಶಾಸನಬದ್ಧ 
ನಿಗಮಗಳು, 43 ಕೂಡು ಬಂಡವಾಳ ಕಂಪನಿಗಳು ಮತ್ತು ಸಹಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಒಟ್ಟು 63,115 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿತ್ತು. ಆದರೆ, ಈ ಹೂಡಿಕೆಯಿಂದ ಸರ್ಕಾರಕ್ಕೆ ಬಂದ ಲಾಭ ಬರೀ 82.50 ಕೋಟಿ ರೂ. ಅಂದರೆ, ಒಟ್ಟು ಹೂಡಿಕೆಗೆ ಸಿಕ್ಕ ಲಾಭದ ಪ್ರಮಾಣ ಶೇ.01ರಷ್ಟು ಅಷ್ಟೆ.

ಒಟ್ಟು 63 ಸಾವಿರ ಕೋಟಿ ರೂ.ಹೂಡಿಕೆಯಲ್ಲಿ 16 ನಿಷ್ಕ್ರಿàಯ ಸರ್ಕಾರಿ ಕಂಪನಿಗಳಲ್ಲಿ 68 ಕೋಟಿ ರೂ.ಸೇರಿ 84 ಸರ್ಕಾರಿ ಕಂಪನಿಗಳಲ್ಲಿ 57,674 ಕೋಟಿ ರೂ. 9 ಶಾಸನಬದ್ಧ ನಿಗಮಗಳಲ್ಲಿ 2,520 ಕೋಟಿ ರೂ, 43 ಕೂಡು ಬಂಡವಾಳ ಕಂಪನಿಗಳಲ್ಲಿ 2,524 ಕೋಟಿ ರೂ. ಸಹಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ 397 ಕೋಟಿ ರೂ. 
ಬಂಡವಾಳವನ್ನು ಸರ್ಕಾರ ಹೂಡಿಕೆ ಮಾಡಿತ್ತು.

ಅದೇ ರೀತಿ, ಈ ಒಟ್ಟು ಹೂಡಿಕೆಯಲ್ಲಿ ಶೇ.95ರಷ್ಟು ಅಂದರೆ 60 ಸಾವಿರ ಕೋಟಿ ರೂ. ಹೂಡಿಕೆಯನ್ನು 
ನೀರಾವರಿ ವಿಭಾಗದಲ್ಲಿ ಸರ್ಕಾರ ಮಾಡಿತ್ತು. ಇದರಲ್ಲಿ ಸರ್ಕಾರಿ ಕಂಪನಿಗಳು ಮತ್ತು ನಿಗಮಗಳಲ್ಲಿ 36 ಸಾವಿರ ಕೋಟಿ, ಸಾರಿಗೆ ವಿಭಾಗದಲ್ಲಿ 2,399 ಕೋಟಿ, ಮೂಲಸೌಕರ್ಯ ಅಭಿವೃದ್ಧಿ ವಿಭಾಗಕ್ಕೆ 4,251 ಕೋಟಿ, ವಿದುತ್ಛಕ್ತಿ ವಿಭಾಗಕ್ಕೆ 10 ಸಾವಿರ ಕೋಟಿ, ಕೈಗಾರಿಕಾ ವಿಭಾಗಕ್ಕೆ 850 ಕೋಟಿ, ವಸತಿ ವಿಭಾಗಕ್ಕೆ 1,400 ಕೋಟಿ,ಹಣಕಾಸು ವಿಭಾಗಕ್ಕೆ 1 ಸಾವಿರ ಕೋಟಿ ರೂ. ಹೂಡಿಕೆಯಾಗಿತ್ತು.

Advertisement

ಬಳಕೆಯಾಗದ 900 ಕೋಟಿ ರೂ.
2017ರ ಮಾರ್ಚ್‌ ಅಂತ್ಯದ ಲೆಕ್ಕದಂತೆ ಐದು ನಿಗಮ-ಮಂಡಳಿಗಳಲ್ಲಿ ಒಟ್ಟು 916 ಕೋಟಿ ರೂ.
ಹೂಡಿಕೆ ಬಳಕೆಯಾಗಿಲ್ಲ. ಇದರಲ್ಲಿ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ 629 ಕೋಟಿ, ಮೂಲಸೌಕರ್ಯ
ಅಭಿವೃದ್ಧಿ ಮತ್ತು ಹಣಕಾಸು ನಿಗಮದಲ್ಲಿ 177 ಕೋಟಿ, ಕರ್ನಾಟಕ ನೀರಾವರಿ ನಿಗಮದಲ್ಲಿ 50
ಕೋಟಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ 53 ಕೋಟಿ, ಕರ್ನಾಟಕ ಕೊಳಚೆ ಪ್ರದೇಶಗಳ ಅಭಿವೃದಿಟಛಿ ಮಂಡಳಿಯಲ್ಲಿ 7 ಕೋಟಿ ರೂ.ಗಳ ಹೂಡಿಕೆ ಬಳಕೆಯಾಗದೆ ಉಳಿದಿದೆ.

ಹೂಡಿಕೆ ಕೈಬಿಡಲ್ಲ: ಸರ್ಕಾರ
ಹೂಡಿಕೆಗಳ ಮೇಲಿನ ಪ್ರತಿಫ‌ಲ ನಗಣ್ಯ ಎಂದು ಒಪ್ಪಿಕೊಂಡರೂ, ದೀರ್ಘ‌ಕಾಲೀನ ಬೆಳವಣಿಗೆ ಮತ್ತು
ಪ್ರತಿಫ‌ಲ ನಿರೀಕ್ಷಿತ ಸಾಮಾಜಿಕ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲ. ಜತೆಗೆ, ಪ್ರತಿಫ‌ಲ ಖಚಿತಪಡಿಸಿಕೊಳ್ಳಲು ತನ್ನ ಶ್ರಮ ಮುಂದುವರಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಶಾಸಕಾಂಗದ ಮುಂದೆ ಮಂಡಿಸಲಾಗುವ ಮಧ್ಯಮಾವಧಿ ಆರ್ಥಿಕ ಯೋಜನೆಗಳ ಹೂಡಿಕೆಗಳ ಮೇಲೆ ಸೂಕ್ತ ಪ್ರತಿಫ‌ಲ ಪಡೆಯಲು ಯಾವುದೇ ಮಾರ್ಗಸೂಚಿಗಳನ್ನು ಹೊಂದಿರಲಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ನಷ್ಟದ ಸಂಸ್ಥೆಗಳಿಗೆ 24 ಸಾವಿರ ಕೋಟಿ ಹೂಡಿಕೆ ಸತತ ನಷ್ಟದಲ್ಲಿರುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕೃಷ್ಣಭಾಗ್ಯ ಜಲ ನಿಗಮ,ಮೈಸೂರು ಸಕ್ಕರೆ ಕಂಪನಿ ನಿಯಮಿತಕ್ಕೆ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ 24,474 ಕೋಟಿ ರೂ.ಹೂಡಿಕೆ ಮಾಡಿದೆ.

ಇದರಲ್ಲಿ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಅತಿ ಹೆಚ್ಚು 23 ಸಾವಿರ ಕೋಟಿ ರೂ.ಹೂಡಿಕೆಯಾಗಿದೆ. ಉಳಿದಂತೆ ವಾಯುವ್ಯ ಸಾರಿಗೆ ಸಂಸ್ಥೆಗೆ 266 ಕೋಟಿ, ಈಶಾನ್ಯ ಸಾರಿಗೆ ಸಂಸ್ಥೆಗೆ 183 ಕೋಟಿ ಮತ್ತು ಮೈಸೂರು ಸಕ್ಕರೆ ಕಂಪನಿಗೆ 278 ಕೋಟಿ ರೂ.ಹೂಡಿಕೆ ಮಾಡಲಾಗಿದೆ. ಈ ನಾಲ್ಕೂ ಸಂಸ್ಥೆಗಳಿಂದ ಕಳೆದ 4 ವರ್ಷಗಳಲ್ಲಿ 1,884 ಕೋಟಿ ರೂ.ಸಂಚಿತ ನಷ್ಟ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next